ಮೊಗಸಾಲೆ ಅಂಕಣ | ಆಚಾರವಿಲ್ಲದ ನಾಲಗೆಗೆ ಎಲುಬೂ ಇಲ್ಲ - Vistara News

ಅಂಕಣ

ಮೊಗಸಾಲೆ ಅಂಕಣ | ಆಚಾರವಿಲ್ಲದ ನಾಲಗೆಗೆ ಎಲುಬೂ ಇಲ್ಲ

ರಾವಣನಂತೆ ನಿಮಗೆ ನೂರು ತಲೆ ಇದೆಯೇ ಎಂಬ ಖರ್ಗೆ ಅವರ ಪ್ರಶ್ನೆ ರಾಮಾಯಣ ಕುರಿತಾದ ಅವರ ಅಜ್ಞಾನವನ್ನೂ ಹೇಳುತ್ತದೆ. ದೇಶದಲ್ಲಿ ಸಹಸ್ರ ಸಂಖ್ಯೆಗೂ ಹೆಚ್ಚಿನ ರಾಮಾಯಣವಿದೆ ಎನ್ನುತ್ತಾರೆ ಸಂಶೋಧಕರು. ಯಾವುದೇ ರಾಮಾಯಣದಲ್ಲೂ ನೂರು ತಲೆಯ ರಾವಣ ಇಲ್ಲ. ಖರ್ಗೆಯವರಿಗೆ ಶತಕಂಠ ಎಲ್ಲಿ ಸಿಕ್ಕು ಬಿದ್ದನೋ!

VISTARANEWS.COM


on

Gujarat Election and Narendra modi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
mogasale logo

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿಯವರನ್ನು “ರಾವಣನಂತೆ ನಿಮಗೆ ನೂರು ತಲೆ ಇದೆಯೇ” ಎಂದು ಟೀಕಿಸುವ ಅರ್ಥದಲ್ಲಿ ಕೇಳಿದ್ದು ದೇಶದ ಉದ್ದಗಲಕ್ಕೆ ಬಿಜೆಪಿ ಮುಖಂಡರ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹೇಳಿಕೆಯನ್ನು ಖಂಡಿಸುವ, ತಾವು ಮಾಡಿದ ಹೇಳಿಕೆಗಾಗಿ ದೇಶದ ಕ್ಷಮೆ ಯಾಚಿಸಬೇಕೆಂದು ಖರ್ಗೆಯವರನ್ನು ಒತ್ತಾಯಿಸುವ ಯತ್ನ ಸತತ ಎಂಬಂತೆ ನಡೆದಿದೆ. ಖರ್ಗೆಯವರು ತಮ್ಮ ಈ ಹೇಳಿಕೆ ಮೂಲಕ ಪ್ರಧಾನಿಯಂಥ ಅತ್ಯುನ್ನತ ಸ್ಥಾನಕ್ಕೆ ಅಗೌರವ ಸೂಚಿಸಿದ್ದಾರೆಂದು ನೇರವಾಗಿ ಆರೋಪಿಸಲಾಗಿದೆ. ಅದೇ ರೀತಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಖರ್ಗೆಯವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಖರ್ಗೆಯವರನ್ನು ಸಮರ್ಥಿಸಿಕೊಳ್ಳುವ ಯತ್ನ ನಡೆಸಿದ್ದಾರೆ.

ಖರ್ಗೆ ಹೇಳಿಕೆ ವಿಚಾರದಲ್ಲಿ ಪ್ರಧಾನಿ ಮೋದಿಯವರು ತಲೆ ಕೆಡಿಸಿಕೊಂಡಂತಿಲ್ಲ. ಯಾವುದೇ ರೀತಿಯ ಪ್ರತಿಕ್ರಿಯೆಯೂ ಅವರಿಂದ ಬಂದಿಲ್ಲ. ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡಾ ಪ್ರತಿಕ್ರಿಯಿಸಿದ್ದು ವರದಿಯಾಗಿಲ್ಲ. ಇತ್ತ ಖರ್ಗೆಯವರು ಬಿಜೆಪಿ ಆಕ್ರೋಶಕ್ಕೆ ಮಂಡೆಬಿಸಿ ಮಾಡಿಕೊಂಡಿದ್ದೂ ಗೊತ್ತಾಗಿಲ್ಲ. ಬಿಜೆಪಿ ಒತ್ತಾಯಿಸಿದಂತೆ ಕ್ಷಮೆ ಕೇಳುವ ಅಥವಾ ಪಶ್ಚಾತ್ತಾಪ ವ್ಯಕ್ತಪಡಿಸುವ ಹೇಳಿಕೆ ಅವರಿಂದ ಬಂದಿಲ್ಲ. ಇದರರ್ಥವೆಂದರೆ ಟೀಕಿಸಿದ ಮತ್ತು ಟೀಕಿಸಿಕೊಂಡ ನಾಯಕರಿಬ್ಬರೂ ಹೇಳಿಕೆಯನ್ನು ಗಾಳಿಯಲ್ಲಿ ಹಾರಿ ಹೋಗಲು ಬಿಟ್ಟುಬಿಟ್ಟಿದ್ದಾರೆ. ಆದರೆ ಅವರಿಬ್ಬರ ಹಿಂಬಾಲಕರು ಮಾತ್ರ ಹವಾದಲ್ಲಿ ಹಾರಿ ಹೋಗುತ್ತಿರುವ ಹೇಳಿಕೆಯನ್ನು ಹಿಡಿಯುವ ಸಾಹಸದಲ್ಲಿ ಸಮಯವನ್ನು ವ್ಯರ್ಥಮಾಡುತ್ತಿದ್ದಾರೆ.

ಚುನಾವಣಾ ಸಮಯದಲ್ಲಿ ಇಂಥ ಹೇಳಿಕೆಗಳು ಬರುವುದು ಸಾಮಾನ್ಯ. ಕಳೆದ ಕೆಲವು ದಶಕಗಳಿಂದೀಚೆಗೆ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಚರ್ಚೆ ನಡೆಸುವ ಪ್ರವೃತ್ತಿ ಕಣ್ಮರೆಯಾಗಿದೆ. ಇದಕ್ಕೆ ಕಾರಣವಿದೆ. ದೇಶದಲ್ಲಿ ರಾಷ್ಟ್ರೀಯ ಪಕ್ಷವೆಂದು ನಾವು ಗುರುತಿಸುತ್ತಿರುವುದು ಬಿಜೆಪಿ ಮತ್ತು ಕಾಂಗ್ರೆಸ್ಸನ್ನು ಮಾತ್ರ. ಉಳಿದವು ಅಕ್ಷರಶಃ ಪ್ರಾದೇಶಿಕ ಪಕ್ಷಗಳು. ದೇಶದ ಬಹುತೇಕ ರಾಜ್ಯ ಮತ್ತು ಕೇಂದ್ರ ಸರ್ಕಾರ ಬಿಜೆಪಿ ಕೈಯಲ್ಲಿದೆ. ಎರಡು ರಾಜ್ಯ ಕಾಂಗ್ರೆಸ್ ವಶದಲ್ಲಿದೆ. ಹೀಗಿದ್ದರೂ ದೇಶದ ಉದ್ದಗಲಕ್ಕೆ ಹೌದು ಅಲ್ಲ ಎಂಬಂತೆ ಕಾಂಗ್ರೆಸ್ ಪಕ್ಷ ಉಸಿರಾಟ ನಡೆಸಿದೆ. ಒಂದಿಷ್ಟು ನೀರಿನ ಸಿಂಚನವಾದರೆ ತಲೆ ಎತ್ತುವ ಸಾಧ್ಯತೆ ಇದೆ. ಉಳಿದ ಎಲ್ಲ ಪಕ್ಷಗಳೂ ಸಿಪಿಐ, ಸಿಪಿಎಂ ಸೇರಿದಂತೆ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿರುವ ಪಕ್ಷಗಳು.

ಸ್ವಾತಂತ್ರ್ಯಾನಂತರದ ಏಳೂವರೆ ದಶಕದಲ್ಲಿ ಕಾಂಗ್ರೆಸ್ ಆಳ್ವಿಕೆಯನ್ನು ದೇಶ ಕಂಡಿದೆ. ಬಿಜೆಪಿ ಆಳ್ವಿಕೆಯನ್ನು ನೋಡುತ್ತಿದೆ. ಪ್ರತಿ ರಾಜ್ಯದಲ್ಲೂ ಒಂದೊಂದು ಪ್ರಾದೇಶಿಕ ಪಕ್ಷ ಸಾಕಷ್ಟು ಬಲಿತು ಕಾರ್ಯ ನಿರ್ವಹಿಸುತ್ತಿವೆ. ಒಡಿಶಾದಲ್ಲಿ ಬಿಜು ಜನತಾ ದಳ, ಕರ್ನಾಟಕದಲ್ಲಿ ಜಾತ್ಯತೀತ ಜನತಾ ದಳ, ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‍ಸಿಪಿ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಬಿಎಸ್‍ಪಿ, ಬಿಹಾರದಲ್ಲಿ ಆರ್‌ಜೆಡಿ, ಜೆಡಿಯು, ತಮಿಳುನಾಡಿನಲ್ಲಿ ಡಿಎಂಕೆ, ಅಣ್ಣಾ ಡಿಎಂಕೆ, ಆಂಧ್ರಪ್ರದೇಶದಲ್ಲಿ ವೈಎಸ್‍ಆರ್ ಕಾಂಗ್ರೆಸ್, ತೆಲುಗು ದೇಶಂ, ತೆಲಂಗಾಣಾದಲ್ಲಿ ಟಿಆರ್‍ಎಸ್, ಪಶ್ಚಿಮ ಬಂಗಾಳಾದಲ್ಲಿ ಟಿಎಂಸಿ, ಜಮ್ಮು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್…ಹೀಗೆ ಇನ್ನೂ ಹಲವು ಪ್ರಾದೇಶಿಕ ಪಕ್ಷಗಳು ಇದ್ದು ಕಾಲ ಕಾಲಕ್ಕೆ ತಮ್ಮ ಅಸ್ತಿತ್ವವನ್ನು ದಾಖಲಿಸಿವೆ. ಕೆಲವು ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳನ್ನು ಆಯಾ ರಾಜ್ಯದಿಂದ ಗಡಿಪಾರು ಮಾಡುವಲ್ಲಿ ಕೂಡಾ ಅದ್ಭುತ ಎನ್ನಬಹುದಾದ ಜಯ ಕಂಡಿವೆ. ಮತ್ತೆ ಕೆಲವು ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳನ್ನು “ಲೆಟರ್ ಹೆಡ್” ಪಕ್ಷವನ್ನಾಗಿಸಿವೆ.

ಪಶ್ಚಿಮ ಬಂಗಾಳಾದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಉಭಯ ಕಮ್ಯೂನಿಸ್ಟ್ ಪಕ್ಷಗಳನ್ನೂ, ಖರ್ಗೆ ನೇತೃತ್ವದ ಕಾಂಗ್ರೆಸ್ ಪಕ್ಷವನ್ನೂ ಗಡಿಪಾರು ಮಾಡುವಲ್ಲಿ ಯಶಸ್ವಿಯಾಗಿದೆ. ಸಿಪಿಎಂ ನೇತೃತ್ವದ ಸರ್ಕಾರ ಆ ರಾಜ್ಯದಲ್ಲಿ ಮೂರು ದಶಕಕ್ಕೂ ಹೆಚ್ಚಿನ ಅವಧಿಗೆ ಆಡಳಿತ ನಡೆಸಿದ್ದು ಹೌದೇ ಎಂಬ ಅನುಮಾನ ಮೂಡುವಂತಾಗಿದೆ. ತಮಿಳುನಾಡಿನಲ್ಲಿ ಬಿಜೆಪಿ ಮೊಳಕೆ ಒಡೆಯುವುದಕ್ಕೆ ಅವಕಾಶವೇ ಇಲ್ಲ ಎನ್ನುವುದು ವರ್ತಮಾನದ ವಾಸ್ತವ. ಡಿಎಂಕೆ ಅಣ್ಣಾಡಿಎಂಕೆಗಳು ಆ ರಾಜ್ಯದಲ್ಲಿ ಕಟ್ಟಿರುವ ಭದ್ರ ಕೋಟೆಯಲ್ಲಿ ನುಸುಳಲು ತಥಾಕಥಿತ ರಾಷ್ಟ್ರೀಯ ಪಕ್ಷಗಳಿಗೆ ಕಿಂಡಿಯೇ ಕಾಣಿಸುತ್ತಿಲ್ಲ. ಒಂದಾನೊಂದು ಕಾಲದಲ್ಲಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಆಡಳಿತ ನಡೆಸಿತ್ತು. ಅದರ ಸ್ಥಾನ ಪಲ್ಲಟಗೊಂಡು “ಲೆಟರ್ ಹೆಡ್” ಪಕ್ಷದ ಹಂತಕ್ಕೆ ಬಂದು ನಿಂತು ಬರೋಬ್ಬರಿ ಐವತ್ತೈದು ವರ್ಷವೇ ಕಳೆದುಹೋಗಿದೆ.

mallikarjun kharge

ಒಡಿಶಾದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಗೆ ಎಡೆ ಇಲ್ಲ ಎನ್ನುವುದನ್ನು ಬಿಜು ಜನತಾ ದಳ ಪದೇ ಪದೇ ಸಾಬೀತುಗೊಳಿಸಿದೆ. ಎರಡು ದಶಕದಿಂದ ಅಲ್ಲಿ ಅದರದೇ ಆಡಳಿತ. ಆಂಧ್ರ ಪ್ರದೇಶದಲ್ಲಿ, ತೆಲಂಗಾಣಾದಲ್ಲೂ ಇದೇ ಸ್ಥಿತಿ. ಬಿಹಾರದ ಆಡಳಿತದಲ್ಲಿ ಕೈಯಾಡಿಸುವ ಬಿಜೆಪಿ ಯತ್ನಕ್ಕೆ ಹಿನ್ನಡೆಯಾಗಿದೆ. ಅಲ್ಲೇನಿದ್ದರೂ ಜೆಡಿಯು, ಆರ್‍ಜೆಡಿ ಪಾರಮ್ಯ. ಹೀಗೆ ರಾಷ್ಟ್ರೀಯ ಪಕ್ಷಗಳನ್ನು ಅಪ್ರಸ್ತುತಗೊಳಿಸಿರುವ ಪ್ರಾದೇಶಿಕ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಏಗಬೇಕಾಗಿರುವ ಸ್ಥಿತಿಗೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಉಭಯ ಕಮ್ಯೂನಿಸ್ಟ್ ಪಕ್ಷಗಳು ಬಂದಿವೆ. ಸದ್ಯಕ್ಕೆ ಬಿಜೆಪಿ ಈ ಪಕ್ಷಗಳಷ್ಟು ದುರ್ಬಲವಾಗಿಲ್ಲ; ಪ್ರಾದೇಶಿಕ ಪಕ್ಷಗಳನ್ನು ನುಂಗಿನೊಣೆಯುವ ಅದರ ಯತ್ನ ಯಥಾಪ್ರಕಾರ ಮುಂದುವರಿದಿದೆ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಪದಾಧಿಕಾರಿಗಳಿಲ್ಲದ ಪದವಿಯಲ್ಲಿ ಖರ್ಗೆ ಏಕಾಂಗಿ

ಇದೀಗ ನಡೆದಿರುವ, ಮುಂದೆ ನಡೆಯಲಿರುವ ಚುನಾವಣೆಯಲ್ಲಿ ರಾಷ್ಟ್ರೀಯ ಇಲ್ಲವೆ ಪ್ರಾದೇಶಿಕ ಪಕ್ಷಗಳ ಆಡಳಿತ ವೈಖರಿ ಚರ್ಚೆಗೆ ಬರುತ್ತದೆಂದು ನಿರೀಕ್ಷಿಸಿದವರು ಮೂರ್ಖರ ಸ್ವರ್ಗದಲ್ಲಿ ಇದ್ದಾರೆಂದೇ ಅರ್ಥ. ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ನಡೆಯುವುದು ಇಲ್ಲವೇ ಇಲ್ಲ ಎಂಬಷ್ಟು ಅಪರೂಪವಾಗಿದೆ. ರಾಷ್ಟ್ರೀಯ ಪಕ್ಷಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದನ್ನು ನೋಡಿರುವ ಜನ ತಮ್ಮತಮ್ಮ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಕಡಿದು ಗುಡ್ಡೆ ಹಾಕಿರುವುದನ್ನೂ ಕಂಡಿದ್ದಾರೆ. ಯಾರು ಹಿತವರು ನಿಮಗೆ ಈ ಮೂವರೊಳಗೆ ಎಂದು ಕೇಳಿದರೆ ಯಾರೂ ಹಿತವರಲ್ಲ ಎಂಬ ಉತ್ತರ ಕೊಡುತ್ತಾರೆ. ಆದರೆ ನಮ್ಮದು ಚುನಾವಣಾ ಆಧರಿತ ಜನತಂತ್ರ. ಕುರಡು ಕಣ್ಣಿಗಿಂತ ಮೆಳ್ಳೆಗಣ್ಣು ಲೇಸು ಎನ್ನುವುದು ನಮ್ಮ ಲೆಕ್ಕಾಚಾರ.

ಇದರ ಆಚೆಗೆ ಸುಲಭದಲ್ಲಿ ಜನರನ್ನು ಯಾಮಾರಿಸಬಹುದಾದ ಆಮಿಷ. ಆಮಿಷವೊಡ್ಡದ ಪಕ್ಷಗಳಿಲ್ಲ ಆಮಿಷಕ್ಕೆ ಬಲಿಯಾಗದ ಮತದಾರೂ ಕಡಿಮೆ ಆಗುತ್ತಿದ್ದಾರೆ ಎಂಬಂಥ ದುರಂತ ಸ್ಥಿತಿಗೆ ನಮ್ಮ ಪ್ರಜಾಪ್ರಭುತ್ವ ಬಂದು ನಿಂತಿರುವುದಕ್ಕೆ ಎಲ್ಲ ಪಕ್ಷಗಳೂ ಹೊಣೆ ಹೊರಬೇಕು. ಕೆಲವು ಪಕ್ಷಗಳು ಹಣ ತೋರಿಸಿ ಮತ ಪೀಕುತ್ತವೆ, ಮತ್ತೆ ಕೆಲವು ರೌಡಿಗಳನ್ನು ಮುಂದಿಟ್ಟುಕೊಂಡು ಮತ ಕೀಳುತ್ತವೆ. ಜಾತಿ ಧರ್ಮ ಕೋಮು ಇವೆಲ್ಲವೂ ಈ ಹೊತ್ತು ಓಟು ಒಡೆಯುವ ಮತ್ತು ಹೊಡೆಯುವ ತಂತ್ರ ರಾಜಕಾರಣದ ಭಾಗ. ಹೀಗಿರುವಾಗ ಅಭಿವೃದ್ಧಿ ಬಗ್ಗೆ ಮಾತು ಎಲ್ಲಿಂದ ಬರಬೇಕು.

ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ ಎಂದರು ದಾಸವರೇಣ್ಯರು. ಯಾವುದನ್ನು ಬಿಡಬೇಕು ಎಂದಿದೆಯೋ ಅದನ್ನೇ ಇವತ್ತಿನ ರಾಜಕಾರಣ ಹಿಡಿಯ ಹೊರಟಿದೆ. ಭ್ರಷ್ಟಾಚಾರ ಬಿಡಿ ಎಂದರು ನಮ್ಮ ಹಿಂದಿನವರು. ಬಿಡಲಿಲ್ಲ. ಲಂಚಾವತಾರ ಬೇಡ ಎಂದರೂ ಕೇಳದೆ ರಾಜಕಾರಣ ಅದಕ್ಕೇ ಕಚ್ಚಿಕೊಂಡಿತು. ಸುಳ್ಳು ತಟವಟ ಸಲ್ಲದು ಎಂದರು. ಅದೇ ಜೀವನೋಪಾಯವಾಯಿತು. ಮೋಸ ಮಾಡಬೇಡಿ ಎಂದರು. ಮೋಸ ಮಾಡದಿದ್ದರೆ ಜನರೇ ನಂಬದ ಸ್ಥಿತಿಯನ್ನು ತಂದಿಟ್ಟರು. ರಾಜಕಾರಣಿಗಳು ಬಾಯಿ ಬಿಟ್ಟರೆಂದರೆ ಅಲ್ಲಿ ಕೇಳುವುದು ಕಡಿ ಕೊಚ್ಚು ಕೊಲ್ಲು ಕಾಲುಕೈ ಮುರಿ ಎಂಬಂಥ ಮುಕ್ತಾಫಲಗಳು. ಕಳೆದ ವಾರ ಹಿಮಾಚಲ ಪ್ರದೇಶದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಅಲ್ಲಿಯ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮ “ರಾಹುಲ್ ಗಾಂಧಿ ಸದ್ದಾಂ ಹುಸೇನರಂತೆ ಕಾಣಿಸ್ತಿದ್ದಾರೆ” ಎಂದು ಗಡ್ಡಧಾರಿ ರಾಹುಲರನ್ನು ಲೇವಡಿ ಮಾಡಿದರು. ಅವರು ಗಡ್ಡ ಬಿಟ್ಟಿರುವುದಕ್ಕೂ ಚುನಾವಣೆಗೂ ಏನು ಸಂಬಂಧ? ಸಂಸ್ಕೃತಿಯ ಮಾತನ್ನಾಡುವ ಬಿಜೆಪಿ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದು ವರದಿಯಾಗಿಲ್ಲ.

ಈ ಹಿಂದಿನ ಚುನಾವಣೆಗಳಲ್ಲಿ ಮೋದಿಯವರನ್ನು “ಸಾವಿನ ವ್ಯಾಪಾರಿ” ಎಂದು ಸೋನಿಯಾ ಗಾಂಧಿ ಕರೆದರು. “ಚೌಕಿದಾರ್ ಏಕ್ ಚೋರ್ ಹೈ” ಎಂದು ರಾಹುಲ್ ಗಾಂಧಿ ಕುಟುಕಿ ಸಂಭ್ರಮಿಸಿದರು. “ಚಹಾ ಮಾರುತ್ತಿದ್ದವ ಏನು ಮಾಡಿಯಾನು” ಎಂದು ಜೈರಾಂ ರಮೇಶ್ ಕಟಕಿಯಾಡಿದರು. ಮೋದಿ ಹಾಗೂ ಬಿಜೆಪಿ ಪಾಲಿಗೆ ಪ್ರತಿ ಟೀಕೆ, ಮೂದಲಿಕೆಯೂ ಓಟಾಗಿ ಪರಿವರ್ತನೆ ಆಯಿತೆನ್ನುವುದನ್ನು ಗಮನಿಸಿದರೆ ಎಲ್ಲಿ ಯಾವಾಗ ಏನನ್ನು ಹೇಳಬೇಕೆಂಬ ಪಾಠ ದೊರೆಯುತ್ತದೆ. ಕೇಳುವ ಮನಸ್ಸಿದ್ದವರು ಕಲಿಯಲು ಬೇಕಷ್ಟು ಪಾಠವಿರುವ ವಾತಾವರಣ ನಮ್ಮಲ್ಲಿದೆ. ಆದರೆ ಅರಿವು ನಮಗೆ ಬೇಡವೇ ಬೇಡ. ಅದು ಚಿಂದಿಯಾದ ಅರಿವೆ ಎನ್ನುವುದು ರಾಜಕಾರಣಿಗಳ ವಾದ. ವಿವಾದವನ್ನು ಬೇಕೋಬೇಡವೋ ಮೈಮೇಲೆ ಎಳೆದುಕೊಳ್ಳುವ ಪ್ರವೃತ್ತಿ ರಾಜಕಾರಣದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಈ ಮಾತಿಗೆ ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆ ಸಾಗಿದ್ದಾಗ ವೀರ ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿ ಆಡಿದ ಮಾತು ಮತ್ತು ಅದು ಸೃಷ್ಟಿಸಿದ ವಿವಾದ. ರಾಜಕಾರಣಿಗಳಿಗೆ ಅನಗತ್ಯವಾದುದೆಲ್ಲವೂ ಅಗತ್ಯವಾಗುವ ವಿಪರೀತಕ್ಕೆ ಇದು ಮತ್ತೊಂದು ನಿದರ್ಶನ. ಈಗ ಈ ನಿಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಸರದಿ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಗುಜರಾತ್ ಚುನಾವಣೆ: ಯಾರು ಹಿತವರು ಈ ಮೂವರೊಳಗೆ!?

ಖರ್ಗೆಯವರ ಪ್ರಕಾರ ಮೋದಿಯವರನ್ನು ಮಾತ್ರವೇ ಮುಂದಿಟ್ಟುಕೊಂಡು ನಡೆಸುವ ಚುನಾವಣೆ ಜನತಂತ್ರಕ್ಕೆ ಮಾಡುವ ಅಪಚಾರ. ರಾವಣನಂತೆ ನಿಮಗೆ ನೂರು ತಲೆ ಇದೆಯೇ ಎಂಬ ಅವರ ಪ್ರಶ್ನೆ ರಾಮಾಯಣ ಕುರಿತಾಗಿ ಅವರ ಅಜ್ಞಾನವನ್ನೂ ಹೇಳುತ್ತದೆ. ದೇಶದಲ್ಲಿ ಸಹಸ್ರ ಸಂಖ್ಯೆಗೂ ಹೆಚ್ಚಿನ ರಾಮಾಯಣವಿದೆ ಎನ್ನುತ್ತಾರೆ ಸಂಶೋಧಕರು. ಯಾವುದೇ ರಾಮಾಯಣದಲ್ಲೂ ನೂರು ತಲೆಯ ರಾವಣ ಇಲ್ಲ. ದಶಕಂಠ ನಮಗೆಲ್ಲ ಗೊತ್ತು. ಖರ್ಗೆಯವರಿಗೆ ಈ ಶತಶಿರ ರಾವಣ ಎಲ್ಲಿ ಸಿಕ್ಕು ಬಿದ್ದನೋ, ಇರಲಿ. ಪಂಚಾಯತ್, ನಗರಸಭೆ, ಪುರಸಭೆ ಚುನಾವಣೆಗಳಲ್ಲೂ ಪ್ರಚಾರ ಮಾಡುತ್ತೀರಿ. ನಿಮ್ಮ ಮುಖ ನೋಡಿ ನೋಡಿ ಸಾಕಾಗಿ ಹೋಗಿದೆ ಎಂದೂ ಖರ್ಗೆ ಲೇವಡಿ ಮಾಡಿದ್ದಾರೆ.

ಭಾರತದ ರಾಜಕೀಯ ನಾಯಕ ಕೇಂದ್ರಿತ ಎನ್ನುವುದನ್ನು ಇತರ ರಾಜಕಾರಣಿಗಳಿಗಿಂತ ಹೆಚ್ಚು ಚೆನ್ನಾಗಿ ಬಲ್ಲವರು ಖರ್ಗೆ. ಇವತ್ತು ಬಿಜೆಪಿಯ ಮುಖ್ಯ ಮುಖ ಮೋದಿ. ಇಂದಿರಾ ಗಾಂಧಿ ಹತ್ಯೆಯಾಗುವವರೆಗೂ ಅವರೇ ಕಾಂಗ್ರೆಸ್‍ನ ಮುಖವಾಗಿದ್ದರು. ಅವರ ತರುವಾಯದಲ್ಲಿ ರಾಜೀವ ಗಾಂಧಿ ಮುಖವಾದರು. ಮನಮೋಹನ ಸಿಂಗ್ ಹತ್ತು ವರ್ಷ ಪ್ರಧಾನಿ ಆಗಿದ್ದರೂ ಅವರನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವ ಧೈರ್ಯ ಕಾಂಗ್ರೆಸ್‍ಗೆ ಬರಲಿಲ್ಲ. ಚುನಾವಣಾ ರಾಜಕಾರಣದಲ್ಲಿ ಜನರನ್ನು ಸೆಳೆಯುವುದಕ್ಕೆ ಮೋದಿಯವರನ್ನು ಬಳಸಿಕೊಳ್ಳುವುದಕ್ಕೆ ಬಿಜೆಪಿ ಸರ್ವತಂತ್ರ ಸ್ವತಂತ್ರ. ಈಗ ಖರ್ಗೆಯವರ ಸಮಸ್ಯೆ ಎಂದರೆ ಅವರ ಪಕ್ಷಕ್ಕೆ ಒಂದು ಸಮರ್ಥ ಮುಖ ಇಲ್ಲವಾಗಿರುವುದು. ನೆಹರೂ, ಇಂದಿರಾ, ರಾಜೀವ್ ಹೀಗೆ ಮೂರು ಮುಖವುಳ್ಳ ಮುಖವಾಡವನ್ನು ಧರಿಸಿಯೇ ಜನರ ಮುಂದೆ ಹೋಗಬೇಕಿರುವ ಸ್ಥಿತಿ ಖರ್ಗೆಯವರಿಗೆ ಬಂದಿದ್ದರೆ ಅದಕ್ಕೆ ಖಂಡಿತವಾಗಿಯೂ ಮೋದಿ ಕಾರಣರಲ್ಲ.

ಇನ್ನು ರಾವಣನ ಪ್ರಸ್ತಾಪ ಮತ್ತು ಮೋದಿಗೆ ರಾವಣನ ಹೋಲಿಕೆ ಮಾಡಿರುವ ಪರಿಯ ವಿಚಾರ. ರಾಮಾಯಣದ ಪ್ರಕಾರ ಯುದ್ಧಕ್ಕೆ ಮೊದಲು ರಾಮ ಮಾಡುವ ಪೂಜೆಗೆ ಪುರೋಹಿತನಾಗಿ ಬಂದವನು ರಾವಣ. ಪೂಜೆ ಬಳಿಕ ವಿಜಯೀಭವ ಎಂದು ರಾಮನಿಗೆ ಆಶೀರ್ವದಿಸಿದವನೂ ರಾವಣನೇ. ಅತ್ತ ಶ್ರೀಲಂಕಾದಲ್ಲಿ ರಾವಣ “ರಾಷ್ಟ್ರೀಯ ನಾಯಕ” (ನ್ಯಾಷನಲ್ ಹೀರೋ). ಒಂದು ದೇಶದ ನ್ಯಾಷನಲ್ ಹೀರೋ ಜೊತೆ ನಮ್ಮ ದೇಶದ ಪ್ರಧಾನಿಯನ್ನು ಸಮೀಕರಿಸುವ ಖರ್ಗೆ ನಿಲುವಿಗೆ ಭಾರತೀಯ ಜನತಾ ಪಾರ್ಟಿ ಕೃತಜ್ಞವಾಗಿರಬೇಕು. ಹೀರೋ ಜೊತೆ ಯಾರ್ಯಾರನ್ನೋ ಕೂರಿಸುವುದು ನಮ್ಮ ಜಾಯಮನವಲ್ಲ ಎನ್ನುವುದು ಕಾಂಗ್ರೆಸ್‍ಗೂ ಗೊತ್ತಿದೆ, ಬಿಜೆಪಿಗೂ ಗೊತ್ತಿದೆ. ಫಾಯ್ದೆ ತಾರದ ಇಂಥ ಮಾತು ಆರೋಪದ ಆಚೆಗೆ ನೋಡುವುದು ನಮ್ಮ ರಾಜಕಾರಣಕ್ಕೆ ಸಾಧ್ಯವಾಗುವುದು ಯಾವಾಗ? ಶಿವಭಕ್ತ ಆ ರಾವಣನೇ ಬಲ್ಲ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಸಡಿಲವಾಗುತ್ತಿರುವ ರಾಜ್ಯ-ಕೇಂದ್ರ ಸಂಬಂಧ: ಜ್ವಾಲಾಮುಖಿ ಸ್ಫೋಟ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

ರಾಜಮಾರ್ಗ ಅಂಕಣ: ಸಿನೆಮಾ ಜಗತ್ತಿನ ಮೊದಲ ಸೂಪರ್ ಸ್ಟಾರ್ ಚಾರ್ಲಿ ಚಾಪ್ಲಿನ್!

ರಾಜಮಾರ್ಗ ಅಂಕಣ: ತನ್ನ ಅದ್ಭುತವಾದ ಅಭಿನಯ ಹಾಗೂ ರೋಚಕವಾದ ಸಿನೆಮಾಗಳ ಮೂಲಕ ಇಡೀ ಜಗತ್ತನ್ನು ಚಾರ್ಲಿ ಚಾಪ್ಲಿನ್‌ಗೆ ಮೊನ್ನೆ ಮೊನ್ನೆ (ಏಪ್ರಿಲ್ 16) ಹುಟ್ಟುಹಬ್ಬ. A day without laughter is a day wasted ಎಂದು ಹೇಳಿದ್ದ ಚಾಪ್ಲಿನ್ ಅದರಂತೆ ಬದುಕಿದ್ದ! ತನ್ನ ನೂರಾರು ನೋವುಗಳನ್ನು ನುಂಗಿ ಜಗತ್ತನ್ನು ನಗಿಸಿದ ಚಾರ್ಲಿ ಚಾಪ್ಲಿನ್ ಬದುಕು ಅವನ ಸಿನೆಮಾಗಳಷ್ಟೆ ರೋಚಕ.

VISTARANEWS.COM


on

charlie chaplin rajamarga
Koo

ಜಗತ್ತಿಗೆ ನಗುವನ್ನು ಕಲಿಸಿದ ಚಾರ್ಲಿ ಬದುಕು ದುರಂತ ಆಗಿತ್ತು!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಜಗತ್ತಿನ ಮಹೋನ್ನತವಾದ ಕಾಮಿಡಿ (comedy) ಸ್ಟಾರ್, ನಿರ್ಮಾಪಕ, ಎಡಿಟರ್, ನಿರ್ದೇಶಕ (Director), ಲೇಖಕ, ಮಹಾನ್ ನಟ (Actor), ಸಂಗೀತ ನಿರ್ದೇಶಕ…………..ಇನ್ನೂ ಏನೇನೋ ಅವತಾರಗಳು! ಚಾರ್ಲಿ ಚಾಪ್ಲಿನ್ (Charlie Chaplin) ಬದುಕಿದ ರೀತಿಯೇ ಹಾಗಿತ್ತು.

ಆತನ TRAMP ಜಗತ್ತಿನ ಅತ್ಯಂತ ಜನಪ್ರಿಯ ಪಾತ್ರ!

ಆ ವಿಚಿತ್ರವಾದ ಬುಟ್ಟಿಯಾಕಾರದ ಟೋಪಿ, ಬೂಟ್ ಪಾಲಿಶ್ ಮೀಸೆ, ಉದ್ದವಾದ ನಡೆಕೋಲು ಈ ಮೂರು ಸೇರಿದರೆ ಚಾಪ್ಲಿನ್ ಚಿತ್ರವು ಕಣ್ಮುಂದೆ ಬಂದಾಯಿತು! ಆ ಪಾತ್ರದ ಹೆಸರು TRAMP. ಜಗತ್ತಿನ ಅತ್ಯಂತ ಜನಪ್ರಿಯ ಪಾತ್ರವದು!

1889ರ ಏಪ್ರಿಲ್ 16ರಂದು ಲಂಡನ್ನಿನಲ್ಲಿ ಹುಟ್ಟಿದ ಅವನ ಬಾಲ್ಯವು ದೊಡ್ಡ ಸಮಸ್ಯೆಗಳಿಂದ ಕೂಡಿತ್ತು. ಹುಟ್ಟಿಸಿದ ತಂದೆಯು ಮಗನನ್ನು ಬಿಟ್ಟು ಹೋಗಿದ್ದರು. ತಾಯಿಗಂತೂ ಗುಣವಾಗದ ಮನೋವ್ಯಾಧಿ. ಮಗ ಚಾರ್ಲಿ ಒಂಬತ್ತನೆಯ ವಯಸ್ಸಿಗೆ ತಲುಪಿದಾಗ ಅಮ್ಮ ಹೆಚ್ಚು ಕಡಿಮೆ ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದರು.

ಆಕೆ ಹಲವು ಮನೆಗಳಲ್ಲಿ ಕೆಲಸ ಮಾಡಿದ್ದು, ಹಲವು ನಾಟಕ ಮಂಡಳಿಗಳಲ್ಲಿ ಕಾಮಿಡಿ ಪಾತ್ರ ಮಾಡಿ ನಗಿಸಿದ್ದು ಎಲ್ಲವೂ ಹೊಟ್ಟೆಪಾಡಿಗಾಗಿ! ಅಮ್ಮನ ಮೇಲೆ ಮಗನಿಗೆ ಅತಿಯಾದ ಪ್ರೀತಿ. ಬದುಕು ಜಟಕಾ ಬಂಡಿ ಅವನನ್ನು ಅತ್ಯಂತ ಕಿರಿಯ ಪ್ರಾಯದಲ್ಲಿ ಅಮೆರಿಕಕ್ಕೆ ಕರೆದುಕೊಂಡು ಹೋಯಿತು. ಆ TRAMP ಪಾತ್ರದ ಕಲ್ಪನೆಯು ಮೂಡಿದ್ದು, ಚಾರ್ಲಿಯು ಸಿನೆಮಾದ ಭಾಷೆಯನ್ನು ಕಲಿತದ್ದು ಅಮೆರಿಕಾದಲ್ಲಿ.

ಆತನ ವಿಚಿತ್ರ ಮ್ಯಾನರಿಸಂ ಜಗತ್ತಿಗೆ ಹುಚ್ಚು ಹಿಡಿಸಿದವು!

1921ರಲ್ಲಿ ಅವನ ಮೊದಲ ಸಿನೆಮಾವಾದ The Kid ತೆರೆಗೆ ಬಂದಿತು. ಅವನ ವಿಚಿತ್ರವಾದ ನಡಿಗೆ, ದೇಹ ಭಾಷೆ, ವಿಚಿತ್ರ ಮ್ಯಾನರಿಸಂಗಳು ಮತ್ತು ವ್ಯಂಗ್ಯವಾದ ನಗು ಜಗತ್ತಿನ ಸಿನಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿ ಬಿಟ್ಟವು. ಆಗ ಟಾಕಿ ಸಿನೆಮಾಗಳು ಆರಂಭ ಆಗಿದ್ದರೂ ಚಾರ್ಲಿ ಆರಂಭದಲ್ಲಿ ಮಾಡಿದ್ದೆಲ್ಲವೂ ಮೂಕಿ ಸಿನಿಮಾಗಳೇ! SILENCE is the best mode of expressions ಎಂದು ಚಾರ್ಲಿ ನಂಬಿದ್ದ.

ಹಿಟ್ಲರನನ್ನು ನಗಿಸಿದ ಚಾಪ್ಲಿನ್!

ಅವನ ಸಿನೆಮಾಗಳ ಕಥೆಗಾರ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಎಡಿಟರ್ ಎಲ್ಲವೂ ಅವನೇ! ನಂತರ ಬಂತು ನೋಡಿ ಸಾಲು ಸಾಲು ಚಿತ್ರಗಳು. The Circus, Gold Rush, City Lights, Modern Times…. ಎಲ್ಲವೂ ಸೂಪರ್ ಹಿಟ್! ತನ್ನ ಮೊದಲ ಟಾಕಿ ಸಿನೆಮಾ ಆಗಿ The Great Dictator(1940) ತೆರೆಗೆ ತಂದ ಚಾರ್ಲಿ. ಅದು ಆ ಕಾಲದ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನನ್ನು ಅಣಕಿಸುವ ಸಿನೆಮಾ. ಆಗ ಹಿಟ್ಲರನು ಜೀವಂತ ಇದ್ದ. ಆ ಸಿನೆಮಾವನ್ನು ನೋಡಿ ಸಿಟ್ಟು ಮಾಡಿಕೊಂಡು ಆತನು ಚಾರ್ಲಿಯನ್ನು ಕೊಂದೇ ಬಿಡ್ತಾನೆ ಎಂಬ ಸುದ್ದಿಯು ಎಲ್ಲೆಡೆಯು ಹರಡಿತ್ತು! ಆದರೆ ಆ ಸಿನೆಮಾವನ್ನು ನೋಡಿದ ಹಿಟ್ಲರ್ ಬಿದ್ದು ಬಿದ್ದು ನಕ್ಕು ಬಿಟ್ಟನು ಮತ್ತು ಚಾರ್ಲಿಗೆ ಶಾಬಾಷ್ ಹೇಳಿದ್ದನು ಅನ್ನೋದೇ ಚಾರ್ಲಿಗೆ ದೊರೆತ ಬಹುದೊಡ್ಡ ಪ್ರಶಸ್ತಿ!

charlie chaplin rajamarga

ನನಗೆ ಸಿನೆಮಾ ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದ ಚಾರ್ಲಿ!

ದಾಖಲೆಯ ಪ್ರಕಾರ ಆತ ಮಾಡಿದ ಒಟ್ಟು ಸಿನೆಮಾಗಳು 83. ‘ನನಗೆ ಸಿನೆಮಾ ಬಿಟ್ಟರೆ ಬೇರೇನೂ ಗೊತ್ತಿಲ್ಲ’ ಅಂತ ಹೇಳುತ್ತಿದ್ದ ಆತ ಸಾಯುವವರೆಗೂ(1977) ಸಿನೆಮಾಗಳಲ್ಲಿ ಮುಳುಗಿಬಿಟ್ಟಿದ್ದ. ಅವನ ಸಿನೆಮಾಗಳು ಕೇವಲ ಕಾಮಿಡಿ, ನಗುವುದಕ್ಕಾಗಿ ಮಾತ್ರ ಇರದೇ ವಿಡಂಬನೆ, ವ್ಯಂಗ್ಯ, ಪ್ರೀತಿ, ಕಣ್ಣೀರು ಮತ್ತು ಪ್ರೇಮಗಳಿಂದ ಶ್ರೀಮಂತವಾಗಿ ಇದ್ದವು. ಅದರಲ್ಲಿಯೂ ಗೋಲ್ಡ್ ರಶ್, ಸಿಟಿ ಲೈಟ್ಸ್, ಮಾಡರ್ನ್ ಟೈಮ್ಸ್ ಮತ್ತು ದಿ ಗ್ರೇಟ್ ಡಿಕ್ಟೇಟರ್ ಸಿನೆಮಾಗಳು ಜಗತ್ತಿನ ಅತೀ ಶ್ರೇಷ್ಟ ಸಿನೆಮಾಗಳ ಸಾಲಿನಲ್ಲಿ ಸ್ಥಾನವನ್ನು ಪಡೆದವು. ಚಾರ್ಲಿಯ ಸಿನೆಮಾಗಳು ಎಷ್ಟು ರೋಚಕವಾಗಿ ಇದ್ದವೋ ಅವನ ಬದುಕು ಅಷ್ಟೇ ದುರಂತ ಆಗಿತ್ತು!

ಚಾಪ್ಲಿನ್ ಬದುಕಲ್ಲಿ ವಿವಾದಗಳು ಬೆನ್ನು ಬಿಡಲಿಲ್ಲ!

ಬೆನ್ನು ಬಿಡದ ನೂರಾರು ವಿವಾದಗಳು ಅವನನ್ನು ಹಿಂಡಿ ಹಿಪ್ಪೆ ಮಾಡಿದವು. ತನ್ನ ಸಿನೆಮಾದಲ್ಲಿ ಅಭಿನಯಿಸಿದ ಹದಿಹರೆಯದ ಎಲ್ಲ ಚಂದದ ಹುಡುಗಿಯರನ್ನು ಚಾರ್ಲಿ ಮಿತಿಗಿಂತ ಹೆಚ್ಚು ಮೋಹಿಸಿದ್ದ. ಜೀವನದಲ್ಲಿ 3 ಬಾರಿ ಮದುವೆಯಾಗಿ 11 ಮಕ್ಕಳನ್ನು ಪಡೆದ! ಅದರ ನಂತರವೂ ಅವನ ದಾಹವು ನೀಗಲಿಲ್ಲ. ಕೊನೆಯ ಕೆಲವು ಸಿನೆಮಾಗಳು ಸೋತು ಹೋದಾಗ ಚಾರ್ಲಿಯು ಕುಸಿದು ಹೋದರೂ ಸಿನೆಮಾ ಮಾಡುವುದನ್ನು ಬಿಡಲಿಲ್ಲ. ಚಾಪ್ಲಿನ್ ಕೊನೆಯ ಸಿನೆಮಾಗಳು ಪೂರ್ಣವಾಗಿ ಸೋತವು.

ಇನ್ನು ಸಿನೆಮಾ ಮಾಡುವುದಿಲ್ಲ ಅಂದ ಚಾಪ್ಲಿನ್!

ಅವನ ಜೀವನದ ಒಂದು ಘಟನೆಯನ್ನು ನಾನು ಉಲ್ಲೇಖ ಮಾಡಲೇಬೇಕು. ಅವನು ಜೀವಂತವಾಗಿ ಇದ್ದಾಗ ಅಮೇರಿಕಾದಲ್ಲಿ ಒಂದು ದೊಡ್ಡ ಸ್ಪರ್ಧೆ ನಡೆಯಿತು. ಅದು ಚಾರ್ಲಿಯನ್ನು, ಅವನ ಡ್ರೆಸ್ಸನ್ನು, ಅವನ ನಡಿಗೆ, ಅವನ ಅಭಿನಯ.. ಇತ್ಯಾದಿಗಳನ್ನು ಅನುಕರಣೆ ಮಾಡುವ ಸ್ಪರ್ಧೆ! ಕುತೂಹಲದಿಂದ ಚಾರ್ಲಿ ಚಾಪ್ಲಿನ್ ಆ ಸ್ಪರ್ಧೆಯಲ್ಲಿ ಬೇರೆ ಹೆಸರು ಕೊಟ್ಟು ಭಾಗವಹಿಸಿದ್ದನು. ಆದರೆ ಫಲಿತಾಂಶ ಬಂದಾಗ ಚಾರ್ಲಿಗೆ ನಿಜವಾದ ಶಾಕ್ ಆಯಿತು. ಏಕೆಂದರೆ ಅವನಿಗೇ ಸೆಕೆಂಡ್ ಪ್ರೈಜ್ ಬಂದಿತ್ತು!

ಅಂದು ವೇದಿಕೆ ಹತ್ತಿದ ಚಾಪ್ಲಿನ್ ವಿಜೇತ ಕಲಾವಿದನನ್ನು ಅಪ್ಪಿಕೊಂಡು ಅಭಿನಂದಿಸಿದನು ಮತ್ತು ತಾನು ಇನ್ನು ಯಾವ ಸಿನೆಮಾವನ್ನು ಕೂಡ ಮಾಡುವುದಿಲ್ಲ ಎಂದು ಆ ವೇದಿಕೆಯಲ್ಲಿಯೇ ಘೋಷಿಸಿದನು! ಅವನ ಕೊನೆಯ ಸಿನೆಮಾ A Countess from Hong Kong (1967).

ತನ್ನ ಅದ್ಭುತವಾದ ಅಭಿನಯ ಹಾಗೂ ರೋಚಕವಾದ ಸಿನೆಮಾಗಳ ಮೂಲಕ ಇಡೀ ಜಗತ್ತನ್ನು ನಗಿಸಿದ ಅವನಿಗೆ ಮೊನ್ನೆ ಮೊನ್ನೆ (ಏಪ್ರಿಲ್ 16) ಹುಟ್ಟುಹಬ್ಬ.

A day without laughter is a day wasted ಎಂದು ಹೇಳಿದ್ದ ಚಾಪ್ಲಿನ್ ಅದರಂತೆ ಬದುಕಿದ್ದ! ತನ್ನ ನೂರಾರು ನೋವುಗಳನ್ನು ನುಂಗಿ ಜಗತ್ತನ್ನು ನಗಿಸಿದ ಚಾರ್ಲಿ ಚಾಪ್ಲಿನ್ ಬದುಕು ಅವನ ಸಿನೆಮಾಗಳಷ್ಟೆ ರೋಚಕ ಆಗಿದೆ!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತದ ಹೆಣ್ಣು ಮಕ್ಕಳಿಗೆ ಆಕಾಶದ ಎತ್ತರವೂ ಕಡಿಮೆ ಎಂದು ಸಾಬೀತು ಪಡಿಸಿದ ಕಲ್ಪನಾ ಚಾವ್ಲಾ!

Continue Reading

ಅಂಕಣ

ರಾಜಮಾರ್ಗ ಅಂಕಣ: ಭಾರತದ ಹೆಣ್ಣು ಮಕ್ಕಳಿಗೆ ಆಕಾಶದ ಎತ್ತರವೂ ಕಡಿಮೆ ಎಂದು ಸಾಬೀತು ಪಡಿಸಿದ ಕಲ್ಪನಾ ಚಾವ್ಲಾ!

ರಾಜಮಾರ್ಗ ಅಂಕಣ: ಭಾರತೀಯ ಮೂಲದ ಓರ್ವ ಹೆಣ್ಣು ಮಗಳು ಸಂಶೋಧನೆ ಮಾಡಲು ಬಹಳ ದೊಡ್ಡ ಕನಸು ಕಟ್ಟಿಕೊಂಡು ನಾಸಾಕ್ಕೆ ಹೋದದ್ದು, ಭಾರತದ ಮೊತ್ತ ಮೊದಲ ವ್ಯೋಮಯಾನಿ ಆದದ್ದು, ಮುಂದೆ ಅದೇ ರೀತಿಯ ಎರಡನೇ ಯಾನಕ್ಕೆ ಪ್ರಯತ್ನವನ್ನು ಮಾಡಿ ಆಕಾಶದ ಹೊಳೆಯುವ ನಕ್ಷತ್ರಗಳ ನಡುವೆ ಒಂದು ಮಿನುಗು ನಕ್ಷತ್ರವಾದದ್ದು ನಮಗೆಲ್ಲರಿಗೂ ಒಂದು ಸ್ಫೂರ್ತಿದಾಯಕ ಹಾಗೂ ಒಂದು ದುಃಖದಾಯಕ ಘಟನೆ

VISTARANEWS.COM


on

kalpana chawla rajamarga column
Koo

ಕನಸುಗಳಿಗೆ ರೆಕ್ಕೆ ಕಟ್ಟಿದ ಆ ಹುಡುಗಿಯ ಸಾಧನೆ ನಿಜಕ್ಕೂ ಪ್ರೇರಣಾದಾಯಿ!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: 1962ರ ಮಾರ್ಚ್ 17ರಂದು ಹರಿಯಾಣಾದ ಕರ್ನಾಲನಲ್ಲಿ ಬನಾರಸಿ ಲಾಲ್ ಚಾವ್ಲಾ ಮತ್ತು ಸಂಜ್ಯೋತಿಯವರ ಹಿರಿಯ ಮಗಳಾಗಿ ಜನಿಸಿದ ಆಕೆಗೆ (Kalpana Chawla) ಬಾಲ್ಯದಿಂದಲೂ ಆಕಾಶದಲ್ಲಿ ಹಾರಾಡುವ ಕನಸು. ಎತ್ತರದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡುತ್ತಾ ತಾನೂ ರೆಕ್ಕೆಗಳನ್ನು ಕಟ್ಟಿ ಹಾರಬೇಕು ಎಂದು ತನ್ನ ಅಪ್ಪನ ಜೊತೆ ಹೇಳುತ್ತಾ ಬೆಳೆದವರು ಆಕೆ!

ಬಾಲ್ಯದಿಂದಲೂ ಕಲ್ಪನಾಗೆ ಅಪ್ಪನೇ ಐಕಾನ್, ಲೆಜೆಂಡ್ ಎಲ್ಲವೂ! ಮೂರನೇ ವಯಸ್ಸಿಗೇ ಅಪ್ಪನಿಗೆ ಆಕಾಶದಲ್ಲಿ ವಿಮಾನ ತೋರಿಸಿ ತಾನೂ ಹಾರಬೇಕು ಎಂದು ದುಂಬಾಲು ಬಿದ್ದವಳು ಕಲ್ಪನಾ! ಅಪ್ಪನೂ ಆಕೆಯ ಪ್ರತೀಯೊಂದು ಕನಸಿನ ಈಡೇರಿಕೆಗೆ ಊರುಗೋಲಾಗಿ ನಿಂತಿದ್ದರು.

ತನ್ನ ಕನಸಿನ ಭಾಗವಾಗಿ ನಾಸಾ ಸೇರಿದರು ಕಲ್ಪನಾ

ಹರ್ಯಾಣದಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪೂರ್ತಿ ಮಾಡಿದ ಕಲ್ಪನಾ ತನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಮೇರಿಕಾಕ್ಕೆ ತೆರಳಿದರು. ಅಲ್ಲಿ ಶ್ರೇಷ್ಟವಾದ ಕೊಲರೆಡೋ ವಿವಿಯಿಂದ ಬಾಹ್ಯಾಕಾಶ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಆಕೆ ಪಡೆದರು.

ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ (NASA) ಸೇರಬೇಕು ಎಂದು ಆಕೆಯದು ಭಾರೀ ದೊಡ್ಡ ಕನಸು. ಅದಕ್ಕಾಗಿ ಹತ್ತಾರು ಪರೀಕ್ಷೆ, ಸಂದರ್ಶನಗಳನ್ನು ಎದುರಿಸಿ 1988ರಲ್ಲಿ ಆಕೆ ತನ್ನ ಡೆಸ್ಟಿನಿಯಾದ ನಾಸಾಕ್ಕೆ ಆಯ್ಕೆ ಆಗುತ್ತಾರೆ. ಮುಂದೆ ಅತ್ಯಂತ ಕಠಿಣವಾದ ತರಬೇತು ಆಕೆ ಪಡೆಯುತ್ತಾರೆ.

ದೇಹ ಮತ್ತು ಮನಸ್ಸನ್ನು ಹುರಿಗೊಳಿಸಲು ಯೋಗ ಮತ್ತು ಪ್ರಾಣಾಯಾಮಗಳ ಮೊರೆ ಹೊಕ್ಕವರು ಅವರು. ಮುಂದೆ ಯಾವ ಸವಾಲು ಕೂಡ ಎದುರಿಸಲು ಮಾನಸಿಕವಾಗಿ ಆಕೆ ಸಿದ್ಧರಾಗಲು ಕನಿಷ್ಠ ಎಂಟು ವರ್ಷ ಬೇಕಾಯಿತು. ಪ್ರತೀ ನಿತ್ಯವೂ ಅಪ್ಪನ ಜೊತೆ ಮಾತಾಡುತ್ತ ತನ್ನ ಕನಸುಗಳನ್ನು ಜೀವಂತವಾಗಿ ಇರಿಸಿದವರು ಕಲ್ಪನಾ.

1997 ನವೆಂಬರ್ 19, ಆ ದಿನ ಬಂದೇ ಬಿಟ್ಟಿತು!

ಪ್ರತಿಯೊಬ್ಬ ಸಾಧಕರು ಒಂದು ದೊಡ್ಡ ಅವಕಾಶಕ್ಕಾಗಿ ಕಾಯುತ್ತಾ ಇರುತ್ತಾರೆ. ಹಾಗೆ ಕಲ್ಪನಾ ಬದುಕಿನಲ್ಲಿ ಆ ಒಂದು ದೊಡ್ಡ ಅವಕಾಶವು ಬಂದೇ ಬಿಟ್ಟಿತು.

ನಾಸಾದ STS 87 ಕೊಲಂಬಿಯಾ ವ್ಯೋಮ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹಾರುವ ಅವಕಾಶವು ಆಕೆಗೆ ದೊರೆಯಿತು. ಓರ್ವ ಭಾರತೀಯ ಮೂಲದವರಾಗಿ ಅದೊಂದು ನಿಜವಾಗಿ ಐತಿಹಾಸಿಕ ಸಾಧನೆ! ಕಲ್ಪನಾ ಆ ಕೊಲಂಬಿಯಾ ನೌಕೆಯಲ್ಲಿ ಕುಳಿತು ಬಾಹ್ಯಾಕಾಶಕ್ಕೆ ಹಾರಿದರು. ಎರಡು ವಾರಗಳ ಕಾಲ ಬಾಹ್ಯಾಕಾಶದಲ್ಲಿಯೇ ಕಳೆದರು! ಹತ್ತಾರು ಸಂಶೋಧನೆ ಮಾಡಿದರು. ಅವರನ್ನು ಹೊತ್ತ ಕೊಲಂಬಿಯಾ ನೌಕೆಯು 65 ಲಕ್ಷ ಕಿಲೋಮೀಟರ್ ಹಾರಿತು! 252 ಬಾರಿ ತನಗೆ ನಿಗದಿ ಪಡಿಸಿದ ಕಕ್ಷೆಯನ್ನು ಸುತ್ತಿ ಮುಗಿಸಿ ಮತ್ತೆ ಭೂಮಿಗೆ ಮರಳಿ ಬಂದಾಗ ಕಲ್ಪನಾ ಚಾವ್ಲಾ ಭಾರತೀಯರ ಪಾಲಿಕೆ ದೇವಕನ್ಯೆಯೇ ಆಗಿ ಬಿಟ್ಟಿದ್ದರು!

ಜಗತ್ತಿನ ಕಣ್ಮಣಿ ಆದರು ಕಲ್ಪನಾ ಚಾವ್ಲಾ

ಜಗತ್ತಿನ ಎಲ್ಲ ಪತ್ರಿಕೆಗಳೂ ಆಕೆಯ ಬಗ್ಗೆ ಕಾಲಂ ಬರೆದವು. ಜಾಗತಿಕ ಮಟ್ಟದ ಟಿವಿ ಚಾನೆಲಗಳು ಆಕೆಯ ಸಂದರ್ಶನಕ್ಕೆ ತುದಿಗಾಲಲ್ಲಿ ನಿಂತವು. ಭಾರತದಿಂದ ನಾಸಾ ಸೇರಿದ ಓರ್ವ ಮಧ್ಯಮವರ್ಗದ ಹೆಣ್ಣು ಮಗಳು ಭಾರತದ ಮಹತ್ವಾಕಾಂಕ್ಷಿ ಮಹಿಳೆಯರಿಗೆ ಆಕಾಶದ ಎತ್ತರವೂ ಕಡಿಮೆಯೇ ಎಂದು ಸಾಬೀತು ಮಾಡಿ ತೋರಿಸಿದ್ದರು!

ಎರಡನೇ ಬಾರಿ ಬಾಹ್ಯಾಕಾಶ ಯಾನಕ್ಕೆ ಕಲ್ಪನಾ ಆಯ್ಕೆ ಆದರು!

ಮೊದಲ ಬಾಹ್ಯಾಕಾಶ ಯಾನವು (Space tour) ಯಶಸ್ವಿಯಾದ ನಂತರ ಆಕೆ ನಾಸಾದಲ್ಲಿ ಎಲ್ಲರ ಕಣ್ಮಣಿ ಆಗಿದ್ದರು. ಆಕೆಯು ತನ್ನ 21ನೆಯ ವರ್ಷದಲ್ಲಿ ತನ್ನ ಸಹಪಾಠಿ ಜೀನ್ ಹ್ಯಾರಿಸನ್ ಅವರನ್ನು ಪ್ರೀತಿ ಮಾಡಿ ಮದುವೆಯಾದರು. ಆತನು ಕಲ್ಪನಾ ಅವರ ಪ್ರತಿಯೊಂದು ಕನಸುಗಳಿಗೆ ಬೆಂಬಲವಾಗಿ ನಿಂತದ್ದು ಕೂಡ ಉಲ್ಲೇಖನೀಯ.

ಸುಮಾರು ಐದು ವರ್ಷಗಳ ದೊಡ್ಡ ಗ್ಯಾಪ್ ನಂತರ ನಾಸಾ ತನ್ನ ಮುಂದಿನ ವ್ಯೋಮ ಯಾತ್ರೆಯನ್ನು ಯೋಜನೆಯನ್ನು ರೂಪಿಸಿತು. ಅದು STS -107 ಕೊಲಂಬಿಯಾ ಹೆಸರಿನ ಮಿಷನ್! ಈ ಬಾರಿ ಒಟ್ಟು ಏಳು ಮಂದಿ ಆಕಾಶಯಾನಿಗಳು ಆಯ್ಕೆ ಆಗಿದ್ದು ಆ ತಂಡದಲ್ಲಿ ಕಲ್ಪನಾ ಚಾವ್ಲಾ ಸೀನಿಯರ್ ಆಗಿದ್ದರು. 2003ರ ಜನವರಿ ತಿಂಗಳಲ್ಲಿ ಈ ಯಾತ್ರೆಯು ಆರಂಭವಾಯಿತು. ಎಲ್ಲ ಭಾರತೀಯರು ಕಣ್ಣು ತೆರೆದು ಈ ಯಾತ್ರೆಯನ್ನು ಗಮನಿಸುತ್ತಿದ್ದರು.

ಆ ದುರಂತ ಸಂಭವಿಸಿಯೇ ಬಿಟ್ಟಿತು!

ಸಾಕಷ್ಟು ಸಂಶೋಧನೆಯನ್ನು ಮಾಡಿದ ಈ ತಂಡವು ಹಿಂದೆ ಬರುತ್ತಿರುವ ಸಂದರ್ಭದಲ್ಲಿ 2003 ಫೆಬ್ರುವರಿ 1ರಂದು ಭಾರೀ ದುರಂತವು ನಡೆದೇ ಹೋಯಿತು! ಬಾಹ್ಯಾಕಾಶದ ಕ್ಷೇತ್ರದಲ್ಲಿ ಅದೊಂದು ಅತ್ಯಂತ ದೊಡ್ಡ ದುರಂತವಾಗಿತ್ತು! ಏಳು ಜನ ಆಕಾಶಯಾತ್ರಿಗಳನ್ನು ಹೊತ್ತು ಹಾರುತ್ತಿದ್ದ STS 107 ಆಕಾಶನೌಕೆಯು ಭೂಮಿಯ ವಾಯುಮಂಡಲವನ್ನು ಪ್ರವೇಶಿಸುವ ಸಂದರ್ಭ ಆಕಾಶದಲ್ಲಿಯೇ ಸ್ಫೋಟವಾಗಿ ಎಲ್ಲ ಏಳು ಮಂದಿ ಬೂದಿಯಾಗಿ ಹೋದರು. ಅದರಲ್ಲಿ ಕಲ್ಪನಾ ಚಾವ್ಲಾ ಕೂಡ ಒಬ್ಬರು. ಆಗ ಆಕೆಗೆ ಕೇವಲ 41 ವರ್ಷ ವಯಸ್ಸು ಆಗಿತ್ತು!

ಇದನ್ನೂ ಓದಿ: ರಾಜಮಾರ್ಗ ಅಂಕಣ: RCB- ʼಹೊಸ ಅಧ್ಯಾಯʼ ಆರಂಭ ಆಗೋದು ಯಾವಾಗ?

ಆಕೆಗಾಗಿ ಮಿಡಿಯಿತು ಇಡೀ ಜಗತ್ತು!

ಏಳು ಜನ ಸಂಶೋಧಕ ಆಕಾಶಯಾನಿಗಳನ್ನು ಆಪೋಶನ ತೆಗೆದುಕೊಂಡ ಆ ದುರಂತದ ಬಗ್ಗೆ ಇಡೀ ಜಗತ್ತು ಕಂಬನಿ ಮಿಡಿಯಿತು. ಕಲ್ಪನಾ ಬಗ್ಗೆ ಭಾರತದ ಮೂಲೆ ಮೂಲೆಗಳಲ್ಲಿ ಶ್ರದ್ಧಾಂಜಲಿ ಸಭೆಗಳು ನಡೆದವು. ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಆಕೆಯನ್ನು ಭಾರತದ ಪುತ್ರಿ ಎಂದು ಕರೆದು ಶೃದ್ಧಾಂಜಲಿ ನೀಡಿದರು. ಮುಂದೆ ಭಾರತವು ಹಾರಿಸಿದ ಒಂದು ಕೃತಕ ಉಪಗ್ರಹಕ್ಕೆ ಕಲ್ಪನಾ ಹೆಸರು ಇಡಲಾಯಿತು. ನಾಸಾ ಆಕೆಯನ್ನು ಭಾವಪೂರ್ಣವಾಗಿ ಸ್ಮರಿಸಿತು. ಕರ್ನಾಟಕ ಸರಕಾರವು ಆಕೆಯ ಹೆಸರಿನಲ್ಲಿ ಓರ್ವ ಯುವ ವಿಜ್ಞಾನಿಯನ್ನು ಪ್ರತೀ ವರ್ಷ ಗೌರವಿಸುವ ಒಂದು ಪ್ರಶಸ್ತಿಯನ್ನು ಸ್ಥಾಪನೆ ಮಾಡಿತು. ತಮಿಳುನಾಡಿನ ಒಂದು ಪ್ರಮುಖವಾದ ರಸ್ತೆಗೆ ಕಲ್ಪನಾ ಚಾವ್ಲಾ ಹೆಸರನ್ನು ಇಡಲಾಯಿತು.

ಭರತ ವಾಕ್ಯ

ಭಾರತೀಯ ಮೂಲದ ಓರ್ವ ಹೆಣ್ಣು ಮಗಳು ಸಂಶೋಧನೆ ಮಾಡಲು ಬಹಳ ದೊಡ್ಡ ಕನಸು ಕಟ್ಟಿಕೊಂಡು ನಾಸಾಕ್ಕೆ ಹೋದದ್ದು, ಭಾರತದ ಮೊತ್ತ ಮೊದಲ ವ್ಯೋಮಯಾನಿ ಆದದ್ದು, ಮುಂದೆ ಅದೇ ರೀತಿಯ ಎರಡನೇ ಯಾನಕ್ಕೆ ಪ್ರಯತ್ನವನ್ನು ಮಾಡಿ ಆಕಾಶದ ಹೊಳೆಯುವ ನಕ್ಷತ್ರಗಳ ನಡುವೆ ಒಂದು ಮಿನುಗು ನಕ್ಷತ್ರವಾದದ್ದು ನಮಗೆಲ್ಲರಿಗೂ ಒಂದು ಸ್ಫೂರ್ತಿದಾಯಕ ಹಾಗೂ ಒಂದು ದುಃಖದಾಯಕ ಘಟನೆ!

ಭಾರತದ ಮಹಾನ್ ಪುತ್ರಿಗೆ ನಮ್ಮ ಶ್ರದ್ಧಾಂಜಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಬೇಂದ್ರೆ ಎಂಬ ಶಬ್ದ ಗಾರುಡಿಗ

Continue Reading

ಪ್ರಮುಖ ಸುದ್ದಿ

ಜಗದ ಜನರ ಕೈಗಳಲ್ಲಿ ಮಿನುಗುವ ಮೊಬೈಲ್ ಫೋನುಗಳಲ್ಲೀಗ ಮೇಕ್ ಇನ್ ಇಂಡಿಯಾದ್ದೇ ಮೊಹರು!

Make in India: ಭಾರತದಲ್ಲಿ ಆ್ಯಪಲ್ ಫೋನುಗಳ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. 2023-24ರ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 15 ಬಿಲಿಯನ್ ಡಾಲರುಗಳ ಮೊತ್ತದ ಮೊಬೈಲ್ ಫೋನ್ ರಫ್ತು ವಹಿವಾಟು ನಡೆಸಿದೆ ಭಾರತ. ಇದರಲ್ಲಿ ಭಾರತಲ್ಲಿಯೇ ಉತ್ಪಾದಿಸುತ್ತಿರುವ ಆ್ಯಪಲ್ ಐಫೋನ್ ಬ್ರ್ಯಾಂಡಿನ ಕೊಡುಗೆಯೂ ದೊಡ್ಡದಿದೆ. ಈ ಪೈಕಿ 10 ಬಿಲಿಯನ್ ಡಾಲರುಗಳ ವಹಿವಾಟು ಆ್ಯಪಲ್‌ನಿಂದಲೇ ಬಂದಿದೆ ಎನ್ನುವುದು ವಿಶೇಷ. 2014ರಲ್ಲಿ ಕೇವಲ ಎರಡು ಮೊಬೈಲ್ ಫೋನ್ ಉತ್ಪಾದನಾ ಘಟಕಗಳು ಭಾರತದಲ್ಲಿದ್ದವು. ಈಗವು 200 ದಾಟಿವೆ.

VISTARANEWS.COM


on

Make In India
Koo

| ಚೈತನ್ಯ ಹೆಗಡೆ
ಭಾರತವು ಈ ಬಾರಿ ಪುಷ್ಕಳವಾದ ಆ್ಯಪಲ್ ಬೆಳೆ ತೆಗೆದಿದೆ. ಕಾಶ್ಮೀರದಲ್ಲೋ, ಹಿಮಾಚಲದಲ್ಲೋ ಬೆಳೆಯುವ ಸೇಬಿನ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ಭಾರತದಲ್ಲಿ ತಯಾರಿಕೆ ಆಗುತ್ತಿರುವ ಆ್ಯಪಲ್ ಫೋನುಗಳ ಬಗೆಗಿನ ವಿದ್ಯಮಾನ ಇದು.

ಈ ವಿದ್ಯಮಾನವು ಎರಡು ಅಂಶಗಳನ್ನು ವಿಜೃಂಭಿಸುತ್ತಿದೆ. ಮೊದಲನೆಯದು, ಚೀನಾದ ಹೊರತಾಗಿಯೂ ಏಷ್ಯದಲ್ಲಿ ತನ್ನ ಪೂರೈಕೆ ಜಾಲ ಇರಬೇಕು ಎಂದು ಭಾರತದಲ್ಲಿ ತನ್ನ ಬೇರುಗಳನ್ನು ಗಟ್ಟಿಗೊಳಿಸಿದ್ದ ಆ್ಯಪಲ್ ಕಂಪನಿಯ ನಿರ್ಧಾರ ಸರಿ ಇದೆ ಎಂಬುದನ್ನು ಈ ವಿದ್ಯಮಾನ ಸಾರುವ ಮೂಲಕ, ಚೀನಾದಿಂದ ತಮ್ಮ ಉತ್ಪಾದಕ ಘಟಕಗಳನ್ನು ಹಂತ-ಹಂತವಾಗಿ ಬೇರೆಡೆಗೆ ಸ್ಥಳಾಂತರಿಸಲು ಬಯಸುತ್ತಿರುವ ಪಾಶ್ಚಾತ್ಯ ಕಂಪನಿಗಳಿಗೆ, ಭಾರತವೇ ಅದಕ್ಕೆ ಪ್ರಶಸ್ತ ಸ್ಥಳ ಎಂಬುದನ್ನು ಹೇಳುತ್ತಿದೆ. ಎರಡನೆಯದಾಗಿ, 2014ರಿಂದೀಚೆಗೆ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತ ದಾಖಲಿಸುತ್ತಿರುವ ಅತಿದೊಡ್ಡ ಯಶೋಗಾಥೆಗೆ ಈ ವಿದ್ಯಮಾನವು ಮತ್ತಷ್ಟು ಮೆರಗು ತುಂಬಿದೆ.

2023-24ರ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 15 ಬಿಲಿಯನ್ ಡಾಲರುಗಳ ಮೊತ್ತದ ಮೊಬೈಲ್ ಫೋನ್ ರಫ್ತು ವಹಿವಾಟು ನಡೆಸಿದೆ ಭಾರತ. ಇದರಲ್ಲಿ ಭಾರತಲ್ಲಿಯೇ ಉತ್ಪಾದಿಸುತ್ತಿರುವ ಆ್ಯಪಲ್ ಐಫೋನ್ ಬ್ರ್ಯಾಂಡಿನ ಕೊಡುಗೆಯೂ ದೊಡ್ಡದಿದೆ. ಈ ಪೈಕಿ 10 ಬಿಲಿಯನ್ ಡಾಲರುಗಳ ವಹಿವಾಟು ಆ್ಯಪಲ್‌ನಿಂದಲೇ ಬಂದಿದೆ.

2014ರಲ್ಲಿ ಕೇವಲ ಎರಡು ಮೊಬೈಲ್ ಫೋನ್ ಉತ್ಪಾದನಾ ಘಟಕಗಳು ಭಾರತದಲ್ಲಿದ್ದವು. ಈಗವು 200 ದಾಟಿವೆ. ಜಗತ್ತಿನ ಎರಡನೇ ದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ. ಇಂಡಿಯಾ ಸೆಲ್ಯುಲಾರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ಐಸಿಇಎ) ವರದಿಯ ಪ್ರಕಾರ ಭಾರತದ ಮೊಬೈಲ್ ಫೋನ್ ಉತ್ಪಾದನಾ ಸಾಮರ್ಥ್ಯ ಈ ಹತ್ತು ವರ್ಷಗಳಲ್ಲಿ 21 ಪಟ್ಟು ಹೆಚ್ಚಾಗಿದೆ. 2014-15ರಲ್ಲಿ 18,900 ಕೋಟಿ ರುಪಾಯಿಗಳ ಮೌಲ್ಯದ ಮೊಬೈಲ್ ಫೋನ್ ಗಳನ್ನು ಭಾರತ ಉತ್ಪಾದಿಸಿತ್ತು. 2023-24ರ ವಿತ್ತೀಯ ವರ್ಷದಲ್ಲಿ ಈ ಸಂಖ್ಯೆ ಎಲ್ಲಿಗೆ ಹೋಗಿ ಮುಟ್ಟಿದೆ ಗೊತ್ತೇ? ಬರೋಬ್ಬರಿ 4,10,000 ಕೋಟಿ ರೂ!

ಇವತ್ತಿಗೆ ಭಾರತದಲ್ಲಿ ಬಳಕೆಯಾಗುತ್ತಿರುವ ಮೊಬೈಲ್ ಫೋನುಗಳ ಪೈಕಿ ಶೇ. 97ರಷ್ಟು ಭಾರತದಲ್ಲೇ ತಯಾರಾದಂಥವುಗಳು. ಇವತ್ತು ಮೊಬೈಲ್ ಫೋನ್ ರಫ್ತು 15 ಬಿಲಿಯನ್ ಡಾಲರುಗಳ ಮೌಲ್ಯದ್ದಾಗಿ ಬೆಳೆಸಿರುವ ಭಾರತ 2014-15ರ ವೇಳೆಗೆ ರಫ್ತು ಮಾಡಿದ್ದ ಮೊಬೈಲ್ ಫೋನ್ ಮೌಲ್ಯ 1,556 ಕೋಟಿ ರೂ. ಮಾತ್ರ.

ನಿಮ್ಮ ಕೈಯಲ್ಲಿ ಹಿಡಿದಿರುವ ಮೊಬೈಲ್ ಫೋನ್ ವಿದೇಶಿ ಕಂಪನಿಯದ್ದೇ ಆಗಿರಬಹುದು. ಆ್ಯಪಲ್, ಸ್ಯಾಮ್ಸಂಗ್, ಒಪ್ಪೊ, ವಿವೊ, ಶಾಮಿ ಹೀಗೆ ಫೋನ್ ಯಾವುದೇ ಆಗಿದ್ದರೂ ಉತ್ಪಾದನೆ ಭಾರತದಲ್ಲೇ ಆಗಿರುತ್ತದೆ. ಈ ಹಂತದಲ್ಲಿ ಒಂದು ಪ್ರಶ್ನೆ ಹಲವರು ಕೇಳುವುದಿದೆ. ಇವೆಲ್ಲ ಏನೇ ಇದ್ದರೂ ಭಾರತದ್ದೇ ಒಂದು ಮೊಬೈಲ್ ಫೋನ್ ಉತ್ಪಾದನೆಯ ಬ್ರ್ಯಾಂಡ್‌ ಇಲ್ಲವಲ್ಲ ಎಂದು. ಅದು ಸೆಲ್ ಫೋನ್ ಉತ್ಪಾದನೆ ಇದ್ದಿರಬಹುದು, ಕಾರು ಇಲ್ಲವೇ ಮತ್ಯಾವುದೇ ತಂತ್ರಜ್ಞಾನ ಒಳಗೊಂಡ ಉತ್ಪಾದನೆಯೇ ಇದ್ದಿರಬಹುದು…ದೇಶವೊಂದು ಹಂತ-ಹಂತಗಳಲ್ಲಿ ಒಂದು ವಲಯವನ್ನು ತನ್ನದಾಗಿಸಿಕೊಳ್ಳುತ್ತದೆ. ಉದಾಹರಣೆಗೆ, ಮೊಬೈಲ್ ಉತ್ಪಾದನೆಯನ್ನೇ ತೆಗೆದುಕೊಂಡರೆ, ಆ ಕೌಶಲವನ್ನು ಅದಾಗಲೇ ಸಿದ್ಧಿಸಿಕೊಂಡಿರುವ ಕಂಪನಿಗಳು ಭಾರತದಲ್ಲೇ ಉತ್ಪಾದನೆ ಮಾಡುವಂತೆ ಮಾಡುವುದು ಮೊದಲ ಹೆಜ್ಜೆ. ಆ ಕಂಪನಿಗಳು ಇಲ್ಲಿ ಬಂದು ಉದ್ಯೋಗ ಸೃಷ್ಟಿಸುತ್ತವೆ. ಆ ಕೌಶಲಗಳನ್ನು ತಮ್ಮದಾಗಿಸಿಕೊಂಡ ಭಾರತೀಯ ಕೆಲಸಗಾರರ ಪ್ರತಿಭಾಪುಂಜವೊಂದು ಸಿದ್ಧಗೊಳ್ಳುತ್ತದೆ. ಮೊಬೈಲ್ ಫೋನ್ ಸಿದ್ಧಪಡಿಸಲು ಬೇಕಾಗುವ ಯಂತ್ರಗಳು ಭಾರತಕ್ಕೆ ಬರುತ್ತವೆ. ಅದಕ್ಕೆ ಬೇಕಾದ ಕಚ್ಚಾವಸ್ತುಗಳ ಪೂರೈಕೆ ಜಾಲವೊಂದು ಜಗತ್ತಿನ ನಾನಾ ಕಡೆಗಳಿಂದ ಭಾರತಕ್ಕೆ ಮುಖಮಾಡುತ್ತದೆ. ಹೀಗೆಲ್ಲ ಆದ ನಂತರದಲ್ಲಿ ಭಾರತೀಯ ಕಂಪನಿಗಳೇ ತಯಾರಿಕೆಗಳಲ್ಲಿ ಮುಂದೆ ಬರುವುದಕ್ಕೆ ಅನುಕೂಲಕರ ವಾತಾವರಣ ಹುಟ್ಟುತ್ತದೆ. ಚೀನಾದಂಥ ದೇಶಗಳು ಅಲ್ಲಿನ ಏಕೀಕೃತ ರಾಜಕೀಯ ವ್ಯವಸ್ಥೆ ರೂಪಿಸಿಕೊಂಡು ಈ ಪ್ರಕ್ರಿಯೆಯನ್ನು ವೇಗಗೊಳಿಸಿದ ಹಾಗೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತ್ವರಿತಗೊಳಿಸಲಾಗುವುದಿಲ್ಲ.

ಅದೇನೇ ಇರಲಿ. ಮೊಬೈಲ್ ಫೋನ್ ತಯಾರಿಕಾ ವಲಯವು ಭಾರತದಲ್ಲಿ ಬೃಹತ್ ಆಗಿ ಅಭಿವೃದ್ಧಿ ಹೊಂದಿದ ಪರಿಣಾಮವಾಗಿ ಅದು ಕನಿಷ್ಠ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿತು. ಆ್ಯಪಲ್ ಕಂಪನಿಯೊಂದೇ ಸುಮಾರು 1 ಲಕ್ಷ ಉದ್ಯೋಗಗಳನ್ನು ಭಾರತದಲ್ಲಿ ತನ್ನ ಉತ್ಪಾದನಾ ಚಟುವಟಿಕೆಯಿಂದ ಸೃಜಿಸಿತು.

ಇದನ್ನೂ ಓದಿ: Indian Navy Power: ಸೊಮಾಲಿಯಾದ ಕಡಲ್ಗಳ್ಳರನ್ನು ಬಗ್ಗುಬಡಿದು ಜಗತ್ತಿಗೆ ಸಂದೇಶ ನೀಡಿದೆ ಭಾರತದ ಕ್ಷಾತ್ರ!

2017ರಲ್ಲಿ ಕೇಂದ್ರ ಸರ್ಕಾರವು ಪೇಸ್ಡ್ ಮನುಫ್ಯಾಕ್ಟರಿಂಗ್ ಪ್ರೊಗ್ರಾಂ ಅಡಿಯಲ್ಲಿ ಮೊಬೈಲ್ ಫೋನಿಗೆ ಸಂಬಂಧಿಸಿದ ಹೆಡ್ಸೆಟ್, ಚಾರ್ಜರ್, ಸರ್ಕಿಟ್ ಬೋರ್ಡ್ ಇತ್ಯಾದಿಗಳಿಗೆ ದೇಸಿ ಉತ್ಪಾದನೆಗೆ ಪೂರಕವಾಗುವಂತೆ ಅವಕ್ಕೆ ಬೇಕಾದ ಕಚ್ಚಾವಸ್ತುಗಳ ಸುಂಕಗಳನ್ನು ಪರಿಷ್ಕರಿಸಿತು. ಭಾರತದಲ್ಲೇ ಮೊಬೈಲ್ ಫೋನ್ ತಯಾರಿಕೆ ಘಟಕಗಳನ್ನು ಇಟ್ಟುಕೊಳ್ಳುವುದು ಕಂಪನಿಗಳಿಗೆ ಆಕರ್ಷಕವಾಗುವಂತೆ ಮಾಡಲಾಯಿತು. ಮುಂದಿನ ಹಂತದಲ್ಲಿ, 2021-22ರಲ್ಲಿ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಪಿ ಎಲ್ ಐ ಸ್ಕೀಮ್, ಅಂದರೆ ಉತ್ಪಾದನೆ ಆಧರಿತ ಉತ್ತೇಜನ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿತು. ಹೆಸರೇ ಹೇಳುವಂತೆ ಉತ್ಪಾದನೆ ಹೆಚ್ಚಿಸಿಕೊಂಡಷ್ಟೂ ಕಂಪನಿಗಳಿಗೆ ಇಲ್ಲಿ ಹಣಕಾಸು ಲಾಭಗಳು ದೊರೆಯುತ್ತವೆ. ಸ್ಯಾಮ್ಸಂಗ್, ವಿಸ್ತ್ರಾನ್, ಫಾಕ್ಸಕಾನ್ ಇತ್ಯಾದಿ ಕಂಪನಿಗಳು ಈ ಪಿ ಎಲ್ ಐ ಯೋಜನೆಯಡಿ ಬಂದಿವೆ. ಐದು ವರ್ಷಗಳ ಅವಧಿಯಲ್ಲಿ, ಮೊಬೈಲ್ ಫೋನುಗಳ ಉತ್ಪಾದನೆ ವಿಭಾಗಲ್ಲಿ ಇದರಿಂದ ಎರಡು ಲಕ್ಷ ನೇರ ಉದ್ಯೋಗಗಳು ಹಾಗೂ 6 ಲಕ್ಷ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ಅಂದಾಜಿದೆ.

ಇದನ್ನೂ ಓದಿ: Pak Afghan Conflict: ಸಡಿಲವಾಯ್ತು ಆಫ್ಘಾನ್‌ನೊಂದಿಗಿನ ಪಾಕ್‌ ಸಖ್ಯ, ತಾಲಿಬಾನಿಗಳಿಗೂ ಈಗ ಭಾರತವೇ ಮುಖ್ಯ!

ಈ ವಿತ್ತೀಯ ವರ್ಷದಲ್ಲಿ ಆ್ಯಪಲ್ ಕಂಪನಿಯ ಚೀನಾ ಘಟಕದಿಂದ ಆಗುತ್ತಿರುವ ಸಾಗಣೆಯಲ್ಲಿ ಕುಸಿತ ಕಂಡಿದ್ದರೆ, ಭಾರತದಲ್ಲಿ ಮಾತ್ರ ಏರಿಕೆ ಕಂಡಿರುವುದು ಗಮನಾರ್ಹ. ಭಾರತದಲ್ಲಿ ಯಾವುದೇ ಕಂಪನಿಗೆ ಆಗುವ ಶ್ರೇಯೋವೃದ್ಧಿ ಅದು ಇಲ್ಲಿ ತನ್ನ ಹೂಡಿಕೆಯನ್ನು ಇನ್ನಷ್ಟು ಹೆಚ್ಚಿಸುವುದಕ್ಕೆ, ಆರ್ಥಿಕ ಚಟುವಟಿಕೆಯಲ್ಲಿ ಮತ್ತಷ್ಟು ತೊಡಗಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ, ಆ್ಯಪಲ್ ಅದಾಗಲೇ ತನ್ನ ಫೋನಿನಲ್ಲಿ ಬಳಸುವ ಕೆಮರಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಭಾರತದಲ್ಲೇ ರೂಪಿಸುವುದಕ್ಕೆ ಟಾಟಾದ ಟೈಟಾನ್ ಸಮೂಹ ಹಾಗೂ ಮುರುಗಪ್ಪ ಸಮೂಹಗಳೊಂದಿಗೆ ಮಾತುಕತೆಯಲ್ಲಿರುವುದಾಗಿ ವರದಿಯಾಗಿದೆ. ಮೊಬೈಲ್ ಫೋನ್ ವಹಿವಾಟು ಎಂದಷ್ಟೇ ಅಲ್ಲದೇ, ಭಾರತದಲ್ಲಿ ನವೀಕೃತ ಇಂಧನ ಮೂಲಗಳ ವಿಸ್ತರಣೆಗೆ ಸಹಕರಿಸಿ ಇಂಗಾಲ ವಿಸರ್ಜನೆ ತಗ್ಗಿಸಿದ ಶ್ರೇಯಸ್ಸು ಪಡೆಯುವುದಕ್ಕಾಗಿ ಆ್ಯಪಲ್ ಕಂಪನಿಯು ಕ್ಲೀನ್ ಮ್ಯಾಕ್ಸ್ ಎಂಬ ನವೀಕೃತ ಇಂಧನಕ್ಕೆ ಸಂಬಂಧಿಸಿದ ಉದ್ದಿಮೆ ಜತೆ ಕೈಜೋಡಿಸಿದೆ. ಭಾರತದಾದ್ಯಂತ 6 ಕೈಗಾರಿಕಾ ಘಟಕಗಳ ಮೇಲೆ ಸೌರಫಲಕಗಳನ್ನು ಅಳವಡಿಸಿ, 14.4 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಈ ಪ್ರಯತ್ನ ಹುಟ್ಟು ಹಾಕಿದೆ.

ಮೊಬೈಲ್ ಫೋನುಗಳ ಉತ್ಪಾದನೆ ಮತ್ತು ವಹಿವಾಟುಗಳಲ್ಲಿ ಆಗುತ್ತಿರುವ ಈ ಅಭಿವೃದ್ಧಿ ಭಾರತದ ಒಟ್ಟಾರೆ ಎಲೆಕ್ಟ್ರಾನಿಕ್ ವಲಯಕ್ಕೆ ಹೊಸ ಸಾಮರ್ಥ್ಯ ಕೊಟ್ಟಿದೆ. ಮೊಬೈಲ್ ಫೋನುಗಳ ರಫ್ತಿನಲ್ಲಾಗಿರುವ ಹೆಚ್ಚಳವು ಒಟ್ಟಾರೆ ಭಾರತದ ಎಲೆಕ್ಟ್ರಾನಿಕ್ಸ್ ವಲಯದಲ್ಲೂ ಬಿಂಬಿಸಿದೆ. ಹಿಂದಿನ ವಿತ್ತೀಯ ವರ್ಷದಲ್ಲಿ 23.55 ಬಿಲಿಯನ್ ಡಾಲರುಗಳ ಮೌಲ್ಯದ ಎಲೆಕ್ಟ್ರಾನಿಕ್ಸ್ ರಫ್ತಾಗಿದ್ದರೆ ಈ ಬಾರಿ ಅದು 29.12 ಬಿಲಿಯನ್ ಡಾಲರುಗಳಿಗೆ ಹೆಚ್ಚಳವಾಗಿದೆ.

ಇದನ್ನೂ ಓದಿ: Narendra Modi: ಟ್ವಿಟರ್-ವಾಟ್ಸಾಪ್ ಹಳೇದಾಯ್ತು; ಈ ಬಾರಿ ಮೋದಿ ಚುನಾವಣೆ ಪ್ರಚಾರಕ್ಕೆ ʼಭಾಷಿಣಿʼಯ ಬಲ!

ಮೇಕ್ ಇನ್ ಇಂಡಿಯಾ ಕೆಲಸ ಮಾಡುತ್ತಿದೆಯಾ ಎಂದು ಕೇಳುವವರು ನೋಡಲೇಬೇಕಾದ ಯಶೋಗಾಥೆ ಭಾರತದ ಮೊಬೈಲ್ ಫೋನುಗಳ ಉತ್ಪಾದನೆಯದ್ದು.

Continue Reading

ಅಂಕಣ

ರಾಜಮಾರ್ಗ ಅಂಕಣ: ಶ್ರೀರಾಮ ಆಗುವುದು ಕಷ್ಟ, ರಾವಣ ಆಗುವುದು ಕೂಡ ಕಷ್ಟವೇ!

ರಾಜಮಾರ್ಗ ಅಂಕಣ: ಇಂದು ಶ್ರೀರಾಮ ನವಮಿ. ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದು ಸಾಧ್ಯ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ!

VISTARANEWS.COM


on

sri rama rajamarga column
Koo

ಈ ಕತೆಯನ್ನು ಓದಿದ ನಂತರ ನೀವು ಯಾರನ್ನೂ ದ್ವೇಷ ಮಾಡುವುದಿಲ್ಲ!

Rajendra-Bhat-Raja-Marga-Main-logo

ಇಂದು ರಾಮನವಮಿ (Sri Ram Navami). ನನ್ನ ಜನ್ಮ ನಕ್ಷತ್ರ ಪುನರ್ವಸು. ಅದು ಶ್ರೀ ರಾಮಚಂದ್ರನ ಜನ್ಮ ನಕ್ಷತ್ರವೂ ಹೌದು! ನಾನು ಕೂಡ ರಾಮನ ಹಾಗೆ ನನ್ನ ಹೆತ್ತವರಿಗೆ ಹಿರಿಯ ಮಗ. ಆದರೆ ನಮ್ಮ ಹೋಲಿಕೆಯು ಅಷ್ಟಕ್ಕೇ ನಿಂತು ಬಿಡುತ್ತದೆ!

ಏಕೆಂದರೆ ಶ್ರೀರಾಮನ ಹಾಗೆ ಬದುಕುವುದು ತುಂಬಾನೆ ಕಷ್ಟ. ಶ್ರೀಕೃಷ್ಣನ ಹಾಗೆ ಯೋಚನೆ ಮಾಡುವುದು ಕೂಡ ಕಷ್ಟ. ನನಗೆ ಎರಡೂ ಈವರೆಗೆ ಸಾಧ್ಯವಾಗಲೇ ಇಲ್ಲ ಅನ್ನುವುದು ವಾಸ್ತವ. ಅದರಲ್ಲಿಯೂ ಮೊದಲನೆಯದ್ದು ಭಾರೀ ಕಷ್ಟ.

ವಾಲ್ಮೀಕಿಯು ಕೆತ್ತಿದ್ದು ಅದ್ಭುತವಾದ ವ್ಯಕ್ತಿತ್ವ ರಾಮ

ಶ್ರೀರಾಮನ ಬಗ್ಗೆ ಬೇರೆ ಬೇರೆ ವೇದಿಕೆಗಳಲ್ಲಿ ಗಂಟೆಗಳ ಕಾಲ ಮಾತಾಡಿದ್ದೇನೆ. ಅವನ ಜೀವನದ ಪ್ರತೀ ಒಂದು ಘಟನೆ ಕೂಡ ನನಗೆ ಬೆರಗನ್ನೇ ಮೂಡಿಸುತ್ತದೆ. ಆದಿ ಕವಿ ವಾಲ್ಮೀಕಿಯು ರಾಮಾಯಣದ ಮೂಲಕ ಕೆತ್ತಿದ ರಾಮನ ಪಾತ್ರವು ಅದು ವಿಶ್ವದ ಅದ್ಭುತ!

ನನಗೆ ಅಚ್ಚರಿ ಮೂಡಿಸಿದ ಒಂದೆರಡು ಘಟನೆಗಳು

ಶ್ರೀ ರಾಮನಿಗೆ ಪಟ್ಟಾಭಿಷೇಕಕ್ಕೆ ಸಂಕಲ್ಪವನ್ನು ದಶರಥನು ತೆಗೆದುಕೊಂಡಾಗಿತ್ತು. ಅದಕ್ಕಾಗಿ ತೀವ್ರ ಹಂಬಲ ಪಟ್ಟವರು ಅಯೋಧ್ಯೆಯ ಪ್ರತೀ ಒಬ್ಬ ನಾಗರಿಕರು. ರಾಮನು ಅರಸ ಆಗಬಾರದು ಅಂತ ಒಬ್ಬರೂ ಹೇಳಿರಲಿಲ್ಲ. ಪಟ್ಟಾಭಿಷೇಕಕ್ಕೆ ದಿನವನ್ನು ನಿಗದಿ ಮಾಡಿದ ದಶರಥ ಮಹಾರಾಜನು ಇಡೀ ಅಯೋಧ್ಯಾ ನಗರವನ್ನು ಸಿಂಗಾರ ಮಾಡಿ ಪಟ್ಟಕ್ಕೆ ಸಿದ್ಧತೆ ಮಾಡಿದ್ದನು.

ಆದರೆ ಮಂಥರೆ ಎಂಬ ಅತೃಪ್ತ ಆತ್ಮವು ಕೈಕೇಯಿ ರಾಣಿಯ ತಲೆಯನ್ನು ಕೆಡಿಸಿ ರಾಮನ ಪಟ್ಟಾಭಿಷೇಕಕ್ಕೆ ವಿಘ್ನವನ್ನು ಒಡ್ಡಿದ್ದು ನಮಗೆಲ್ಲ ಗೊತ್ತಿದೆ. ಹಿಂದೆ ಯಾವುದೋ ಒಂದು ಕಾಲದಲ್ಲಿ ಕೊಟ್ಟಿದ್ದ ಎರಡು ವರಗಳನ್ನು ಕೈಕೇಯಿಯು ಆ ಮಧ್ಯರಾತ್ರಿ ದಶರಥ ಮಹಾರಾಜನಿಗೆ ಕೇಳಿದಾಗ ರಾಜನು ಅದನ್ನು ನೆರವೇರಿಸಲು ಸಾಧ್ಯವೇ ಆಗದೇ ಕುಸಿದು ಬಿದ್ದ ಕಥೆಯು ಕೂಡ ನಮಗೆ ಗೊತ್ತಿದೆ.

ಪಿತೃ ವಾಕ್ಯಂ ಶಿರೋಧಾರ್ಯಂ!

ಆಗ ಶ್ರೀ ರಾಮನು ಕಟ್ಟು ಬಿದ್ದದ್ದು ಯಾವುದೋ ಒಂದು ಗಳಿಗೆಯಲ್ಲಿ ತನ್ನ ಅಪ್ಪ ತನ್ನ ಚಿಕ್ಕಮ್ಮನಿಗೆ ಕೊಟ್ಟಿದ್ದ ಒಂದು ಮಾತಿಗೆ! ಅದನ್ನು ತಂದೆಯು ನೇರವಾಗಿ ಹೇಳಲು ಸಾಧ್ಯ ಆಗದೆ ಕಣ್ಣೀರನ್ನು ಸುರಿಸುತ್ತ ನೆಲಕ್ಕೆ ಒರಗಿದಾಗಲೂ ರಾಮನಿಗೆ ಅದು ಖಂಡಿತವಾಗಿಯೂ ‘ಪಿತೃ ವಾಕ್ಯಮ್ ಶಿರೋಧಾರ್ಯಮ್’!

king dasharatha

ರಾಮನು ಅರಸ ಆಗಬಾರದು ಎಂದು ರಾಣಿ ಕೈಕೇಯಿಯ ಮನಸ್ಸಿನಲ್ಲಿ ಕೂಡ ಇರಲಿಲ್ಲ. ಆದರೆ ಆಕೆಯಲ್ಲಿ ಆ ಭ್ರಮೆ ಮತ್ತು ಪುತ್ರ ವಾತ್ಸಲ್ಯವನ್ನು ಹುಟ್ಟಿಸಿದವಳು ಆ ಗೂನಜ್ಜಿ ಮಂಥರೆ!

ಅವಳು ಹೇಗೂ ಅಯೋಧ್ಯೆಯ ಪ್ರಜೆ ಆಗಿರಲಿಲ್ಲ. ಅವಳು ಕೈಕೇಯಿಯ ತಾಯಿಯ ಮನೆಯಿಂದ ಕೈಕೇಯಿ ಜೊತೆಗೆ ಬಂದವಳು. ಒಂದು ರೀತಿಯಲ್ಲಿ ಶ್ರೀರಾಮನು ಪಟ್ಟವೇರಿ ಅರಸನಾಗಲು ಆ ಅಯೋಧ್ಯೆಯಲ್ಲಿ ನೂರು ಪ್ರತಿಶತದ ಬಹುಮತದ ಮುದ್ರೆ ಇತ್ತು! ಆದರೆ ರಾಮನು ತಂದೆ ಬಹಳ ಹಿಂದೆ ತನ್ನ ರಾಣಿಗೆ ಕೊಟ್ಟ ಒಂದು ಮಾತಿಗೆ ಕಟ್ಟು ಬಿದ್ದು ಅರಸೊತ್ತಿಗೆಯನ್ನು ಎಡಗಾಲಿನಿಂದ ಒದ್ದು ನಾರು ಮುಡಿ ತೊಟ್ಟು ಕಾಡಿಗೆ ಹೋದವನು. ತನ್ನದೇ ಹಕ್ಕಿನ ರಾಜ್ಯವನ್ನು ತ್ಯಾಗ ಮಾಡಲು ಆತ ಹಿಂದೆ ಮುಂದೆ ನೋಡಲಿಲ್ಲ!

‘ನೀನು ಕೊಟ್ಟ ಮಾತಿಗೆ ನಾನು ಹೇಗೆ ಹೊಣೆ ಆಗಬೇಕು?’ ಎಂದು ಅಪ್ಪನನ್ನು ಒಂದು ಮಾತು ಕೂಡ ಶ್ರೀ ರಾಮನು ಕೇಳಲಿಲ್ಲ! ಆ ರೀತಿಯ ಸಣ್ಣ ಯೋಚನೆ ಕೂಡ ಆತನ ಮನದಲ್ಲಿ ಬರಲಿಲ್ಲ ಅಂದರೆ ಅದು ಅದ್ಭುತವೇ ಹೌದು! ಸರ್ವಾಲಂಕಾರ ಆಗಿದ್ದ ಅಯೋಧ್ಯೆಯ ನಡುವೆ ಯಾವ ವಿಷಾದ ಕೂಡ ಇಲ್ಲದೆ ಎದ್ದು ಹೋಗುವುದು ಸುಲಭ ಅಲ್ಲ! ಅದು ರಾಮನಿಗೆ ಮಾತ್ರ ಸಾಧ್ಯವಾಗುವ ನಡೆ.

ರಾಮನಿಗೆ ನೂರು ಪ್ರತಿಶತ ಜನಮತದ ಬೆಂಬಲ ಇತ್ತು!

ಆಗ ಪೂರ್ಣ ಜನಮತ ತನ್ನ ಪರವಾಗಿ ಇದ್ದಾಗ ರಾಮನು ಪಿತೃ ವಾಕ್ಯವನ್ನು ಧಿಕ್ಕರಿಸಿ ಆಡಳಿತವನ್ನು ಮಾಡಬಹುದಿತ್ತು ಎಂದು ನನಗೆ ಹಲವರು ಕೇಳಿದ್ದಾರೆ. ಆದರೆ ಆಗ ರಾಮನು ಕೇವಲ ದಶರಥನ ಮಗ ಮಾತ್ರ ಆಗಿದ್ದ. ಅರಸ ಆಗಿರಲಿಲ್ಲ ಅನ್ನುವುದು ನನ್ನ ಉತ್ತರ!

ಮುಂದೆ ರಾಣಿ ಕೈಕೇಯಿ ಕಾಡಿಗೆ ಬಂದು ತಮ್ಮ ತಪ್ಪಿಗೆ ಕ್ಷಮೆ ಕೇಳಿ ಮತ್ತೆ ಅಯೋಧ್ಯೆಗೆ ಬರಬೇಕು ಎಂದು ಎಷ್ಟು ವಿನಂತಿ ಮಾಡಿದರೂ ರಾಮಚಂದ್ರನ ಮನಸ್ಸು ಒಂದಿಷ್ಟೂ ವಿಚಲಿತ ಆಗಲಿಲ್ಲ. ಕಣ್ಣೀರು ಸುರಿಸುತ್ತಾ ಬಂದ ಭರತನನ್ನು ಧೈರ್ಯ ತುಂಬಿಸಿ ಅರಸನಾಗಲು ಮಾನಸಿಕವಾಗಿ ಸಿದ್ಧತೆ ಮಾಡಿ ಕಳುಹಿಸಿದ್ದು ಅದೇ ರಾಮ. ಈ ರೀತಿಯ ನಿರ್ಧಾರಗಳು ರಾಮನ ವ್ಯಕ್ತಿತ್ವದ ಕೈಗನ್ನಡಿ.

Sri Ramachandra

ಮುಂದೆ ಅದೇ ರಾಮನು ರಾವಣನ ವಧೆಯಾದ ನಂತರ ಅತ್ಯಂತ ವಿಧಿವತ್ತಾಗಿ ಲಂಕೆಯಲ್ಲಿ ಆತನ ಕ್ರಿಯಾಕರ್ಮ ಮುಗಿಸುತ್ತಾನೆ. ಆಗ ರಾಮ ಹೇಳಿದ ಎರಡು ಮಾತುಗಳನ್ನು ಕೇಳಿ.

ರಾಮನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲ!

‘ನಾನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲ. ಅವನ ಒಳಗಿದ್ದ ರಾವಣತ್ವವನ್ನು! ಯಾರನ್ನೇ ಆದರೂ ಮರಣದ ನಂತರ ದ್ವೇಷ ಮಾಡಬಾರದು. ರಾವಣನು ಹೇಳಿ ಕೇಳಿ ಮಹಾ ಬ್ರಾಹ್ಮಣ. ಆತನು ದೈವಭಕ್ತ. ಆದ್ದರಿಂದ ಅವನನ್ನು ಗೌರವಿಸುವುದು ನಮ್ಮ ಕರ್ತವ್ಯ!’

ಸೀತೆಯನ್ನು ಅಗ್ನಿಪರೀಕ್ಷೆ ಮಾಡಿದ್ದು ಸರಿಯಾ?

ಮುಂದೆ ಅದೇ ರಾಮಚಂದ್ರನು ಅಯೋಧ್ಯೆಗೆ ಬಂದು ಪಟ್ಟಾಭಿಷೇಕ ಆಗುವ ಮೊದಲು ತನ್ನ ಪತ್ನಿ ಸೀತೆಯನ್ನು ಅಯೋಧ್ಯೆಯ ಜನರ ಮುಂದೆ ಅಗ್ನಿ ಪರೀಕ್ಷೆಗೆ ಒಡ್ಡಿದ ವಿಷಯದ ಬಗ್ಗೆ ತುಂಬಾ ಟೀಕೆಗಳು ಇವೆ. ಅದೇ ರೀತಿ ಒಬ್ಬ ಸಾಮಾನ್ಯ ಅಗಸನ ಮಾತನ್ನು ಕೇಳಿ ತನ್ನ ಕೈ ಹಿಡಿದ ಮಡದಿ ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸಿದ ನಿರ್ಧಾರದ ಬಗ್ಗೆ ಕೂಡ ಸಾಕಷ್ಟು ಟೀಕೆಗಳು ಬಂದಿವೆ.

ಆದರೆ ಅವೆರಡು ಕೂಡ ಶ್ರೀರಾಮನು ರಾಜಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು. ಅವು ಸೀತಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು ಅಲ್ಲ!

ರಾಜನ ನಡೆಗಳು ಸಂಶಯಾಸ್ಪದ ಆಗಿರಬಾರದು!

ರಾಜಾರಾಮನಾಗಿ ತನ್ನ ಪ್ರತಿಯೊಬ್ಬ ಪ್ರಜೆಯ ಮುಂದೆ ಸಂಶಯಾತೀತವಾಗಿ ಇರಬೇಕು ಮತ್ತು ಕಾಣಿಸಿಕೊಳ್ಳಬೇಕು ಎನ್ನುವುದು ರಾಜನ ಆದ್ಯ ಕರ್ತವ್ಯ. ತಾನು ನೆಟ್ಟಗಿರುವುದು ಮಾತ್ರವಲ್ಲ, ತನ್ನ ನೆರಳು ಕೂಡ ನೆಟ್ಟಗಿರಬೇಕು ಎಂದು ಭಾವಿಸುವುದು ಒಬ್ಬ ರಾಜನ ಆದ್ಯತೆಯೇ ಆಗಿದೆ. ಒಬ್ಬ ಬಹು ಸಾಮಾನ್ಯ ಅಗಸನೂ ಅರಸನಿಗೆ ಒಬ್ಬ ಗೌರವಾನ್ವಿತ ಪ್ರಜೆಯೇ ಆಗಿದ್ದಾನೆ. ಆತನ ಮನದ ಸಂಶಯವನ್ನು ಕೂಡ ನಿವಾರಣೆ ಮಾಡುವುದು ಒಬ್ಬ ಅರಸನ ಕರ್ತವ್ಯ. ಹೀಗೆ ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದು ಸಾಧ್ಯ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ!

ರಾವಣ ಆಗುವುದು ಕಷ್ಟವೇ!

ರಾಮ ಆಗುವುದು ಎಷ್ಟು ಕಷ್ಟವೋ ರಾವಣ ಆಗುವುದು ಅಷ್ಟೇ ಕಷ್ಟ! ಕವಿ ವಾಲ್ಮೀಕಿಯು ಕಥಾ ನಾಯಕ ರಾಮನ ಪಾತ್ರಕ್ಕೆ ಎಷ್ಟು ಶಕ್ತಿ ತುಂಬಿದ್ದಾನೋ ಖಳನಾದ ರಾವಣನ ಪಾತ್ರಕ್ಕೆ ಕೂಡ ಅಷ್ಟೇ ಶಕ್ತಿಯನ್ನು ತುಂಬಿದ್ದಾನೆ. ಆತನ ಪಾತ್ರವೂ ಅಮೋಘವೆ ಆಗಿದೆ!

ಸೀತಾ ಸ್ವಯಂವರದಲ್ಲಿ ತನಗಾದ ಅಪಮಾನದಿಂದ ಕುದ್ದು ಹೋಗಿದ್ದ ರಾವಣನ ಅಂತರ್ಯದಲ್ಲಿ ಸೀತೆಯನ್ನು ಒಮ್ಮೆ ಗೆಲ್ಲಬೇಕು ಎಂದು ಮಾತ್ರ ಇತ್ತು. ಅನುಭವಿಸುವುದು ಆಗಿರಲಿಲ್ಲ. ಅನುಭವಿಸುವ ಆಸೆ ಇದ್ದಿದ್ದರೆ ಅವನದ್ದೇ ಲಂಕೆಯಲ್ಲಿ ಏಕಾಂಗಿ ಆಗಿದ್ದ ಸೀತೆಯು ತನ್ನ ಮಾನವನ್ನು ಉಳಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ!

ಹೀಗೊಂದು ಕಥೆಯನ್ನು ನಾನು ಓದಿದ್ದು!

ಈ ಕಥೆಯು ಮೂಲ ರಾಮಾಯಣದಲ್ಲಿ ಇಲ್ಲ. ಆದರೆ ಅದ್ಭುತವಾಗಿದೆ. ಕಾಲ್ಪನಿಕ ಎಂದು ಬೇಕಾದರೂ ಕರೆಯಿರಿ. ಸೀತೆಯನ್ನು ಹುಡುಕುತ್ತಾ ಲಂಕೆಗೆ ಬಂದಿದ್ದ ಶ್ರೀರಾಮನಿಗೆ ರಾವಣನ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಆಲ್ಲಿ ಕೇಳಿಬರುತ್ತವೆ. ಆತನು ಮಹಾ ಯೋಧ. ಆತನನ್ನು ಸೋಲಿಸುವುದು ಖಂಡಿತ ಸುಲಭದ ಕೆಲಸ ಅಲ್ಲ ಎಂದು ಗೊತ್ತಾಗುತ್ತದೆ. ಅದಕ್ಕೆ ‘ಶತ್ರು ಸಂಹಾರ’ದ ಯಾಗವನ್ನು ಮಾಡಬೇಕು ಎಂದು ಅಲ್ಲಿದ್ದ ಹಿರಿಯರು ಹೇಳುತ್ತಾರೆ.

ಲಂಕೆ ಹೇಳಿ ಕೇಳಿ ರಾಕ್ಷಸರ ನಾಡು! ಅಲ್ಲಿ ಆ ಯಾಗವನ್ನು ಮಾಡಬೇಕು ಅಂತಾದರೆ ಪುರೋಹಿತರು ಯಾರು ಸಿಗುತ್ತಾರೆ? ಆಗ ಹಿರಿಯರು ಇನ್ನೊಂದು ಉಪಾಯವನ್ನು ಹೇಳುತ್ತಾರೆ. ಲಂಕೆಯಲ್ಲಿ ಒಬ್ಬನೇ ಬ್ರಾಹ್ಮಣ ಇರುವುದು ಅದು ರಾವಣ! ಆತನಿಗೆ ಎಲ್ಲಾ ವೇದ ವಿದ್ಯೆಗಳು ಗೊತ್ತಿವೆ. ಆತ ಪುರೋಹಿತನಾಗಿ ಬರಲು ಒಪ್ಪಿದರೆ ಆದೀತು ಎಂಬ ಅಭಿಪ್ರಾಯ ಬಂತು.

ತನ್ನದೇ ವಧೆಯನ್ನು ಮಾಡುವ ‘ಶತ್ರುಸಂಹಾರ ಯಾಗ’ಕ್ಕೆ ಪುರೋಹಿತನಾಗಿ ರಾವಣನು ಬರಬಹುದೇ? ಈ ಪ್ರಶ್ನೆಯು ಎದ್ದಾಗ ನೋಡೋಣ, ಒಮ್ಮೆ ಪ್ರಯತ್ನ ಮಾಡೋಣ ಎಂಬ ಮಾತು ಬಂತು. ಆಗ ರಾವಣನಿಗೆ ಶ್ರೀರಾಮನ ಕಡೆಯಿಂದ ಗೌರವಪೂರ್ವಕ ಆಮಂತ್ರಣವು ಹೋಯಿತು. ರಾವಣ ಬರಲು ಸಾಧ್ಯ ಇಲ್ಲವೇ ಇಲ್ಲ ಎಂದು ಎಲ್ಲರೂ ನಂಬಿದ್ದರು.

ಇದನ್ನೂ ಓದಿ: ರಾಜಮಾರ್ಗ ಅಂಕಣ: RCB- ʼಹೊಸ ಅಧ್ಯಾಯʼ ಆರಂಭ ಆಗೋದು ಯಾವಾಗ?

ಆದರೆ ಶ್ರೀರಾಮನ ಆಮಂತ್ರಣಕ್ಕೆ ತಲೆ ಬಾಗಿ ರಾವಣನು ಬಂದೇ ಬಿಟ್ಟ! ಪುರೋಹಿತನಾಗಿ ಕೂತು ‘ಶತ್ರು ಸಂಹಾರ’ ಯಾಗವನ್ನು ಪೂರ್ತಿ ಮಾಡಿದ. ಪೂರ್ಣಾಹುತಿ ಆದ ನಂತರ ಶ್ರೀರಾಮನು ಪುರೋಹಿತ ರಾವಣನ ಪಾದ ಮುಟ್ಟಿ ನಮಸ್ಕಾರ ಮಾಡಿದ!

ಆಗ ರಾವಣ ರಾಮನಿಗೆ ಕೈ ಮುಗಿದು ಹೇಳಿದ ಮಾತು ಕೇಳಿ.

“ಶ್ರೀರಾಮ, ಸೀತೆಯನ್ನು ಅಪಹರಣ ಮಾಡಿಕೊಂಡು ಬಂದ ನಂತರ ಪಾಪ ಪ್ರಜ್ಞೆಯಿಂದ ಸರಿಯಾಗಿ ನಿದ್ದೆಯು ಬರುತ್ತಿಲ್ಲ. ನಿದ್ದೆ, ವಿಶ್ರಾಂತಿ ಇಲ್ಲದೆ ದಣಿದು ಬಿಟ್ಟಿದ್ದೇನೆ. ನಿನ್ನ ಕಾಲ ಮೇಲೆ ಒಂದು ಗಳಿಗೆ ಮಲಗಬೇಕು ಅನ್ನಿಸ್ತಾ ಇದೆ! ನಿನ್ನ ಅನುಮತಿಯನ್ನು ಕೊಡುವೆಯಾ?’

ತನ್ನ ಗೆಲುವಿಗೆ ಬೇಕಾಗಿ ದೊಡ್ಡ ಯಾಗವನ್ನೇ ಮಾಡಿಕೊಟ್ಟ ರಾವಣನ ವಿನಂತಿಯನ್ನು ಶ್ರೀರಾಮನು ನಿರಾಕರಿಸಲು ಸಾಧ್ಯವೇ ಇರಲಿಲ್ಲ. ಶ್ರೀರಾಮ ಅಸ್ತು ಅಂದ. ರಾವಣನು ಪುಟ್ಟ ಮಗುವಿನ ಹಾಗೆ ರಾಮನ ಕಾಲಿನ ಮೇಲೆ ಸುದೀರ್ಘ ಕಾಲ ಮೈಮರೆತು ಮಲಗಿದ. ಎಲ್ಲವನ್ನೂ ಮರೆತು ಬಿಟ್ಟನು! ತನ್ನ ಪಾಪದ ಭೀತಿಯನ್ನು ರಾಮನ ಪಾದಮೂಲದಲ್ಲಿ ಇಟ್ಟು ಎದೆಯ ಭಾರವನ್ನು ಇಳಿಸಿ ಹೊರಟು ಹೋದನು ರಾವಣ!

ಈಗ ಹೇಳಿ ರಾವಣ ಆಗುವುದು ಅಷ್ಟು ಸುಲಭವಾ?

ಇದನ್ನೂ ಓದಿ: Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

Continue Reading
Advertisement
RCB vs KKR
ಕ್ರೀಡೆ30 mins ago

RCB vS KKR: ಗ್ರೀನ್​ ಜೆರ್ಸಿಯಲ್ಲಿ ಆರ್​ಸಿಬಿ ಅದೃಷ್ಟ ಹೇಗಿದೆ; ಎಷ್ಟು ಗೆಲುವು ಎಷ್ಟು ಸೋಲು?

Modi in Karnataka Here live video of Modi rally in Chikkaballapur
Lok Sabha Election 202434 mins ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Modi in Karnataka today Cm Siddaramaiah asks 11 questions to PM Modi
Lok Sabha Election 202438 mins ago

Modi in Karnataka: ಇಂದು ಕರ್ನಾಟಕಕ್ಕೆ ಮೋದಿ; ಪ್ರಧಾನಿಗೆ 11 ಪ್ರಶ್ನೆ ಕೇಳಿದ ಸಿಎಂ ಸಿದ್ದರಾಮಯ್ಯ

Uttarakaanda Movie bande kaaka rangayana Raghu
ಸ್ಯಾಂಡಲ್ ವುಡ್59 mins ago

Uttarakaanda Movie: ‘ಬಂಡೆ ಕಾಕಾ’ ನಾಗಿ ‘ಉತ್ತರಕಾಂಡ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಂಗಾಯಣ ರಘು

India Economy
ಪ್ರಮುಖ ಸುದ್ದಿ1 hour ago

Indian Economy : ಭಾರತದ ಆರ್ಥಿಕತೆ ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದ ಐಎಮ್​ಎಫ್​

ರಾಜಕೀಯ1 hour ago

Neha Murder Case: ನೇಹಾ ಕೊಲೆ ಪ್ರಕರಣ ರಾಜಕೀಯಕ್ಕೆ ಬಳಕೆ; ಕೊಲೆಗಾರನಿಗೆ ಉಗ್ರ ಶಿಕ್ಷೆ ಎಂದ ಸಿದ್ದರಾಮಯ್ಯ

Road Accident in karnataka
ಕೊಡಗು1 hour ago

Road Accident : ಯಮ ರೂಪಿ ಕೆಎಸ್‌ಆರ್‌ಟಿಸಿ ಬಸ್‌ಗೆ ಸ್ಕೂಟರ್‌ ಸವಾರ ಸಾವು, ಬಾಲಕ ಗಂಭೀರ

Gut Health
ಲೈಫ್‌ಸ್ಟೈಲ್1 hour ago

Gut Health: ನಿಮ್ಮ ಕರುಳಿನ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಈ ಡ್ರಿಂಕ್ಸ್ ಸೇವಿಸಿ

Viral news
ವೈರಲ್ ನ್ಯೂಸ್1 hour ago

Viral news: ಚುನಾವಣೆಗೆ ಮೊದಲೇ 19 ಲಕ್ಷ ಇವಿಎಂ ಕಾಣೆಯಾಗಿದ್ದು ನಿಜವೇ? ಏನಿದರ ಅಸಲಿಯತ್ತು ?

Manjummel Boys ott malayalam to premiere on may
ಮಾಲಿವುಡ್1 hour ago

Manjummel Boys: ಕನ್ನಡದಲ್ಲೂ ಬರಲಿದೆ ʻಮಂಜುಮ್ಮೆಲ್ ಬಾಯ್ಸ್ʼ? ಒಟಿಟಿಗೆ ಯಾವಾಗ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Here live video of Modi rally in Chikkaballapur
Lok Sabha Election 202434 mins ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ2 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ3 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ10 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ23 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

ಟ್ರೆಂಡಿಂಗ್‌