ವಿಸ್ತಾರ Explainer | ಜಾರ್ಖಂಡ್‌ನ ಜಾಮತಾಡಾ- ಇದು ಸೈಬರ್ ಕ್ರೈಮ್ ಕ್ಯಾಪಿಟಲ್! ಇಲ್ಲಿಯ ಜನರ ಕಸುಬೇ ಆನ್‌ಲೈನ್ ವಂಚನೆ! - Vistara News

EXPLAINER

ವಿಸ್ತಾರ Explainer | ಜಾರ್ಖಂಡ್‌ನ ಜಾಮತಾಡಾ- ಇದು ಸೈಬರ್ ಕ್ರೈಮ್ ಕ್ಯಾಪಿಟಲ್! ಇಲ್ಲಿಯ ಜನರ ಕಸುಬೇ ಆನ್‌ಲೈನ್ ವಂಚನೆ!

ದೇಶದ ಹಿಂದುಳಿದ ಜಿಲ್ಲೆಗಳ ಪೈಕಿ ಜಾರ್ಖಂಡ್‍ನ ಜಾಮತಾಡವೂ ಒಂದು. ಆದರೆ, ಈ ಜಿಲ್ಲೆಯು ಸೈಬರ್ ಕ್ರೈಮ್‌ಗಳಿಂದಾಗಿಯೇ ಇಂದು ಕುಖ್ಯಾತಿಗಳಿಸಿದೆ. ಬಹುತೇಕ ಆನ್‌ಲೈನ್ ವಂಚನೆಗಳ ಮೂಲ ಜಾಮತಾಡಾ ಆಗಿರುತ್ತದೆ(ವಿಸ್ತಾರ Explainer).

VISTARANEWS.COM


on

Jamtara @ ವಿಸ್ತಾರ Explainer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

| ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು

ಸೈಬರ್ ಖದೀಮರ ಕೈಚಳಕ, ಭಾರಿ ಮೊತ್ತದ ಹಣ ಗುಳುಂ, ಪಿನ್ ನಂಬರ್ ಕೊಟ್ಟು ಹಣ ಕಳೆದುಕೊಂಡ ಐಎಎಸ್ ಅಧಿಕಾರಿ, ಒಟಿಪಿ ಕೊಟ್ಟು ಯಾಮಾರಿದ ಜಡ್ಜ್……ಈ ರೀತಿಯ ಸುದ್ದಿಗಳನ್ನು ನೀವು ವೆಬ್‌ಗಳಲ್ಲಿ ಓದಿರುತ್ತೀರಿ, ಇಲ್ಲವೇ ಟಿವಿಗಳಲ್ಲಿ ನೋಡಿರುತ್ತೀರಿ. ಹಾಗಾದರೆ, ಈ ಸೈಬರ್ ಖದೀಮರು ಎಲ್ಲಿದ್ದಾರೆ, ಅವರು ಯಾಕೆ ಪೊಲೀಸರಿಗೆ ಸಿಗುವುದಿಲ್ಲ ಎಂಬಿತ್ಯಾದಿ ಪ್ರಶ್ನೆಗಳು ಸಹಜ.

ಎಲ್ಲರೂ ಅಂದುಕೊಂಡಿರುವ ಹಾಗೆ ಬೆಂಗಳೂರು, ಮುಂಬೈಗಳಂಥ ಮೆಟ್ರೊ ನಗರಗಳಲ್ಲಿದ್ದುಕೊಂಡೇ ಜನರು ಸೈಬರ್ ಕ್ರೈಮ್‌ ಮಾಡುತ್ತಾರೆ. ಆದರೆ, ಇದು ನಿಜವಲ್ಲ. ಜಾರ್ಖಂಡ್‌ನ ಜಾಮತಾಡಾ (Jamtara) ಎಂಬ ಅತಿ ಹಿಂದುಳಿದ ಜಿಲ್ಲೆ, ಭಾರತದಲ್ಲಿ ನಡೆಯುವ ಬಹುತೇಕ ಸೈಬರ್ ವಂಚನೆಯ ಕೇಂದ್ರ ಬಿಂದುವಾಗಿದೆ! ಈ ನಗರವನ್ನು Epicenter of Cybercrime ಎಂದೂ ಹೇಳಬಹುದು. ಹಣದ ಆಮಿಷ ಒಡ್ಡಿಯೋ, ಇನ್ನಿತರ ಗಿಫ್ಟ್‌ಗಳ ಆಸೆ ತೋರಿಸಿ ಬರುವ ಬಹುತೇಕ ಕರೆಗಳು ಈ ಜಾಮತಾಡಾ ಜಿಲ್ಲೆಯಿಂದಲೇ ಉತ್ಪಾದನೆಯಾಗಿರುತ್ತವೆ(ವಿಸ್ತಾರ Explainer).

ಜಾಮತಾಡಾ ಜಾರ್ಖಂಡ್‌ನಲ್ಲಿರುವ ಒಂದು ಜಿಲ್ಲೆ. ಈ ಜಿಲ್ಲಾ ಕೇಂದ್ರದ ಹೆಸರೂ ಜಾಮತಾಡಾ. ಇದನ್ನು ಫಿಶಿಂಗ್ ಕ್ಯಾಪಿಟಲ್ ಆಫ್ ಇಂಡಿಯಾ ಎಂದೂ ಕರೆಯುತ್ತಾರೆ. ದೇಶಾದ್ಯಂತ ವರದಿಯಾಗುವ ಬಹುತೇಕ ಫಿಶಿಂಗ್ ಪ್ರಕರಣಗಳಿಗೆ ಈ ಪ್ರದೇಶವೇ ಮೂಲವಾಗಿದೆ. ಸೈಬರ್ ಕ್ರೈಮ್ ಮೂಲ ಹುಡುಕಿಕೊಂಡು ಬಹುತೇಕ ರಾಜ್ಯದ ಪೊಲೀಸರು ಈ ಜಾಮತಾಡಾಕ್ಕೆ ಆಗಾಗ ಬರುತ್ತಾರೆ. ದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಜಾಮತಾಡಾ ಕೂಡ ಒಂದಾಗಿದೆ. ದೇಶದಲ್ಲಿ ನಡೆಯುವ ಒಟ್ಟು ಫಿಶಿಂಗ್ ಮತ್ತು ಸೈಬರ್‌ ಕ್ರೈಮ್‌ಗಳಲ್ಲಿ ಈ ಪ್ರದೇಶದ ಕಾಣಿಕೆ ಹೆಚ್ಚಿದೆ.

ಈಶ್ವರಚಂದ್ರ ವಿದ್ಯಾಸಾಗರರ ಕರ್ಮಭೂಮಿ
ಇತಿಹಾಸವನ್ನು ಓದಿದವರಿಗೆ ಈಶ್ವರ ಚಂದ್ರ ವಿದ್ಯಾಸಾಗರ ಅವರ ಬಗ್ಗೆ ತಿಳಿದಿರುತ್ತರೆ. ಅವರೊಬ್ಬ 19ನೇ ಶತಮಾನದ ಮಹಾನ್ ಸಮಾಜ ಸುಧಾರಕ. ಜಾಮತಾಡಾ ಜಿಲ್ಲೆಯ ಬುಡಕಟ್ಟು ಹೆಣ್ಣು ಮಕ್ಕಳ ಶಾಲಾ ಕಲಿಕೆಗಾಗಿ ಅವರು ಸುಮಾರು 18 ವರ್ಷಗಳ ಕಾಲ ಈ ಜಿಲ್ಲೆಯ ಕರ್ಮತಾಂಡ್ ಪಟ್ಟಣದಲ್ಲಿ ಕೆಲಸ ಮಾಡಿದ್ದರು. 1853ರಿಂದಲೇ ವಿದ್ಯಾಸಗಾರರು ಈ ಜಾಮತಾಡಾದಲ್ಲಿ ನೆಲೆಸಿದ್ದರು. ಸಣ್ಣ ಗುಡಿಸಲೇ ಅವರ ವಾಸಸ್ಥಾನವಾಗಿತ್ತು. ನಂದಂಕಾನನ್ ಎಂಬ ಕುಟೀರದಲ್ಲಿ ಆಶ್ರಮ ಸ್ಥಾಪಿಸಿ, ವನವಾಸಿಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದರು. ಅವರಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ನೀಡುವುದರ ಜತೆಗೆ, ಮಹಿಳಾ ಶಿಕ್ಷಣಕ್ಕಾಗಿ ಹೋರಾಟ ಕೂಡ ಮಾಡಿದರು. ಇದರ ಭಾಗವಾಗಿಯೇ ಬಾಲಕಿಯರ ಶಾಲೆಗಳನ್ನು ಆರಂಭಿಸಿದರು. ಬಾಲ್ಯ ವಿವಾಹ ನಿಷೇಧ, ವಿಧವಾ ಪುನರ್ವಿವಾಹಕ್ಕಾಗಿ ಹೋರಾಟಗಳನ್ನೇ ಮಾಡಿದರು. ತಮ್ಮ ಜೀವನದ ಕೊನೆಯ ದಿನಗಳನ್ನು ಇಲ್ಲಿಯೇ ಕಳೆದರು. ಭವ್ಯ ಇತಿಹಾಸದ ಹೊರತಾಗಿಯೂ ಇಂದಿನ ದಿನಗಳಲ್ಲಿ ಜಾಮತಾಡಾವನ್ನು ಫಿಶಿಂಗ್ ಕಾರಣಕ್ಕಾಗಿಯೇ ಜನರು ಗುರುತಿಸುವಂತಾಗಿದೆ.

ಬಿಪಿಎಲ್ ಕಾರ್ಡುದಾರರು ಇಲ್ಲಿ ಶ್ರೀಮಂತರು!
ಜಾಮತಾಡಾ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡು ಹೊಂದಿದವರು ಹೇಗೆ ಶ್ರೀಮಂತರಾಗುತ್ತಿದ್ದಾರೆ ಎಂಬುದಕ್ಕೆ ಈ ನಿರ್ದಿಷ್ಟ ಪ್ರಕರಣವನ್ನು ಓದಬೇಕು. ಜಿಲ್ಲೆಯ ಸೋನಬಾದ್ ಹಳ್ಳಿಯ ಆನಂದ್ ರಕ್ಷಿತ್ ಓದಿದ್ದು ಬರೀ ಎಂಟನೇ ಕ್ಲಾಸ್. ಈತನ ತಂದೆ ಹಿರೆನ್ ರಕ್ಷಿತ್. ಸೈಕಲ್ ಮೇಲೆ ಸ್ಕ್ರ್ಯಾಪ್ ಸಂಗ್ರಹಿಸಿ, ಅದನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. 7 ಸದಸ್ಯರು ಇರುವ ಕುಟುಂಬವು ಒಂದು ಸಣ್ಣ ಗುಡಿಸಲಿನಲ್ಲಿ ವಾಸವಾಗಿತ್ತು. ಇವರ ಊಟಕ್ಕೆ ಸರ್ಕಾರ ಒದಗಿಸುವ ಪ್ರತಿ ತಿಂಗಳ ಪಡಿತರವೇ ಆಧಾರವಾಗಿತ್ತು. ಇದು ನಾಲ್ಕೈದು ವರ್ಷಗಳ ಹಿಂದಿನ ಮಾತು.

ಆದರೆ, ನಾಲ್ಕೈದು ವರ್ಷಗಳ ಬಳಿಕ ಕೆಲವೇ ತಿಂಗಳಲ್ಲಿ ಈ ಕುಟುಂಬದ ಚಹರೆ ಬದಲಾಗಿ ಹೋಯಿತು. ಆರ್ಥಿಕ ಪರಸ್ಥಿತಿಯೂ ಸುಧಾರಿಸಿತು, ಹೊಸ ಮನೆಯನ್ನು ಕಟ್ಟಿದರು. 2021ರ ಆಗಸ್ಟ್‌ನಲ್ಲಿ ಈ ಮನೆ ಮೇಲೆ ದಾಳಿ ಮಾಡಿದಾಗ, ಈ ಕುಟುಂಬದ ದಿಢೀರ್ ಶ್ರೀಮಂತಿಕೆಯ ಹಿಂದಿನ ರಹಸ್ಯ ಬದಲಾಯಿತು. ದಾಳಿ ವೇಳೆ ವೇಳೆ, 21 ಲಕ್ಷ ರೂ. ನಗದಿನೊಂದಿಗೆ ಕಾರು, ಸ್ಕೂಟಿ, ಬೈಕ್, 7 ಲಕ್ಷ ರೂ. ಠೇವಣಿ ಪತ್ರಗಳು, 65 ಲಕ್ಷ ರೂ. ಅಧಿಕ ಮೌಲ್ಯ ಸ್ಥಿರಾಸ್ತಿ ಮತ್ತು ಚರಾಸ್ತಿಗಳ ದಾಖಲೆ ಪತ್ರಗಳು, 12 ಪಾಸ್‌ಬುಕ್‌ಗಳು ದೊರೆತವು. ಮನೆಯ ಮೌಲ್ಯ 50 ಲಕ್ಷ ರೂ. ಎಂದು ನಿರ್ಧರಿಸಲಾಯಿತು. ಇದಕ್ಕೆಲ್ಲ ಹಣದ ಮೂಲ ಆನಂದ್ ನಡೆಸುತ್ತಿದ್ದ ಸೈಬರ್ ವಂಚನೆಯಾಗಿತ್ತು. ಪೊಲೀಸ್ ದಾಳಿ ವೇಳೆ ಆನಂದ್ ತಲೆ ಮರೆಸಿಕೊಂಡಿದ್ದ. ಆದರೆ, ಬಳಿಕ ಆತನನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಯಿತು. 20 ಲಕ್ಷ ರೂ. ಭದ್ರತೆಯ ಜಾಮೀನಿನಿ ಮೇಲೆ ಶೀಘ್ರವೇ ಜೈಲಿನಿಂದ ಹೊರಗೆ ಕೂಡ ಬಂದ ಆನಂದ್ ರಕ್ಷಿತ್. ಜಾಮತಾಡಾ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಈ ರೀತಿಯ ಆನಂದ್ ರಕ್ಷಿತ್‌ಗಳು ಸಿಗುತ್ತಾರೆ.

ಕರ್ಮತಾಂಡ್‌ನ ಕರ್ಮಕಾಂಡ
ಜಾಮತಾಡಾ ಜಿಲ್ಲೆಯ ಕರ್ಮತಾಂಡ್ ಪ್ರದೇಶವು ಸೈಬರ್ ಕ್ರೈಮ್‌ಗಳ ಕೇಂದ್ರ ಸ್ಥಾನವೂ ಹೌದು. ಈ ಪಟ್ಟಣದಲ್ಲಿ ಒಂದೂವರೆ ಲಕ್ಷ ಜನರಿದ್ದಾರೆ. ಇಲ್ಲಿನ ಜನರು ಸೈಬರ್ ಕ್ರೈಮ್‌ಗಳಿಗೆ ತೆರೆದುಕೊಳ್ಳುವ ಮುನ್ನ, ಮಾದಕ ವ್ಯಸನ ಪ್ರಕರಣಗಳು, ಸರಗಳ್ಳತನ, ರೈಲುಗಳಲ್ಲಿ ದರೋಡೆ ಸೇರಿದಂತೆ ಇನ್ನಿತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ರೈಲುಗಳಲ್ಲಿ ಪ್ರಯಾಣಿಕರ ಭಾರೀ ಮೌಲ್ಯದ ವಸ್ತುಗಳನ್ನು ಕದಿಯುವ ದೊಡ್ಡ ಗ್ಯಾಂಗ್‌ಗಳು ಸಕ್ರಿಯವಾಗಿದ್ದವು. ಯಾವಾಗ ಸ್ಮಾರ್ಟ್‌ಫೋನ್‌ಗಳು ಪ್ರಚಲಿತಕ್ಕೆ ಬಂದವೋ, ಇಲ್ಲಿನ ಯುವಕರು ಆನ್ ಲೈನ್ ವಂಚನೆಯ ತಂತ್ರಗಳನ್ನು ಕಲಿತು, ಅನಾಯಸವಾಗಿ ಹಣವನ್ನು ಸಂಪಾದಿಸುವ ದಾರಿಗಳನ್ನು ಹುಡುಕಿಕೊಂಡರು. ಇದು ಕೇವಲ ಕರ್ಮತಾಂಡ್ ಪ್ರದೇಶದ ಕತೆಯಲ್ಲ ಜಾಮತಾಡಾ ಜಿಲ್ಲೆಯ ಬಹಳಷ್ಟು ಪಟ್ಟಣಗಳು, ಹಳ್ಳಿಗಳಲ್ಲಿ ಇದೇ ರೀತಿಯಲ್ಲಿವೆ.

ಹೇಗೆ ಕಲಿತರು ಇವರೆಲ್ಲ?
ಕೆಲವು ಜನರು ಪ್ರಮುಖ ಮೆಟ್ರೋ ನಗರಗಳಿಗೆ ಸ್ಥಳಾಂತರಗೊಂಡರು ಮತ್ತು ಚಿಪ್ ರಿಪ್ಲೇಸ್ಮೆಂಟ್, ಸೈಬರ್ ಕೆಫೆಗಳು, ಸಾಫ್ಟ್‌ವೇರ್ ಚಿಪ್‌ಗಳ ಬದಲಿ ಇತ್ಯಾದಿ ಕೆಲಸ ಮೂಲಕ ತಂತ್ರಗಳನ್ನು ತಮ್ಮದಾಗಿಸಿಕೊಂಡರು. ಇನ್ನು ಕೆಲವರು ಕಾಲ್ ಸೆಂಟರ್‌ಗಳನ್ನು ಸ್ಥಾಪಿಸುವ ಮೂಲಕ ಜನರನ್ನು ವಂಚಿಸುವ ದಾರಿಗಳನ್ನು ಕಂಡುಕೊಂಡರು. ಕ್ರಮೇಣ ಆನ್‌ಲೈನ್ ವಂಚಕರ ಹಲವಾರು ಗುಂಪುಗಳು ಸೃಷ್ಟಿಯಾದವು. ಈ ಗುಂಪುಗಳು ಜಾಮತಾಡಾ ಜಿಲ್ಲೆಯ ಸುಮಾರು 100 ಹಳ್ಳಿಗಳಲ್ಲಿ ಹರಡಿಕೊಂಡಿವೆ. ಜಾಮತಾಡಾ ಮಾತ್ರವಲ್ಲದೇ ದಿಯೋಘರ್, ಗಿರಿದಿಹ್, ಧನ್‌ಬಾದ್‌ ಮತ್ತು ಗೊಡ್ಡಾ ಜಿಲ್ಲೆಗಳಲ್ಲಿ ಸೈಬರ್ ವಂಚನೆಯನ್ನೇ ಧಂದೆಯಾಗಿ ಮಾಡಿಕೊಂಡಿರುವುದನ್ನು ಕಾಣಬಹುದು. ಈ ಪ್ರದೇಶಗಳಲ್ಲಿನ ಹತ್ತಾರು ಸೈಬರ್ ಅಪರಾಧಿಗಳು ದೆಹಲಿ, ಅಹಮದಾಬಾದ್, ಕೋಲ್ಕೊತಾ, ಜೈಪುರ, ಮುಂಬೈ ಮತ್ತು ಪಾಟ್ನಾದಂತಹ ಅನೇಕ ಮೆಟ್ರೊ ನಗರಗಳಲ್ಲಿ ಕಾಲ್ ಸೆಂಟರ್‌ಗಳನ್ನು ತೆರೆದಿದ್ದಾರೆ.

ದಿ ಫಸ್ಟ್ ಕೇಸ್- ಸೀತಾರಾಮ್ ಮಂಡಲ್
ಆನ್‌ಲೈನ್‌ ವಂಚನೆಯ ಗಮನ ಸೆಳೆದ ಮೊದಲ ಪ್ರಕರಣ ಎಂದರೆ ಸೀತಾರಾಮ್ ಮಂಡಲ್‌ನದ್ದು. ಜಾಮತಾಡಾದ ಸಿಂಧರ್‌ಜೋರಿ ಹಳ್ಳಿಯ ನಿವಾಸಿ ಸೀತಾರಾಮ್ ಮಂಡಲ್ 15 ವರ್ಷಗಳ ಹಿಂದೆ ಮುಂಬೈಗೆ ತೆರಳಿ, ಮೊಬೈಲ್ ರಿಚಾರ್ಜ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ, ಆತ ಮೊಬೈಲ್ ಫೋನುಗಳ ಮೂಲಕ ಜನರನ್ನು ವಂಚಿಸುವ ಹಲವಾರು ತಂತ್ರಗಳನ್ನು ಕಂಡುಕೊಂಡ. ಬಳಿಕ ತನ್ನೂರಿಗೆ ಹಿಂದಿರುಗಿ, ಆನ್‌ಲೈನ್ ವಂಚನೆಯನ್ನು ಶುರು ಮಾಡಿದ. ಈತನ ತಂಡಕ್ಕೆ ಅನೇಕ ಯುವಕರು ಸೇರ್ಪಡೆಯಾದರು. ಸೀತಾರಾಮ್ ಮಂಡಲ್ ರೀತಿಯ ವ್ಯಕ್ತಿಗಳು ಜಾಮತಾಡಾದ ಪ್ರತಿ ಹಳ್ಳಿಯಲ್ಲಿ ಈಗ ಸಿಗುತ್ತಾರೆ.

ಪೊಲೀಸ್ ಠಾಣೆ ಆರಂಭ
ಜಾಮತಾಡಾದಲ್ಲಿ ನಡೆಯುತ್ತಿರುವ ಸೈಬರ್ ಕ್ರೈಮ್‌ಗಳನ್ನು ಮಟ್ಟ ಹಾಕುವುದಕ್ಕಾಗಿ ಸರ್ಕಾರವು 2018ರಲ್ಲಿ ಸೈಬರ್ ಪೊಲೀಸ್ ಠಾಣೆ ತೆರೆಯಿತು. ಅಲ್ಲಿಂದ ಇಲ್ಲಿಯತನಕ 250ಕ್ಕೂ ಹೆಚ್ಚು ಸೈಬರ್ ಅಪರಾಧಿಗಳನ್ನು ಬಂಧಿಸಲಾಗಿದೆ. ಹಾಗಿದ್ದೂ, ಜಾಮತಾಡಾ ಮೂಲಕ ನಡೆಯುವ ಆನ್‌ಲೈನ್ ವಂಚನೆಗಳಿಗೆ ಈವರೆಗೂ ತಡೆ ಬಿದ್ದಿಲ್ಲ. ಯಾಕೆಂದರೆ, ಈ ಅಪರಾಧಿಗಳು ಜಾಮೀನಿನ ಮೇಲೆ ಬಿಡುಗಡೆ ಆದ ಬಳಿಕ ಮತ್ತೆ ಅದೇ ಕೆಲಸವನ್ನು ಮುಂದುವರಿಸುತ್ತಾರೆ. ಜೆತೆಗೆ, ಈ ವಂಚನೆ ಚಟುವಟಿಕೆಗೆ ಹೊಸಬರು ಕೂಡ ಸೇರಿಕೊಳ್ಳುತ್ತಲೇ ಇರುತ್ತಾರೆ.

ಜಾಮತಾಡಾದಲ್ಲೇಕೆ ಸೈಬರ್ ಕ್ರೈಮ್ಸ್?
ಸೈಬರ್ ತಜ್ಞರ ಪ್ರಕಾರ ಫಿಶಿಂಗ್‌ನಂಥ ಸ್ಕ್ಯಾಮ್‌ಗಳು ಸಣ್ಣ ಪಟ್ಟಣಗಳಿಂದಲೇ ಹುಟ್ಟಿಕೊಳ್ಳುತ್ತವೆ. ಯಾಕೆಂದರೆ, ಪೊಲೀಸರು ಸೈಬರ್ ಕ್ರೈಮ್‌ ವಿಷಯದಲ್ಲಿ ಸಣ್ಣ ಪಟ್ಟಣ, ನಗರಗಳತ್ತ ಅಷ್ಟು ಲಕ್ಷ್ಯ ವಹಿಸುವುದಿಲ್ಲ. ಜತೆಗೆ, ಈ ಪ್ರದೇಶಗಳಲ್ಲಿ ಸೈಬರ್ ಕ್ರೈಮ್ ತಜ್ಞ ಪೊಲೀಸರೂ ಇರುವುದಿಲ್ಲ. ಆದರೆ, ಮೆಟ್ರೋ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯ ಸೈಬರ್ ಕ್ರೈಮ್‌ಗಳನ್ನು ಪತ್ತೆ ಹೆಚ್ಚಲು ಹೆಚ್ಚು ಸಾಮರ್ಥ್ಯವನ್ನು ಪಡೆದುಕೊಂಡಿರುತ್ತದೆ. ಸಾಕಷ್ಟು ರೇಡ್‌ಗಳನ್ನು ಮಾಡಿ, ಆರೋಪಿಗಳನ್ನು ಪತ್ತೆ ಹಚ್ಚುತ್ತದೆ. ಆದರೆ, ಇದೇ ರೀತಿ ಸೌಕರ್ಯವನ್ನು ಸಣ್ಣ ಪಟ್ಟಣ ಮತ್ತು ನಗರಗಳಲ್ಲಿ ನಿರೀಕ್ಷಿಸಲಾಗದು. ಈ ಸಂಗತಿಯ ಲಾಭವನ್ನು ಪಡೆದುಕೊಂಡಿರುವ ಜಾರ್ಖಂಡ್‌ನ ಜಾಮತಾಡಾ ಜಿಲ್ಲೆ ಹಾಗೂ ನಗರವು ಭಾರತದ ಫಿಶಿಂಗ್ ಕ್ಯಾಪಿಟಲ್ ಎಂಬ ಕುಖ್ಯಾತಿಯನ್ನು ಪಡೆದುಕೊಂಡಿದೆ. ಇಲ್ಲಿನ ಬಹುತೇಕ ಹಳ್ಳಿ, ಚಿಕ್ಕ ಪಟ್ಟಣಗಳಲ್ಲಿ ಸೈಬರ್ ಕ್ರೈಮ್‌ಗಳಲ್ಲಿ ನಿರತವಾಗಿರುವ ಜನರಿದ್ದಾರೆ. ದೇಶದಲ್ಲಿ ನಡೆಯುವ ಫಿಶಿಂಗ್, ಒಟಿಪಿ ಸ್ಕ್ಯಾಮ್‌ಗಳ ಪೈಕಿ ಹೆಚ್ಚಿನವುಗಳ ಮೂಲ ಜಾಮತಾಡಾವೇ ಆಗಿದೆ.

ಆಮಿಷಕ್ಕೆ ಬಲಿ ಬೀಳುವ ಜನ
ಜನ ಎಷ್ಟೇ ಸುಶಿಕ್ಷತರಾದರೂ ಆಮಿಷದಲ್ಲಿ ಕ್ಷಣವಾದರೂ ಯಾಮಾರುತ್ತಾರೆ. ಈ ಮಾನವ ನಡವಳಿಕೆಯೇ ಜಾಮತಾಡಾ ಫಿಶಿಂಗ್ ಪಂಟರ್‌ಗಳಿಗೆ ನೆರವಾಗಿರುವುದು. ಅವರು ಫೋನ್ ಕಾಲ್ ಮಾಡಿ, ಆಮಿಷವೊಡ್ಡಿ ನಿಮ್ಮ ವೈಯಕ್ತಿಕ ಎಲ್ಲ ಸೂಕ್ಷ್ಮ ಮಾಹಿತಿಯನ್ನು ಪಡೆದುಕೊಂಡು, ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ. ಬ್ಯಾಂಕಿನ ಖಾತೆಯಿಂದ ಹಣ ಸರಸರನೇ ಹೊರ ಹೋದಾಗಲೇ ಜನರಿಗೆ ತಾವು ಮೋಸ ಹೋಗಿರುವುದು ತಿಳಿಯುತ್ತದೆ.

ಲೇಡಿ ಕಾಲರ್!
ಅತ್ತ ಕಡೆಯಿಂದ ಮಹಿಳೆಯೊಬ್ಬಳು ಮಾತನಾಡಲಾರಂಭಿಸಿದರೆ ಇತ್ತ ಕಡೆಯ ಗಂಡಸು ಫಿದಾ ಆಗಿ ಬಿಡುತ್ತಾನೆ. ಇದೇ ಸಂಗತಿ ಜಾಮತಾಡಾ ಖದೀಮರಿಗೆ ಹೆಚ್ಚು ವರವಾಗಿದೆ. ಫಿಶಿಂಗ್ ಮಾಡುವ ಜನರು, ಹೆಣ್ಣು ಮಕ್ಕಳಿಂದ ಕರೆ ಮಾಡಿಸಿ, ತಮಗೆ ಬೇಕಿರುವ ಎಲ್ಲ ಮಾಹಿತಿಯನ್ನು ಬಹಳ ನಯ ನಾಜೂಕಿನಿಂದ ಪಡೆದುಕೊಳ್ಳುತ್ತಾರೆ. ಬಹಳ ಜನರಿಗೆ ಹೆಂಗಸಿನ ದನಿಯಲ್ಲಿ ಮಾತನಾಡುವ ಕರೆಗಳು ಇನ್ನೆಲ್ಲೋ ಕುಳಿತ ಗಂಡಸೇ ಮಾಡುತ್ತಿರುತ್ತಾನೆ ಎಂಬ ಸಂಗತಿ ಗೊತ್ತೇ ಇರುವುದಿಲ್ಲ.

ಬೆತ್ತಲೆ ವಿಡಿಯೋ
ಹಣ ಸುಲಿಗೆಗೆ ಕಂಡುಕೊಂಡಿರುವ ಮತ್ತೊಂದು ವಂಚನೆ ಮತ್ತು ಅಪರಾಧದ ದಾರಿ ಇದು. ಜಾಮತಾಡಾದ ಕೆಲವರು ಈ ಕ್ರೈಮ್‌ನಲ್ಲಿ ಎಕ್ಸ್‌ಪರ್ಟ್ ಆಗಿದ್ದಾರೆ. ವಂಚಕ ತನ್ನ ಟಾರ್ಗೆಟ್ ವ್ಯಕ್ತಿಗೆ, ಫೋನ್ ಹಿಂಬದಿಯ ಕ್ಯಾಮೆರಾ ಮೂಲಕ ನಗ್ನ ವಿಡಿಯೋವನ್ನು ವಿಡಿಯೋ ಕಾಲ್ ಮೂಲಕ ತೋರಿಸುತ್ತಾನೆ. ಟಾರ್ಗೆಟ್ ವ್ಯಕ್ತಿ ಈ ನಗ್ನ ವಿಡಿಯೋ ನೋಡುವಾಗ, ಸ್ಕ್ರೀನ್ ಅನ್ನು ರೆಕಾರ್ಡ್ ಮಾಡಿಕೊಳ್ಳುತ್ತಾನೆ. ಆ ಬಳಿಕ ಅದನ್ನು ವಿಡಿಯೋ ತುಣುಕು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸುತ್ತಾನೆ. ಇದರಲ್ಲಿ ಟಾರ್ಗೆಟ್ ವ್ಯಕ್ತಿಯ ತಪ್ಪೇನೂ ಇರದಿದ್ದರೂ, ತಾನು ನಗ್ನ ವಿಡಿಯೋ ನೋಡುತ್ತಿದ್ದ ವಿಷಯ ಜನರಿಗೆ ಗೊತ್ತಾದರೆ ಏನು ಅಂದುಕೊಂಡಾರು ಎಂಬ ಭಯದಿಂದ ವಂಚಕನಿಗೆ ಹೇಳಿದಷ್ಟು ಹಣ ನೀಡಲಾರಂಭಿಸುತ್ತಾನೆ.

ಕೆವೈಸಿ ಅಪ್‌ಡೇಟ್
ಜಾಮತಾಡಾದ ವಂಚಕರು ಆಯ್ದುಕೊಂಡಿರುವ ಮತ್ತೊಂದು ದಾರಿ ಇದು. ಹಾಗೆಯೇ ಭಾರತದಲ್ಲಿ ನಡೆಯುವ ಅತ್ಯಂತ ಸಾಮಾನ್ಯ ಸೈಬರ್ ಕ್ರೈಮ್ ಇದು. ಗೊತ್ತಿದ್ದೂ ಹಲವರು ಈ ಕೆವೈಸಿ ಬಲೆಗೆ ಬಿದ್ದು, ಹಣವನ್ನು ಕಳೆದುಕೊಳ್ಳುತ್ತಾರೆ. ಟಾರ್ಗೆಟ್ ವ್ಯಕ್ತಿಯ ಸಿಮ್ ಕಾರ್ಡ್ ಅಥವಾ ಬ್ಯಾಂಕ್ ಕಾರ್ಡ್‌ಗಳ ಕೆವೈಸಿ(Know Your Customer) ಪರಿಶೀಲನೆಗೆಂದು ಕಾಲ್ ಮಾಡುತ್ತಾನೆ. ಆಗ ಟಾರ್ಗೆಟ್, ಸ್ಕ್ಯಾಮರ್ ಕಾಲರ್ ಕೇಳುವ ಎಲ್ಲ ಮಾಹಿತಿಯನ್ನು ನೀಡುತ್ತಾರೆ. ಅಲ್ಲದೇ, ವಂಚನೆಗೆ ನೆರವಾಗುವ ಆ್ಯಪ್ ಡೌನ್ಲೋಡ್ ಮಾಡಲು ಹೇಳುತ್ತಾರೆ. ಇದರಿಂದಾಗಿ ಅವರಿಗೆ ಬೇಕಾಗುವ ಎಲ್ಲ ಮಾಹಿತಿಯು ಸಿಕ್ಕುಬಿಡುತ್ತದೆ. ಇದಾದ ಮರುಗಳಿಗೆಯಲ್ಲೇ ಟಾರ್ಗೆಟ್ ವ್ಯಕ್ತಿಯ ಖಾತೆಯಲ್ಲಿನ ಹಣವೆಲ್ಲ ಡ್ರಾ ಆಗಿರುತ್ತದೆ!

ಫೇಕ್ ಪ್ರೊಫೈಲ್ಸ್
ವಂಚಕರು ಅತ್ಯುನ್ನತ ಅಧಿಕಾರಿಗಳು ಅಂದರೆ, ಐಎಎಸ್, ಐಪಿಎಸ್‌ ಅಧಿಕಾರಿಗಳ ರೀತಿಯಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಿಕೊಂಡಿರುತ್ತಾರೆ. ಬಳಿಕ, ನಿರ್ದಿಷ್ಟ ವ್ಯಕ್ತಿಗಳಿಗೆ ರಿಕ್ವೆಸ್ಟ್ ಕಳುಹಿಸಿ, 5 ಸಾವಿರದಿಂದ 10 ಸಾವಿರ ರೂ.ವರೆಗೂ ಹಣ ಪಡೆದುಕೊಳ್ಳುತ್ತಾರೆ. ಪ್ರೊಫೈಲ್‌ಗಳನ್ನು ಗಮನಿಸುವ ಜನರು ನಿಜ ಇರಬೇಕೆಂದು ಭಾವಿಸಿ ಹಣ ಕಳುಹಿಸಿ, ಕೈ ಸುಟ್ಟುಕೊಳ್ಳುತ್ತಾರೆ.

ವಂಚಕರಿಗೆ ಫೋನ್ ನಂಬರ್ಸ್ ಹೇಗೆ ಸಿಗುತ್ತವೆ?
ಮುಖ್ಯವಾಗಿ ಕಾಡುವ ಪ್ರಶ್ನೆ ಎಂದರೆ, ಈ ಜಾಮತಾಡಾ ಸೈಬರ್ ವಂಚಕರಿಗೆ ಫೋನ್ ನಂಬರ್ಸ್ ಹೇಗೆ ಸಿಗುತ್ತವೆ? ಕಾಲ್ ಸೆಂಟರ್‌ಗಳೇ ಇದಕ್ಕೆ ಮೂಲ. ಕೆಲವರು ದುಡ್ಡಿನ ಆಸೆಗೆ ಕಾಲ್ ಸೆಂಟರ್‌ಗಳಿಂದ ಡೇಟಾವನ್ನು ಸೈಬರ್ ವಂಚಕರಿಗೆ ಮಾರಾಟ ಮಾಡುತ್ತಾರೆ. ಇನ್ನು, ಡಿಜಿಟಲ್ ಪೇಮೆಂಟ್ ಗೇಟ್‌ವೇ, ಒಟಿಪಿ ವ್ಯವಸ್ಥೆಯಲ್ಲಿ ಲೋಪಗಳನ್ನು ವಂಚರು ಬಳಸಿಕೊಂಡು ಫೋನ್ ನಂಬರ್ಸ್ ಪಡೆದುಕೊಳ್ಳುತ್ತಾರೆ. ಒಂದೊಮ್ಮೆ, ಕಾಲ್ ಮಾಡಿದ ವ್ಯಕ್ತಿ ನಿಮ್ಮ ಹೆಸರು, ವಿಳಾಸವನ್ನು ಸರಿಯಾಗಿ ಹೇಳುತ್ತಿದ್ದಾನೆ ಎಂದರೆ ಆ ವ್ಯಕ್ತಿಯ ಬಳಿಯ, ಮಾರಾಟಕ್ಕೀಡಾದ ನಿಮ್ಮ ಮಾಹಿತಿ ಇರುತ್ತದೆ ಎಂದರ್ಥ. ಯಾಕೆಂದರೆ, ಯಾವುದೇ ಬ್ಯಾಂಕುಗಳು ಫೋನ್ ಮಾಡಿ, ಕೆವೈಸಿಯಾಗಲೀ, ಒಟಿಪಿಯಾಗಲಿ ಕೇಳುವುದಿಲ್ಲ. ಶಾಪಿಂಗ್ ವೆಬ್‌ಸೈಟ್ಸ್, ಟೆಲಿಫೋನ್ ಕಂಪನಿ ಇತ್ಯಾದಿಗಳ ಕಾಲ್ ಸೆಂಟರ್‌ಗಳಲ್ಲಿ ಕೆಲಸ ಮಾಡುವವರೇ ಈ ಮಾಹಿತಿಗಳನ್ನು ಮಾರಾಟ ಮಾಡಿರುತ್ತಾರೆ. ಇತ್ತೀಚೆಗೆ, ಈ ಜಾಮತಾಡಾ ವಂಚಕರ ಇನ್ಶೂರೆನ್ಸ್ ಮಾಹಿತಿಯನ್ನು ಕೂಡ ಖರೀದಿಸುತ್ತಿದ್ದಾರೆಂದು ತಿಳಿದು ಬಂದಿದೆ.

ಜಾಮತಾಡಾ ಕೇಂದ್ರಿತ ವೆಬ್‌ಸೀರೀಸ್
ಭಾರತದ ಫಿಶಿಂಗ್ ಕ್ಯಾಪಿಟಲ್ ಎನಿಸಿಕೊಂಡಿರುವ ಜಾಮತಾಡಾ ನಟೋರಿಯಸ್ ಕ್ರಿಮಿನಲ್ ಹಿನ್ನೆಲೆಯನ್ನು ಅನೇಕ ಸಿನಿಮಾ ಮತ್ತು ವೆಬ್‌ಸೀರೀಸ್‌ಗಳಲ್ಲಿ ಬಳಸಿಕೊಳ್ಳಲಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಜಾಮತಾಡಾ ವೆಬ್‌ಸೀರೀಸ್ ಸಂಚನಲ ಸೃಷ್ಟಿಸಿದೆ. ಈವರೆಗೆ ಎರಡು ಸೀಸನ್ ಪ್ರಸಾರವಾಗಿದ್ದು, ಜಾಮತಾಡ ಸೈಬರ್ ಕ್ರೈಮ್‌ ಅನ್ನು ಎಳೆ ಎಳೆಯಾಗಿ ತೋರಿಸಲಾಗಿದೆ. ಇಡೀ ವ್ಯವಸ್ಥೆಯು ಇದರಲ್ಲಿ ಭಾಗಿಯಾಗಿರುವುದನ್ನು ಸೂಚ್ಯವಾಗಿ ಹೇಳಲಾಗಿದೆ.

ಸೋಷಿಯಲ್ ಮೀಡಿಯಾ ಬಳಸುವಾಗ ಇರಲಿ ಎಚ್ಚರ
ಸಾಮಾಜಿಕ ಜಾಲತಾಣಗಳ (Social Media) ಬಳಕೆ ಇಂದಿನ ಅಗತ್ಯ ಹಾಗೂ ಅನಿವಾರ್ಯತೆ. ಕಚೇರಿ ಕೆಲಸಕ್ಕಾಗಲಿ, ಸ್ನೇಹಿತರು ಅಥವಾ ಬಂಧುಗಳ ಜತೆಗಿನ ಮಾತುಕತೆಗಾಗಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲೇಬೇಕಾಗಿದೆ. ಆದರೆ, ಸೋಷಿಯಲ್‌ ಮೀಡಿಯಾ ಬಳಕೆಯನ್ನು ಎಚ್ಚರ ತಪ್ಪಿ ಮಾಡಿದರೆ ಅದು ಅಪಾಯಕಾರಿ ಎನಿಸಬಹುದು. ನಿಮ್ಮ ವೈಯಕ್ತಿಕ ಮಾಹಿತಿಗಳು ದುರುಪಯೋಗವಾಗುವ ಜತೆಗೆ ನಿಮ್ಮ ಕಂಪ್ಯೂಟರ್‌ ಹಾಗೂ ಬ್ಯಾಂಕ್‌ ಖಾತೆಗಳಿಗೆ ಸೈಬರ್‌ ಕಳ್ಳರು ಕನ್ನ ಹಾಕಬಹುದು. ಹೀಗಾಗಿ ಸೋಶಿಯಲ್‌ ಮೀಡಿಯಾ ಬಳಕೆ ವೇಳೆ ಕೆಲವೊಂದು ಎಚ್ಚರಿಕೆಗಳನ್ನು ವಹಿಸಿಕೊಳ್ಳಬೇಕಾಗುತ್ತದೆ.

1. ನೀವು ಮಾಡುವ ಯಾವುದೇ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಶಾಶ್ವತವಾಗಿ ಇರುತ್ತದೆ. ಅದು ಸಾವಿರಾರು ಮಂದಿಯ ಕಣ್ಣಿಗೆ ಬೀಳುತ್ತದೆ. ಹೀಗಾಗಿ ಯಾವುದೇ ಪೋಸ್ಟ್‌ಗಳನ್ನು ಮಾಡುವಾಗ ಎರಡೆರಡು ಬಾರಿ ಯೋಚಿಸಿ. ಪ್ರಮಾದಗಳು ಘಟಿಸದಂತೆ ಮುನ್ನೆಚ್ಚರಿಕೆ ವಹಿಸಿ.

2. ಸಾಮಾಜಿಕ ಜಾಲತಾಣಗಳಲ್ಲ ವ್ಯವಹಾರ ಮಾಡುವಾಗ ವೈಯಕ್ತಿಕ ಮಾಹಿತಿಗಳನ್ನು ಕೊಡಬೇಕಾಗುತ್ತದೆ. ಕೆಲವೊಂದು ಮಾಹಿತಿಗಳು ಅನಿವಾರ್ಯವಾದರೂ ಇನ್ನು ಕೆಲವು ಮಾಹಿತಿಗಳನ್ನು ನೀಡುವ ಅಗತ್ಯ ಇರುವುದಿಲ್ಲ. ಹೆಚ್ಚು ಮಾಹಿತಿಗಳನ್ನು ಪ್ರಕಟಿಸಿದರೆ ಹ್ಯಾಕರ್‌ಗಳಿಗೆ ಸುಲಭವಾಗಿ ನಿಮ್ಮ ಖಾತೆಗಳಿಗೆ ಕನ್ನ ಹಾಕಲು ಸಾಧ್ಯವಾಗುತ್ತದೆ.

3. ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌ ಹಾಗೂ ಟ್ಯಾಬ್‌ಗಳಲ್ಲಿ ಸುರಕ್ಷಿತವಾದ Anti virus ಅಳವಡಿಸಿಕೊಳ್ಳಿ. ಅದೇ ರೀತಿ ಆಪರೇಷನ್‌ ಸಿಸ್ಟಮ್‌ (OS) ಅಪ್‌ಡೇಟ್‌ ವರ್ಷನ್‌ ಇರುವಂತೆ ನೋಡಿಕೊಳ್ಳಿ.

4. ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರನ್ನು ಮಾಡಿಕೊಳ್ಳುವಾಗ ಜಾಗರೂಕರಾಗಿರಬೇಕು. ನಿಮಗೆ ಪರಿಚಯ ಇದ್ದರೆ ಮಾತ್ರ ಅವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಿ.ಅಪರಿಚಿತ ವ್ಯಕ್ತಿಯನ್ನು Friend ಮಾಡಿಕೊಂಡು ಅನಾಹುತಕ್ಕೆ ದಾರಿ ಮಾಡಿಕೊಡಬಾರದು. ಅಪರಿಚಿತರಲ್ಲಿ ಹಲವರು ಸೈಬರ್‌ ಕಳ್ಳರೂ ಇರಬಹುದು. ಸುಂದರ ಹುಡುಗಿಯರ ಚಿತ್ರವನ್ನು ಹಾಕಿಕೊಂಡು ಯಾಮಾರಿಸುವ ಪ್ರಕರಣಗಳು ಆಧುನಿಕ ಜಗತ್ತಿನಲ್ಲಿ ನಡೆಯುತ್ತಲೇ ಇವೆ.

5. ನಿಮ್ಮ ಸೋಶಿಯಲ್‌ ಮೀಡಿಯಾ ನೆಟ್‌ವರ್ಕ್‌ನಲ್ಲಿ ಯಾರಾದರೂ ಕಿರಿಕಿರಿ ಉಂಟು ಮಾಡುತ್ತಿದ್ದರೆ ಅವರನ್ನು ಮುಲಾಜಿಲ್ಲದೆ Unfriend ಮಾಡಿ. ಅವರ ವಿರುದ್ಧ ರಿಪೋರ್ಟ್‌ ಮಾಡಿ.

6. ಸುಲಭವಾಗಿ ಬೇರೆಯವರು ಗ್ರಹಿಸಲಾಗದಂಥ password ಬಳಸಿ. ಅಂಕಿಗಳು ಹಾಗೂ ಸಂಖ್ಯೆಗಳು ಸರಿಯಾಗಿ ಇರುವಂತೆ ನೋಡಿಕೊಳ್ಳಿ. ಬೇರೆಬೇರೆ ಅಕೌಂಟ್‌ಗಳಿಗೆ ಬೇರೆಬೇರೆ ಪಾಸ್‌ವರ್ಡ್‌ ಇರಬೇಕು.

ಇದನ್ನೂ ಓದಿ | Cyber Attack | ಮಿಸ್ಡ್ ಕಾಲ್ ಕೊಟ್ಟು 50 ಲಕ್ಷ ರೂ. ಎಗರಿಸಿದ ಸೈಬರ್ ಖದೀಮರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Lok Sabha Election: ರಾಜಕೀಯ ಕುಟುಂಬಗಳಿಂದ ರಾಜಮನೆತನದವರೆಗೆ; ಬಿಜೆಪಿಯಿಂದ 68 ಮಹಿಳೆಯರು ಕಣಕ್ಕೆ

Lok Sabha election 2024: ಹಿಂದಿನ ಸಾಲಿಗಿಂತ ಈ ಬಾರಿ ಬಿಜೆಪಿ ಹೆಚ್ಚಿನ ಮಹಿಳೆಯರನ್ನು ಲೋಕಸಭಾ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದೆ. ಆದರೆ ಇವರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಕುಟುಂಬ ರಾಜಕಾರಣದಿಂದ ಬಂದವರು. ಇವರಲ್ಲಿ ಪ್ರಮುಖರು ಯಾರಿದ್ದಾರೆ. ಈ ಕುರಿತ ಚಿತ್ರಣ ಇಲ್ಲಿದೆ.

VISTARANEWS.COM


on

By

Lok Sabha election-2024
Koo

ನವದೆಹಲಿ: ಲೋಕಸಭಾ ಚುನಾವಣೆ-2024ರಲ್ಲಿ (Lok Sabha election 2024) ಬಿಜೆಪಿ (bjp) ಈ ಬಾರಿ ಹಿಂದೆಂದಿಗಿಂತ ಹೆಚ್ಚು ಮಹಿಳೆಯರನ್ನು ಕಣಕ್ಕೆ ಇಳಿಸಿದೆ. ಆದರೂ ಈ ಪ್ರಮಾಣ ಶೇ. 16 ಮಾತ್ರ. ಇವರಲ್ಲಿ ಅರ್ಧದಷ್ಟು ಮಂದಿ ರಾಜಕೀಯ ಕುಟುಂಬಗಳ (political families) ಹಿನ್ನೆಲೆಯಿಂದ ಬಂದವರು. ಬಿಜೆಪಿ 417 ಲೋಕಸಭಾ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇವರಲ್ಲಿ ಕೇವಲ 68 ಮಂದಿ ಮಹಿಳೆಯರಿದ್ದಾರೆ. ಬಿಜೆಪಿಯ ಮಹಿಳಾ ಅಭ್ಯರ್ಥಿಗಳ ಪಟ್ಟಿಯಲ್ಲಿ 40 ಮಂದಿ ಆಳವಾಗಿ ಬೇರೂರಿರುವ ರಾಜಕೀಯ ಸಂಪರ್ಕ ಹೊಂದಿರುವ ಕುಟುಂಬಗಳಿಂದ ಬಂದವರಾಗಿದ್ದಾರೆ.

ಬಿಜೆಪಿಯು 417 ಸಂಸದೀಯ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಅದರಲ್ಲಿ 68 ಮಂದಿ ಶೇ. 16ಕ್ಕಿಂತ ಹೆಚ್ಚು ಮಂದಿ ಮಹಿಳೆಯರಿದ್ದಾರೆ. ಪಕ್ಷವು 2009ರಲ್ಲಿ 45, 2014ರಲ್ಲಿ 38 ಮತ್ತು 2019ರಲ್ಲಿ 55 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು.

ಇದನ್ನೂ ಓದಿ: Parliament Flashback: 1996ರ ಬಳಿಕ ರಾಜ್ಯದ ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ

ಕಣದಲ್ಲಿರುವ ಪ್ರಮುಖ ಮಹಿಳೆಯರು ಯಾರು?

ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ , ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್, ಜೆಎಂಎಂ ಮುಖ್ಯಸ್ಥ ಶಿಬು ಸೊರೆನ್ ಅವರ ಸೊಸೆ ಸೀತಾ ಸೊರೆನ್, ಮಾಜಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರ ಪತ್ನಿ ಗೀತಾ ಕೋಡಾ, ಮಾಜಿ ಸಂಸದ ನಾಥೂರಾಂ ಮಿರ್ಧಾ ಅವರ ಮೊಮ್ಮಗಳು ಜ್ಯೋತಿ ಮಿರ್ಧಾ, ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ, ಶಾಸಕ ರವಿ ರಾಣಾ ಅವರ ಪತ್ನಿ ನವನೀತ್ ರಾಣಾ, ಮಾಜಿ ಕಲಹಂಡಿ ಸಂಸದ ಅರ್ಕಾ ಕೇಶರಿ ದೇವ್ ಅವರ ಪತ್ನಿ ಮಾಳವಿಕಾ ದೇವಿ, ತಿಪ್ರಾ ಮೋಥಾ ಪಕ್ಷದ ಸಂಸ್ಥಾಪಕ ಪ್ರದ್ಯೋತ್ ಕಿಶೋರ್ ಮಾಣಿಕ್ಯ ದೆಬ್ಬರ್ಮಾ ಅವರ ಸಹೋದರಿ ಕೃತಿ ಸಿಂಗ್ ದೆಬ್ಬರ್ಮಾ ಅವರು ಈ ಬಾರಿ ಬಿಜೆಪಿಯಿಂದ ಕಣಕ್ಕೆ ಇಳಿದಿರುವ ಬಿಜೆಪಿಯ ಪ್ರಮುಖ ಮಹಿಳಾ ಅಭ್ಯರ್ಥಿಗಳು.

ಕಣದಲ್ಲಿರುವ ಪ್ರಮುಖರು

ಸೀತಾ ಸೊರೆನ್ ರಾಜಕೀಯ ಕುಟುಂಬದಿಂದ ಬಂದವರಾದರೂ ಒಂದು ಕ್ಷೇತ್ರದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತ ಮಾಡುವ ಕೆಲಸ ಮಾಡುತ್ತಿದ್ದೇನೆ. ಅದೇ ಶಕ್ತಿಯೊಂದಿಗೆ ಕಣಕ್ಕೆ ಇಳಿದಿದ್ದೇನೆ ಎಂದು ತಿಳಿಸಿದ್ದಾರೆ.

ರಾಜಮಂಡ್ರಿಯ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಕೇಂದ್ರ ಸಚಿವೆ ಮತ್ತು ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷೆ ಡಿ. ಪುರಂದೇಶ್ವರಿ ಅವರು ಪ್ರಸಿದ್ಧ ನಟ ಮತ್ತು ಎನ್‌.ಟಿ. ರಾಮರಾವ್ ಅವರ ಪುತ್ರಿ.

ಮಹಾರಾಷ್ಟ್ರದಲ್ಲಿ ಆರು ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದು ಹಾಲಿ ಸಂಸದೆ ಭಾರತಿ ಪವಾರ್ ಮತ್ತೆ ದಿಂಡೂರಿನಲ್ಲಿ ಸ್ಪರ್ಧಿಸಿದ್ದಾರೆ. ಇವರ ಮಾವ ಎಂಟು ಬಾರಿ ಶಾಸಕರಾಗಿದ್ದರು ಮತ್ತು ಮಹಾರಾಷ್ಟ್ರ ಸಚಿವರಾಗಿದ್ದರು. ಮಗ ಕೂಡ ಶಾಸಕರಾಗಿದ್ದಾರೆ.

ಬಿಜೆಪಿ ಸಂಸದೆ, ಆರು ಬಾರಿ ಶಾಸಕ ಮತ್ತು ಬುಡಕಟ್ಟು ನಾಯಕರಾಗಿದ್ದ ವಿಜಯ್ ಗವಿತ್ ಅವರ ಪುತ್ರಿ ಹೀನಾ ಗವಿತ್ ಈಗ ನಂದೂರ್ಬಾರ್‌ನಿಂದ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯ ದಿವಂಗತ ಗೋಪಿನಾಥ್ ಮುಂಡೆ ಅವರ ಪುತ್ರಿ, ಹಿರಿಯ ನಾಯಕಿ ಪಂಕಜಾ ಮುಂಡೆ ಬೀಡಿನಿಂದ ಸ್ಪರ್ಧಿಸುತ್ತಿದ್ದಾರೆ.

ಸಂಸದೆ ರಕ್ಷಾ ಖಡ್ಸೆ ಮತ್ತೆ ರೇವರ್ ನಿಂದ ಸ್ಪರ್ಧಿಸಿದ್ದಾರೆ. ಇವರ ಮಾವ ಏಕನಾಥ್ ಖಾಡ್ಸೆ 2020ರಲ್ಲಿ ಬಿಜೆಪಿ ತೊರೆದು ಶರದ್ ಪವಾರ್ ನೇತೃತ್ವದ ಎನ್‌ಸಿಪಿಯಲ್ಲಿದ್ದಾರೆ.

ಜಲಗಾಂವ್‌ನಲ್ಲಿ ಎಂಎಲ್ಸಿ ಸ್ಮಿತಾ ವಾಘ್ ಅವರನ್ನು ಕಣಕ್ಕಿಳಿಸಲು ಹಾಲಿ ಸಂಸದ ಉನ್ಮೇಶ್ ಪಾಟೀಲ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಅವರ ಪತಿ ಉದಯ್ ವಾಘ್ ಬಿಜೆಪಿ ಜಲಗಾಂವ್ ಜಿಲ್ಲಾಧ್ಯಕ್ಷರಾಗಿದ್ದಾರೆ. ಅಮರಾವತಿಯಿಂದ ಹಾಲಿ ಸಂಸದ ನವನೀತ್ ರಾಣಾ ಮತ್ತೆ ಸ್ಪರ್ಧಿಸಿದ್ದಾರೆ.

ಹೊಸ ಮುಖವಾಗಿರುವ ಅನಿತಾ ಅವರ ಪತಿ ಮಧ್ಯಪ್ರದೇಶದ ಅರಣ್ಯ ಸಚಿವ ಮತ್ತು ಮೂರು ಬಾರಿ ಶಾಸಕ ನಗರ್ ಸಿಂಗ್ ಚೌಹಾಣ್. ಮತ್ತೊಂದು ಹೊಸ ಮುಖ ಲತಾ ವಾಂಖೆಡೆ ಸಾಗರ್‌ನಿಂದ ಕಣಕ್ಕಿಳಿಯಲು ಮುಂದಾಗಿದ್ದಾರೆ. ಅವರ ಪತಿ ನಂದಕಿಶೋರ್ ಅಲಿಯಾಸ್ ಗುಡ್ಡು ವಾಂಖೆಡೆ ಕೂಡ ರಾಜಕೀಯದಲ್ಲಿದ್ದಾರೆ.

ಬಿಜೆಪಿ ಸಂಸದ ಹಿಮಾದ್ರಿ ಸಿಂಗ್ – ಮಾಜಿ ಸಂಸದರಾದ ದಲ್ವಿರ್ ಸಿಂಗ್ ಮತ್ತು ರಾಜೇಶ್ ನಂದಿನಿ ಸಿಂಗ್ ಅವರ ಪುತ್ರಿ ಶಹದೋಲ್‌ನಿಂದ ಮತ್ತೊಂದು ಅವಧಿಯನ್ನು ನಿರೀಕ್ಷಿಸುತ್ತಿದ್ದಾರೆ. ಅವರ ಪತಿ ನರೇಂದ್ರ ಮರಾವಿ ಕೂಡ ಬಿಜೆಪಿ ನಾಯಕರಾಗಿದ್ದಾರೆ.

ರಾಜಮನೆತನದವರು

2019 ರಲ್ಲಿ ರಾಜಸ್ಥಾನದಲ್ಲಿ ಬಿಜೆಪಿ ಇದುವರೆಗೆ ಐದು ಮಹಿಳಾ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿದೆ. ದೇವಿ ಜಾತವ್ (ಧೋಲ್ಪುರ್ ಕರೌಲಿ), ಪ್ರಿಯಾಂಕಾ ಬಾಲನ್ (ಶ್ರೀಗಂಗಾನಗರ), ಮಂಜು ಶರ್ಮಾ (ಜೈಪುರ), ಜ್ಯೋತಿ ಮಿರ್ಧಾ (ನಾಗೌರ್) ಮತ್ತು ಮಹಿಮಾ ವಿಶ್ವರಾಜ್ ಸಿಂಗ್ (ರಾಜಸಮಂದ್). ಮಹಿಮಾ ವಿಶ್ವರಾಜ್ ಸಿಂಗ್ ಮೇವಾರ್‌ನ ರಾಜಮನೆತನಕ್ಕೆ ಸೇರಿದವರಾಗಿದ್ದಾರೆ.

ಮಾಳವಿಕಾ ಕೇಶರಿ ದೇವ್ ಅವರು ಕಲಹಂಡಿ ಜಿಲ್ಲೆಯ ಹಿಂದಿನ ರಾಜಮನೆತನದ ಸಂಪರ್ಕವನ್ನು ಹೊಂದಿದ್ದಾರೆ. 2019ರಲ್ಲಿ ಅಸ್ಕಾದಿಂದ ಸ್ಪರ್ಧಿಸಿ ಸೋತಿದ್ದ ಅನಿತಾ ಪ್ರಿಯದರ್ಶಿನಿ ಮತ್ತೆ ಅದೇ ಸ್ಥಾನದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ರಾಜಕೀಯ ಹಿನ್ನೆಲೆಯುಳ್ಳವರು

ಜಾರ್ಖಂಡ್ ಮೂರು ಮಹಿಳಾ ಅಭ್ಯರ್ಥಿಗಳಾದ ಸೀತಾ ಸೊರೆನ್, ಗೀತಾ ಕೊಡ ಮತ್ತು ಅನ್ನಪೂರ್ಣ ದೇವಿ ಅವರು ದುಮ್ಕಾ, ಸಿಂಗ್‌ಭೂಮ್ ಮತ್ತು ಕೊಡರ್ಮಾದಿಂದ ಸ್ಪರ್ಧಿಸಿದ್ದಾರೆ. ಈ ಮೂವರೂ ಅಭ್ಯರ್ಥಿಗಳು ರಾಜಕೀಯ ಹಿನ್ನೆಲೆಯುಳ್ಳವರಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ರೇಖಾ ವರ್ಮಾ (ಧಾರುಹರ) ಮತ್ತು ಮೇನಕಾ ಗಾಂಧಿ (ಸುಲ್ತಾನ್‌ಪುರ) ಕೂಡ ರಾಜಕೀಯದಲ್ಲಿ ಕುಟುಂಬ ಸದಸ್ಯರನ್ನು ಹೊಂದಿದ್ದರು. ಹಿಂದಿನವರು 2014 ರಿಂದ ಧರುಹರಾದಿಂದ ಹಾಲಿ ಸಂಸದರಾಗಿದ್ದರೆ, ನಂತರದವರು 1989ರಲ್ಲಿ ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು.

Continue Reading

ಆಹಾರ/ಅಡುಗೆ

Food Expired Date: ಅವಧಿ ಮೀರಿದ ಆಹಾರದಿಂದ ಜೀವಕ್ಕೇ ಅಪಾಯ! ಖರೀದಿಸುವಾಗ ಈ ಅಂಶಗಳನ್ನು ಗಮನಿಸಿ

Food Expired Date: ತಿನ್ನುವ ಆಹಾರ ಎಷ್ಟು ಸುರಕ್ಷಿತ ಮತ್ತು ಗುಣಮಟ್ಟದಲ್ಲಿದೆ ಎಂಬುದನ್ನು ನಾವು ತಿಳಿದುಕೊಂಡಿರಲೇಬೇಕು. ಇಲ್ಲವಾದರೆ ಆರೋಗ್ಯ ಹಾಳಾಗಬಹುದು. ಇವುಗಳನ್ನು ಪರೀಕ್ಷಿಸುವ ಹಲವು ವಿಧಾನಗಳು ಇಲ್ಲಿವೆ.

VISTARANEWS.COM


on

By

Food products
Koo

ಎರಡು ದಿನಗಳ ಹಿಂದೆ ಡೇಟ್ ಎಕ್ಸ್‌ಪೈರ್‌ (Food Expired Date) ಆಗಿದ್ದ ಚಾಕಲೇಟ್ (Chocolate) ಸೇವಿಸಿ ಪಂಜಾಬ್‌ನ (punjab) ಪಟಿಯಾಲದಲ್ಲಿ (patiyala) ಬಾಲಕಿ ಒಬ್ಬಳು ಮೃತಪಟ್ಟಿದ್ದಳು, ವಾರದ ಹಿಂದೆ ಮಂಡ್ಯ (mandya) ಜಿಲ್ಲೆ ಶ್ರೀರಂಗಪಟ್ಟಣ (srirangapattana) ತಾಲೂಕಿನ ಬೆಟ್ಟಹಳ್ಳಿಯಲ್ಲಿ ಐಸ್ ಕ್ರೀಮ್ (icecream) ತಿಂದು ಅವಳಿ ಜವಳಿ ಮಕ್ಕಳಿಬ್ಬರು ಮೃತಪಟ್ಟಿದ್ದರು. ಈ ಎರಡೂ ಘಟನೆಗಳಲ್ಲಿ ಖರೀದಿ ಮಾಡಿದ ಆಹಾರದ (Food products) ಗುಣಮಟ್ಟದ (quality) ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಆಹಾರ ಮತ್ತು ಔಷಧ ಇವೆರಡೂ ನಿರ್ದಿಷ್ಟ ಸಮಯದ ಬಳಿಕ ಹಾಳಾಗುತ್ತದೆ ಮತ್ತು ವಿಷಕಾರಿಯಾಗುತ್ತದೆ. ಹೀಗಾಗಿ ಅರೋಗ್ಯ ಸುರಕ್ಷತೆಯ ದೃಷ್ಟಿಯಲ್ಲಿ ಇವೆರಡನ್ನು ನಿಗದಿತ ಸಮಯದೊಳಗೆ ಸೇವಿಸುವುದು ಉತ್ತಮ.

ಇವೆರಡರ ನಡುವಿನ ಗಮನಾರ್ಹ ವ್ಯತ್ಯಾಸವೆಂದರೆ ಎಕ್ಸ್‌ಪೈರಿ ಡೇಟ್ ಮುಗಿದ ಮೇಲೆ ಔಷಧಗಳಲ್ಲಿ ಬಳಸುವ ರಾಸಾಯನಿಕ ಮಿಶ್ರಣವು ವಿಷವಾಗುತ್ತದೆ. ಅದಕ್ಕಾಗಿ ಎಕ್ಸ್‌ಪೈರಿ ಡೇಟ್ ಮುಗಿದ ಮೇಲೆ ಔಷಧವನ್ನು ಸೇವಿಸಬಾರದು ಮತ್ತು ಎಸೆಯಬೇಕು. ಇಲ್ಲಿ ಸುರಕ್ಷತೆ ಸಮಸ್ಯೆಯೇ ಹೊರತು ಗುಣಮಟ್ಟ ಅಲ್ಲ.

ಇದನ್ನೂ ಓದಿ: Nestle Company: ಮಕ್ಕಳ ಜೀವದ ಜತೆ ನೆಸ್ಲೆ ಕಂಪನಿ ಚೆಲ್ಲಾಟ? ಸೆರೆಲಾಕ್‌ ಕುಡಿಸೋ ಮುನ್ನ ಎಚ್ಚರ!

ಇದಕ್ಕೆ ವ್ಯತಿರಿಕ್ತವಾಗಿ ಆಹಾರ ಉತ್ಪನ್ನಗಳು ಕ್ರಮೇಣ ಹಾಳಾಗುತ್ತವೆ. ಅಪರೂಪ ಎಂಬಂತೆ ಕೆಲವೊಮ್ಮೆ ವಿಷಕಾರಿಯಾಗುತ್ತವೆ. ಆಹಾರ ವಿಷಕಾರಿ ಆಗುವ ಮೊದಲು ರುಚಿ, ಪರಿಮಳ ಮತ್ತು ಪೌಷ್ಟಿಕಾಂಶವನ್ನು ಕಳೆದುಕೊಳ್ಳುತ್ತದೆ. ಕಾಲಾನಂತರದಲ್ಲಿ ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಇಲ್ಲಿ, ಗುಣಮಟ್ಟ ಪ್ರಮುಖ ವಿಚಾರವಾಗಿದೆಯೇ ಹೊರತು ಸುರಕ್ಷತೆ ಅಲ್ಲ. ಹೀಗಾಗಿ ಆಹಾರ ಉತ್ಪನ್ನಗಳಿಗೆ ಎಕ್ಸ್‌ಪೈರಿ ಡೇಟ್ ಈನ್ದು ಇರುವುದಿಲ್ಲ. ಬದಲಾಗಿ ಅವನ್ನು ತಯಾರಿಸಿದ, ಬಳಸಲಾಗುವ ದಿನಾಂಕಗಳನ್ನು ಮಾತ್ರ ಹೇಳಲಾಗುತ್ತದೆ.


ಆಹಾರ ಪೋಲು

ಇದರಿಂದಾಗಿ ಪ್ರಪಂಚದಾದ್ಯಂತ ಜನರು ಸೇವಿಸಲು ಯೋಗ್ಯವಾದ ಸಾಕಷ್ಟು ಉತ್ತಮವಾದ ಆಹಾರಗಳು ಕಸದ ಬುಟ್ಟಿ ಸೇರುತ್ತದೆ.

ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ಎರಡು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಅಮೆರಿಕ, ಮಲೇಷ್ಯಾ ದೇಶಗಳು ವಿಶ್ವದಲ್ಲೇ ಹೆಚ್ಚು ಆಹಾರ ಪೋಲು ಮಾಡುವ ರಾಷ್ಟ್ರಗಳಾಗಿವೆ. ಇದರಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ನಾವು ಆಹಾರ ವ್ಯರ್ಥವಾಗುವುದನ್ನು ತಡೆಗಟ್ಟುವ ಜೊತೆಗೆ ಅವುಗಳ ಗುಣಮಟ್ಟಕ್ಕೂ ಹೆಚ್ಚಿನ ಆದ್ಯತೆ ನೀಡಬೇಕಿದೆ.

ಆಹಾರ ಉತ್ಪನ್ನಗಳ ದಿನಾಂಕ

ಬೇರೆಬೇರೆ ಆಹಾರಗಳು ಬೇರೆಬೇರೆ ಅವಧಿಯವರೆಗೆ ಉತ್ತಮ ಗುಣಮಟ್ಟದಲ್ಲಿ ಇರುತ್ತದೆ. ಅಂದರೆ, ಎಲ್ಲಾ ಆಹಾರ ಪದಾರ್ಥಗಳು ಒಂದೇ ಪ್ರಮಾಣದಲ್ಲಿ, ಒಂದೇ ಸಮಯದಲ್ಲಿ ಹಾಳಾಗುವುದಿಲ್ಲ. ಆಹಾರ ಕಂಪನಿಗಳು ಶೆಲ್ಫ್ ಜೀವನವನ್ನು ಹೆಚ್ಚಿಸಲು ಸಂರಕ್ಷಕಗಳನ್ನು ಬಳಸುತ್ತವೆ. ಇದರ ಆಧಾರದ ಮೇಲೆ ಅವುಗಳ ಗುಣಮಟ್ಟದ ಬಾಳಿಕೆ ಅವಧಿಯನ್ನು ನಿರ್ಧರಿಸಲಾಗುತ್ತದೆ.

ಆಹಾರದ ಗುಣಮಟ್ಟಕ್ಕೆ ದಿನಾಂಕಗಳನ್ನು ಹೇಗೆ ನಿರ್ಧರಿಸಬೇಕು ಎಂಬುದರ ಕುರಿತು ವಿಶ್ವದ ಯಾವುದೇ ದೇಶದಲ್ಲೂ ಸ್ಪಷ್ಟ ಮಾರ್ಗಸೂಚಿಗಳಿಲ್ಲ. ಹೀಗಾಗಿ ಇದಕ್ಕೆ ಸಂಬಂಧಿಸಿ ಕಠಿಣ ಕಾನೂನುಗಳನ್ನು ಹೊಂದಿಲ್ಲ. ಇದನ್ನು ಅನುಭವದ ಆಧಾರದ ಮೇಲೆ ನಿರ್ಧರಿಸಲು ಆಹಾರ ತಯಾರಕರಿಗೆ ಅನುಮತಿ ನೀಡಲಾಗಿದೆ. ಇದಕ್ಕಾಗಿ ಆಹಾರ ಕಂಪೆನಿಗಳು ಗುಣಮಟ್ಟವನ್ನು ಪರೀಕ್ಷಿಸಲು ಕೆಲವು ಪರೀಕ್ಷೆಗಳನ್ನು ನಡೆಸುತ್ತವೆ.

ವಿದೇಶಗಳಲ್ಲಿ ಆಹಾರ ಗುಣಮಟ್ಟ ನಿರ್ಧರಿಸುವ ದಿನಾಂಕಗಳನ್ನು ಉಲ್ಲೇಖಿಸಲಾಗುತ್ತದೆ. ಇದರ ಬಗ್ಗೆ ಭಾರತೀಯರು ತಿಳಿದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ವಿದೇಶಕ್ಕೆ ಪ್ರವಾಸ ಮಾಡುವ ಯೋಜನೆ ಇದ್ದರೆ ಇದು ಹೆಚ್ಚು ಉಪಯುಕ್ತವಾಗಿರುತ್ತದೆ.


ಪ್ಯಾಕ್ಡ್ ಆನ್ / ಕ್ಲೋಸ್ಡ್ ಆನ್

ಆಹಾರ ಪದಾರ್ಥವನ್ನು ಕಂಟೇನರ್‌ನಲ್ಲಿ ಸೀಲ್ ಮಾಡಿದ ದಿನಾಂಕ ಮತ್ತು ಅದರ ಬಾಳಿಕೆ ಹಾಗೂ ಆಹಾರದ ಗುಣಮಟ್ಟವನ್ನು ನಿರ್ಣಯಿಸಲು ಇದು ಉಪಯುಕ್ತವಾಗಿದೆ.

ಸೆಲ್ ಬೈ / ಪುಲ್ ಬೈ

ಈ ಸಂದೇಶವು ತಯಾರಕರಿಂದ ಚಿಲ್ಲರೆ ವ್ಯಾಪಾರಿಗಳಿಗೆ. ನಿರ್ಧಿಷ್ಟ ದಿನಾಂಕದೊಳಗೆ ಉತ್ಪನ್ನವನ್ನು ಮಾರಾಟ ಮಾಡದಿದ್ದರೆ ಅದನ್ನು ಶೆಲ್ಫ್‌ನಿಂದ ತೆಗೆದು ಕಸದ ಬುಟ್ಟಿಗೆ ಹಾಕಬೇಕು.

ಬೆಸ್ಟ್ ಯೂಸ್ಡ್ ಬಿಫೋರ್/ ಬೆಸ್ಟ್ ಯೂಸ್ಡ್ ಬೈ

ಇದು ಆಹಾರ ಪದಾರ್ಥಗಳ ಗುಣಮಟ್ಟ ಕಡಿಮೆಯಾಗುವುದನ್ನು ಸೂಚಿಸುವ ದಿನಾಂಕವಾಗಿದೆ. ನಿರ್ದಿಷ್ಟ ದಿನಾಂಕದೊಳಗೆ ಬಳಸದೇ ಇದ್ದರೆ ಆಹಾರದ ರುಚಿ, ಪರಿಮಳ ಮತ್ತು ಪೌಷ್ಟಿಕಾಂಶದ ಮೌಲ್ಯವು ನಂತರ ಬದಲಾಗುತ್ತದೆ. ಈ ದಿನಾಂಕದ ಅನಂತರ ಕೆಲವು ದಿನಗಳವರೆಗೆ ಆಹಾರವು ಸೇವಿಸಲು ಸಾಕಷ್ಟು ಉತ್ತಮವಾಗಿರುತ್ತದೆ.

ಯೂಸ್ ಬೈ/ ಡು ನಾಟ್ ಯೂಸ್ ಆಫ್ಟರ್

ನಿಗದಿತ ಅವಧಿ ಮುಗಿದ ಬಳಿಕ ಆಹಾರದ ಗುಣಮಟ್ಟವು ಹದಗೆಟ್ಟಿರುತ್ತದೆ. ಅದನ್ನು ಕಸದ ಬುಟ್ಟಿಗೆ ಹಾಕಲೇ ಬೇಕು ಎಂಬುದನ್ನು ಇದು ಹೇಳುತ್ತದೆ.

ಇವೆಲ್ಲವೂ ಮುಚ್ಚಿರುವ ಆಹಾರಗಳಿಗೆ ಮಾತ್ರ ಅನ್ವಯಾವಾಗುತ್ತದೆ. ಒಮ್ಮೆ ಪ್ಯಾಕೆಟ್ ತೆರೆದರೆ ಅಥವಾ ಗಾಳಿಗೆ ಒಡ್ಡಿಕೊಂಡರೆ ಅವುಗಳ ಗುಣಮಟ್ಟ ಕ್ಷೀಣಿಸಲು ಪ್ರಾರಂಭವಾಗುತ್ತದೆ.

ಖರೀದಿ ಮಾಡುವಾಗ ಎಚ್ಚರ

ಪ್ಯಾಕೆಟ್ ನಲ್ಲಿರುವ ದಿನಾಂಕ ಕೇವಲ ಗುಣಮಟ್ಟಕ್ಕೆ ಸಂಬಂಧಿಸಿರುತ್ತದೆ. ಆದರೆ ಆಹಾರದಲ್ಲಿ ನಾವು ಸುರಕ್ಷತೆ ಬಗ್ಗೆಯೂ ಗಮನ ಹರಿಸಬೇಕು.

ಪ್ಯಾಕೆಟ್ ಆಹಾರ ಖರೀದಿ ಪ್ಯಾಕೆಟ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಯಾಕೆಂದರೆ ಆಹಾರ ಪ್ಯಾಕೇಜಿಂಗ್, ಸ್ಥಳಾಂತರದ ವೇಳೆ ಅದು ಹಾನಿಗೊಳಾಗಿರಬಹುದು. ಇಂತಹ ಪ್ಯಾಕೆಟ್‌ಗಳು ಇಲಿ, ನೊಣಗಳಿಂದ ಸೋಂಕಿಗೆ ಒಳಗಾಗಿ, ಗಾಳಿಯ ತೇವಾಂಶದಿಂದ ವಿಷಕಾರಿ ಆಗಿರಬಹುದು.

ಆಹಾರ ಡಬ್ಬಿಯಲ್ಲಿ ಬಿರುಕು ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಅಲ್ಲದೇ ಕೆಲವೊಂದು ಡಬ್ಬಿಗಳು ಉಬ್ಬಿದ್ದರೆ ಆಹಾರದಲ್ಲಿ ತೀವ್ರವಾದ ಬ್ಯಾಕ್ಟೀರಿಯಾ ಇದ್ದು, ಆಹಾರ ವಿಷಕಾರಿಯಾಗುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು.


ಮನೆಯಲ್ಲಿ ಸಿದ್ಧಪಡಿಸಿದ ಆಹಾರ

ಕೆಟ್ಟ ವಾಸನೆ, ಪ್ಯಾಕೆಟ್, ಕ್ಯಾನ್‌ನಲ್ಲಿ ಕಪ್ಪು ಕಲೆಗಳು- ಇದು ಇಲಿಗಳಿಂದ ಆಹಾರ ಹಾಳಾಗಿದೆ ಎಂಬುದನ್ನು ತಿಳಿಸುತ್ತದೆ.

ಸಾಮಾನ್ಯವಾಗಿ ಆಹಾರದ ಬಣ್ಣ ಬದಲಾಗಿದ್ದರೆ, ಅವುಗಳ ಮೇಲೆ ಹಸಿರು ಅಥವಾ ಕಪ್ಪು ತೇಪೆಗಳು ಕಂಡುಬಂದರೆ ಇದು ಶಿಲೀಂಧ್ರಗಳ ಬೆಳವಣಿಗೆಯಾಗಿದೆ. ಇದು ಹೆಚ್ಚಾಗಿ ಬೇಯಿಸಿದ ಪದಾರ್ಥಗಳಲ್ಲಿ ಕಾಣಿಸುತ್ತದೆ.

ಆಹಾರವು ತುಂಬಾ ಬಲವಾದ ಅಸಾಮಾನ್ಯ ವಾಸನೆಯನ್ನು ಹೊಂದಿದ್ದರೆ ಆಹಾರವು ಹುಳಿಯಾಗಿರುತ್ತದೆ. ಸಾಮಾನ್ಯವಾಗಿ ದೋಸೆ ಅಥವಾ ಇಡ್ಲಿ ಹಿಟ್ಟು ಮತ್ತು ಮೊಸರಿನಲ್ಲಿ ಹೀಗಾಗುತ್ತದೆ.

ಆಹಾರ ಪದಾರ್ಥವು ಲೋಳೆ ಅಥವಾ ಜಿಗುಟಾಗಿದ್ದರೆ ಬ್ಯಾಕ್ಟೀರಿಯಾ ಅಥವಾ ವೈರಲ್ ತಗಲಿದೆ ಎಂಬುದರ ಸೂಚಕವಾಗಿದೆ.

ಆಹಾರ ಸಾಮಾನ್ಯಕ್ಕಿಂತ ಹೆಚ್ಚು ಕಹಿ ಅಥವಾ ಹೆಚ್ಚು ಹುಳಿಯಾಗಿದ್ದಾರೆ ಬ್ಯಾಕ್ಟೀರಿಯಾದ ಚಟುವಟಿಕೆ ನಡೆಯುತ್ತಿದೆ ಎಂದು ತಿಳಿಯಬೇಕು.

ಯಾವತ್ತೂ ಆಹಾರದ ಮುಚ್ಚಳ ತೆರೆಯುವಾಗ ಸೂಕ್ಷ್ಮವಾಗಿ ಗಮನಿಸಿ. ಒಂದು ವೇಳೆ ಬಳಸಲು ಯೋಗ್ಯವಾಗಿಲ್ಲ ಎಂದು ಅನಿಸಿದರೆ ಕೂಡಲೇ ಅದನ್ನು ಕಸದ ಬುಟ್ಟಿಗೆ ಹಾಕಿ.

ಗುಣಮಟ್ಟ ಕಾಪಾಡಿ

ಮಾರುಕಟ್ಟೆಯಿಂದ ಖರೀದಿ ಮಾಡಿ ತಂದ ವಸ್ತುಗಳ ಗುಣಮಟ್ಟ ಕಾಪಾಡುವುದು ನಮ್ಮ ಜವಾಬ್ದಾರಿ. ಹಣ್ಣು ಅಥವಾ ತರಕಾರಿಗಳನ್ನು ತೊಳೆದು ರೆಫ್ರಿಜರೇಟರ್ ನಲ್ಲಿ ಇಡಿ. ಆಹಾರ ಪ್ಯಾಕೆಟ್‌ಗಳ ಮೇಲೆ ಅವುಗಳನ್ನು ಹೇಗೆ ಸಂಗ್ರಹಿಸಿಡಬೇಕು ಎಂದು ಸೂಚಿಸಲಾಗಿರುತ್ತದೆ. ಅದನ್ನು ತಿಳಿದುಕೊಳ್ಳಿ. ಉದಾ- ಬೀಜಗಳನ್ನು ತೆರೆದು ಇಡಬಾರದು ಏಕೆಂದರೆ ಅವುಗಳಲ್ಲಿನ ತೈಲಗಳು ಕಂದುಬಣ್ಣಕ್ಕೆ ತಿರುಗುವುದರಿಂದ ಅವು ಮೃದು ಮತ್ತು ಕಹಿಯಾಗಬಹುದು.
ಕೆಲವು ಉತ್ಪನ್ನಗಳನ್ನು ತಕ್ಷಣವೇ ಬಳಸಲಾಗುವುದಿಲ್ಲ. ಆದರೆ ಹೆಚ್ಚು ಕಾಲ ಉಳಿಯಬೇಕು. ಆಗ ಅವುಗಳನ್ನು ಫ್ರೀಜರ್ ನಲ್ಲಿ ಇರಿಸಿ.

ಆಹಾರದ ಪ್ಯಾಕೆಟ್ ಅನ್ನು ತೆರೆದ ಬಳಿಕ ತಕ್ಷಣವೇ ಖಾಲಿ ಮಾಡಿ. ಪದೇಪದೇ ಗಾಳಿಗೆ ಒಡ್ಡುವುದರಿಂದ ಅವುಗಳ ಸತ್ವ ನಾಶವಾಗುತ್ತದೆ.

Continue Reading

ರಾಜಕೀಯ

Party Symbols: ವಿವಿಧ ಪಕ್ಷಗಳ ಚುನಾವಣಾ ಚಿಹ್ನೆ ಹಿಂದೆ ಹೇಗಿತ್ತು, ಈಗ ಏನಾಗಿದೆ? ಸಂಗ್ರಹಯೋಗ್ಯ ಮಾಹಿತಿ

Party symbols: ಭಾರತದಲ್ಲಿ ಚುನಾವಣೆ ಆರಂಭದಿಂದಲೂ ವಿವಿಧ ಪಕ್ಷಗಳಿಗೆ ಚುನಾವಣಾ ಚಿಹ್ನೆಯನ್ನು ನೀಡಲಾಗುತ್ತಿದೆ. ಆದರೆ ಈಗ ಇರುವ ಚುನಾವಣೆ ಚಿಹ್ನೆಗಳು ಮೊದಲು ಇರಲಿಲ್ಲ. ಪಕ್ಷ ಹುಟ್ಟಿಕೊಂಡ ಕೆಲವು ವರ್ಷಗಳ ಬಳಿಕ ಬಳಕೆಗೆ ಬಂದವು. ಕೆಲವು ಪಕ್ಷಗಳು ತನ್ನ ಚಿಹ್ನೆಯನ್ನು ಕಳೆದುಕೊಂಡು ಹೊಸ ಗುರುತನ್ನು ಪಡೆದಿದೆ. ಈ ಚಿಹ್ನೆಯ ಮಹತ್ವ ಎಷ್ಟು ಗೊತ್ತೇ? ಈ ಕುರಿತ ಸಂಗ್ರಹಯೋಗ್ಯ ಮಾಹಿತಿ ಇಲ್ಲಿದೆ.

VISTARANEWS.COM


on

By

Party symbols
Koo

ಚುನಾವಣೆ (election) ವೇಳೆ ಎಲ್ಲರ ಗಮನ ಸೆಳೆಯುವುದು ಚುನಾವಣಾ ಚಿಹ್ನೆಗಳು. ಈ ಬಾರಿಯೂ ಲೋಕಸಭಾ ಚುನಾವಣೆ- 2024ರಲ್ಲಿ (loksabha election-2024) ಕಣಕ್ಕೆ ಇಳಿದಿರುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗವು ನೀಡಿದ್ದ ಚುನಾವಣಾ ಚಿಹ್ನೆಗಳು ಎಲ್ಲರ ಗಮನ ಸೆಳೆದಿತ್ತು. ಚುನಾವಣಾ ಚಿಹ್ನೆಯ (Party symbols) ಬಳಕೆ ಹೊಸದೇನಲ್ಲ 1951ರ ಮೊದಲ ಚುನಾವಣೆಯಿಂದಲೇ ಅಭ್ಯರ್ಥಿಯನ್ನು (candidate) ಗುರುತಿಸಲು ಚುನಾವಣಾ ಚಿಹ್ನೆಗಳನ್ನು ಬಳಸಲಾಗುತ್ತಿದೆ.

ಚುನಾವಣಾ ಪ್ರಚಾರದ ವೇಳೆ ಜನರ ಗಮನಸೆಳೆಯುವ ಚುನಾವಣಾ ಚಿಹ್ನೆಗಳು ಒಂದೇ ಹೆಸರಿನ ಅಭ್ಯರ್ಥಿಗಳು ಕಣದಲ್ಲಿ ಇದ್ದರೆ ತಮ್ಮ ನೆಚ್ಚಿನ ಅಭ್ಯರ್ಥಿಯನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ. ಚಿತ್ರಗಳು ಸಾಮಾನ್ಯವಾಗಿ ಎಲ್ಲರಿಗೂ ನೆನಪಿನಲ್ಲಿ ಉಳಿಯುತ್ತದೆ. ದೇಶದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾದಾಗ ಸಾಕ್ಷರರ ಪ್ರಮಾಣ ಕಡಿಮೆ ಇತ್ತು. ಹೀಗಾಗಿಯೇ ಚುನಾವಣಾ ಆಯೋಗ ಚಿಹ್ನೆಗಳನ್ನು ಬಳಸಲು ಪ್ರಾರಂಭಿಸಿತ್ತು.

ಅಕ್ಷರಗಳಿಗಿಂತ ಹೆಚ್ಚು ವೇಗವಾಗಿ ಮನ ಮುಟ್ಟುವ ಚುನಾವಣಾ ಚಿಹ್ನೆಗಳು ಮತ್ತು ಅವುಗಳ ಸೃಜನಾತ್ಮಕ ಬಳಕೆಯ ಕುರಿತು ಭಾರತದಲ್ಲಿ ಹಿನ್ನೆಲೆ ಹೇಗಿತ್ತು ಗೊತ್ತೇ ?

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌-ಬಿಜೆಪಿ ಮಧ್ಯೆ ʼಚೆಂಬುʼ ವಾರ್; ಗ್ಯಾರಂಟಿಗಳಿಂದ ಜನರಿಗೆ ಕಾಂಗ್ರೆಸ್‌ ಟೋಪಿ ಎಂದ ವಿಜಯೇಂದ್ರ

ಯಾವಾಗ ಆರಂಭ?

1951ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಸೇರಿ 53 ಪಕ್ಷಗಳ ಅಭ್ಯರ್ಥಿಗಳು ಸುಮಾರು 4,500 ಸ್ಥಾನಗಳಿಗೆ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ ಚುನಾವಣಾ ಆಯೋಗವು ಅಭ್ಯರ್ಥಿಗಳು ಸ್ಪರ್ಧಿಸಬಹುದಾದ ಪಕ್ಷಗಳಿಗೆ ಚಿಹ್ನೆಗಳನ್ನು ನಿಗದಿಪಡಿಸಿತ್ತು. ಈ ಪ್ರಕ್ರಿಯೆಯು ಚುನಾವಣಾ ಚಿಹ್ನೆಗಳ ಮೀಸಲಾತಿ ಮತ್ತು ಹಂಚಿಕೆ ಆದೇಶ 1968ರಲ್ಲಿ ಹೊರಬಂದು ಇದು ಹೆಚ್ಚು ಸುವ್ಯವಸ್ಥಿತವಾಯಿತು. ಇದರ ಪ್ರಕಾರ ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಪಕ್ಷಗಳಿಗೆ ಮತ್ತು ಸ್ವತಂತ್ರ ಅಭ್ಯರ್ಥಿಗಳಿಗೆ ಚಿಹ್ನೆಗಳ ಹಂಚಿಕೆಯನ್ನು ಮಾಡಲಾಗುತ್ತದೆ. ಇದು ಎರಡು ಅಥವಾ ಹೆಚ್ಚಿನ ಪಕ್ಷಗಳ ವಿಲೀನದ ಸಂದರ್ಭದಲ್ಲಿ ಅಥವಾ ಪಕ್ಷದಲ್ಲಿ ವಿಭಜನೆಯ ಸಂದರ್ಭದಲ್ಲಿ ಅನ್ವಯಿಸಬಹುದಾದ ನಿಯಮಗಳನ್ನೂ ಹೊಂದಿದೆ.

ವಿಲೀನ, ವಿಭಜನೆಯಾದ ಸಂದರ್ಭದಲ್ಲಿ ಕೆಲವು ಚಿಹ್ನೆಗಳು ಹೊಸದಾಗಿ ಬರುತ್ತದೆ, ಇನ್ನು ಕೆಲವು ಅಳಿಸಿ ಹೋಗುತ್ತದೆ. ಪ್ರಸ್ತುತ ಇರುವ ಚಿಹ್ನೆಗಳು ಹುಟ್ಟಿಕೊಳ್ಳುವುದರ ಹಿಂದೆ ಬಹು ದೊಡ್ಡ ಕಥೆಯೇ ಇದೆ.


ಕಾಂಗ್ರೆಸ್ ನ ಕೈ

ಕಾಂಗ್ರೆಸ್ ಪ್ರಾರಂಭದಲ್ಲಿ ಚುನಾವಣಾ ಚಿಹ್ನೆಯಾಗಿ ನೊಗ ಹಿಡಿದ ಎತ್ತುಗಳನ್ನು ಹೊಂದಿತ್ತು. ಜವಾಹರಲಾಲ್ ನೆಹರು, 1969ರಲ್ಲಿ ಇಂದಿರಾ ಗಾಂಧಿ ಅವರೂ ಜೋಡಿ ಎತ್ತಿನ ಚಿಹ್ನೆಯನ್ನು ಹೊಂದಿದ್ದರು. 1969ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಸ್. ನಿಜಲಿಂಗಪ್ಪ ಅವರು ಪಕ್ಷದಿಂದ ಹೊರಹೋದಾಗ ಕಾಂಗ್ರೆಸ್ ವಿಭಜನೆಯಾಯಿತು. ಈ ಸಂದರ್ಭದಲ್ಲಿ ಚುನಾವಣಾ ಚಿನ್ಹೆಯಾಗಿದ್ದ ಜೋಡಿ ಎತ್ತುಗಳ ಬಗ್ಗೆ ವಿವಾದ ಉಂಟಾಯಿತು. ಇಂದಿರಾ ಗಾಂಧಿಯವರ ಬಣಕ್ಕೆ ಹಸು, ಕರು ಚಿಹ್ನೆಯನ್ನು ನೀಡಲಾಯಿತು. ಇದಕ್ಕೂ ಆಕ್ಷೇಪಣೆ ವ್ಯಕ್ತವಾಗಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಲಾಗಿತ್ತು.

ತುರ್ತುಪರಿಸ್ಥಿತಿಯ ಬಳಿಕ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷದ ಕೈಯಲ್ಲಿ ಸೋಲು ಅನುಭವಿಸಿದ ಇಂದಿರಾ ಗಾಂಧಿ ಅವರು ಮರಳಿ ಅಧಿಕಾರಕ್ಕೆ ಬರಲು ಪ್ರಯತ್ನಿಸಿದರು. ತಮ್ಮ ಅಧೀನದಲ್ಲಿರುವ ಪಕ್ಷ ನಿಜವಾದ ಕಾಂಗ್ರೆಸ್ ಎಂದು ಹೇಳಿ ಕಾಂಗ್ರೆಸ್ (ಇಂದಿರಾ) ರಚನೆಯನ್ನು ಘೋಷಿಸಿದರು. 1979ರವರೆಗೆ ಇದ್ದ ಹಸುಕರು ಚಿಹ್ನೆಯನ್ನು ಫ್ರೀಜ್ ಮಾಡಲಾಯಿತು. ಚುನಾವಣಾ ಆಯೋಗವು ಹಲವಾರು ಚಿಹ್ನೆಗಳ ನಡುವೆ ಆಯ್ಕೆಯನ್ನು ನೀಡಿತು. ಅದರಲ್ಲಿ ಕಲ್ಲೇಕುಳಂಗರದ ಕೈಪತಿ ದೇವಸ್ಥಾನ ಅಥವಾ ಕೈ ದೇವಸ್ಥಾನದ ಕಥೆಯು ಇಂದಿರಾ ಗಾಂಧಿಯವರಿಗೆ ‘ಕೈ’ ಚಿಹ್ನೆಯನ್ನು ಪಡೆಯಲು ಪ್ರೇರೇಪಿಸಿತು ಎನ್ನಲಾಗಿದೆ.

ಭಾರತೀಯ ಜನತಾ ಪಕ್ಷ

1980ರಲ್ಲಿ ಬಿಜೆಪಿ ಜನಸಂಘದಿಂದ ಹುಟ್ಟಿಕೊಂಡಿತ್ತು. 1977ರಲ್ಲಿ ಜನ ಸಂಘವು ಜನತಾ ಪಕ್ಷದೊಂದಿಗೆ ವಿಲೀನಗೊಂಡು ಕೇಂದ್ರ ಸರ್ಕಾರವನ್ನು ರಚಿಸಿತ್ತು. ಭಾರತದ ಮೊದಲ ಸಾರ್ವತ್ರಿಕ ಚುನಾವಣೆ ವೇಳೆ ಭಾರತೀಯ ಜನಸಂಘದ ಚುನಾವಣಾ ಚಿಹ್ನೆ 1977ರ ತನಕ ಎಣ್ಣೆ ದೀಪವಾಗಿತ್ತು. ಬಳಿಕ ಅದು ನೊಗ ಹಿಡಿದ ರೈತನನ್ನು ತನ್ನ ಚಿಹ್ನೆಯಾಗಿ ಬಳಸಿತ್ತು. 1980ರಲ್ಲಿ ಜನತಾ ಪಕ್ಷ ದಿಂದ ಹೊರಬಂದ ಜನಸಂಘ ನಾಯಕರು ಭಾರತೀಯ ಜನತಾ ಪಾರ್ಟಿ ಎಂಬ ಹೊಸ ಪಕ್ಷ ಕಟ್ಟಿ ಅದಕ್ಕೆ ಕಮಲದ ಹೂವು ಚುನಾವಣಾ ಚಿಹ್ನೆಯಾಗಿ ಪಡೆದರು.

ಇದಕ್ಕೆ ಸ್ಫೂರ್ತಿಯಾಗಿದ್ದು 1980ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಮುಂಬಯಿಯಲ್ಲಿ ರ್ಯಾಲಿ ನಡೆಸುತ್ತಿದ್ದಾಗ ಕಾಂಗ್ರೆಸ್ ವಿರುದ್ಧ ಮಾತನಾಡುತ್ತ “ಅಂಧೇರಾ ಚಟೇಗಾ, ಸೂರಜ್ ನಿಕ್ಲೇಗಾ, ಕಮಲ ಖಿಲೇಗಾ” ಎಂದು ಹೇಳಿದ್ದರು. 1980ರ ಏಪ್ರಿಲ್ 6ರಂದು ಭಾರತೀಯ ಜನತಾ ಪಕ್ಷದ ರಚನೆಯ ವೇಳೆ ವಾಜಪೇಯಿಯವರ ಕಮಲದ ಚಿಹ್ನೆಯ ಆಯ್ಕೆಯು ಹೊಸ ಪಕ್ಷದ ರಾಷ್ಟ್ರೀಯತಾವಾದಿ ಸಿದ್ಧಾಂತಗಳಿಗೆ ಹೊಂದಿಕೆಯಾಯಿತು. ಹೀಗಾಗಿ ಕಮಲ ಬಿಜೆಪಿಯ ಚಿಹ್ನೆಯಾಯಿತು.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ

ಪ್ರಾರಂಭದಲ್ಲಿ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)ಯು ಕತ್ತಿ (ಕುಡುಗೋಲು) ಸುತ್ತಿಗೆ ನಕ್ಷತ್ರಗಳನ್ನು ಚುನಾವಣಾ ಚಿಹ್ನೆಯಾಗಿ ಬಳಸಿಕೊಂಡಿತ್ತು. 1964ರ ಬಳಿಕ ಐದು-ಬಿಂದುಗಳ ನಕ್ಷತ್ರವನ್ನು ಸೇರಿಸಲಾಯಿತು. ಬಳಿಕ ವಿಭಜನೆಯಾಗಿ ಸಿಪಿಐ (ಎಂ), ಸಿಪಿಐ (ಎಡ) ಪಕ್ಷಗಳು ಹುಟ್ಟಿಕೊಂಡವು. ಆಂಧ್ರಪ್ರದೇಶ, ಕೇರಳ ಮತ್ತು ಪಶ್ಚಿಮ ಬಂಗಾಳದ ಲ್ಲಿ ಮಾತ್ರ ಸ್ಥಾನಗಳನ್ನು ಪಡೆದಿರುವ ಸಿಪಿಐ ಪಕ್ಷಕ್ಕೆ 1964ರಲ್ಲಿ ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡಲಾಯಿತು. ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸಿಪಿಐ (ಮಾರ್ಕ್ಸ್‌ವಾದಿ)ಯ ಚುನಾವಣಾ ಚಿಹ್ನೆ ಕತ್ತಿ ಮತ್ತು ಜೋಳದ ತೆನೆಯಾಗಿತ್ತು.


ಬಹುಜನ ಸಮಾಜ ಪಕ್ಷ

1984ರಲ್ಲಿ ಹುಟ್ಟಿಕೊಂಡ ಬಹುಜನ ಸಮಾಜ ಪಕ್ಷ (BSP) 1988ರ ಅಲಹಾಬಾದ್ ಉಪ ಚುನಾವಣೆಯಲ್ಲಿ ತನ್ನ ಛಾಪು ಮೂಡಿಸಿತ್ತು. ಬಿಎಸ್‌ಪಿಯ ಸಂಸ್ಥಾಪಕ ಕಾನ್ಶಿ ರಾಮ್ ಅವರು ಪ್ರಚಾರದ ವೇಳೆ ಆನೆಯ ಮೇಲೆ ನೀಲಿ ಧ್ವಜದ ಚಿಹ್ನೆಯನ್ನು ಬಳಸಿಕೊಂಡರು. ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಪ್ರಾಮುಖ್ಯತೆಯನ್ನು ಹೊಂದಿರುವ ‘ಆನೆ’ ಚಿಹ್ನೆಯು ಕಾನ್ಶಿರಾಮ್‌ಗೆ ಹೆಚ್ಚಿನ ಬಲ ತುಂಬಿತ್ತು. ಬಿಎಸ್ಪಿಯ ‘ಆನೆ’ ಭಾರತದಲ್ಲಿ ಕೆಲವು ಪ್ರಾಣಿ ಆಧಾರಿತ ಚುನಾವಣಾ ಚಿಹ್ನೆಗಳಲ್ಲಿ ಒಂದಾಗಿದೆ. ಯಾಕೆಂದರೆ ಚುನಾವಣಾ ಆಯೋಗವು ಈಗ ಹೊಸದಾಗಿ ಪ್ರಾಣಿಗಳ ಚಿಹ್ನೆಗಳನ್ನು ನೀಡುವುದನ್ನು ನಿಲ್ಲಿಸಿದೆ.

ಆಮ್ ಆದ್ಮಿ ಪಕ್ಷ

2011ರಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ಹುಟ್ಟಿಕೊಂಡ ಸಂಘಟನೆ ಇದು. ಅರವಿಂದ್ ಕೇಜ್ರಿವಾಲ್ ಅವರು 2012ರಲ್ಲಿ ಆಮ್ ಆದ್ಮಿ ಪಕ್ಷವನ್ನು ರಚಿಸಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದರು. ‘ಪೊರಕೆ’ಯ ಇದರ ಚುನಾವಣಾ ಚಿಹ್ನೆಯಾಗಿದೆ. ಚುನಾವಣಾ ಆಯೋಗಕ್ಕೆ ಪಕ್ಷವು ಸಲ್ಲಿಸಿದ ಮೂರು ಚಿಹ್ನೆಗಳಲ್ಲಿ ‘ಮೇಣದಬತ್ತಿ’ ಮತ್ತು ‘ಟ್ಯಾಪ್’ ಕೂಡ ಇತ್ತು.

ಪೊರಕೆಯ ಚಿಹ್ನೆ ಕಾರ್ಮಿಕರ ಘನತೆಗಾಗಿ ಮಾತ್ರವಲ್ಲ, ನಮ್ಮ ಸರ್ಕಾರ ಮತ್ತು ನಮ್ಮ ಶಾಸಕಾಂಗವನ್ನು ವ್ಯಾಪಿಸಿರುವ ಕೊಳೆಯನ್ನು ಸ್ವಚ್ಛಗೊಳಿಸುವ ಪಕ್ಷದ ಆಶಯವನ್ನು ಪ್ರತಿನಿಧಿಸುತ್ತದೆ ಎನ್ನುತ್ತಾರೆ ಪಕ್ಷದ ಮುಖಂಡರು.

ನ್ಯಾಷನಲ್ ಪೀಪಲ್ಸ್ ಪಾರ್ಟಿ

ಭಾರತದಲ್ಲಿನ ಆರು ರಾಷ್ಟ್ರೀಯ ಪಕ್ಷಗಳಲ್ಲಿ ಒಂದಾದ ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ಅನ್ನು 2013ರಲ್ಲಿ ಸ್ಥಾಪಿಸಲಾಯಿತು. ಅದರ ಸಂಸ್ಥಾಪಕ ಮಾಜಿ ಮೇಘಾಲಯ ಮುಖ್ಯಮಂತ್ರಿ ಪಿ.ಎ. ಸಂಗ್ಮಾ ಅವರನ್ನು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ಪುಸ್ತಕವನ್ನು ಪಕ್ಷದ ಚಿಹ್ನೆಯಾಗಿ ಮಾಡಿಕೊಂಡ ಅವರು ಸಾಕ್ಷರತೆ ಮತ್ತು ಶಿಕ್ಷಣವು ದುರ್ಬಲ ವರ್ಗದವರನ್ನು ಸಬಲೀಕರಣಗೊಳಿಸುತ್ತದೆ ಎಂದು ನಂಬುವುದಾಗಿ ಹೇಳಿ ಶಿಕ್ಷಣಕ್ಕೆ ಒತ್ತು ನೀಡುವ ಭರವಸೆ ನೀಡಿದ್ದರು.

ವಿವಿಧ ಪಕ್ಷಗಳಿಗೆ ಒಂದೇ ಚಿಹ್ನೆಗಳು

ಇನ್ನು ರಾಜ್ಯ ಮಟ್ಟದಲ್ಲಿ ಒಂದೇ ಚುನಾವಣಾ ಚಿಹ್ನೆಯನ್ನು ಪಡೆದು ಬೇರೆಬೇರೆ ಪಕ್ಷಗಳಿಂದಲೂ ಅಭ್ಯರ್ಥಿಗಳು ಕಣಕ್ಕೆ ಇಳಿದಿರುವ ಇತಿಹಾಸವೂ ಇದೆ. ಒಂದೇ ಕ್ಷೇತ್ರದಿಂದ ಪರಸ್ಪರರ ವಿರುದ್ಧ ಸ್ಪರ್ಧಿಸುವುದಿಲ್ಲವೋ ಅಲ್ಲಿಯವರೆಗೆ ಅದು ಸಾಮಾನ್ಯವಾಗಿ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ. ಆದರೆ ಪಕ್ಷಗಳು ತನ್ನ ಕಾಯ್ದಿರಿಸಿದ ಚಿಹ್ನೆಯಡಿ ಬೇರೆಯವರಿಗೆ ಸ್ಪರ್ಧಿಸಲು ಅನುಮತಿಸುವುದಿಲ್ಲ ಎಂಬ ಷರತ್ತು ವಿಧಿಸುತ್ತದೆ.

ಬೈಸಿಕಲ್ ಗಾಗಿ ಸ್ಪರ್ಧೆ

ಭಾರತೀಯ ರಾಜಕೀಯ ಇತಿಹಾಸದಲ್ಲಿ ಬೈಸಿಕಲ್ ತೀವ್ರ ಪೈಪೋಟಿಯ ಸಂಕೇತವಾಗಿದೆ. ಎನ್.ಟಿ. ರಾಮರಾವ್ ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷದ ನಡುವೆ ಬೈಸಿಕಲ್ ಗಾಗಿ ಪೈಪೋಟಿ ಏರ್ಪಟ್ಟಿತ್ತು.

1982ರಲ್ಲಿ ಸ್ಥಾಪನೆಯಾದ ಟಿಡಿಪಿಯಿಂದ 1995ರಲ್ಲಿ ಎನ್. ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದಲ್ಲಿ ಅಧಿಕಾರ ವಹಿಸಿಕೊಂಡಾಗ ಟಿಡಿಪಿಯನ್ನು ಅದರ ‘ಬೈಸಿಕಲ್ ಚಿಹ್ನೆ’ಯೊಂದಿಗೆ ಪಡೆದರು.
ಸುಮಾರು ಒಂದು ದಶಕದ ಅನಂತರ ಸಮಾಜವಾದಿ ಪಕ್ಷದ ರಚನೆಯಾಗಿ ಮುಲಾಯಂ ಸಿಂಗ್ ಯಾದವ್ ಅವರ ಮಗ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಮುಲಾಯಂ ಅವರ ಸಹೋದರ ಶಿವಪಾಲ್ ಯಾದವ್ ನಡುವೆ ಕಲಹ ಉಂಟಾಗಿ ಪಕ್ಷ ಮತ್ತು ಅದರ ಚಿಹ್ನೆಯ ಮೇಲೆ ಅಧಿಕಾರವನ್ನು 2017ರಲ್ಲಿ ಅಖಿಲೇಶ್‌ಗೆ ನೀಡಲಾಯಿತು.


ಬಿಲ್ಲು ಮತ್ತು ಬಾಣ

ಪ್ರಸ್ತುತ ಸ್ಪರ್ಧೆಯಲ್ಲಿರುವ ಮತ್ತೊಂದು ಚಿಹ್ನೆ ಮಹಾರಾಷ್ಟ್ರದಲ್ಲಿ ‘ಬಿಲ್ಲು ಮತ್ತು ಬಾಣ’. ಏಕನಾಥ್ ಶಿಂಧೆ ನೇತೃತ್ವದ “ನೈಜ” ಶಿವಸೇನೆಗೆ ಹಂಚಲ್ಪಟ್ಟ ಈ ಚಿಹ್ನೆಯನ್ನು ಮೊದಲು 1989ರಲ್ಲಿ ಬಾಳ್ ಠಾಕ್ರೆ ಅವರು ಬಳಸಿದ್ದರು.

1972ರಲ್ಲಿ ರಚಿಸಲಾದ ಜಾರ್ಖಂಡ್ ಮುಕ್ತಿ ಮೋರ್ಚಾ ಜಾರ್ಖಂಡ್‌ನಲ್ಲಿ ಅದೇ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಬಳಸುತ್ತದೆ. ಬಿಹಾರದ ಜನತಾ ದಳ (ಯುನೈಟೆಡ್) ಪಕ್ಷದ ಚಿಹ್ನೆಯು ‘ಬಾಣ’ವಾಗಿದೆ. 2019 ರಲ್ಲಿ ಚುನಾವಣಾ ಆಯೋಗವು ಮಹಾರಾಷ್ಟ್ರ ಅಥವಾ ಜಾರ್ಖಂಡ್‌ನಲ್ಲಿ ಈ ಚಿಹ್ನೆಯನ್ನು ಬಳಸಲು ಅನುಮತಿಸುವುದಿಲ್ಲ ಎಂದು ಘೋಷಿಸಿತು. .

Continue Reading

Lok Sabha Election 2024

ವಿಸ್ತಾರ explainer: VVPAT Verification: ಇವಿಎಂನಲ್ಲಿ ನಿಮ್ಮ ಮತ ದಾಖಲಾಗುವುದು ಹೇಗೆ? ವಿವಿಪ್ಯಾಟ್‌ ಕೆಲಸ ಏನು? ಇಲ್ಲಿದೆ ಸಮಗ್ರ ವಿವರ

VVPAT Verification: ಕೋರ್ಟ್‌ನಲ್ಲಿ ನಡೆಸದ ವಾದವಿವಾದಗಳ ಸಮಯದಲ್ಲಿ, ಬ್ಯಾಲೆಟ್ ವೋಟಿಂಗ್ ಸಿಸ್ಟಮ್‌ಗೆ ಹಿಂತಿರುಗಲು ಸಲಹೆಗಳು ಬಂದಿವೆ. ಅರ್ಜಿದಾರರು ಯುರೋಪಿಯನ್ ರಾಷ್ಟ್ರಗಳ ಉದಾಹರಣೆ ತೋರಿಸಿದ್ದಾರೆ. ಆದರೆ, “ಪಶ್ಚಿಮ ಬಂಗಾಳದ ಜನಸಂಖ್ಯೆಯೇ ಜರ್ಮನಿಗಿಂತ ಹೆಚ್ಚಿರುವುದನ್ನು ಗಮನಿಸಿ. ಇಂತಹ ಹೋಲಿಕೆಗಳನ್ನು ಮಾಡಬೇಡಿ” ಎಂದು ನ್ಯಾಯಾಲಯವು ಅರ್ಜಿದಾರರಿಗೆ ಹೇಳಿದೆ.

VISTARANEWS.COM


on

evm vvpat verification lok sbha election 2024
Koo

ವಿದ್ಯುನ್ಮಾನ ಮತಯಂತ್ರಗಳ (EVM- ಇವಿಎಂ) ಕುರಿತು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಕಾನೂನು ಹೋರಾಟದ ನಡುವೆಯೇ ಲೋಕಸಭೆ ಚುನಾವಣೆ (Lok Sabha Election 2024) ಮೊದಲ ಹಂತದ ಮತದಾನ (1st phase Voting) ನಡೆಯುತ್ತಿದೆ. ಇವಿಎಂಗಳಲ್ಲಿ ಚಲಾವಣೆಯಾದ 100% ಮತಗಳನ್ನೂ ವಿವಿಪ್ಯಾಟ್ (VVPAT) ವ್ಯವಸ್ಥೆಯ ಮೂಲಕ ಪರಿಶೀಲಿಸುವ ವ್ಯವಸ್ಥೆ ಜಾರಿ ಮಾಡಬೇಕು (VVPAT Verification) ಎಂದು ಅರ್ಜಿದಾರರು ಕೋರಿದ್ದಾರೆ. ಈ ಸಂದರ್ಭದಲ್ಲಿ, ಇವಿಎಂ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ, ವಿವಿಪ್ಯಾಟ್‌ ಮೂಲಕ ಅದರ ಪರಿಶೀಲನೆ ಹೇಗೆ, ಎಂಬುದನ್ನು ವಿವರವಾಗಿ ತಿಳಿಯೋಣ.

ಕೋರ್ಟ್‌ನಲ್ಲಿ ನಡೆಸದ ವಾದವಿವಾದಗಳ ಸಮಯದಲ್ಲಿ, ಬ್ಯಾಲೆಟ್ ವೋಟಿಂಗ್ ಸಿಸ್ಟಮ್‌ಗೆ ಹಿಂತಿರುಗಲು ಸಲಹೆಗಳು ಬಂದಿವೆ. ಅರ್ಜಿದಾರರು ಯುರೋಪಿಯನ್ ರಾಷ್ಟ್ರಗಳ ಉದಾಹರಣೆ ತೋರಿಸಿದ್ದಾರೆ. ಆದರೆ, “ಪಶ್ಚಿಮ ಬಂಗಾಳದ ಜನಸಂಖ್ಯೆಯೇ ಜರ್ಮನಿಗಿಂತ ಹೆಚ್ಚಿರುವುದನ್ನು ಗಮನಿಸಿ. ಇಂತಹ ಹೋಲಿಕೆಗಳನ್ನು ಮಾಡಬೇಡಿ” ಎಂದು ನ್ಯಾಯಾಲಯವು ಅರ್ಜಿದಾರರಿಗೆ ಹೇಳಿದೆ. ನಿನ್ನೆ, ಭಾರತೀಯ ಚುನಾವಣಾ ಆಯೋಗದ ವಕೀಲರು ಇವಿಎಂ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ರೀತಿಯ ಟ್ಯಾಂಪರಿಂಗ್ ವಿರುದ್ಧ ಹೇಗೆ ದೋಷರಹಿತವಾಗಿದೆ ಎಂಬುದನ್ನು ವಿವರಿಸಿದರು.

ಇವಿಎಂ ಕೆಲಸ ಮಾಡುವುದು ಹೇಗೆ?

EVM ಎರಡು ಘಟಕಗಳನ್ನು ಹೊಂದಿದೆ- ನಿಯಂತ್ರಣ ಘಟಕ ಮತ್ತು ಮತದಾನ ಘಟಕ. ಇವುಗಳನ್ನು ಕೇಬಲ್ ಮೂಲಕ ಸಂಪರ್ಕಿಸಲಾಗಿದೆ. ಇವಿಎಂ ನಿಯಂತ್ರಣ ಘಟಕವು ಪೋಲಿಂಗ್ ಆಫೀಸರ್‌ ಬಳಿ ಇರುತ್ತದೆ. ಮತಯಂತ್ರ ಸಾಮಾನ್ಯವಾಗಿ ಮತದಾರನ ಖಾಸಗಿತನಕ್ಕಾಗಿ ಮುಚ್ಚಿದ ಆವರಣದೊಳಗೆ ಇರುತ್ತದೆ.

ಮತಗಟ್ಟೆಯಲ್ಲಿ, ಮತಗಟ್ಟೆ ಅಧಿಕಾರಿಯು ನಿಮ್ಮ ಗುರುತನ್ನು ಪರಿಶೀಲಿಸುತ್ತಾರೆ. ನಂತರ ನೀವು ಮತ ​​ಚಲಾಯಿಸಲು ಅನುವು ಮಾಡಿಕೊಡುವ ಬ್ಯಾಲೆಟ್ ಬಟನ್ ಅನ್ನು ಒತ್ತುತ್ತಾರೆ. ಬ್ಯಾಲೆಟ್ ಯೂನಿಟ್‌ನಲ್ಲಿ ಅಭ್ಯರ್ಥಿಗಳ ಹೆಸರುಗಳು ಮತ್ತು ಚಿಹ್ನೆಗಳು ಅವುಗಳ ಪಕ್ಕದಲ್ಲಿ ನೀಲಿ ಬಟನ್‌ಗಳಿರುತ್ತವೆ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಬಟನ್ ಅನ್ನು ಒತ್ತಬೇಕು.

ಮತದಾನ ಪ್ರಕ್ರಿಯೆ

ಮತಗಟ್ಟೆ ಅಧಿಕಾರಿಯ ನಿಯಂತ್ರಣ ಘಟಕವು ಬಹು ಬಟನ್‌ಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ʼballot’ ಎಂಬ ಶೀರ್ಷಿಕೆಯಿದು. ಒಮ್ಮೆ ಅಧಿಕಾರಿಯು ಈ ಗುಂಡಿಯನ್ನು ಒತ್ತಿದರೆ, ʼಬ್ಯುಸಿ’ ಎಂಬ ಶೀರ್ಷಿಕೆಯ ಕೆಂಪು ದೀಪವು ಬೆಳಗುತ್ತದೆ. ಒಂದು ಮತವನ್ನು ದಾಖಲಿಸಲು ನಿಯಂತ್ರಣ ಘಟಕ ಸಿದ್ಧವಾಗಿದೆ ಎಂದು ಇದು ಸೂಚಿಸುತ್ತದೆ. ಮತದಾರ ಇರುವ ಬ್ಯಾಲೆಟ್ ಯೂನಿಟ್‌ನಲ್ಲಿ ಹಸಿರು ದೀಪ ಆನ್ ಆಗಿದ್ದು, ಮತದಾನಕ್ಕೆ ಯಂತ್ರ ಸಿದ್ಧವಾಗಿದೆ ಎಂದು ಸಂಕೇತಿಸುತ್ತದೆ. ನಂತರ ಮತದಾರನು ತನ್ನ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಬಟನ್ ಅನ್ನು ಒತ್ತುತ್ತಾನೆ. ಬ್ಯಾಲೆಟ್ ಯೂನಿಟ್ ದೃಷ್ಟಿಹೀನ ಮತದಾರರಿಗೆ ಬ್ರೈಲ್ ಲಿಪಿಯನ್ನು ಸಹ ಹೊಂದಿದೆ.

ಮತದಾರರು ಮತದಾನ ಮಾಡಿದ ನಂತರ, ನಿಯಂತ್ರಣ ಘಟಕವು ಬೀಪ್ ಧ್ವನಿಯನ್ನು ಹೊರಸೂಸುತ್ತದೆ. ಇದು ಮತದಾನ ಪೂರ್ಣಗೊಂಡಿದೆ ಎಂದು ಸೂಚಿಸುತ್ತದೆ. ನಿಯಂತ್ರಣ ಘಟಕವು ಎಲ್‌ಇಡಿ ಪರದೆ ಮತ್ತು ಬಟನ್‌ಗಳನ್ನು ಹೊಂದಿದ್ದು, ಅದರಲ್ಲಿ ದಾಖಲಾಗಿರುವ ಒಟ್ಟು ಮತಗಳ ಸಂಖ್ಯೆಯನ್ನು ನೋಡಲು ಬಳಸಬಹುದು. ಎಲ್ಲಾ ಮತಗಳು ದಾಖಲಾದ ನಂತರ, ಮತಗಟ್ಟೆ ಅಧಿಕಾರಿಯು ನಿಯಂತ್ರಣ ಘಟಕದ ಬದಿಯಲ್ಲಿರುವ ಗುಂಡಿಯನ್ನು ಒತ್ತಿ, ಯಂತ್ರವನ್ನು ಮುಚ್ಚುತ್ತಾರೆ. ಎಣಿಕೆಯ ದಿನದಂದು, ಪ್ರತಿ ಅಭ್ಯರ್ಥಿ ಪಡೆದ ಒಟ್ಟು ಮತಗಳನ್ನು ನೋಡಲು ʼresult’ ಶೀರ್ಷಿಕೆಯ ಬಟನ್ ಅನ್ನು ಬಳಸಲಾಗುತ್ತದೆ. ನಿಯಂತ್ರಣ ಘಟಕದಿಂದ ಎಲ್ಲಾ ಡೇಟಾವನ್ನು ಅಳಿಸಲು ಬಳಸಬಹುದಾದ ʼclear’ ಬಟನ್ ಕೂಡ ಇದೆ.

VVPAT ಎಂದರೇನು?

VVPAT ಎಂದರೆ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್. ಮತವನ್ನು ಸರಿಯಾಗಿ ಚಲಾಯಿಸಲಾಗಿದೆಯೇ ಮತ್ತು ಮತದಾರ ಚಲಾಯಿಸಿದ ಅಭ್ಯರ್ಥಿಗೇ ಆ ಮತ ಹೋಗಿದೆಯೇ ಎಂದು ನೋಡಲು ಅವಕಾಶವಿರುವ ಯಂತ್ರ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಬಟನ್ ಅನ್ನು ಒಮ್ಮೆ ಒತ್ತಿದರೆ, ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್‌ಗೆ ಸಂಪರ್ಕಗೊಂಡಿರುವ VVPAT, ಏಳು ಸೆಕೆಂಡುಗಳ ಕಾಲ ಮತದಾರರಿಗೆ ಗೋಚರಿಸುವ ಕಾಗದದ ಸ್ಲಿಪ್ ಅನ್ನು ಉತ್ಪಾದಿಸುತ್ತದೆ. ಅದರ ನಂತರ, ಪೇಪರ್ ಸ್ಲಿಪ್ VVPAT ಯಂತ್ರದಲ್ಲಿರುವ ಡ್ರಾಪ್ ಬಾಕ್ಸ್‌ಗೆ ಬೀಳುತ್ತದೆ.

ಪ್ರಸ್ತುತ, ಪ್ರತಿ ಅಸೆಂಬ್ಲಿ ವಿಭಾಗದಲ್ಲಿಯೂ 5 ವಿವಿಪ್ಯಾಟ್ ಯಂತ್ರಗಳಲ್ಲಿ ದಾಖಲಾದ ಮತಗಳನ್ನು ಇವಿಎಂಗಳೊಂದಿಗೆ ಕ್ರಾಸ್-ಚೆಕ್ ಮಾಡಲಾಗುತ್ತದೆ. 100 ಶೇಕಡ ಇವಿಎಂಗಳಲ್ಲಿ ದಾಖಲಾದ ಮತಗಳೊಂದಿಗೆ ವಿವಿಪ್ಯಾಟ್ ಸ್ಲಿಪ್‌ಗಳನ್ನು ಕ್ರಾಸ್ ಚೆಕ್ ಮಾಡಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ಬಯಸಿವೆ. ವಿವಿಪ್ಯಾಟ್‌ನಲ್ಲಿ ಏಳು ಸೆಕೆಂಡ್ ಲೈಟ್ ಆನ್ ಆಗಿದ್ದು, ಮತದಾರರು ತಮ್ಮ ಮತವನ್ನು ಸರಿಯಾಗಿ ದಾಖಲಿಸಲಾಗಿದೆಯೇ ಎಂದು ಪರಿಶೀಲಿಸಬಹುದು ಎಂದು ಅರ್ಜಿದಾರರು ಕೋರಿದ್ದಾರೆ. ಪೇಪರ್ ಸ್ಲಿಪ್ ಅನ್ನು ಮತದಾರರಿಗೆ ನೀಡುವುದು ಮತ್ತೊಂದು ಸಲಹೆಯಾಗಿದೆ. ಚುನಾವಣಾ ಆಯೋಗ ಇದನ್ನು ವಿರೋಧಿಸಿದೆ. ಇದು ಮತದಾನದ ಗೌಪ್ಯತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ದುರ್ಬಳಕೆಯಾಗಬಹುದು ಎಂದು ಹೇಳಿದೆ.

ಚುನಾವಣಾ ಆಯೋಗದ ಪ್ರಕಾರ ಇವಿಎಂ ವ್ಯವಸ್ಥೆ ಫೂಲ್ ಪ್ರೂಫ್ ಆಗಿದೆ. ಇದು ಮತ ಎಣಿಕೆ ಸಮಯವನ್ನು ಉಳಿಸುತ್ತದೆ, ಟ್ಯಾಂಪರ್ ಪ್ರೂಫ್ ಮತ್ತು ಬಳಕೆದಾರ ಸ್ನೇಹಿಯಾಗಿದೆ ಎಂದು ಚುನಾವಣಾ ಸಂಸ್ಥೆ ಹೇಳಿದೆ. ಇವಿಎಂಗಳು ಹಗುರವಾಗಿವೆ ಮತ್ತು ಸದೃಢವಾಗಿವೆ- ಮತಗಟ್ಟೆ ಅಧಿಕಾರಿಗಳು ದೂರದ ಕುಗ್ರಾಮಗಳು, ಗುಡ್ಡಗಾಡು ಪ್ರದೇಶಗಳನ್ನು ತಲುಪಲು ಟ್ರೆಕ್ಕಿಂಗ್‌ ಮಾಡಬೇಕಾದ ದೇಶದಲ್ಲಿ ಇದು ನಿರ್ಣಾಯಕವಾಗಿದೆ. ಇವಿಎಂ ಸ್ವಯಂ ರೋಗನಿರ್ಣಯಕ್ಕೆ ಸಮರ್ಥವಾಗಿದೆ ಮತ್ತು ಸ್ವತಂತ್ರವಾಗಿದೆ.

ಇವಿಎಂಗಳಿಗೆ ವಿದ್ಯುತ್ ಅಗತ್ಯವಿಲ್ಲ ಮತ್ತು ಬ್ಯಾಟರಿ/ಪವರ್ ಪ್ಯಾಕ್‌ ಇದರೊಂದಿಗೆ ಬರುತ್ತದೆ. ಸ್ಥಿರವಾದ ವಿದ್ಯುತ್ ಸರಬರಾಜನ್ನು ಹೊಂದಿರದ ಪ್ರದೇಶಗಳಲ್ಲಿ ಮತದಾನವನ್ನು ಸಕ್ರಿಯಗೊಳಿಸಲು ಇದು ಮತ್ತೊಂದು ನಿರ್ಣಾಯಕ ವೈಶಿಷ್ಟ್ಯ. ಪ್ರತಿ ಚುನಾವಣೆಗೂ ಮುನ್ನ ಇವಿಎಂ ಮತ್ತು ವಿವಿಪ್ಯಾಟ್‌ಗಳ ಮೊದಲ ಹಂತದ ತಪಾಸಣೆ (ಎಫ್‌ಎಲ್‌ಸಿ) ನಡೆಸಲಾಗುತ್ತದೆ. ಈ ಪರಿಶೀಲನೆಯ ಸಮಯದಲ್ಲಿ, ಇವಿಎಂಗಳಲ್ಲಿನ ಡೇಟಾವನ್ನು ಅಳಿಸಲಾಗುತ್ತದೆ ಮತ್ತು ವಿವಿಧ ಘಟಕಗಳ ಕಾರ್ಯವನ್ನು ಪ್ರದರ್ಶಿಸಲಾಗುತ್ತದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಈ ಪರಿಶೀಲನೆ ನಡೆಸಲಾಗುತ್ತದೆ.

ಇದನ್ನೂ ಓದಿ: VVPAT Verification: ಇವಿಎಂ-ವಿವಿಪ್ಯಾಟ್‌ ತಾಳೆಯ ಪ್ರಕ್ರಿಯೆ ತಿಳಿಸಿ; ಆಯೋಗಕ್ಕೆ ಸುಪ್ರೀಂ ಸೂಚನೆ

Continue Reading
Advertisement
Road Accident
ಉಡುಪಿ15 mins ago

Road Accident : ಮಿಡ್‌ನೈಟ್‌ನಲ್ಲಿ ರಸ್ತೆ ಕಾಣದೆ ಡಿವೈಡರ್‌ಗೆ ಬೈಕ್‌ ಡಿಕ್ಕಿ; ಹಾರಿ ಬಿದ್ದ ಸವಾರ ಸ್ಥಳದಲ್ಲೇ ಸಾವು

supreme court baba ramdev IMA
ಪ್ರಮುಖ ಸುದ್ದಿ16 mins ago

Patanjali Case: ಮೊದಲು ನಿಮ್ಮನ್ನು ಸರಿಪಡಿಸಿಕೊಳ್ಳಿ: ಪತಂಜಲಿ ಪ್ರಕರಣದಲ್ಲಿ ವೈದ್ಯಕೀಯ ಸಂಘಕ್ಕೂ ಸುಪ್ರೀಂ ಚಾಟಿ

Lok Sabha Election 2024 Are you planning to visit Mysore Palace on April 26 No entry if no vote
Lok Sabha Election 202420 mins ago

Lok Sabha Election 2024: ಏಪ್ರಿಲ್‌ 26ರಂದು ಮೈಸೂರು ಅರಮನೆ ವೀಕ್ಷಣೆಗೆ ಪ್ಲ್ಯಾನ್‌ ಮಾಡಿದ್ದೀರಾ? ಮತ ಹಾಕದೇ ಬಂದರೆ ನೋ ಎಂಟ್ರಿ!

Murder case in hublli
ಹುಬ್ಬಳ್ಳಿ38 mins ago

Kidnap Case : ಅಖಂಡೇಶ್ವರ ಜಾತ್ರೆಗೆ ಹೋದ ಅತಿಥಿ ಶಿಕ್ಷಕಿಯನ್ನು ಅಪಹರಿಸಿದ ಮುಸ್ಲಿಂ ಯುವಕ

Rafael Nadal
ಕ್ರೀಡೆ51 mins ago

Rafael Nadal: ಲೇವರ್‌ ಕಪ್‌ ಬಳಿಕ 22 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್​ ನಡಾಲ್‌ ನಿವೃತ್ತಿ!

Modi in Karnataka PM Narendra Modi to visit from April 28 and 29
Lok Sabha Election 20241 hour ago

Modi in Karnataka: ಏಪ್ರಿಲ್‌ 28 – 29ಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸ; ಯಾವ ಯಾವ ಕ್ಷೇತ್ರದಲ್ಲಿ ಮತ ಬೇಟೆ?

Murder Case In Bengaluru
ಬೆಂಗಳೂರು1 hour ago

Murder Case : ಒಂಟಿ ಮಹಿಳೆ ಕೊಲೆ ಕೇಸ್‌; ಅತಿಯಾದ ಸೆಕ್ಸ್‌ಗೆ ಒತ್ತಾಯಿಸಿದವಳನ್ನು ಬೆಡ್‌ ರೂಂನಲ್ಲೇ ಕೊಂದ ಯುವಕ

MDH everest spices row
ದೇಶ1 hour ago

Spices Row: ಸಿಂಗಾಪುರ, ಹಾಂಕಾಂಗ್‌ ಬಳಿಕ ಭಾರತದಲ್ಲೂ ಎವರೆಸ್ಟ್, ಎಂಡಿಎಚ್‌ ಮಸಾಲೆ ಪರಿಶೀಲನೆ ಶುರು

Narendra Modi and Siddaramaiah
ರಾಜಕೀಯ2 hours ago

Narendra Modi: ಕಾಂಗ್ರೆಸ್‌ ರಾಜ್ಯದಲ್ಲಿ ಹನುಮಾನ್‌ ಚಾಲೀಸಾ ಹೇಳುವುದೂ ಮಹಾಪರಾಧ; ರಾಜಸ್ಥಾನದಲ್ಲಿ ಮೋದಿಯಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ತರಾಟೆ

Gukesh D
ಕ್ರೀಡೆ2 hours ago

Gukesh D: ಡಿ.ಗುಕೇಶ್‌ ಸಾಧನೆಗಾಗಿ ವೈದ್ಯ ವೃತ್ತಿಯನ್ನೇ ತೊರೆದಿದ್ದ ತಂದೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು21 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ22 hours ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ1 day ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ2 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌