ಸಾಲಭಂಜಿಕೆ ಅಂಕಣ: ಎರಡು ಕವಿತೆಗಳಲ್ಲಿ ಒಂದೇ ಹಾಡು - Vistara News

ಅಂಕಣ

ಸಾಲಭಂಜಿಕೆ ಅಂಕಣ: ಎರಡು ಕವಿತೆಗಳಲ್ಲಿ ಒಂದೇ ಹಾಡು

ಶ್ರೀರಾಮ ತೊರೆದ ಸೀತೆಯನ್ನು ಮುಖಾಮುಖಿಯಾದ ಕವಿ ವಾಲ್ಮೀಕಿಯನ್ನು ನೆನೆಯುತ್ತಾ ಹುಟ್ಟಿಕೊಂಡ ಕವಿತೆ ʼಶಿಶಿರದ ಪಾಡು.ʼ ರಾಮನ ಪಾಡು, ಅದನ್ನು ನೋಡಿ ಕರಗುವ ಸೀತೆಯ ಪಾಡಿನಿಂದ ಹುಟ್ಟಿಕೊಂಡ ಹಾಡು ʼರಾಮನವಮಿಯ ರಾತ್ರಿ.ʼ ಕವಿ ಎಚ್‌ಎಸ್‌ ವೆಂಕಟೇಶಮೂರ್ತಿಯವರ ಎರಡು ಕವಿತೆಗಳ ಬಗ್ಗೆ ಇಲ್ಲಿದೆ ವಿಶ್ಲೇಷಣೆ.

VISTARANEWS.COM


on

sita and valmiki
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
salabhanjike logo

ಒಳ್ಳೆಯ ಪದ್ಯ ಎಂದರೆ ಮುಗಿದ ಮೇಲೂ ಓದುಗನ ಮನಸ್ಸಿನಲ್ಲಿ ಅದು ಬೆಳೆಯುತ್ತಿರಬೇಕು ಎಂಬ ಮಾತೇನೋ ಸತ್ಯವೇ. ಒಂದು ಒಳ್ಳೆಯ ಕವಿತೆಯನ್ನು ಓದುತ್ತಿರಬೇಕಾದರೆ ಓದುಗನ ಮನಸ್ಸಿನಲ್ಲೂ ಅದಕ್ಕೆ ಸಂವಾದಿಯಾದ ಒಂದು ಕವಿತೆ ಹುಟ್ಟಿಕೊಳ್ಳುತ್ತದೆ. ಕವಿ ತನ್ನ ಹಿನ್ನೆಲೆಯಲ್ಲಿ ಗ್ರಹಿಸಿ ಮೂಡಿಸಿದ ಭಾವದ್ರವ್ಯಕ್ಕೆ ಓದುಗ ತನ್ನ ಹಿನ್ನೆಲೆಯ ಗ್ರಹಿಕೆಗಳನ್ನು ಸೇರಿಸಿ ಓದುವಾಗ, ಓದುತ್ತಿರುವ ಕವಿತೆಗಿಂತ ಕೊಂಚ ಭಿನ್ನವಾದ ಈ ಕವಿತೆ ಪ್ರತಿ ಓದುಗನ ಓದೂ ವಿಭಿನ್ನವಾಗಿಸುತ್ತದೆ. ಮತ್ತು ಅದು ಎಷ್ಟು ಓದುಗನ ಹಿನ್ನೆಲೆಗೆ ಹತ್ತಿರವಾಗುತ್ತದೆ ಎಂಬುದರ ಆಧಾರದ ಮೇಲೆ ಅದು ಓದುಗನ ಮನಸ್ಸಿನಲ್ಲಿ ಬೆಳೆಯುತ್ತಾ ಹೋಗುತ್ತದೆ. ಕೆಲವು ಕವಿತೆಗಳಿರುತ್ತವೆ. ಅವು ಓದುಗನ ಮನದಲ್ಲಷ್ಟೇ ಅಲ್ಲ, ಕವಿಯ ಮನಸ್ಸಿನಲ್ಲೂ ಮುಗಿದಿರದೆ ಬೆಳೆಯುತ್ತಲೇ ಇರುತ್ತವೆ. ಪದ್ಯ ಪ್ರಕಟವಾದ ನಂತರವೂ ಕವಿಯನ್ನು ಕಾಡುತ್ತಲೇ ಇರುತ್ತವೆ. (ಒಬ್ಬ ಕವಿ ತನ್ನ ಜೀವಮಾನದಲ್ಲಿ ಬರೆಯುವುದು ಒಂದೇ ಕವಿತೆಯನ್ನು ಎಂಬ ಮಾತು ಇದೆಯಾದರೂ ಇದು ಆ ಕುರಿತ ಮಾತಲ್ಲ). ಆ ಕಾಡುವಿಕೆ ತೀವ್ರ ಸ್ವರೂಪದ್ದಾಗಿದ್ದರೆ ಮತ್ತೊಂದು ಅಷ್ಟೇ ಸಶಕ್ತ ಕವಿತೆ ಹುಟ್ಟಿಕೊಳ್ಳುತ್ತದೆ. ಅಂತಹಾ ಪದ್ಯಗಳಲ್ಲೊಂದು ಎಚ್. ಎಸ್. ವೆಂಕಟೇಶಮೂರ್ತಿಯವರ `ಶಿಶಿರದ ಪಾಡು’ ಎಂಬ ಪದ್ಯ.

ಪದ್ಯದ ಶೀರ್ಷಿಕೆ ಅದರ ಒಳಗನ್ನು ಬಹಳ ಸಮರ್ಥವಾಗಿ ಹೇಳುತ್ತದೆ. ಶಿಶಿರಕ್ಕೆ ಹಾಡಿಲ್ಲ, ಇರುವುದು ಪಾಡು ಮಾತ್ರ. ಏಕೆಂದರೆ ಅದು ತನ್ನದೆಲ್ಲವನ್ನೂ ಕಳೆದುಕೊಳ್ಳುವ ಹೊತ್ತು. ಅದರದು ತನ್ನನ್ನು ತಾನು ಕಳೆದುಕೊಳ್ಳುವ ಪಾಡು. ಆರಂಭದಲ್ಲೇ ಶಿಶಿರದ ಉದುರುವ ಎಲೆಗಳನ್ನು ಕವಿ ವಾಲ್ಮೀಕಿ ತನ್ನ ಕಣ್ಣ ಹನಿಗಳನ್ನೇ ಜಪಮಾಲೆಯಾಗಿಸಿ ನಡುಗುತ್ತಾ, ತದೇಕಚಿತ್ತದಿಂದ ನೋಡುತ್ತಾ ಕುಳಿತಿದ್ದಾನೆ. ಎಚ್ಚೆಸ್ವಿಯವರು ವಾಲ್ಮೀಕಿಯನ್ನು ಋಷಿ ಎಂದಿಲ್ಲ. ಕವಿ ವಾಲ್ಮೀಕಿ ಎನ್ನುತ್ತಾ ಮುಂದೆ ನಡೆಯುವ ಘಟನೆಗಳ ಕುರಿತು ಆತನ ಪ್ರತಿಕ್ರಿಯೆಯ ಸ್ವರೂಪದ ಬಗ್ಗೆ ಓದುಗನ ಗಮನ ಸೆಳೆಯುತ್ತಾರೆ. ಋಷಿಯಾದರೆ ಸಂಯಮದ ಬಗ್ಗೆ ಪಾಠ ಹೇಳಿಯಾನು, ನಿರ್ಲಿಪ್ತನಾಗಿದ್ದಾನು. ಕವಿ ಹಾಗಿರಲು ಸಾಧ್ಯವೇ?

HSV
ಎಚ್‌ ಎಸ್‌ ವೆಂಕಟೇಶಮೂರ್ತಿ

ಗಂಗೆ ಹರಿವ, ಹಕ್ಕಿಯ ಕೂಗಿನ ಸದ್ದಿನ ನಡುವೆ ಯಾರೋ ಅತ್ತ ಸದ್ದು ಕೇಳುತ್ತದೆ ಕವಿಯ ಕಿವಿಗೆ. ಎದ್ದು ಬಂದ ವಾಲ್ಮೀಕಿ ಎದುರಿನಲ್ಲಿ ನೆಲದಲ್ಲಿ ಹೊರಳಿ ಅಳುತ್ತಿರುವ ಹೆಣ್ಣೊಬ್ಬಳನ್ನು ನೋಡಿ ಸಂಕಟದಿಂದ “ಯಾರಮ್ಮ ನೀನು? ನಾನು ಋಷಿ ವಾಲ್ಮೀಕಿ, ರಾಮಾಯಣ ಬರೆದವನು. ಹೆದರಬೇಡ ಹೇಳು” ಎಂದು ಸಂತೈಸುತ್ತಾನೆ. ಇಲ್ಲಿ ಋಷಿ ಎಂಬ ಪದವನ್ನು ಒಂಟಿ ಹೆಣ್ಣು ಹೆದರದಿರಲೆಂದು ಬಳಸುತ್ತಾರೆ ಕವಿ.

ಅವಳು ದುಃಖಿಸುತ್ತಲೇ ತಾನು ಜಾನಕಿ ದಾಶರಥಿಪ್ರಿಯಸತಿ ಎಂದು ಉತ್ತರಿಸಿದಾಗ ವಾಲ್ಮೀಕಿಗೆ ನಂಬಲಾಗುವುದಿಲ್ಲ. ಕವಿ ವಾಲ್ಮೀಕಿಯ ಪ್ರತಿಕ್ರಿಯೆ ನೋಡಿ:

ಹಾ ಎಂದು ಗರ ಹೊಡೆದು ತತ್ತರಿಸಿ ಹೋದ ಕವಿ
ತಾನು ಕೃತಿಯಲ್ಲಿ ಕಡೆದಿಟ್ಟ ಪಾತ್ರ
ಜೀವಂತವಾಗಿ ತನ್ನೆದುರೆ ಮೊಖ್ತ ಬಂದು
ಕಂಬನಿಯ ಮಿಡಿಯುತಿರೆ ಕುಡಿ ಬೆರಳಲಿ

ಹೇಗೆ ನಂಬಲಿ ಇದನು ಹೇಗೆ ನಂಬದೆ ಇರಲಿ
ಎದುರಿಗೇ ಇರುವಾಗ ಲೋಕಮಾತೆ
ಶ್ರೀರಾಮಪಟ್ಟಾಭಿಷೇಕ ಮುಗಿಸಿದ ಮೇಲೆ
ಹೀಗೆ ಎದುರಾಗುವುದೆ ತನ್ನ ಮಾತೆ?

ಕೃತಿಯ ಮುಗಿಸಿದ ತೃಪ್ತಿ ಮಣ್ಣಿನ ಹೊನ್ನನ್ನು
ರೂಪಾಂತರಿಸಿದ ತೃಪ್ತಿ ಶಾಂತಿಯೊಳಗೆ
ರಾಮ ನಾಮ ಧ್ಯಾನ ಏಕ ಶ್ರುತಿ ನಿಂತಾಗ
ಹೇಗೆ ಒಡೆಯಿತು ನೀಲಿ ಶಿಶಿರದೊಳಗೆ?

ಕಾಡು ದಾರಿಯ ಮುಗಿದು ಕೊನೆಗೆ ನಗರದ ನಡುವೆ
ಲಲಿತ ಮಹಲರಳಿ ಶ್ರೀರಾಮ ಸೀತೆ
ಒಂದಾಗಿ ಕೂಡಿರಲು ಕಂಟವನು ಕೆಳಗಿಟ್ಟೆ
ಹೀಗೇಕೆ ಬಂದೆಯೇ ಲೋಕ ಮಾತೆ?

ಕವಿ ಮನ ಕಂಗಾಲಾಗಿದೆ. ತಾನು ಜೊತೆಯಾಗಿಸಿ ಪಟ್ಟದ ಮೇಲೆ ಕೂಡಿಸಿ ಇನ್ನು ಕಥೆ ಮುಗಿಯಿತೆಂದು ಲೇಖನಿಯನ್ನು ಕೆಳಗಿಟ್ಟು ನೆಮ್ಮದಿಯಾಗಿರುವ ಹೊತ್ತಲ್ಲಿ ತನ್ನ ಕಾವ್ಯದ ನಾಯಕಿ ಹೀಗೆ ದೂಳಿನಲ್ಲಿ, ದುಃಖದಲ್ಲಿ ಹೊರಳಾಡಿ ಅಳುತ್ತಿರುವುದನ್ನು ನೋಡಿದರೂ ಅವನಿಗೆ ನಂಬಲಾಗುತ್ತಿಲ್ಲ. ಸಂಕಟವನ್ನು ತಾಳಲಾರದೆ ಮತ್ತೆ ಮತ್ತೆ ಕೇಳುತ್ತಿದ್ದಾನೆ. “ಹೇಳು ಮಗಳೇ ಹೇಳು, ಏಕಿಂಥ ಗತಿ ಬಂತು ಮತ್ತೆ ನಿನಗೆ?”

ರಾಮನಿರುವನಕ ರಾಮಾಯಣವು ಮುಗಿವುದೆ?
ಅಂತೆ ಸೀತೆಯ ಚಿಂತೆ ಸಾಯುವನಕ

ಸೀತೆ ವಿಷಾದದಿಂದ ಹೇಳುತ್ತಾ ಮುಂದುವರಿಸುತ್ತಾಳೆ…

ಅಧಿಕಾರದೊಳಗಿಟ್ಟು ಹೇಗೆ ಕಥೆ ಮುಗಿಸುವಿರಿ
ಆಗಲೇ ಆರಂಭ ಬದುಕಿನಣಕ

ಎಂತಹಾ ಉತ್ತರ! ವಾಲ್ಮೀಕಿಯ ಜೊತೆಗೆ ಓದುಗ ದಂಗುಬಡಿದು ಕೂರುತ್ತಾನೆ.

ಕನ್ನಡಿಯ ಬಿಂಬವೇ ಮುಖವನಣಕಿಸುವಾಗ
ಅರಮನೆಯೆ ಸುಡುಗಾಡು ತವರು ಕಾಡು
ನೀನೆನ್ನ ಹೆತ್ತವನು ರಾಮಾಯಣದ ಹೊರಗೆ
ರಾಮ ಹಾಡಿದ್ದುಂಟು ಇಂಥ ಹಾಡು

ಸೀತೆಯ ನಿಟ್ಟುಸಿರ ತೀವ್ರತೆಗೆ ಕವಿಯ ಕೊರಳು ಕಂಪಿಸುವುದರೊಂದಿಗೆ ಕವಿತೆ ಕೊನೆಯಾಗುತ್ತದೆ. ಸೀತೆ ಕಾಡಿನಲ್ಲಿಯೂ ರಾಮನ ಜೊತೆ ಸುಖವಾಗಿಯೇ ಇದ್ದವಳು. ಕಾಡಿನಲ್ಲಿದ್ದಾಗಲೇ ರಾವಣ ಹೊತ್ತು ಒಯ್ದಿದ್ದು. ರಾಮ ಅವಳಿಗಾಗಿ ಹಗಲಿರುಳು ಪರಿತಪಿಸಿ ಸಾವಿರಾರು ಮೈಲಿ ಕ್ರಮಿಸಿ ಹೋರಾಡಿ ಮತ್ತೆ ಪಡೆದದ್ದು ಅವನು ಕಾಡುಪಾಲಾಗಿದ್ದಾಗ. ನೀವು ತಪ್ಪು ಜಾಗದಲ್ಲಿ ಕೂರಿಸಿ ಕಥೆ ಮುಗಿಸಿದಿರಿ ಎಂದು ಸೀತೆಯ ಬಾಯಲ್ಲಿ ನುಡಿಸುವ ಕವಿ ಏಕಕಾಲದಲ್ಲಿ ಸೀತೆಯನ್ನೂ, ರಾಮನನ್ನೂ, ಅಧಿಕಾರವನ್ನೂ ಅರ್ಥ ಮಾಡಿಸುತ್ತಾರೆ. ಸೀತೆಗೆ ರಾಮನ ಬಗ್ಗೆ ದೂರಿಲ್ಲ, ರಾಮನಿಗೆ ಸೀತೆಯನ್ನು ಉಳಿಸಿಕೊಳ್ಳುವ ಸ್ವತಂತ್ರವಿಲ್ಲ, ಅಧಿಕಾರಕ್ಕೆ ಆ ಖಾಸಗಿತನವಿಲ್ಲ. ಅದೇನೇ ಇದ್ದರೂ ಸೀತೆಯದು ಮಾತ್ರ ಈಗ ಶಿಶಿರದ ಪಾಡು.

ಇಲ್ಲಿಗೆ ಕವಿತೆ ಮುಗಿಯುತ್ತದೆ. ಪದ್ಯ ಬರೆದ ಕವಿಯ ಮನದ ತೊಳಲಾಟ ಮುಗಿಯುವುದಿಲ್ಲ. ದಶಕಗಟ್ಟಲೆ ಆ ಶಿಶಿರದ ಪಾಡು ಕವಿಯ ಮನಸ್ಸಿನಲ್ಲಿ ಒದ್ದಾಡುತ್ತಲೇ ಇರುತ್ತದೆ. ಮುಂದೇನಾಗಿರಬಹುದು ಸೀತೆಯ ಪಾಡು? ರಾಮನ ಪಾಡು? ಅಷ್ಟು ಪ್ರೀತಿಸುವ ಸೀತೆ ತೊರೆದ ಮೇಲೆ ರಾಮ ಹೇಗೆ ತಾನೇ ನೆಮ್ಮದಿಯಿಂದ ಇದ್ದಾನು? ಸೀತೆಗೆ ದೂರೇ ಇಲ್ಲವೇ ರಾಮನ ಕುರಿತು? ಅವತಾರ ಮುಗಿದ ನಂತರವಾದರೂ ಹೇಗೆ ಒಟ್ಟಿಗೆ ಇರುತ್ತಾರೆ? ಸಾಂಸಾರಿಕ ಕವಿ ಎಂದೇ ಹೆಸರುವಾಸಿಯಾದ ಎಚ್ಚೆಸ್ವಿಯವರನ್ನು ಈ ವಿಷಯ ಅದೆಷ್ಟು ನೋಯಿಸಿದೆ ಎಂದರೆ ದಶಕಗಳ ನಂತರ ಮತ್ತೊಂದು ಅಷ್ಟೇ ಸಶಕ್ತ ಕವಿತೆಯೊಂದು ಒಡಮೂಡುತ್ತದೆ. ಅದು ʻರಾಮನವಮಿಯ ರಾತ್ರಿʼ.

ಇದನ್ನೂ ಓದಿ: ಸಾಲಭಂಜಿಕೆ ಅಂಕಣ | ಅದೃಷ್ಟ ಬೇಕು ಪದ್ಯ ಓದಲು

ಈ ಕವಿತೆಯಲ್ಲಿ ಅವತಾರಗಳೆಲ್ಲ ಮುಗಿದು ಗುಡಿ ಕಟ್ಟಿಸಿಕೊಂಡ ರಾಮ ದೇವರಾಗಿದ್ದಾನೆ. ರಾಮನ ಗುಡಿ ಎಂದರೆ ಅಲ್ಲಿ ರಾಮನೊಬ್ಬನೇ ಇರುವುದಿಲ್ಲವಷ್ಟೆ. ಅವನ ಜೊತೆಗೆ ಸೀತೆ ಲಕ್ಷ್ಮಣ ಹನುಮಂತರೂ ಇದ್ದಾರೆ. ಪ್ರತಿದಿನ ಬೆಳಗಿನಲ್ಲಿ ಅರ್ಚಕರು ರಾಮಕಥೆಯನ್ನು ಒಪ್ಪಿಸುತ್ತಾರೆ. ಹಾಗೆ ಒಪ್ಪಿಸುವಾಗ ಸೀತಾ ಪರಿತ್ಯಾಗದ ಕುರಿತು ಹೇಳುತ್ತಾ ಅವರ ಮನಸ್ಸೂ ಕರಗುತ್ತದೆ. ಅವರೂ ನೋಯುತ್ತಲೇ ರಾಘವ ಸೀತಾ ಪರಿತ್ಯಾಗ ನಿನಗೆ ಸಮ್ಮತವೇ ಎನ್ನುತ್ತಲೇ ರಾಮನನ್ನು ಅರ್ಚಿಸುತ್ತಾರೆ. ಇದು ದಿನದ ಕಥೆಯಾಯಿತು. ಕವಿ ರಾಮನವಮಿಯ ರಾತ್ರಿ ಎಂದು ಪದ್ಯಕ್ಕೆ ಹೆಸರನ್ನಿಟ್ಟಿದ್ದಾರೆ. ಅಂದರೆ ನಿಜವಾದ ಕಥೆ ನಡೆಯುವುದು ರಾತ್ರಿಯಲ್ಲಿಯೇ ಎಂದಾಯಿತಲ್ಲ. ಹಗಲಲ್ಲಿ ಅರ್ಚಕರು ಹಾಗೆ ನೆನಪಿಸಿದಾಗ-

ಶ್ರೀಮುಖದಲಾಗ ಸಣ್ಣಗೆ ನೋವು ಸುಳಿಯುವುದು.
ಶಿಲ್ಪಕ್ಕೆ ತುಟಿಯುಂಟು; ಇಲ್ಲ ಮಾತು.
ಕರುಣಾರ್ದ್ರ ತಾಯಿ ನೋಡುವರು ರಾಘವನನ್ನ!
ಅಭಿಷೇಕಜಲ ಕಣ್ಣಲೊಸರುತಿಹುದು.

ರಾಮ ಈಗ ಕಲ್ಲಾದ ದೇವರು. ಕಲ್ಲಿನೊಳಗೆ ಪ್ರಾಣಪ್ರತಿಷ್ಠಾಪನೆಯಾಗಿರುವ ದೇವರು. ರಾಮನ ಮುಖದಲ್ಲಿ ನೋವು ಸುಳಿಯುತ್ತದೆ. ಆದರೆ ತುಟಿಯ ಕೆತ್ತನೆಯಿದ್ದರೂ ಅದಕ್ಕೆ ಮಾತನಾಡಲಾಗುವುದಿಲ್ಲ. ಎದೆ ತುಂಬಾ ದುಗುಡವಿದ್ದರೂ ಕಣ್ಣಲ್ಲಿ ನೀರೊಸರುವುದಿಲ್ಲ. ಸೀತೆ ರಾಮನ ಕಡೆ ನೋಡುವಾಗ ಅರ್ಚಕನ ಅಭಿಷೇಕದ ಜಲ ಕಣ್ಣಲ್ಲಿ… ಸೀತೆ ವ್ಯಂಗ್ಯವಾಗಿ ನೋಡುವುದಿಲ್ಲ, ನನ್ನನ್ನು ಅಂದು ಕಾಡಿಗಟ್ಟಿದೆಯಲ್ಲ, ಇಂದು ನಿನ್ನ ಪಾಡು ಹೀಗಿದೆ ಎಂದು ಹಂಗಿಸುವ ನೋಟವೂ ಅದಲ್ಲ. ಕರುಣಾರ್ದ್ರ ತಾಯಿ ಎಂದು ಹೇಳುವ ಮೂಲಕ ಕವಿ ಆ ಇಡೀ ಸನ್ನಿವೇಶದ ಮನಸ್ಥಿತಿಯನ್ನು ಕಟ್ಟಿಕೊಡುತ್ತಾರೆ.

ಲಕ್ಷ್ಮಣಗೆ ಕಸಿವಿಸಿ. ತಲೆ ತಗ್ಗಿಸಿದ ಹನುಮ.
ತಾಯಿ ಮತ್ತೇನನ್ನೊ ಧ್ಯಾನಿಸುವಳು.
ಇರುಳು ಭಕ್ತರು ಹೋದಮೇಲೆ ರಾಮನು ಇಲ್ಲಿ
ಇರುವ ಬಗೆ ಹೇಗೆಂದು ಚಿಂತಿಸುವಳು.

ಅಂದು ಸೀತೆಯನ್ನು ಅಣ್ಣನ ಅಣತಿಯಂತೆ ಕಾಡಿಗೆ ಬಿಟ್ಟವನು ಲಕ್ಷ್ಮಣ. ಆ ಕಥೆಯಲ್ಲಿ ಅವನ ಪಾತ್ರವೂ ಇತ್ತಲ್ಲ… ಹನುಮಂತ ಸಾಗರವನ್ನೇ ದಾಟಿ ಸೀತೆಯನ್ನು ಹುಡುಕಿದವನು. ಇವರ್ಯಾರೂ ಆ ಸಂದರ್ಭದಲ್ಲಿ ಸೀತೆಯ ಬೆನ್ನಿಗೆ ನಿಂತವರಲ್ಲ. ಸೀತಾ ಪರಿತ್ಯಾಗವನ್ನು ವಿರೋಧಿಸಿ ಜಗಳವಾಡಿದರೂ, ಬೇಡಿಕೊಂಡರೂ ಕೊನೆಗೆ ರಾಮನ ಜೊತೆಗೇ ನಿಂತವರು. ಒಬ್ಬಂಟಿಯಾದವಳು ಸೀತೆ. ಕಾಡಿನಲ್ಲಿ ಕಾಲ ಹಾಕಿದವಳು ಸೀತೆಯೊಬ್ಬಳೇ. ಈಗ ಅರ್ಚಕರು ಆ ಕಥೆಯನ್ನೆಲ್ಲ ಮತ್ತೆ ಮತ್ತೆ ಬಿಚ್ಚಿಡುತ್ತಿದ್ದಾರೆ. ಇವರ ತಪ್ಪುಗಳೆಲ್ಲ ಮತ್ತೆ ಮತ್ತೆ ಎದುರು ಬಂದು ನಿಲ್ಲುತ್ತಿದೆ, ಅದೂ ಸೀತೆಯೆದುರಿಗೇ… ಯಾರಿಗೂ ಸೀತೆಯನ್ನು ತಲೆ ಎತ್ತಿ ದಿಟ್ಟಿಸುವ ಧೈರ್ಯವಿಲ್ಲ. ಎಲ್ಲರ ಮನದಲ್ಲೂ ದುಗುಡ. ಭಕ್ತರೆಲ್ಲ ಹಿಂತಿರುಗಿದ ಮೇಲೆ ರಾತ್ರಿ ಗುಡಿಯ ಬಾಗಿಲನ್ನು ಅರ್ಚಕರು ಮುಚ್ಚಿ ಹೊರಟ ನಂತರ ಏಕಾಂತದಲ್ಲಿ ರಾಮ ಇಲ್ಲಿ ಹೇಗಿರುತ್ತಾನೆ? ಮುಖವೆತ್ತಲಾಗದೆ… ದಿಟ್ಟಿಸಿ ನೋಡಲಾಗದೆ… ಅದನ್ನು ಹೇಗೆ ಸಹಿಸುವುದು ಎಂಬ ಚಿಂತೆ ರಾಮನದಲ್ಲ, ಸೀತೆಯದು.

ಇದನ್ನೂ ಓದಿ: ಸಾಲಭಂಜಿಕೆ ಅಂಕಣ | ಬಂಗಾರದಂಥ ಹುಡುಗಿ ನಗ ಬಯಸಿದಳೇ?

ಅರ್ಚಕರು ಮುಂಜಾನೆ ಮತ್ತದೇ ಕಥೆಯನ್ನು
ಹೇಳಿದರೆ ಕೇಳದೆಯೆ ಇರಲಿ ಹೇಗೆ?

ಅದು ರಾತ್ರಿಗೆ ಮುಗಿಯುವುದೂ ಇಲ್ಲ. ಮರುದಿನ ಬೆಳಗಿನಲ್ಲಿ ಮತ್ತೆ ಅರ್ಚಕರು ಗುಡಿಯ ಬಾಗಿಲನ್ನು ತೆರೆಯುತ್ತಾರೆ, ಪೂಜಿಸುತ್ತಾರೆ… ಅದರೊಟ್ಟಿಗೆ ಅದೇ ಕಥೆಯನ್ನು ಮತ್ತೆ ಹೇಳುತ್ತಾರೆ. ಅನುದಿನವೂ ಅದನ್ನು ಕೇಳಬೇಕಲ್ಲಾ ಎಂಬ ಸಂಕಟ. ತಲೆ ಎತ್ತಲು ಸಾಧ್ಯವೇ ಇಲ್ಲದ ಪರಿಸ್ಥಿತಿ, ಮನಸ್ಥಿತಿ… ಅದು ಕಾಡುವುದು ಕೇವಲ ರಾಮನನ್ನು ಮಾತ್ರವಲ್ಲ, ಸೀತೆಯನ್ನೂ. ಅವಳಿಗೆ ಆ ಕಥೆ ಅವಳ ಸಂಕಷ್ಟಗಳನ್ನು ನೆನಪಿಸಿಕೊಡುತ್ತಿಲ್ಲ, ರಾಮನ ಅಸಹಾಯಕತೆಯನ್ನು ನೆನಪಿಸಿಕೊಡುತ್ತಿದೆ. ಆ ಕಾರ್ಯವನ್ನು ರಾಮ ಎಷ್ಟು ಒತ್ತಡದಲ್ಲಿ ಮಾಡಿದ್ದಾನೆ ಎಂಬುದೂ, ಲಕ್ಷ್ಮಣ, ಹನುಮಂತರ ನಿಸ್ಸಹಾಯಕ ಸ್ಥಿತಿಯೂ ಅವಳಿಗೆ ಅರಿವಿದೆ. ಇದರಾಚೆಗೂ ಸೀತೆ ಯೋಚಿಸುತ್ತಿರುವುದು ಕಲ್ಲಾಗಿ ನಿಂತ ವಿಗ್ರಹಗಳ ನಿರಾಳ ರಾತ್ರಿಯ ಬಗ್ಗೆ.

ನಿಂತರೂ ನಡೆದವರ ನಡೆದ ನಡೆ ಕಾಡುವುದು
ಮುಗಿದಿರುವ ಹಾಡ ಪಲ್ಲವಿಯ ಹಾಗೆ.

ನಡೆಗಳು ಮುಗಿದುಹೋದ ನಂತರವೂ ನಿಂತವರನ್ನು ನಡೆದ ನಡೆಗಳ ಗುರುತು ಕಾಡದೆ ಬಿಡುವುದಿಲ್ಲ. ನಿಂತವರನ್ನು ಅಷ್ಟೇ ಅಲ್ಲ, ನಿಂತವರ ನಡೆಗಳನ್ನು ಪಠಿಸುವವರಿಗೂ ಅವು ಕಾಡುತ್ತವೆ. ಆ ನಡೆ ಅಸಹಾಯಕತೆಯಲ್ಲಿಯೇ ಬಂದಿದ್ದರೂ, ಅನಿವಾರ್ಯವೇ ಆಗಿದ್ದರೂ ಅದಕ್ಕೆ ಕ್ಷಮೆಯಿದ್ದರೂ, ಅವು ಮುಗಿದೇ ಹೋಗಿದ್ದರೂ ಆ ನಡೆಗಳು ಎಂದಿಗೂ ಜೀವಂತ. ಸಾಂಸಾರಿಕ ಕವಿ, ಹೆಣ್ಣು ಮನದ ಕವಿ ಇದನ್ನು ಬಿಚ್ಚಿಡುವುದು ಹೀಗೆ. ನೀನು ದೇವರೇ ಆದರೂ ಈ ಕೃತ್ಯ ನಿನ್ನನ್ನೂ ಕಾಡದೆ ಬಿಡುವುದಿಲ್ಲ. ನಿನ್ನನ್ನು ಕಾಡಿದಷ್ಟೇ, ಆ ಕಾಡುತ್ತಿರುವ ನಿನ್ನ ಸಂಕಟ ನಿನ್ನವರನ್ನೂ ಕಾಡುವ ಸಂಕಟವಾಗಿ ಪರಿಣಮಿಸುತ್ತದೆ ಎಂಬ ನಿಲುವು ಅದು.

ಎಂದೋ ಹುಟ್ಟಿದ ಶಿಶಿರದ ಪಾಡು. ರಾಮನ ಪಾಡಿನಲ್ಲಿ, ಅದನ್ನು ನೋಡಿ ಕರಗುವ ಸೀತೆಯ ಪಾಡಿನಲ್ಲಿ ಹೀಗೆ ಮುಗಿಯುತ್ತದೆ. ಒಂದು ಕವಿತೆ ಹುಟ್ಟಿ ಮತ್ತೊಂದು ಕವಿತೆಯಲ್ಲಿ ಮುಗಿಯುವ ಬಗೆಯಿದು… ಮುಗಿಯದ ಭಾವದ ಕವಿತೆ.

ಇದನ್ನೂ ಓದಿ: ಸಾಲಭಂಜಿಕೆ ಅಂಕಣ| ಬಳೆಗಾರನಿಗೇಕೆ ಹಾಡುವ ಪಾಡು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

ದಶಮುಖ ಅಂಕಣ: ಹುಚ್ಚು ಎನ್ನುವುದನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಇತರರ ಖುಷಿಯನ್ನು ಬಯಸುವವರು ಹುಚ್ಚರೋ ಅಥವಾ ಇತರರ ಖರ್ಚಲ್ಲಿ ಖುಷಿ ಪಡುವವರೋ? ಇದಕ್ಕೆಲ್ಲ ಸಂವೇದನೆಗಳಿಗೆ ತಕ್ಕಂತೆ ಉತ್ತರ ಹುಡುಕುವುದೋ ಕಾಲಕ್ಕೆ ತಕ್ಕಂತೆಯೋ?

VISTARANEWS.COM


on

dashamukha column madness
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ʻಹುಚ್ಚುʼ (madness) ಎಂಬ ಶಬ್ದ ಕಿವಿಗೆ ಬೀಳುತ್ತಿದ್ದಂತೆ ನೆನಪಾಗುವ ಚಿತ್ರಗಳ ಬಗ್ಗೆ ಹೆಚ್ಚು ಹೇಳುವುದು ಬೇಡವಲ್ಲ. ಯಾವುದೇ ದೇಶ, ಭಾಷೆ, ಸಂಸ್ಕೃತಿಗಳಲ್ಲಿ ನೋಡಿದರೂ ʻಹುಚ್ಚಿಗೆʼ ಹೆಚ್ಚಿಗೆ ಅರ್ಥಗಳಿಲ್ಲ… ಅದೊಂದೇ ಅರ್ಥ! ಹಾಗಾಗಿಯೇ ʻಅದೊಂಥರಾ ಹುಚ್ಚು, ಅವನಿಗೊಂದು ಹುಚ್ಚುʼ ಎಂಬಿತ್ಯಾದಿ ಮಾತುಗಳ ಬೆನ್ನಿಗೇ ʻಅಲ್ಲೇನೋ ಒಂದು ಅತಿರೇಕವಿದೆʼ ಎಂಬ ಭಾವ ಬಂದುಬಿಡುತ್ತದೆ. ಅದಕ್ಕಾಗಿಯೇ ʻಹುಚ್ಚು ಸಾಹಸ, ಹುಚ್ಚು ಪ್ರೀತಿʼ ಮುಂತಾದ ಪ್ರಯೋಗಗಳನ್ನು ಮಾಡುತ್ತಾ, ಬೈಯ್ಯುವುದಕ್ಕೆ, ವ್ಯಂಗ್ಯಕ್ಕೆ, ಕುಹಕಕ್ಕೆ, ಟೀಕೆಗೆ, ತಮಾಷೆಗೆ… ಅಥವಾ ಇಂಥದ್ದೇ ಋಣಾತ್ಮಕ ಎನ್ನಬಹುದಾದ ಛಾಯೆಗಳಲ್ಲಿ ಈ ಶಬ್ದವನ್ನು ಬಳಸುತ್ತೇವೆ. ನಿಜಕ್ಕೂ ಈ ಶಬ್ದವನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಬದುಕಿನಲ್ಲಿ ಪ್ರೀತಿ, ಸೌಖ್ಯ, ಖುಷಿಯನ್ನು ಅರಸುವವರಿಗೂ ಇದನ್ನು ಬಳಸಬಹುದೇ? ಸಾಹಿತ್ಯ-ಸಿನೆಮಾಗಳಲ್ಲಿ ಕಾಣುವ ಪ್ರೀತಿ, ಪ್ರೇಮಗಳಿಗೆ ಹುಚ್ಚನ್ನು ಪರ್ಯಾಯವಾಗಿ ಬಳಸುವುದು ಹೊಸದೇನಲ್ಲ. ಆದರೆ ಇಲ್ಲೀಗ ಅಂಥ ಹರೆಯದ ಪ್ರೀತಿಯ ಬಗ್ಗೆಯಲ್ಲ ಹೇಳುತ್ತಿರುವುದು. ಇತರರ ಸೌಖ್ಯದಲ್ಲಿ ತಮ್ಮ ಸ್ವಾಸ್ಥ್ಯವನ್ನು ಅರಸುವವರಿಗೂ ಈ ಶಬ್ದ ಸಲ್ಲುತ್ತದೆಯೇ?

ಇತ್ತೀಚೆಗೆ ಭೇಟಿ ಮಾಡಿದ ಒಂದಿಬ್ಬರು ವ್ಯಕ್ತಿಗಳು ಇಂಥದ್ದೊಂದು ಮಂಥನವನ್ನು ಹುಟ್ಟು ಹಾಕಿದ್ದು ಹೌದು. ಎಲ್ಲರಿಗಿಂತ ಭಿನ್ನವಾದ ಬದುಕನ್ನು ಆಯ್ದುಕೊಳ್ಳುವವರು, ತಮ್ಮ ಜೀವನದ ರೀತಿ-ನೀತಿಗಳನ್ನು ಅಥವಾ ಧ್ಯೇಯ-ಆದರ್ಶಗಳನ್ನು ʻಹುಚ್ಚುʼ ಎನ್ನುವಷ್ಟು ಪ್ರೀತಿಸದಿದ್ದರೆ, ಖುಷಿಯಿಂದ ಬದುಕುವುದು ಸಾಧ್ಯವೇ? ಎಷ್ಟೇ ಸುಭಿಕ್ಷವಾದ ಬದುಕನ್ನೂ ಹಳಿಯುತ್ತಲೇ ಬದುಕುವ ಇಂದಿನ ದಿನಗಳಲ್ಲಿ, ಇರುವ ಬದುಕಲ್ಲಿ ಸುಭಿಕ್ಷವನ್ನು ಸೃಷ್ಟಿಸುವ ಅವರನ್ನು ಹುಚ್ಚರೆಂದರೆ ಅತಿರೇಕವಾದೀತೇ? ಬದುಕನ್ನು ಕೊರಗಿನಲ್ಲೇ ಕಳೆಯುವುದು ಹುಚ್ಚೋ ಅಥವಾ ಇತರರ ಕೊರಗನ್ನು ಕಳೆಯುವುದು ಹುಚ್ಚೋ?

ಹೀಗೆನ್ನುವಾಗ ಅನಂತ್‌ ಸರ್‌ ನೆನಪಾಗುತ್ತಾರೆ. ಬದುಕಲ್ಲಿ ವಿದ್ಯೆ ದೊರೆಯದ ಮಕ್ಕಳನ್ನು ಶಿಕ್ಷಣದ ಹಾದಿಗೆ ಹಚ್ಚಿ, ನೆಲೆ ಕಾಣಿಸುವ ಅವರ ಸಾಹಸವನ್ನು ವರ್ಣಿಸುವುದಕ್ಕೆ ಬೇರೆ ಪದಗಳಿಗೆ ಸಾಧ್ಯವಿಲ್ಲ. ಮನೆ ಇದ್ದೂ ಇಲ್ಲದಂತಾದವರು, ಮನೆಯೇ ಇಲ್ಲದವರು, ಪಾಲಕರು ಇಲ್ಲದವರು, ಪಾಲಕರು ಯಾಕಾದರೂ ಇದ್ದಾರೋ ಎನ್ನುವಂಥ ಹಲವು ನಮೂನೆಯ ವಾತಾವರಣದಿಂದ ಬಂದ ಮಕ್ಕಳಿಗೆ ಊಟ, ವಸತಿಯ ಜೊತೆಗೆ ವಿದ್ಯೆ ನೀಡುವುದನ್ನೇ ಧ್ಯೇಯವಾಗಿಸಿಕೊಂಡವರು. ಹತ್ತು-ಹನ್ನೆರಡು ವರ್ಷಗಳವರೆಗೆ ಶಾಲೆಯ ಮುಖವನ್ನೂ ಕಾಣದವರು, ಎಂದೊ ಶಾಲೆಗೆ ಹೋಗಿ ನಡುವಲ್ಲೇ ಕಳೆದುಹೋದವರು- ಇಂಥ ನೂರಾರು ಮುಖಗಳಲ್ಲಿ ನಗು ಅರಳಿಸುವುದಕ್ಕೆ ಇರಬೇಕಾದ ಅದಮ್ಯ ಪ್ರೀತಿಯೂ ಒಂದು ಬಗೆಯ ಹುಚ್ಚೇ ತಾನೇ? ಹಾಗಿಲ್ಲದಿದ್ದರೆ, ಇಂಥ ಸಾಹಸಿಗಳು ಲೋಕದಲ್ಲಿ ನಮಗೆ ವಿರಳವಾಗಿ ಕಾಣುವುದೇಕೆ?

ಆರೇಳು ವರ್ಷದವರನ್ನು ಒಂದನೇ ಕ್ಲಾಸಿಗೆ ಕೂರಿಸುವಲ್ಲಿ ಅಷ್ಟೇನು ಸಮಸ್ಯೆಯಾಗಲಿಕ್ಕಿಲ್ಲ. ವರ್ಷದ ಆಧಾರದ ಮೇಲೆಯೇ ತಾನೆ ನಮ್ಮ ಶಿಕ್ಷಣ ವ್ಯವಸ್ಥೆ ರೂಪುಗೊಂಡಿರುವುದು. ಆದರೆ ಹದಿಹರೆಯಕ್ಕೆ ಕಾಲಿಟ್ಟವರು ಇನ್ನೂ ಶಾಲೆಯ ಮೆಟ್ಟಿಲನ್ನೇ ಹತ್ತದಿರುವಾಗ ಅವರನ್ನೂ ಒಂದನೇ ಕ್ಲಾಸಿಗೆ ಕೂರಿಸುವುದು ಹೇಗೆ? ʻಹಾಗಾಗಿಯೇ ದೈಹಿಕ ವಯಸ್ಸಿನ ಆಧಾರದ ಮೇಲಲ್ಲದೆ, ಮಕ್ಕಳ ಬೌದ್ಧಿಕ ವಯಸ್ಸಿಗೆ ಅನುಗುಣವಾಗಿ ಕಲಿಯುವ ಗುಂಪುಗಳನ್ನಾಗಿ ವಿಂಗಡಿಸಿಕೊಳ್ಳುತ್ತೇವೆ. ಹಾಗೆಯೇ ಅವರ ಕಲಿಕೆ ಮುಂದುವರಿಯುತ್ತದೆʼ ಎನ್ನುವುದು ಅನಂತ್‌ ಸರ್‌ ಹೇಳುವ ಮಾತು. ದೂರದ ಅಸ್ಸಾಂ, ಬಿಹಾರಗಳಿಂದ ಬಂದ ಮಕ್ಕಳಿಗೆ ಶಾಲೆಯ ಕಲ್ಪನೆಯೂ ಇಲ್ಲದಿರುವಾದ, ಇವರ ಭಾಷೆ ಅವರಿಗೆ-ಅವರ ಭಾಷೆ ಇವರಿಗೆ ತಿಳಿಯದಿರುವಾಗ, ವಿದ್ಯೆಯ ಶ್ರೀಕಾರ ಆಗುವುದು ಹೇಗೆ? ʻಇದೊಂಥರಾ ಹುಚ್ಚು. ಇದೂ ಆಗತ್ತೆʼ ಎನ್ನುವಾಗಿನ ಇವರ ಮುಖದ ನಗುವನ್ನು ಏನೆಂದು ಅರ್ಥ ಮಾಡಿಕೊಳ್ಳುವುದು?

ಈ ಚೌಕಟ್ಟಿನಾಚೆಯ ಮನೆಯಲ್ಲಿ ಕಲಿತು ಹೊರಬಿದ್ದು, ದುಡಿದು ಸಂಪಾದಿಸಿ ಬದುಕುತ್ತಿರುವ ತಮ್ಮ ಮಕ್ಕಳ ಬಗ್ಗೆ ಹೇಳುವಾಗ ಅವರ ಮುಖದ ನಗುವಿಗಿರುವ ಅರ್ಥದ ಅರಿವಾಗುತ್ತದೆ ನಮಗೆ. ಹುಚ್ಚಿಗೂ ಎಷ್ಟೊಂದು ಸುಂದರ, ಸಲ್ಲಕ್ಷಣಗಳಿವೆ ಎಂಬುದನ್ನು ತಿಳಿಯುವುದಕ್ಕೆ ಅದೊಂದು ನಗು ಸಾಕು. ಕೊರಗಿ ಕಳೆಯುವುದಕ್ಕಿಂತ, ಹೀಗೆ ಕೊರಗು ಕಳೆಯುವ ಹುಚ್ಚು ಒಳ್ಳೆಯದಲ್ಲವೇ? ನಮಗಿರುವ ಹುಚ್ಚು ಯಾವುದು ಎಂದು ಎಂದಾದರೂ ಯೋಚಿಸಿದ್ದೇವೆಯೇ?

ಈ ಎಲ್ಲ ಮಾತಿನ ನಡುವೆ ಪ್ರದೀಪ ಎನ್ನುವ ಆ ವ್ಯಕ್ತಿ ನೆನಪಾಗುತ್ತಾನೆ. ಕಪ್ಪು ಬಣ್ಣದ ಸಾಧಾರಣ ಮೈಕಟ್ಟಿನ ಆತ ಪುಟ್ಟ ದ್ವೀಪ ರಾಷ್ಟ್ರವೊಂದರ ನಿವಾಸಿ. ಅರಳಿದಂತಿರುವ ಕನ್ನಡಿಗಣ್ಣು, ಅವನದ್ದೇ ಆದ ವಿಶಿಷ್ಟ ಲಯದ ಇಂಗ್ಲಿಷ್‌ ಭಾಷೆಯ ಆತ ನಮಗೆ ಪರಿಚಯವಾಗಿದ್ದು ಪ್ರವಾಸವೊಂದರ ಭಾಗವಾಗಿ. ಅಲೆಯುವ ಹುಚ್ಚಿರುವ ಜನ ಲೋಕದಲ್ಲಿ ಎಷ್ಟೋ ಮಂದಿ ಇದ್ದಾರೆ. ಆದರೆ ಜೊತೆಗೆ ತಿರುಗಾಡುವವರ ಸೌಖ್ಯವೇ ತನಗೆ ಪ್ರೀತಿ ಎನ್ನುವವರೂ ಇದ್ದಾರೆಂಬುದು ತಿಳಿದಿದ್ದು ಆಗಲೇ. ಈತ ವೃತ್ತಿಯಲ್ಲಿ ಪ್ರವಾಸಿ ಗೈಡ್‌. ನಮ್ಮ ಯಾವುದೇ ಪ್ರವಾಸಿ ತಾಣಗಳಿಗೆ ಹೋದರೆ ಅಲ್ಲಿ ʻಗೈಡ್‌ ಬೇಕೆ?ʼ ಎಂದು ಮುತ್ತಿಗೆ ಹಾಕುವ ಗುಂಪಿನಲ್ಲಿ ಆತನೂ ಇರಬಹುದಾಗಿದ್ದವ. ಆದರೆ ತಮಗೆ ತಿಳಿದಷ್ಟನ್ನು ತೋಚಿದಂತೆ ಒದರಿ, ಬಂದವರಿಂದ ದುಡ್ಡು ಕಿತ್ತು ಕಳಿಸುವ ಗೈಡ್‌ಗಳ ಸಾಲಿನಿಂದ ಗಾವುದಗಟ್ಟಲೆ ದೂರದಲ್ಲಿ ಇರುವವ ಈತ.

ʻತಿರುಗಾಡಿದಷ್ಟೇ, ತಿರುಗಾಡಿಸುವುದೂ ನನಗಿಷ್ಟʼ ಎನ್ನುವ ಈತ, ತನ್ನ ಕಾರು ಓಡುವ ಪ್ರತಿಯೊಂದು ರಸ್ತೆಯ ಪರಿಚಯವನ್ನೂ ಮಾಡಿಕೊಡಬಲ್ಲ. ಯಾವ ಊರಿನ ಮಳೆ-ಬೆಳೆ ಹೇಗೆ ಎಂಬುದರಿಂದ ಹಿಡಿದು ಅಲ್ಲಿನ ಡೆಮಗ್ರಾಫಿಕ್‌ ವಿಶ್ಲೇಷಣೆಯನ್ನೂ ನೀಡಬಲ್ಲ. ʻಈ ಭಾಗದಲ್ಲಿ ತುಂಬಾ ಎಮ್ಮೆ ಸಾಕುತ್ತಾರೆ. ಮಣ್ಣಿನ ಗಡಿಗೆಯಲ್ಲಿ ಹಾಲು ಹೆಪ್ಪಾಕಿ, ಮೊಸರು ಮಾರುತ್ತಾರೆ. ಅದನ್ನೊಮ್ಮೆ ತಿನ್ನದಿದ್ದರೆ ಈ ರಸ್ತೆಯಲ್ಲಿ ಪ್ರಯಾಣ ಮಾಡಿದ್ದೇ ವ್ಯರ್ಥʼ ಎಂದು ಸರಕ್ಕನೆ ಗಾಡಿ ನಿಲ್ಲಿಸಿ, ಎರಡು ಪುಟ್ಟ ಗಡಿಗೆಗಳನ್ನು ಹಿಡಿದು ತರುತ್ತಾನೆ. ʻಇಷ್ಟು ದೂರ ಬಂದವರು ಈ ಸಿಹಿ ತಿನ್ನದಿದ್ದರೆ, ನಿಮ್ಮ ತಿರುಗಾಟವೇ ಅಪೂರ್ಣʼ ಎನ್ನುತ್ತಾ ಯಾವುದೋ ಸಿಹಿ ಎದುರಿಗಿಡುತ್ತಾನೆ. ʻಇಲ್ಲಿ ಭರಪೂರ ತರಕಾರಿ ಬೆಳೆಯುತ್ತಾರೆ. ಇದರಲ್ಲೊಂದು ಸಲಾಡ್‌ ಮಾಡುತ್ತೇನೆ ನೋಡಿ, ತಿನ್ನುವುದಕ್ಕೆ ಪುಣ್ಯ ಬೇಕುʼ ಎಂದು ಉಪಚಾರ ಮಾಡುತ್ತಾನೆ. ಇಂಥ ಯಾವುದನ್ನೂ ಮಾಡಬೇಕಾದ ಅಗತ್ಯ ಆತನಿಗಿಲ್ಲ. ನಮ್ಮ ಜಾಗಕ್ಕೆ ಕರೆದೊಯ್ದರೆ ಅವನ ಕೆಲಸ ಮುಗಿಯಿತು; ಅವನ ದುಡ್ಡು ಅವನ ಕೈ ಸೇರುತ್ತದೆ. ʻತಿರುಗಾಡುವುದು, ತಿರುಗಾಡಿಸುವುದು ನಂಗೊಂಥರಾ ಹುಚ್ಚು. ಹೊಸ ಜನರೊಂದಿಗೆ ನಂಟು ಬೆಸೆಯುವುದು, ಅವರನ್ನು ಖುಷಿಯಾಗಿಡುವುದು ನಂಗಿಷ್ಟʼ ಎನ್ನುತ್ತಾ ಹಿಂದಿ ನಟ ದೇವಾನಂದ್‌ ರೀತಿಯಲ್ಲಿ ನಗೆ ಬೀರುತ್ತಾನೆ.

ಇದನ್ನೂ ಓದಿ: ದಶಮುಖ ಅಂಕಣ: ಮೌನವೆಂಬ ಭಾವಸೇತು

ಗುರಿ ತಲುಪುವುದಕ್ಕಿಂತ ಖುಷಿ ನೀಡುವುದು ಗಮ್ಯದೆಡೆಗಿನ ದಾರಿಗಳಲ್ಲವೇ? ಯಾವುದೇ ದಾರಿಯಲ್ಲಿ ಎದುರಾಗುವ ಊರೊಂದರ ಹೆಸರಿನ ಹಿಂದಿನ ಗಮ್ಮತ್ತು ತಿಳಿಸುವುದು, ಯಾವುದೋ ದೇಶದಿಂದ ಬರುವ ಚಿತ್ರವಿಚಿತ್ರ ಅಲೆಮಾರಿಗಳ ಜಾಯಮಾನ ವಿಸ್ತರಿಸುವುದು- ಇವೆಲ್ಲ ತನ್ನ ಪ್ರಯಾಣಿಕರ ದಾರಿಯನ್ನು ಬೋರಾಗದಂತೆ ಕಳೆಯುವ ಮತ್ತು ಅವರೊಂದಿಗೆ ನಂಟು ಬೆಸೆಯುವ ಆತನ ಉದ್ದೇಶಕ್ಕೆ ಒದಗುವಂಥವು. ವಿಹಾರಕ್ಕೆ, ವಿರಾಮಕ್ಕೆ, ಅಧ್ಯಯನಕ್ಕೆ ಮುಂತಾದ ಹಲವು ಕಾರಣಗಳನ್ನು ಹೊತ್ತು ಬರುವ ಜನರ ಕಥೆಗಳು ಆತನ ಸಂಚಿಯಲ್ಲಿವೆ. ಎಲ್ಲರಿಗೂ ಅವರವರ ಉದ್ದೇಶ ಈಡೇರುವಂತೆ ಶ್ರಮಿಸುವುದು ತನಗೆ ಪ್ರಿಯವಾದ ಸಂಗತಿ ಎನ್ನುವ ಇಂಥವರು ಜೊತೆಗಿದ್ದರೆ, ಅಲ್ಲಾವುದ್ದೀನನ ಮಾಂತ್ರಿಕ ಚಾಪೆಯ ಮೇಲೆ ತೇಲಿದಂತೆ ದಾರಿ ಸಾಗುತ್ತದೆ. ಇಂಥವರನ್ನು ನೋಡಿದಾಗ, ಇನ್ನೊಬ್ಬರ ಸೌಖ್ಯದಲ್ಲಿ ತಮ್ಮ ಸ್ವಾಸ್ಥ್ಯವನ್ನು ಅರಸುವ ಸ್ವಭಾವದ ಬಗ್ಗೆ ಬೇರೆ ಶಬ್ದಗಳು ನೆನಪಾಗುತ್ತಿಲ್ಲ.

ಹಣ, ಸಂಪತ್ತು, ಖ್ಯಾತಿ, ಅಧಿಕಾರಗಳ ಹುಚ್ಚು ಅಂಟಿಸಿಕೊಂಡವರು ನಮ್ಮೆದುರಿಗೆ ಮೆರವಣಿಗೆ ಹೊರಟಿದ್ದಾರೆ ಈಗ. ಚುನಾವಣೆಯ ಕಣದಲ್ಲಿಳಿದು ಅಧಿಕಾರ ದಕ್ಕಿಸಿಕೊಳ್ಳಲು, ದಕ್ಕದಿದ್ದರೆ ಯಾವ ಮಟ್ಟಕ್ಕೂ ಇಳಿಯುವಷ್ಟು ಹುಚ್ಚರಾಗಿದ್ದಾರೆ ಇಂದು. ಯಾರಿಗಾಗಿ ತಾವು ಆಯ್ಕೆಯಾಗುತ್ತಿದ್ದೇವೆಯೋ ಅವರ ಸೌಖ್ಯವನ್ನು ಗಮನಿಸುವುದೇ ಮರುಳು ಎನಿಸುತ್ತಿದೆ ಅಭ್ಯರ್ಥಿಗಳಿಗೆ. ಇಂಥವುಗಳನ್ನು ನೋಡಿದಾಗ ಮತ್ತದೇ ಪ್ರಶ್ನೆಗಳು ಮೂಡುತ್ತವೆ. ಹುಚ್ಚು ಎನ್ನುವುದನ್ನು ಯಾವುದಕ್ಕೆಲ್ಲ ಸಂವಾದಿಯಾಗಿ ಬಳಸಬಹುದು? ಇತರರ ಖುಷಿಯನ್ನು ಬಯಸುವವರು ಹುಚ್ಚರೋ ಅಥವಾ ಇತರರ ಖರ್ಚಲ್ಲಿ ಖುಷಿ ಪಡುವವರೋ? ಇದಕ್ಕೆಲ್ಲ ಸಂವೇದನೆಗಳಿಗೆ ತಕ್ಕಂತೆ ಉತ್ತರ ಹುಡುಕುವುದೋ ಕಾಲಕ್ಕೆ ತಕ್ಕಂತೆಯೋ? ಹುಚ್ಚಿಗೆ ಹೆಚ್ಚಿಗೆ ಅರ್ಥಗಳಿಲ್ಲವೆಂದು ಈಗಲೂ ಹೇಳಬಹುದೇ?

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

Continue Reading

ಅಂಕಣ

ರಾಜಮಾರ್ಗ ಅಂಕಣ: ವಿಶ್ವವಿಜೇತನಾಗುವ ತವಕದಲ್ಲಿರುವ ಚೆಸ್ ಆಟಗಾರ ದೊಮ್ಮರಾಜು ಗುಕೇಶ್

ರಾಜಮಾರ್ಗ ಅಂಕಣ: ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದು ನಿಂತು ಆತ ಇಡೀ ಜಗತ್ತಿನ ಕಣ್ಮಣಿಯಾಗಿ ಮೂಡಿ ಬಂದಿದ್ದಾನೆ. ವಿಶ್ವನಾಥನ್ ಆನಂದ್ ನಂತರ ಆ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯನಾಗಿ ಆತ ಇತಿಹಾಸಕ್ಕೆ ಸೇರಿ ಹೋಗಿದ್ದಾನೆ. ಆ ಹುಡುಗನ ಹೆಸರು ಡಿ.ಗುಕೇಶ್.

VISTARANEWS.COM


on

gukesh dommaraju rajamarga column
Koo

17ರ ಹರೆಯದ ಈ ಹುಡುಗನ ಸಾಧನೆಗೆ ವಿಶ್ವವೇ ತಲೆದೂಗುತ್ತಿದೆ!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಚೆನ್ನೈ ಮೂಲದ ಗುಕೇಶ್ (Gukesh Dommaraju) ವಿಶ್ವ ಚಾಂಪಿಯನ್ (World Champion) ಆಗಲು ಇನ್ನೊಂದೇ ಮೆಟ್ಟಿಲು ಬಾಕಿ ಇದೆ! ಈತನ ವಯಸ್ಸು ಇನ್ನೂ 17 ವರ್ಷ. ಮೌನದ ಮೂಲಕ ಜಗತ್ತನ್ನು ಗೆಲ್ಲಲು ಹೊರಟ ಆತನ ತೀಕ್ಷ್ಣ ಕಣ್ಣುಗಳು ಈಗಲೇ ವಿಶ್ವ ವಿಜಯಿಯಾಗುವ ಕನಸಿನಿಂದ ತುಂಬಿವೆ. ಹಿಂದೊಮ್ಮೆ ವಿಶ್ವ ಚಾಂಪಿಯನ್ ಚೆಸ್ ಆಟಗಾರ (Chess) ಮ್ಯಾಗ್ನಸ್ ಕಾರ್ಲಸನ್ (Magnus Carlson) ಅವರನ್ನು ಇದೇ ಹುಡುಗ ಸೋಲಿಸಿದಾಗ ಇಡೀ ಜಗತ್ತು ನಿಬ್ಬೆರಗಾಗಿ ಆತನನ್ನು ಗಮನಿಸಿತ್ತು.

ಈಗ ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದು ನಿಂತಾಗ ಆತ ಇಡೀ ಜಗತ್ತಿನ ಕಣ್ಮಣಿಯಾಗಿ ಮೂಡಿ ಬಂದಿದ್ದಾನೆ. ವಿಶ್ವನಾಥನ್ ಆನಂದ್ ನಂತರ ಆ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯನಾಗಿ ಆತ ಇತಿಹಾಸಕ್ಕೆ ಸೇರಿ ಹೋಗಿದ್ದಾನೆ.

ಆ ಹುಡುಗನ ಹೆಸರು ಡಿ.ಗುಕೇಶ್

ಆತ ಚೆನ್ನೈಯ ಪ್ರತಿಭೆ. ವಿಶ್ವನಾಥನ್ ಆನಂದ್ ಐದು ಬಾರಿ ವಿಶ್ವ ಚಾಂಪಿಯನ್ ಆದ ನಂತರ ನಿವೃತ್ತಿ ಪಡೆದು ಚೆನ್ನೈಯಲ್ಲಿ ವಿಶ್ವನಾಥನ್ ಆನಂದ ಚೆಸ್ ಆಕಾಡೆಮಿ (WACA)ಯನ್ನು ಸ್ಥಾಪನೆ ಮಾಡಿದ್ದರು. ಅದರಿಂದ ಸ್ಫೂರ್ತಿ ಪಡೆದು ಚೆನ್ನೈಯಲ್ಲಿ ಈಗ 60ಕ್ಕಿಂತ ಅಧಿಕ ಚೆಸ್ ಅಕಾಡೆಮಿಗಳು ಇವೆ. ಅದರ ಪರಿಣಾಮವಾಗಿ ಇದೀಗ ಚೆನ್ನೈ ನಗರವು ಭಾರತದ ಚೆಸ್ ರಾಜಧಾನಿ ಆಗಿ ಬೆಳೆದಿದೆ. ಅತೀ ಸಣ್ಣ ವಯಸ್ಸಿನಲ್ಲಿ ಗ್ರಾನ್ ಮಾಸ್ಟರ್ ಆದ ಆರ್ ಪ್ರಜ್ಞಾನಂದ, ಆರ್ ವೈಶಾಲಿ, ಸುಬ್ಬರಾಮನ್ ವಿಜಯಲಕ್ಷ್ಮಿ ಇವರೆಲ್ಲರೂ ಚೆನ್ನೈಯವರು. ಈ ಪಟ್ಟಿಗೆ ಈಗ ಹೊಳೆಯುವ ಪ್ರತಿಭೆ ಸೇರ್ಪಡೆ ಆಗಿದೆ. ಆತ ಡಿ ಗುಕೇಶ್. ಭಾರತದ ಒಟ್ಟು ಚೆಸ್ ಗ್ರಾನ್ ಮಾಸ್ಟರಗಳಲ್ಲಿ 35% ಆಟಗಾರರು ಚೆನ್ನೈಗೆ ಸೇರಿದವರು ಅನ್ನುವಾಗ ಆ ನಗರದ ಬಗ್ಗೆ ಹೆಮ್ಮೆ ಮೂಡುತ್ತದೆ.

ಬಾಲ್ಯದಿಂದಲೇ ಚೆಸ್ ಆಟಕ್ಕೆ ಸಮರ್ಪಣೆ ಆಗಿ ಬೆಳೆದ ಹುಡುಗ ಆತ .ಅದಕ್ಕಾಗಿ ತನ್ನ ಬಾಲ್ಯದ ಆಟ, ಶಾಲೆ, ತುಂಟಾಟ ಎಲ್ಲವನ್ನೂ ಬದಿಗೆ ಇಟ್ಟು ಹೋರಾಟಕ್ಕೆ ಇಳಿದವನು.

ಮಗನಿಗಾಗಿ ಅಪ್ಪ, ಅಮ್ಮ ಮಾಡಿದ ತ್ಯಾಗ

ಅವನ ತಂದೆ ಡಾ.ರಜಿನಿಕಾಂತ್ ನಗರದ ಪ್ರಸಿದ್ಧ ENT ಸರ್ಜನ್. ತಾಯಿ ಡಾ. ಪದ್ಮಕುಮಾರಿ ಕೂಡ ಮೈಕ್ರೋಬಯೊಲಜಿ ತಜ್ಞರು. ಇಬ್ಬರೂ ತಮ್ಮ ಮಗನಿಗಾಗಿ ತಮ್ಮ ಪ್ರಾಕ್ಟೀಸ್ ಮರೆತು ಜಗತ್ತಿನಾದ್ಯಂತ ಓಡಾಡಿದ್ದಾರೆ. ತರಬೇತಿಗಾಗಿ ತುಂಬಾ ದುಡ್ಡು ಖರ್ಚು ಮಾಡಿದ್ದಾರೆ. ತುಂಬಾ ಸಮಯ ಕೊಟ್ಟಿದ್ದಾರೆ. ಮಗನ ಚೆಸ್ ಭವಿಷ್ಯಕ್ಕಾಗಿ ಯಾವ ತ್ಯಾಗಕ್ಕೂ ಸಿದ್ದರಾಗಿ ನಿಂತಿದ್ದಾರೆ.

ಹುಡುಗನೂ ನಾಲ್ಕನೇ ತರಗತಿಯಿಂದ ಶಾಲೆಗೇ ಹೋಗದೇ ಚೆಸ್ ಆಟದಲ್ಲಿ ಮೈ ಮರೆತಿದ್ದಾನೆ. ಶಾಲಾ ಶಿಕ್ಷಣಕ್ಕೆ ಸಮಯ ದೊರೆಯದ ಬಗ್ಗೆ ಹೆತ್ತವರಿಗೆ ಬೇಸರ ಇದೆ. ಆದರೆ ಆತನು 12ನೆಯ ವಯಸ್ಸಿಗೇ ಚೆಸ್ ಗ್ರಾನ್ ಮಾಸ್ಟರ್ ಹುದ್ದೆಗೆ ಏರಿದಾಗ ಅವರು ಆನಂದ ಭಾಷ್ಪ ಸುರಿಸಿದ್ದಾರೆ. ಮುಂದೆ ಚೆಸ್ ವಿಶ್ವ ಚಾಂಪಿಯನ್ ಮ್ಯಾಗ್ನೆಸ್ ಕಾರ್ಲಸನ್ ಅವರನ್ನು ಆತನು ಸೋಲಿಸಿದಾಗ ತುಂಬಾ ಖುಷಿ ಪಟ್ಟಿದ್ದಾರೆ. ಮ್ಯಾಗ್ನೆಸನನ್ನು ಸೋಲಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಗುಕೇಶ್ ಅನ್ನುವುದು ಸದ್ಯಕ್ಕೆ ಅಳಿಸಲಾಗದ ದಾಖಲೆ!

ಸಾಂಪ್ರದಾಯಕ ಚೆಸ್ ಕಲಿಕೆ, ಅಹಂಕಾರದಿಂದ ದೂರ!

ಸಾಮಾನ್ಯವಾಗಿ ಇತ್ತೀಚಿನ ಚೆಸ್ ಕಲಿಯುವ ಮಕ್ಕಳು ಕಂಪ್ಯೂಟರ್ ಜೊತೆ ಕೂತು ಚೆಸ್ ಆಡುತ್ತಾರೆ. ಆದರೆ ಗುಕೇಶ್ ಚೆಸ್ ಕಲಿತದ್ದು ಸಾಂಪ್ರದಾಯಿಕ ವಿಧಾನದಲ್ಲಿ. ಗುರುಗಳು ಹೇಳಿದ್ದನ್ನು ನೂರಕ್ಕೆ ನೂರರಷ್ಟು ಪಾಲಿಸುವ ಅವನ ಶ್ರದ್ಧೆ, ಏಕಾಗ್ರತೆ, ಬದ್ಧತೆ ಅವನನ್ನು ಪ್ರತೀ ಹೆಜ್ಜೆಯಲ್ಲಿಯೂ ಗೆಲ್ಲಿಸುತ್ತಿವೆ. ಯಾರಾದರೂ ಸನ್ಮಾನಕ್ಕೆ, ಸಂವಾದಕ್ಕೆ ಕರೆದರೆ ಆತನು ನಯವಾಗಿ ನೋ ಅನ್ನುವುದನ್ನು ಕಲಿತಿದ್ದಾನೆ. ಪ್ರಚಾರದಿಂದ ಆತ ಗಾವುದ ದೂರ ಓಡುತ್ತಾನೆ. ತಾನಾಯಿತು, ತನ್ನ ಅಭ್ಯಾಸವಾಯಿತು ಎಂದು ಚೆಸ್ ಆಟದಲ್ಲಿ ಮುಳುಗಿ ಬಿಡುವ ನಾಚಿಕೆಯ ಹುಡುಗ ಗುಕೇಶ್.

ಪ್ರಶಸ್ತಿ ಗೆದ್ದಾಗ ನಿನಗೆ ಹೇಗನ್ನಿಸಿತು ಹುಡುಗ? ಎಂದು ಕೇಳಿದಾಗ “ನನ್ನ ಗೆಲುವಿಗಿಂತ ದೇಶವನ್ನು ರೆಪ್ರೆಸೆಂಟ್ ಮಾಡುವ ಅವಕಾಶ ದೊರೆತದ್ದು ನನಗೆ ಹೆಚ್ಚು ಖುಷಿ ಕೊಟ್ಟಿದೆ” ಅನ್ನುತ್ತಾನೆ.

ನಿನ್ನ ಭವಿಷ್ಯದ ಗುರಿ ಏನು ಎಂದು ಯಾರೋ ಕೇಳಿದಾಗ “ನನಗೆ ವಿಶಿ ಸರ್ (ವಿಶ್ವನಾಥನ್ ಆನಂದ್) ಅವರು ಏನು ಹೇಳುತ್ತಾರೆಯೋ ಆ ಪ್ರಕಾರ ಮಾಡುತ್ತೇನೆ. ನನಗೆ ಏನು ಬೇಕು ಎಂದು ಅವರಿಗೆ ಚೆನ್ನಾಗಿ ಗೊತ್ತಿದೆ” ಅನ್ನುತ್ತಾನೆ.

ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ತನಗೆ ಈಗ ಒಳ್ಳೆಯ ಶಿಷ್ಯ ದೊರೆತ ಖುಷಿಯಲ್ಲಿ ಇದ್ದಾರೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

Continue Reading

ಅಂಕಣ

ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

ರಾಜಮಾರ್ಗ ಅಂಕಣ: ಪುಸ್ತಕಗಳು ಜ್ಞಾನವನ್ನು ಉದ್ದೀಪನ ಮಾಡುವ ದೀಪಸ್ತಂಭಗಳು ಮಾತ್ರವಲ್ಲ, ಸ್ಫೂರ್ತಿ ನೀಡುವ ಮಾಧ್ಯಮಗಳು. ಗಾಂಧೀಜಿಯವರು ಬಾಲ್ಯದಲ್ಲಿ ಓದಿದ ಜಾನ್ ರಸ್ಕಿನ್ ಬರೆದ ‘ಆನ್ ಟು ದ ಲಾಸ್ಟ್ ‘ ಪುಸ್ತಕವು ತನ್ನ ಬದುಕಿನ ಗತಿಯನ್ನೇ ಬದಲಾವಣೆ ಮಾಡಿತು ಎಂದು ಹೇಳಿದ್ದಾರೆ.

VISTARANEWS.COM


on

reading rajamarga column
Koo
Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಏಪ್ರಿಲ್ 23 – ಇಂದು ವಿಶ್ವ ಪುಸ್ತಕ ದಿನ (World book day). ಓದುವ (Reading) ಸುಖಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹಾಗೆಯೇ ಇಂದು ಖ್ಯಾತ ನಾಟಕಕಾರ ಶೇಕ್ಸ್‌ಪಿಯರ್ (Shakespeare) ಹುಟ್ಟಿದ ದಿನ ಕೂಡ. ಹಾಗೆಯೇ ಆತ ಮೃತಪಟ್ಟ ದಿನ ಕೂಡ ಇದೇ ಏಪ್ರಿಲ್ 23!

ಓದುವ ಸುಖಕ್ಕೆ ಬೆಲೆ ಕಟ್ಟಲು ಸಾಧ್ಯವೇ?

ಪುಸ್ತಕಗಳು ಜ್ಞಾನವನ್ನು ಉದ್ದೀಪನ ಮಾಡುವ ದೀಪಸ್ತಂಭಗಳು ಮಾತ್ರವಲ್ಲ, ಸ್ಫೂರ್ತಿ ನೀಡುವ ಮಾಧ್ಯಮಗಳು. ಗಾಂಧೀಜಿಯವರು ಬಾಲ್ಯದಲ್ಲಿ ಓದಿದ ಜಾನ್ ರಸ್ಕಿನ್ ಬರೆದ ‘ಆನ್ ಟು ದ ಲಾಸ್ಟ್ ‘ ಪುಸ್ತಕವು ತನ್ನ ಬದುಕಿನ ಗತಿಯನ್ನೇ ಬದಲಾವಣೆ ಮಾಡಿತು ಎಂದು ಹೇಳಿದ್ದಾರೆ. ಹಾಗೆಯೇ ಅವರು ರಷ್ಯನ್ ಲೇಖನ ಲಿಯೋ ಟಾಲ್ಸ್ಟಾಯ್ ಅವರ ಪುಸ್ತಕಗಳನ್ನು ಓದಿ ಪ್ರಭಾವಿತರಾದರು.

ಭಗತ್ ಸಿಂಗ್ ಅವರು ಲೆನಿನ್ ಬರೆದ ‘ಸ್ಟೇಟ್ ಆಂಡ್ ರಿವೊಲ್ಯುಶನ್’ ಪುಸ್ತಕವನ್ನು ಓದಿ ಸ್ಫೂರ್ತಿ ಪಡೆದೆ ಎಂದು ಹೇಳಿದ್ದಾರೆ. ಹೀಗೆ ಮಹಾಪುರುಷರು ಒಂದಲ್ಲ ಒಂದು ಪುಸ್ತಕಗಳಿಂದ ಪ್ರಭಾವಿತರಾದವರು .ಯಾವುದೇ ವ್ಯಕ್ತಿಯ ಬದುಕಿನ ಗತಿಯಲ್ಲಿ ಪ್ರಮುಖವಾದ ತಿರುವನ್ನು ತರುವ ಶಕ್ತಿಯು ಪುಸ್ತಕಗಳಿಗೆ ಇವೆ ಎಂದು ನೂರಾರು ಬಾರಿ ಸಾಬೀತು ಆಗಿದೆ.

ನನ್ನ ಬಾಲ್ಯದ ವಿಳಾಸ ಹೀಗೆ ಇತ್ತು – c/o ಲೈಬ್ರೆರಿ!

ನನಗೆ ಬಾಲ್ಯದಿಂದಲೂ ಓದುವ ಅನಿವಾರ್ಯ ವ್ಯಸನವನ್ನು ಅಂಟಿಸಿದವರು ನನ್ನ ಕನ್ನಡ ಶಾಲೆಯ ಅಧ್ಯಾಪಕರು. ಅವರು ತರಗತಿಯಲ್ಲಿ ಪಾಠವನ್ನು ಮಾಡುವಾಗ ಒಂದಲ್ಲ ಒಂದು ಪುಸ್ತಕದ ರೆಫರೆನ್ಸ್ ಕೊಡುತ್ತಿದ್ದರು. ಮತ್ತು ಸ್ಟಾಫ್ ರೂಮಿಗೆ ನಾವು ಹೋದಾಗ ಅದೇ ಪುಸ್ತಕವು ಅವರ ಟೇಬಲ್ ಮೇಲೆ ಸಿಂಗಾರಗೊಂಡು ಕೂತಿರುತಿತ್ತು. ನಾವು ಕೈಗೆ ಎತ್ತಿಕೊಂಡರೆ ‘ ಓದಿ ಹಿಂದೆ ಕೊಡು ಪುಟ್ಟ ‘ಎಂಬ ಮಾತು ತುಂಬ ಖುಷಿ ಕೊಡುತ್ತಿತ್ತು. ಹಾಗೆ ನಮ್ಮ ಕನ್ನಡ ಶಾಲೆಯ ಅಧ್ಯಾಪಕರಿಂದ ಆರಂಭವಾದ ನನ್ನ ಓದಿನ ವ್ಯಸನ ಇಂದಿನವರೆಗೂ ಮುಂದುವರೆದಿದೆ! ಈವರೆಗೆ ಸಾವಿರಾರು ಪುಸ್ತಕಗಳನ್ನು ಓದಿ ಮುಗಿಸಿದ್ದೇನೆ ಎನ್ನುವುದು ಅಭಿಮಾನದ ಮಾತು. ಈ ಓದು ನನ್ನ ಭಾಷೆ ಮತ್ತು ಚಿಂತನೆಯನ್ನು ಶ್ರೀಮಂತವಾಗಿ ಮಾಡಿತು.

ನನ್ನ ಬಾಲ್ಯ ಮತ್ತು ಯೌವ್ವನದ ಎಲ್ಲ ರಜೆಗಳು, ಸಂಜೆಗಳು ಕಳೆದದ್ದು ಕಾರ್ಕಳದ ವಿಸ್ತಾರವಾದ ಗ್ರಂಥಾಲಯದಲ್ಲಿ. ಹಾಗೆ ನನ್ನ ಗೆಳೆಯರು ನನ್ನನ್ನು C/O ಲೈಬ್ರೆರಿ ಎಂದು ತಮಾಷೆ ಮಾಡುತ್ತಿದ್ದರು.

ವಯಸ್ಸಿಗೆ ಸರಿಯಾದ ಪುಸ್ತಕಗಳ ಆಯ್ಕೆ

ನಮ್ಮ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಬಾಲ್ಯದಲ್ಲಿ ಮೂಡಿಸುವುದು ಹೆತ್ತವರ ಮತ್ತು ಶಿಕ್ಷಕರ ಹೊಣೆ. ನಮ್ಮ ಕೈಯ್ಯಲ್ಲಿ ಪುಸ್ತಕಗಳು ಇದ್ದರೆ ಮಕ್ಕಳಿಗೆ ಓದು ಓದು ಎಂದು ಹೇಳುವ ಅಗತ್ಯ ಬೀಳುವುದಿಲ್ಲ. ಆದರೆ ಮಕ್ಕಳ ವಯಸ್ಸಿಗೆ ಅನುಗುಣವಾದ ಪುಸ್ತಕಗಳನ್ನು ನೀಡಿ ಓದಿಸುವುದು ಅಗತ್ಯ. ಅದರ ಬಗ್ಗೆ ಒಂದಿಷ್ಟು ಸೂತ್ರಗಳು ಇಲ್ಲಿವೆ.

Book Reading Habit in Children

ಬಾಲ್ಯದ 5-8 ವರ್ಷ – ಕಲ್ಪನಾ ಲೋಕ

ಈ ವಯಸ್ಸು ಮಕ್ಕಳಲ್ಲಿ ರಚನಾತ್ಮಕ ಯೋಚನೆಗಳು ಮತ್ತು ಕಲ್ಪನೆಗಳು ಮೂಡುವ ಅವಧಿ. ಆ ವಯಸ್ಸಿನ ಮಕ್ಕಳಿಗೆ ಕಾಲ್ಪನಿಕವಾದ ಪ್ರಾಣಿ, ಪಕ್ಷಿಗಳ ಕಥೆ ಹೊಂದಿರುವ ಚಿತ್ರ ಪುಸ್ತಕಗಳು ( ಕಾಮಿಕ್ಸ್) ಹೆಚ್ಚು ಉಪಯುಕ್ತ. ಪಂಚತಂತ್ರದ ಕಥೆಗಳು, ಕಾಕೋಲುಕೀಯ, ಈಸೋಪನ ಕಥೆಗಳು ಈ ವಯಸ್ಸಿನ ಮಕ್ಕಳಿಗೆ ಸೂಕ್ತ. ರಾಷ್ಟ್ರೋತ್ಥಾನ ಪರಿಷತ್ ಹೊರತಂದಿರುವ ‘ಭಾರತ ಭಾರತೀ ‘ ಸರಣಿಯ ಸಾವಿರಾರು ಕಿರು ಪುಸ್ತಕಗಳು ಈ ವಯಸ್ಸಿನ ಮಕ್ಕಳಿಗೆ ಓದಲು ಚಂದ.

ಬಾಲ್ಯದ 9-12 ವರ್ಷ – ಕುತೂಹಲದ ಪರ್ವಕಾಲ

ಈ ವಯಸ್ಸಿನ ವಿದ್ಯಾರ್ಥಿಗಳು ಸೃಜನಶೀಲವಾಗಿ ಯೋಚನೆ ಮಾಡುತ್ತಾರೆ ಮತ್ತು ನೈತಿಕ ಮೌಲ್ಯಗಳನ್ನು ನಿಧಾನವಾಗಿ ಜೀರ್ಣ ಮಾಡಿಕೊಳ್ಳುತ್ತಾರೆ. ಅವರಿಗೆ ವಿಜ್ಞಾನಿಗಳ ಕಥೆಗಳು, ಸಿಂದಬಾದನ ಸಾಹಸದ ಕಥೆಗಳು, ರಾಮಾಯಣ, ಮಹಾಭಾರತದ ಕಿರು ಪುಸ್ತಕಗಳು ಹೆಚ್ಚು ಇಷ್ಟವಾಗುತ್ತವೆ. ಆ ಪುಸ್ತಕಗಳಲ್ಲಿ ಹೆಚ್ಚು ಚಿತ್ರಗಳು ಇದ್ದರೆ ಮಕ್ಕಳು ಖುಷಿಪಟ್ಟು ಓದುತ್ತಾರೆ.

ಹದಿಹರೆಯದ 12-15 ವರ್ಷ – ಸಣ್ಣ ಸಣ್ಣ ಕನಸು ಮೊಳೆಯುವ ವಯಸ್ಸು

ಸಣ್ಣ ಕತೆಗಳು ಹೆಚ್ಚು ಇಷ್ಟ ಆಗುವ ವಯಸ್ಸದು. ಸ್ಫೂರ್ತಿ ನೀಡುವ ವಿಕಸನದ ಲೇಖನಗಳು ಅವರಿಗೆ ಹೆಚ್ಚು ಇಷ್ಟವಾಗುತ್ತವೆ. ಎಡಿಸನ್ ತನ್ನ ಬಾಲ್ಯದ ಸಮಸ್ಯೆಗಳನ್ನು ಹೇಗೆ ಗೆದ್ದನು? ಅಬ್ರಹಾಂ ಲಿಂಕನ್ ಕಡುಬಡತನವನ್ನು ಮೆಟ್ಟಿ ಅಮೇರಿಕಾದ ಅಧ್ಯಕ್ಷ ಆದದ್ದು ಹೇಗೆ? ಮೊದಲಾದ ಸ್ಫೂರ್ತಿ ಆಧಾರಿತ ಕಥೆಗಳನ್ನು ಆ ವಯಸ್ಸಿನ ವಿದ್ಯಾರ್ಥಿಗಳು ಖುಶಿ ಪಟ್ಟು ಓದುತ್ತಾರೆ. ಹಾಗೆಯೇ ರಾಷ್ಟ್ರ ಪ್ರೇಮದ ಪುಸ್ತಕಗಳನ್ನು ಓದಲು ಆರಂಭ ಮಾಡಬೇಕಾದ ವಯಸ್ಸು ಇದು. ನಾನು ಒಂಬತ್ತನೇ ತರಗತಿಯಲ್ಲಿ ಓದಿದ ಬಾಬು ಕೃಷ್ಣಮೂರ್ತಿ ಅವರ ‘ ಅಜೇಯ ‘ ಪುಸ್ತಕವು ನನ್ನ ಬದುಕಿನಲ್ಲಿ ಭಾರೀ ಬದಲಾವಣೆ ತಂದಿತ್ತು. ಅದು ಖ್ಯಾತ ಕ್ರಾಂತಿಕಾರಿ ಚಂದ್ರಶೇಖರ್ ಆಝಾದ್ ಅವರ ಬದುಕಿನ ಪುಸ್ತಕ ಆಗಿದೆ.

15-18 ವಯಸ್ಸು – ಹುಚ್ಚು ಖೋಡಿ ಮನಸ್ಸು

ಈ ವಯಸ್ಸಿನ ವಿದ್ಯಾರ್ಥಿಗಳು ಸ್ವಲ್ಪ ಕುತೂಹಲ ಮತ್ತು ಹೆಚ್ಚು ಉಡಾಫೆ ಹೊಂದಿರುತ್ತಾರೆ. ಈ ವಯಸ್ಸಿನವರಿಗೆ ಹೆಚ್ಚು ಆಪ್ತವಾಗುವುದು ವಿಕಸನದ ಸ್ಫೂರ್ತಿ ನೀಡುವ ಲೇಖನಗಳೇ ಆಗಿವೆ. ಸಾಹಸ, ಪ್ರವಾಸ, ಸಂಶೋಧನೆ, ಸ್ವಲ್ಪ ರೋಮಾನ್ಸ್ ಇರುವ ಕತೆಗಳನ್ನು ಹೊಂದಿರುವ ಪುಸ್ತಕಗಳು ಅವರಿಗೆ ಹೆಚ್ಚು ಇಷ್ಟವಾಗುತ್ತವೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಣ್ಣ ಕತೆಗಳು, ಪೂರ್ಣಚಂದ್ರ ತೇಜಸ್ವಿ ಅವರ ರಂಜನೆ ಕಡಿಮೆ ಇರುವ ಕಥೆಗಳ ಪುಸ್ತಕಗಳನ್ನು ಅವರಿಗೆ ಕೊಟ್ಟು ನೋಡಿ. ಡುಂಡಿರಾಜರ ಹನಿಗವನಗಳು ಈ ವಯಸ್ಸಿನ ಓದುಗರಿಗೆ ತುಂಬ ಇಷ್ಟ ಆಗುತ್ತವೆ.

20-24 ವಯಸ್ಸು – ಯೌವ್ವನದ ಕಚಗುಳಿ

ಕಾಲೇಜು ಹಂತದ ವಿದ್ಯಾರ್ಥಿಗಳು ಭ್ರಮೆಯಿಂದ ಹೊರಬಂದು ವಾಸ್ತವದ ನೆಲೆಗಟ್ಟಿನ ಚಿಂತನೆಗಳನ್ನು ಹೊಂದಿರುತ್ತಾರೆ. ಕುವೆಂಪು, ಕಾರಂತ, ಭೈರಪ್ಪ, ರವೀ ಬೆಳಗೆರೆ…….ಮೊದಲಾದವರ ಗಂಭೀರ ಚಿಂತನೆ ಹೊಂದಿರುವ ಮತ್ತು ವಾಸ್ತವದ ನೆಲೆಗಟ್ಟಿನ ಕಾದಂಬರಿಗಳನ್ನು ಈ ವಯಸ್ಸಿನಲ್ಲಿ ಓದಲು ಆರಂಭ ಮಾಡಬೇಕು. ಹಾಗೆಯೇ ಆತ್ಮಚರಿತ್ರೆಯ ಪುಸ್ತಕಗಳನ್ನು ಓದಲು ಆರಂಭಿಸಬೇಕಾದ ವಯಸ್ಸು ಇದು. ಅಬ್ದುಲ್ ಕಲಾಂ ಅವರ ಅಗ್ನಿಯ ರೆಕ್ಕೆಗಳು ಮತ್ತು ಪ್ರಜ್ವಲಿಸುವ ಮನಸುಗಳು ಇವೆರಡು ಪುಸ್ತಕಗಳನ್ನು ಈ ವಯಸ್ಸಿನ ವಿದ್ಯಾರ್ಥಿಗಳಿಗೆ ಉಡುಗೊರೆಯಾಗಿ ಕೊಟ್ಟರೆ ಅವರು ತುಂಬಾ ಖುಷಿ ಪಡುತ್ತಾರೆ. ಷಡಕ್ಷರಿ ಅವರ ‘ ಕ್ಷಣ ಹೊತ್ತು ಆಣಿ ಮುತ್ತು ‘ ಅಂಕಣಗಳು ಮತ್ತು ಪ್ರತಾಪ ಸಿಂಹ ಅವರ ‘ಬೆತ್ತಲೆ ಜಗತ್ತು ‘ ಅಂಕಣಗಳು ಹೆಚ್ಚು ಖುಷಿ ಕೊಡುವ ವಯಸ್ಸು ಅದು.

25-28 ವಯಸ್ಸು – ಬದುಕಿನ ಸೌಂದರ್ಯದ ವಸಂತ ಕಾಲ

ಮನಸ್ಸು ಮಾಗಿ ಪ್ರಬುದ್ಧತೆಯು ಮೂಡುವ ಈ ವಯಸ್ಸಲ್ಲಿ ಬದುಕಿನ ಸೌಂದರ್ಯದ ಅನುಭೂತಿ ಮೂಡಿಸುವ ತ್ರಿವೇಣಿ, ಸಾಯಿಸುತೆ, ಅನಕೃ, ದೇವುಡು, ತರಾಸು, ನಾ ಡಿಸೋಜಾ ಅವರ ಕಾದಂಬರಿಗಳು ಹೆಚ್ಚು ಆಪ್ತವಾಗುತ್ತವೆ. ಭಾವಗೀತೆಗಳ ಓದು ಖುಷಿ ಕೊಡುತ್ತದೆ. ಸೋತವರ ಕಥೆಗಳು ಹೆಚ್ಚು ಆಪ್ತವಾಗುತ್ತವೆ. ಕಾದಂಬರಿಯ ಓದು ಹೆಚ್ಚು ತಾಳ್ಮೆಯನ್ನು ಬೇಡುತ್ತದೆ. ಆದರೂ ಒಮ್ಮೆ ಅವರು ಓದುವ ಅಭಿರುಚಿ ರೂಢಿಸಿಕೊಂಡರೆ ಅವರು ಅಂತಹ ಪುಸ್ತಕಗಳನ್ನು ಪ್ರೀತಿ ಮಾಡಲು ತೊಡಗುತ್ತಾರೆ.

ಭರತ ವಾಕ್ಯ

ನನ್ನಂತಹ ಭಾಷಣಕಾರ ಮತ್ತು ತರಬೇತಿದಾರನನ್ನು ಜೀವಂತ ಆಗಿಡುವುದೇ ಪುಸ್ತಕಗಳು ಮತ್ತು ಪುಸ್ತಕಗಳು! ಸಾಮಾಜಿಕ ಜಾಲತಾಣಗಳ ಕಾರಣಕ್ಕೆ ಓದುಗರ ಸಂಖ್ಯೆ ಕಡಿಮೆ ಆಗಿದೆ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಅದು ಪೂರ್ತಿ ನಿಜವಲ್ಲ.

ವಿಶ್ವ ಪುಸ್ತಕ ದಿನವಾದ ಇಂದು ನೀವು ನಿಮ್ಮ ಮಕ್ಕಳಲ್ಲಿ ಓದುವ ಸಂಕಲ್ಪ ಹುಟ್ಟಿಸಿದಿರಿ ಅಂತಾದರೆ ಅದು ಸಾರ್ಥಕ ಹೆಜ್ಜೆ ಆಗುತ್ತದೆ. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಸಿನೆಮಾ ಜಗತ್ತಿನ ಮೊದಲ ಸೂಪರ್ ಸ್ಟಾರ್ ಚಾರ್ಲಿ ಚಾಪ್ಲಿನ್!

Continue Reading

ಅಂಕಣ

ರಾಜಮಾರ್ಗ ಅಂಕಣ: ಸೆಲೆಬ್ರಿಟಿಗಳು ಆಗೋದು ಅಷ್ಟು ಸುಲಭನಾ?

ರಾಜಮಾರ್ಗ ಅಂಕಣ: ಇತ್ತೀಚೆಗೆ ಬರುವ ಎಲ್ಲ ಭಾಷೆಯ ಸಿನೆಮಾಗಳಲ್ಲಿ ಹೀರೋ ಅಥವಾ ವಿಲನ್ ಪಾತ್ರದ ವೈಭವೀಕರಣ ಮಾಡಲು ಕುಡಿತ, ಹೊಗೆ ಬಿಡುವುದು, ಅಶ್ಲೀಲ ಪದ ಬಳಕೆ ಮೊದಲಾದವುಗಳನ್ನು ಒಂದಿಷ್ಟೂ ಸಂಕೋಚ ಮಾಡದೆ ಮಾಡುತ್ತಿದ್ದಾರೆ.

VISTARANEWS.COM


on

ranveer smoking rajamarga column
Koo

ಸಿನಿಮಾಗಳಲ್ಲಿ ಪಾತ್ರಗಳ ವೈಭವೀಕರಣಕ್ಕೆ ಹೊಗೆ, ಹೆಂಡ, ಡ್ರಗ್ಸ್ ಅನಿವಾರ್ಯವೇ?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಕನ್ನಡದ ವರನಟ ಡಾಕ್ಟರ್ ರಾಜಕುಮಾರ್ (Dr. Raj Kumar) ಇನ್ನೂರಕ್ಕಿಂತ ಹೆಚ್ಚು ಸಿನೆಮಾಗಳಲ್ಲಿ ಹೀರೋ ಆಗಿ ಅಭಿನಯಿಸಿದ್ದರು. ಅವರ ಸಿನೆಮಾಗಳು ಮಾಡಿದ ಭಾರೀ ದೊಡ್ಡ ದಾಖಲೆಗಳು ಒಂದೆಡೆ ಆದರೆ ಅವರ ಅಸದೃಶ ವ್ಯಕ್ತಿತ್ವವು ಅದಕ್ಕಿಂತ ಹೆಚ್ಚು ಅನುಕರಣೀಯ!

ಡಾಕ್ಟರ್ ರಾಜ್ ಕೆಲವು ಸಿನೆಮಾಗಳಲ್ಲಿ ಪ್ರತಿನಾಯಕನ ಪಾತ್ರಗಳಲ್ಲಿ ನಟಿಸಿದ್ದು ಇದೆ. ಆದರೆ ಅವರು ತಮ್ಮ ಒಂದು ಸಿನೆಮಾದಲ್ಲಿ ಕೂಡ ಕುಡಿಯುವ, ಸಿಗರೇಟನ್ನು ಸೇದುವ, ಪಾನ್ ಜಗಿಯುವ ಅಭಿನಯವನ್ನು ಮಾಡಲೆ ಇಲ್ಲ! ತಪ್ಪಿ ಕೂಡ ಒಂದು ಹೆಣ್ಣನ್ನು ಅಪಮಾನ ಮಾಡುವ ಪಾತ್ರಗಳನ್ನು ಮಾಡಲೆ ಇಲ್ಲ. ಡಬ್ಬಲ್ ಮೀನಿಂಗ್ ಡೈಲಾಗ್, ಕೆಟ್ಟ ಶಬ್ದಗಳ ಬಳಕೆ ಯಾವುದೂ ಇಲ್ಲ!

ಪಾತ್ರಗಳ ಆಯ್ಕೆಯಲ್ಲಿ ಕೂಡ ಅವರು ತುಂಬಾ ಎಚ್ಚರ ವಹಿಸುತ್ತಿದ್ದರು. ಅವರು ತುಂಬಾ ವೇದಿಕೆಯಲ್ಲಿ ಹೇಳುತ್ತಿದ್ದ ಮಾತುಗಳು ನನಗೆ ಹೆಚ್ಚು ತಟ್ಟಿವೆ.

ನುಡಿದಂತೆ ನಡೆದ ಕನ್ನಡದ ವರನಟ!‌

“ನಾವು ಬೇಡ ಅಂದರೂ ನಮ್ಮನ್ನು ಸಾವಿರಾರು ಜನರು ಅನುಕರಣೆ ಮಾಡುತ್ತಾರೆ. ಹೆಚ್ಚಿನವರು ಯುವಜನರು. ಅವರು ನಮ್ಮನ್ನು ಅನುಕರಣೆ ಮಾಡಿ ಸಿಗರೇಟ್, ಹೆಂಡ ಅಭ್ಯಾಸ ಮಾಡಿದರೆ ಸಾಮಾಜಿಕ ಆರೋಗ್ಯವು ಹಾಳಾಗುತ್ತದೆ. ಒಬ್ಬ ಹೀರೋನನ್ನು ವಿಜೃಂಭಣೆ ಮಾಡಲು ಹೋಗಿ ನಾವು ಸಮಾಜವನ್ನು ಖಂಡಿತ ಕೆಡಿಸಬಾರದು. ನಾವು ಸಾಧ್ಯ ಆದರೆ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಬೇಕು!” ಅನ್ನುತ್ತಿದ್ದರು ರಾಜ್.

Dr. Rajkumar

ಎಷ್ಟು ಅರ್ಥಗರ್ಭಿತ ಮಾತು ಅಲ್ಲವೇ. ಡಾಕ್ಟರ್ ರಾಜ್ ಮಾತು ಮಾತ್ರವಲ್ಲ ತಮ್ಮ ಮಾತಿನಂತೆಯೇ ಬದುಕಿ ತೋರಿಸಿದ್ದರು.

ಅಮಿತಾಭ್ ಒಡ್ಡಿದ ಆಮಿಷಕ್ಕೂ ರಾಜ್ ಬಗ್ಗಲಿಲ್ಲ!

ಒಮ್ಮೆ ಎಂಬತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಅಮಿತಾಭ್ ಬಚ್ಚನ್ ತನ್ನ ABCL ಕಂಪೆನಿಯ ಮೂಲಕ ‘ವಿಶ್ವಸುಂದರಿ’ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಆಗ ರಾಜ್ಯದಲ್ಲಿ ಪೂರ್ತಿ ತೀವ್ರ ನೀರಿನ ಕ್ಷಾಮವು ಇತ್ತು. ಕರ್ನಾಟಕದ ರೈತರು ಪ್ರತಿಭಟನೆ ಮಾಡಿ ಬೀದಿಗೆ ಇಳಿದಿದ್ದರು. ಅವರ ಆಕ್ರೋಶವು ವಿಶ್ವಸುಂದರಿ ಸ್ಪರ್ಧೆಯ ವಿರುದ್ಧವೂ ತಿರುಗಿತ್ತು. ರಾಜ್ಯದಲ್ಲಿ ಭಾರೀ ಪ್ರತಿಭಟನೆಯೂ ನಡೆಯಿತು. ಆಗ ಅದನ್ನು ಶಮನ ಮಾಡಲು ಬೇರೆ ದಾರಿಯೆ ಇಲ್ಲದೆ ಅಮಿತಾಭ್‌, ರಾಜ್ ಅವರ ಮನೆಗೆ ಬಂದು ನೀವು ಉದ್ಘಾಟನೆಗೆ ಬರಬೇಕು ಎಂದು ಕೇಳಿಕೊಂಡಿದ್ದರು.

ಆ ಸೌಂದರ್ಯ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮವು ಜಗತ್ತಿನ ಇನ್ನೂರಕ್ಕಿಂತ ಅಧಿಕ ಸಂಖ್ಯೆಯ ರಾಷ್ಟ್ರಗಳಲ್ಲಿ ಟಿವಿ ನೇರ ಪ್ರಸಾರ ಆಗುತ್ತದೆ ಎಂದೆಲ್ಲ ಹೇಳಿ ಆಮಿಷವನ್ನು ಒಡ್ಡಿದ್ದರು. ರಾಜ್ ಅವರ ಮಕ್ಕಳೂ ಕೂಡ ನೀವು ಹೋಗಿ ಅಪ್ಪ ಎಂದು ಹೇಳಿದ್ದರು.

ಆದರೆ ರಾಜಕುಮಾರ್ ಅವರು ಅಮಿತಾಭ್ ಆಮಂತ್ರಣ ನಯವಾಗಿ ನಿರಾಕರಿಸಿ “ಸಾರಿ. ನನ್ನ ರಾಜ್ಯದ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ನಾನು ಉದ್ಘಾಟನೆಗೆ ಬರಲಾರೆ!”ಎಂದು ಹೇಳಿದ್ದರು.

ಡಾಕ್ಟರ್ ರಾಜ್ ಅವರು ಗ್ರೇಟ್ ಆಗುವುದು ಇಂತಹ ನೂರಾರು ಕಾರಣಕ್ಕೆ!

ಹೊಗೆ, ಹೆಂಡ ಇಲ್ಲದ ಸಿನಿಮಾಗಳೇ ಇಲ್ಲ!

ಇಷ್ಟೆಲ್ಲ ಹೇಳಲು ಕಾರಣ ಏನೆಂದರೆ ಇತ್ತೀಚೆಗೆ ಬರುವ ಎಲ್ಲ ಭಾಷೆಯ ಸಿನೆಮಾಗಳಲ್ಲಿ ಹೀರೋ ಅಥವಾ ವಿಲನ್ ಪಾತ್ರದ ವೈಭವೀಕರಣ ಮಾಡಲು ಕುಡಿತ, ಹೊಗೆ ಬಿಡುವುದು, ಅಶ್ಲೀಲ ಪದ ಬಳಕೆ ಮೊದಲಾದವುಗಳನ್ನು ಒಂದಿಷ್ಟೂ ಸಂಕೋಚ ಮಾಡದೆ ಮಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಬಿಡುಗಡೆಯಾದ KGF ಪಾರ್ಟ್ 2 ಸಿನೆಮಾದಲ್ಲಿ ಹೀರೋ ಐವತ್ತು ಶೇಕಡಾಕ್ಕಿಂತ ಅಧಿಕ ದೃಶ್ಯಗಳಲ್ಲಿ ಹೊಗೆ ಮತ್ತು ನಷೆಗಳಲ್ಲಿ ಮುಳುಗಿರುತ್ತಾನೆ! ಈ ವರ್ಷದ ಹಿಟ್ ಯುವ ಸಿನೆಮಾದ ಮೊದಲರ್ಧ ಭಾಗದಲ್ಲಿ ಹೆಂಡ, ಕ್ರೌರ್ಯ ಮತ್ತು ಹೊಗೆ ಆವರಿಸಿದ್ದು ನಾವೆಲ್ಲರೂ ನೋಡಿದ್ದೇವೆ. ಇದು ಒಂದೆರಡು ಸಿನೆಮಾಗಳ ಕಥೆ ಅಲ್ಲ. ಭಾಷೆಗಳ ಬೇಧವಿಲ್ಲದೆ ಹೆಚ್ಚಿನ ಸಿನೆಮಾಗಳಲ್ಲಿ ಡ್ರಗ್ಸ್, ಹೊಗೆ ಮತ್ತು ಹೆಂಡಗಳ ವೈಭವೀಕರಣ ನಡೆಯುತ್ತಾ ಇರುತ್ತದೆ. ಕಳೆದ ವರ್ಷ ಬಿಡುಗಡೆಯಾದ ಅನಿಮಲ್ ಸಿನೆಮಾವನ್ನು ಗೆಲ್ಲಿಸಿದ್ದು ಅದೇ ಮೂರು ಅಂಶಗಳು!

ಆಗೆಲ್ಲ ಪರದೆಯ ಮೂಲೆಯಲ್ಲಿ ‘ಸ್ಮೋಕಿಂಗ್ ಆಂಡ್ ಡ್ರಿಂಕಿಂಗ್ ಆರ್ ಇಂಜುರಿಯಸ್ ಟು ಹೆಲ್ತ್ ‘ ಎಂಬ ಎಚ್ಚರಿಕೆಯ ಸಣ್ಣ ಕ್ಯಾಪ್ಶನ್ ಇದ್ದೇ ಇರುತ್ತದೆ. ಅದು ಮಾತ್ರ ಯಾರ ಕಣ್ಣಿಗೂ ಕಾಣುವುದೇ ಇಲ್ಲ! ಸೆನ್ಸಾರ್ ಮಂಡಳಿ ಅಂತಹ ದೃಶ್ಯಗಳ ಬಗ್ಗೆ ಯಾವ ಗಂಭೀರ ಕ್ರಮವನ್ನು ಇದುವರೆಗೆ ತೆಗೆದುಕೊಂಡ ಉದಾಹರಣೆ ಇಲ್ಲ! ರಜನೀಕಾಂತ್, ವಿಜಯ್, ಶಿವರಾಜ್ ಕುಮಾರ್…… ಮೊದಲಾದ ಸೂಪರ್ ಸ್ಟಾರ್ ನಟರು ಸುರುಳಿ ಸುರುಳಿಯಾಗಿ ಹೊಗೆ ಬಿಡುವುದನ್ನು ಅಚ್ಚರಿಯಿಂದ ನೋಡುತ್ತ ಅನುಕರಣೆ ಮಾಡುವ ಯುವಜನತೆಯ ಸಂಖ್ಯೆ ಹೆಚ್ಚಾಗುತ್ತಿದೆ.

ಡಾ. ರಾಜ್ ಸಿನೆಮಾ ಮಾತ್ರವಲ್ಲ ತಾನು ಅಭಿನಯಿಸುವ ಜಾಹೀರಾತುಗಳಲ್ಲಿ ಕೂಡ ಅಂತಹ ಪ್ರಮಾದಗಳನ್ನು ಮಾಡುತ್ತಿರಲಿಲ್ಲ.

ಗಬ್ಬೆಬ್ಬಿಸಿದ ಪಾನ್ ಪರಾಗ್ ಜಾಹೀರಾತು!

ಕಳೆದ ವರ್ಷ ಒಂದು ಪಾನ್ ಪರಾಗ್ ಜಾಹೀರಾತಿನಲ್ಲಿ ಮಹಾ ನಟರಾದ ಅಜಯ್ ದೇವಗನ್, ಅಕ್ಷಯ್ ಕುಮಾರ್ ಮತ್ತು ಶಾರುಖ್ ಖಾನ್ ದೊಡ್ಡ ಮೊತ್ತವನ್ನು ಕಂಪೆನಿಯಿಂದ ಪಡೆದುಕೊಂಡು ಅಭಿನಯ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಅದರಲ್ಲಿಯೂ ಒಂದು ಕಾಲದಲ್ಲಿ ಎಷ್ಟು ದುಡ್ಡು ಕೊಟ್ಟರೂ ಅಂತಹ ಜಾಹೀರಾತಲ್ಲಿ ನಟಿಸುವುದೇ ಇಲ್ಲ ಅಂತ ಹೇಳಿಕೆ ಕೊಟ್ಟಿದ್ದ ಅಕ್ಷಯಕುಮಾರ್ ಎಂಬ ಸೆಲೆಬ್ರಿಟಿ ನಟ (ನಾನು ಅತನ ಬಗ್ಗೆ ಕಳೆದ ವರ್ಷ ಒಂದು ಲೇಖನ ಬರೆದು ಒಂದಿಷ್ಟು ಹೊಗಳಿ ಬರೆದಿದ್ದೆ!) ಆ ಜಾಹೀರಾತಲ್ಲಿ ಅಭಿನಯ ಮಾಡಿದ್ದು ತಪ್ಪು ಎಂದು ಜನರು ನೇರವಾಗಿ ಖಂಡಿಸಿದ್ದಾರೆ. ಅದಕ್ಕೆ ಅಕ್ಷಯ್ ತನ್ನ ಅಭಿಮಾನಿಗಳಲ್ಲಿ ಕ್ಷಮೆಯನ್ನು ಕೇಳಿ ತನ್ನ ಒಪ್ಪಂದದಿಂದ ಹೊರಬಂದಿದ್ದಾನೆ.

ಉಳಿದ ಇಬ್ಬರು ಸೆಲೆಬ್ರಿಟಿಗಳು ಕ್ಷಮೆ ಕೇಳಿದ್ದು ಕೂಡ ಇಲ್ಲ. ಒಪ್ಪಂದದಿಂದ ವಿಮುಖ ಆದದ್ದೂ ಇಲ್ಲ. ಆ ಜಾಹೀರಾತು ಮಾತ್ರ ಐಪಿಎಲ್ ಪಂದ್ಯಗಳು ಮುಗಿಯುವ ತನಕ ಓವರಗಳ ನಡುವೆ ಟಿವಿ ಪರದೆಯಲ್ಲಿ ಹೊಗೆ ಬಿಡುತ್ತಾ ಇರುತ್ತದೆ ಮತ್ತು ಯುವಜನತೆಯನ್ನು ದಾರಿ ತಪ್ಪಿಸುತ್ತಾ ಇರುತ್ತದೆ. ಸಿನೆಮಾಗಳಲ್ಲಿ ಇಂತಹ ದೃಶ್ಯಗಳ ಬಗ್ಗೆ ಸೆನ್ಸಾರ್ ಮಂಡಳಿ ಬಿಗಿ ಧೋರಣೆ ತೋರಿಸಬೇಕು, ಜಾಹೀರಾತುಗಳಿಗೂ ಸೆನ್ಸಾರ್ ಇರಬೇಕು ಎಂದು ನನ್ನ ಭಾವನೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಆತ್ಮಾಹುತಿ ದಾಳಿಗೆ ಎದೆಕೊಟ್ಟು ಆಕೆ ಬಂಡೆಯಂತೆ ನಿಂತಿದ್ದರು!

Continue Reading
Advertisement
DCM D K Shivakumar visit adichunchanagiri mutt
ಕರ್ನಾಟಕ37 seconds ago

Lok Sabha Election 2024: ನನ್ನ ಜೀವ, ನನ್ನ ದೇಹ ಇರುವುದೇ ನಮ್ಮ ಜನರಿಗಾಗಿ: ಡಿ.ಕೆ. ಶಿವಕುಮಾರ್

Road Accident
ಕರ್ನಾಟಕ27 mins ago

Road Accident: ಕಾರು ಟಯರ್‌ ಬ್ಲಾಸ್ಟ್ ಆಗಿ ಬೈಕ್‌ಗೆ ಡಿಕ್ಕಿ; ಇಬ್ಬರು ಸವಾರರ ದುರ್ಮರಣ

Madrid Open 2024
ಕ್ರೀಡೆ37 mins ago

Madrid Open 2024: ಫಿಟ್​ನೆಸ್​ ಸಲುವಾಗಿ ಮ್ಯಾಡ್ರಿಡ್ ಓಪನ್‌ನಿಂದ ಹಿಂದೆ ಸರಿದ ಹಾಲೆಪ್‌

Kotak Bank
ದೇಶ49 mins ago

Kotak Bank: ಕೊಟಕ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ನಿಷೇಧ; ಹಳೆಯ ಗ್ರಾಹಕರಿಗೆ ಏನು ತೊಂದರೆ? ಇಲ್ಲಿದೆ ಮಾಹಿತಿ

Lok sabha Election
ಪ್ರಮುಖ ಸುದ್ದಿ1 hour ago

Lok Sabha Election 2024: ಲೋಕಸಭಾ ಚುನಾವಣೆ 2ನೇ ಹಂತದ ಬಹಿರಂಗ ಪ್ರಚಾರ ಅಂತ್ಯ, ನಾಳೆ ಮನೆ ಮನೆ ಪ್ರಚಾರ

Narsingh Yadav
ಕ್ರೀಡೆ1 hour ago

Narsingh Yadav: ಕುಸ್ತಿ ಫೆಡರೇಷನ್‌ನ ಅಥ್ಲೀಟ್‌ ವಿಭಾಗಕ್ಕೆ ನರಸಿಂಗ್‌ ಯಾದವ್ ಅಧ್ಯಕ್ಷ

Narendra Modi
ದೇಶ2 hours ago

Narendra Modi: ಕರ್ನಾಟಕದಲ್ಲಿ ಮುಸ್ಲಿಮರಿಗೆ ಒಬಿಸಿ ಮೀಸಲಾತಿ; ಕಾಂಗ್ರೆಸ್‌ ಒಬಿಸಿ ವಿರೋಧಿ ಎಂದ ಮೋದಿ

Neha Murder Case
ಕರ್ನಾಟಕ2 hours ago

Neha Murder Case: ಹುಬ್ಬಳ್ಳಿಯಲ್ಲಿ ಸಿಐಡಿ ಸ್ಥಳ ಮಹಜರು; ಫಯಾಜ್‌ನ ಗಲ್ಲಿಗೇರಿಸಲು ಎಬಿವಿಪಿ ಕಾರ್ಯಕರ್ತರ ಆಗ್ರಹ

IPL 2024
ಕ್ರೀಡೆ2 hours ago

IPL 2024: ಬ್ಲಾಕ್​ ಟಿಕೆಟ್ ಮಾರಾಟ ಜಾಲ ಭೇದಿಸಿದ ಚೆನ್ನೈ ಪೊಲೀಸರು; 12 ಮಂದಿ ಸೆರೆ

Pratap Dudhat
ದೇಶ2 hours ago

ರಾಹುಲ್‌ ಗಾಂಧಿ ಗಂಡಸ್ತನ ತಿಳಿಯಲು ಅವರ ಜತೆ ನಿಮ್ಮ ತಾಯಿಯನ್ನು ಮಲಗಿಸಿ ಎಂದ ಕಾಂಗ್ರೆಸ್‌ ನಾಯಕ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ17 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌