Site icon Vistara News

ಬೆಂಗಳೂರಿಗೆ ʼಆರನೇ ಗ್ಯಾರಂಟಿʼ – ʼನನ್ನ ಖಾತೆ ನನ್ನ ಹಕ್ಕುʼ

ಬೆಂಗಳೂರು ನಗರದಲ್ಲಿ ಆಸ್ತಿ ದಾಖಲೆಗಳನ್ನು ಪಾರದರ್ಶಕ ಹಾಗೂ ಸುರಕ್ಷಿತಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ “ನನ್ನ ಖಾತೆ ನನ್ನ ಹಕ್ಕು” ಅಭಿಯಾನ ಆರಂಭಿಸಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಈ ಯೋಜನೆಯನ್ನು “ಬೆಂಗಳೂರು ನಗರದ ಆರನೇ ಗ್ಯಾರಂಟಿ – ಭೂ ಗ್ಯಾರಂಟಿ” ಎಂದು ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನನ್ನ ಖಾತೆ ನನ್ನ ಹಕ್ಕು ಅಭಿಯಾನದ ಘೋಷಣೆ ಮಾಡಿದರು. ಈ ಸುದ್ದಿಗೋಷ್ಠಿಯಲ್ಲಿ ಡಿಕೆಶಿ ಅವರ ಜೊತೆಗೆ ಸಚಿವರಾದ ಕೆ.ಜೆ.ಜಾರ್ಜ್‌, ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎನ್‌.ಎ. ಹ್ಯಾರಿಸ್‌, ನಗರಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ಜಿಬಿಎ ಆಯುಕ್ತ ಮಹೇಶ್ವರ ರಾವ್‌ ಭಾಗವಹಿಸಿದ್ರು.

ʼಬಿʼ ಖಾತೆಯನ್ನು ʼಎʼ ಖಾತೆಗೆ ಪರಿವರ್ತಿಸಲು ಅವಕಾಶ
ಬೆಂಗಳೂರು ನಗರದ ಇತಿಹಾಸದಲ್ಲೇ ಮೊದಲ ಬಾರಿಗೆ 23 ಲಕ್ಷಕ್ಕೂ ಹೆಚ್ಚು ಮನೆಗಳು ಹಾಗೂ ಆಸ್ತಿಗಳ ದಾಖಲೆಗಳನ್ನು ಸರ್ಕಾರ ಅಧಿಕೃತವಾಗಿ ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಿದೆ. ಈ ಹಿಂದೆ ಅನೇಕ ಆಸ್ತಿಗಳಿಗೆ ಸ್ಪಷ್ಟ ದಾಖಲೆಗಳಿರಲಿಲ್ಲ. ಈಗ ಆಧಾರ್‌ ಕಾರ್ಡ್‌, ಮೊಬೈಲ್‌ ಸಂಖ್ಯೆ ಹಾಗೂ ಗೂಗಲ್‌ ಲೊಕೇಶನ್‌ ಆಧಾರಿತ ಮ್ಯಾಪಿಂಗ್‌ ಮೂಲಕ ಆಸ್ತಿ ವಿವರಗಳನ್ನು ಸರಿಪಡಿಸಲಾಗಿದೆ. ಇದರಿಂದ ಆಸ್ತಿ ದುರುಪಯೋಗ ತಡೆಯಲು ಸಹಾಯವಾಗಲಿದೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು. ಬೆಂಗಳೂರಿನಲ್ಲಿ ಸುಮಾರು 16 ಲಕ್ಷ A ಖಾತಾ ಆಸ್ತಿಗಳಿದ್ದು, ಸುಮಾರು 7 ಲಕ್ಷ B ಖಾತಾ ಆಸ್ತಿಗಳಿವೆ. B ಖಾತಾ ಆಸ್ತಿಗಳನ್ನು ಸುಲಭವಾಗಿ A ಖಾತಾಗೆ ಪರಿವರ್ತಿಸಲು ಸರ್ಕಾರ ವಿಶೇಷ ಅವಕಾಶ ನೀಡಿದೆ ಎಂದು ಮಾಹಿತಿ ನೀಡಿದರು.

ʼನನ್ನ ಖಾತೆ ನನ್ನ ಹಕ್ಕುʼ ಅಭಿಯಾನ:
ರಾಜ್ಯ ಸರ್ಕಾರ ನನ್ನ ಖಾತೆ ನನ್ನ ಹಕ್ಕು ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಮೇ.16 ರಿಂದ 3 ತಿಂಗಳ ಕಾಲ ಈ ಅಭಿಯಾನ ನಡೆಯಲಿದೆ. ಪ್ರತಿ ಶನಿವಾರ ವಿಶೇಷ ಶಿಬಿರಗಳು ನಡೆಯಲಿವೆ. ಪ್ರತಿಯೊಂದು ಪಾಲಿಕೆ ವ್ಯಾಪ್ತಿಯ 10 ಸ್ಥಳಗಳಲ್ಲಿ ಈ ಸೇವೆ ಲಭ್ಯವಾಗಲಿದೆ. ನಾಗರಿಕರು ತಮ್ಮ ಆಸ್ತಿ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಈ ಅವಕಾಶವನ್ನು ಬಳಸಿಕೊಳ್ಳಬಹುದು.

100 ದಿನಗಳ ಕಾಲ ಗೈಡ್ಲೈನ್ಸ್‌ ವ್ಯಾಲ್ಯೂ ನಲ್ಲಿ ಡಿಸ್ಕೌಂಟ್‌:
ಸಾಮಾನ್ಯವಾಗಿ B ಖಾತಾದಿಂದ A ಖಾತಾ ಪರಿವರ್ತನೆಗೆ ಗೈಡನ್ಸ್ ವ್ಯಾಲ್ಯೂನ 5% ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಮುಂದಿನ 100 ದಿನಗಳೊಳಗೆ ಅರ್ಜಿ ಸಲ್ಲಿಸಿದರೆ ಕೇವಲ 2% ಶುಲ್ಕದಲ್ಲಿ ಪರಿವರ್ತನೆ ಸಾಧ್ಯವಾಗಲಿದೆ. 100 ದಿನಗಳ ಬಳಿಕ ಮತ್ತೆ 5% ಶುಲ್ಕವೇ ಅನ್ವಯವಾಗಲಿದೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.
ಯಾವುದೇ ಮಧ್ಯವರ್ತಿಗಳ ಅವಶ್ಯಕತೆ ಇಲ್ಲದೆ, ಒಂದು ರೂಪಾಯಿ ಲಂಚ ನೀಡದೇ ಆಸ್ತಿದಾರರು ತಮ್ಮ B ಖಾತಾವನ್ನು A ಖಾತಾಗೆ ಬದಲಿಸಿಕೊಳ್ಳಬಹುದಾಗಿದೆ. ಸರ್ಕಾರ ಮನೆಬಾಗಿಲಿಗೇ ಈ ಸೇವೆಯನ್ನು ತಲುಪಿಸುವುದಾಗಿ ತಿಳಿಸಿದರು.

ಕಟ್ಟಡ ಉಲ್ಲಂಘನೆಗೆ ರಿಯಾಯಿತಿ
ನಗರದ ಜನತೆಗೆ ಮತ್ತೊಂದು ಮಹತ್ವದ ರಿಲೀಫ್ ನೀಡಿರುವ ಸರ್ಕಾರ, ಕಟ್ಟಡ ಉಲ್ಲಂಘನೆ ಮಿತಿಯನ್ನು 5%ರಿಂದ 15%ಕ್ಕೆ ಹೆಚ್ಚಿಸಿದೆ. 20×30, 30×40 ಹಾಗೂ 40×60 ನಿವೇಶನಗಳ ಮನೆಗಳಿಗೆ ಇದರಿಂದ ಹೆಚ್ಚಿನ ಅನುಕೂಲ ಸಿಗಲಿದೆ. ಇದರ ಮೂಲಕ ವಿದ್ಯುತ್‌, ನೀರು ಸೇರಿದಂತೆ ಮೂಲಭೂತ ಸೌಲಭ್ಯ ಪಡೆಯಲು ಸಹಾಯವಾಗಲಿದೆ.

ಒನ್ ಟೈಮ್ ಸೆಟ್ಲಮೆಂಟ್ (OTS)
ಅಕ್ರಮ-ಸಕ್ರಮ ಸಮಸ್ಯೆ ಪರಿಹರಿಸಲು ಸರ್ಕಾರ ಮತ್ತೆ OTS ಯೋಜನೆ ಆರಂಭಿಸುತ್ತಿದೆ. ಜೂನ್ 15ರಿಂದ ಹೊಸ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಅರ್ಜಿ ಸಲ್ಲಿಕೆಗೆ 3 ತಿಂಗಳ ಅವಧಿ ನಿಗದಿಪಡಿಸಲಾಗಿದೆ. ನಂತರದ 3 ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ. ಹಣ ಪಾವತಿಗೆ ಮತ್ತಷ್ಟು 3 ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಬಾರಿ ಮಾರ್ಗಸೂಚಿ ದರದ ಕೇವಲ 5% ಪಾವತಿಸಿ ಅಕ್ರಮ ಆಸ್ತಿಗಳನ್ನು ಸಕ್ರಮಗೊಳಿಸಿಕೊಳ್ಳಬಹುದು.

Exit mobile version