Site icon Vistara News

ಮಂಗಳೂರು ಸ್ಫೋಟ | ಕುಕ್ಕರ್‌ ಬ್ಲಾಸ್ಟ್‌ ಆರೋಪಿಯ ಹಿನ್ನೆಲೆ, ಸಂಪರ್ಕಗಳ ಸಮಗ್ರ ತನಿಖೆಗೆ ಸೂಚನೆ ನೀಡಿದ ಬೊಮ್ಮಾಯಿ

Basavaraj Bommai

ಬೆಂಗಳೂರು: ಮಂಗಳೂರಿನಲ್ಲಿ ಸಂಭವಿಸಿದ ಪ್ರೆಷರ್ ಕುಕ್ಕರ್ ಸ್ಫೋಟದ ತನಿಖೆ ಚುರುಕುಗೊಂಡಿದೆ. ಪ್ರಮುಖ ಆರೋಪಿಯ ವೈಯಕ್ತಿಕ ಮಾಹಿತಿಗಳನ್ನು ಪೊಲೀಸರು ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಸಂಪರ್ಕ ಯಾವ ಊರುಗಳಲ್ಲಿದೆ ಎಂಬುದರ ಮಾಹಿತಿಯೂ ಲಭಿಸಿದೆ. ಆತನ ನಿಜವಾದ ಹೆಸರು ಹಾಗೂ ಗುರುತು ಪತ್ತೆಯಾದ ನಂತರ, ಆತ ಬೇರೆ ಯಾವ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿದೆ. ಆ ಜಾಡನ್ನು ಹಿಡಿದು ತನಿಖೆ ನಡೆಯುತ್ತಿದೆ ಎಂದರು.

ಕಟ್ಟೆಚ್ಚರ ವಹಿಸಲು ಪೊಲೀಸರಿಗೆ ಸೂಚನೆ
ಆರೋಪಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಕುಟುಂಬ ವರ್ಗದವರು ಆತನ ಗುರುತಿಸಿರುವುದು ಪ್ರಮುಖ ಬೆಳೆವಣಿಗೆ. ಇಲ್ಲಿಯವರೆಗಿನ ಎಲ್ಲ ಮಾಹಿತಿಗಳನ್ನು ರಾಷ್ಟ್ರೀಯ ತನಿಖಾ ದಳ ಹಾಗೂ ಐಬಿಗೆ ನೀಡಲಾಗಿದೆ. ಇದೇ ರೀತಿಯ ಕೃತ್ಯಗಳು ಬೇರೆ ಕಡೆಯೂ ಮಾಡಿದ್ದರೇ ಎಂಬ ಬಗ್ಗೆ ಹಾಗೂ ಆತನ ಹಿಂದಿರುವ ಸಂಘಟನೆ ಬಗ್ಗೆ ಮಾಹಿತಿಗಳು ತಿಳಿಯಬೇಕಿದೆ. ಈ ನಿಟ್ಟಿನಲ್ಲಿಯೂ ತನಿಖೆ ಮುಂದುವರೆದಿದ್ದು, ವಿಷಯಗಳು ಲಭ್ಯವಾದ ನಂತರ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಎಲ್ಲ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಪೊಲೀಸರು, ಭಯೋತ್ಪಾದಕ ನಿಗ್ರಹ ದಳ, ಆಂತರಿಕ ಸುರಕ್ಷತಾ ವಿಭಾಗಗಳು ಸಂಯೋಜಿಸಿ ಕಾರ್ಯನಿರ್ವಹಿಸಬೇಕು. ತನಿಖೆಯನ್ನು ಚುರುಕುಗೊಳಿಸಿ, ಹಿಂದಿರುವ ಘಾತುಕ ಶಕ್ತಿಗಳನ್ನು ಬಹಿರಂಗಗೊಳಿಸಬೇಕು ಎಂದರು.

ಸಿದ್ದರಾಮಯ್ಯನವರು ರಾಜ್ಯದಲ್ಲಿ ಕಾನೂನು ವ್ಯವಸ್ಥೆ ವಿಫಲವಾಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಕಾಲದಲ್ಲಿಯೂ ಇಂತಹ ಹಲವಾರು ಘಟನೆಗಳು ಸಂಭವಿಸಿವೆ. ಇದು ರಾಜಕೀಯ ಪ್ರೇರಿತ ಹೇಳಿಕೆ. ಇಂತಹ ಹೇಳಿಕೆಗಳಿಗೆ ಮಹತ್ವ ನೀಡುವುದಿಲ್ಲ ಎಂದರು.

ಇದನ್ನೂ ಓದಿ | ಮಂಗಳೂರು ಸ್ಫೋಟ | ಕುಕ್ಕರ್‌ ಬ್ಲಾಸ್ಟ್‌ ರೂವಾರಿ ಶಾರಿಖ್: ಸೊಪ್ಪಿನಗುಡ್ಡೆಯಿಂದ ಐಸಿಎಸ್‌ವರೆಗೂ ಚಾಚಿತ್ತಾ ಟೆರರ್‌ ಲಿಂಕ್‌

Exit mobile version