Site icon Vistara News

Ayodhya Ram mandir: ಈವರೆಗೆ ಅಯೋಧ್ಯೆ ರಾಮಲಲ್ಲಾನ ದರ್ಶನ ಮಾಡಿದವರ ಸಂಖ್ಯೆ 1.5 ಕೋಟಿ!

Ayodhya Ram mandir

ಅಯೋಧ್ಯೆ: ಭಗವಾನ್ ಶ್ರೀರಾಮನ (sriram) ಜನ್ಮ ಸ್ಥಳವಾದ ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram mandir) ರಾಮಲಲ್ಲಾನ (ramlalla) ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಪ್ರತಿನಿತ್ಯ ಸುಮಾರು ಒಂದು ಲಕ್ಷ ಮಂದಿ ಭೇಟಿ ನೀಡುತ್ತಿದ್ದಾರೆ. ದೇವಾಲಯ ಉದ್ಘಾಟನೆಯಾದ ಬಳಿಕ ಈವರೆಗೆ ಸುಮಾರು 1.5 ಕೋಟಿ ಮಂದಿ ದೇವಸ್ಥಾನಕ್ಕೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ ಎಂದು ದೇವಾಲಯದ ಟ್ರಸ್ಟ್‌ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ (Shri Ram Janmabhoomi Theertha Kshetra Trust) ಪ್ರಧಾನ ಕಾರ್ಯದರ್ಶಿ (Principal Secretary) ಚಂಪತ್ ರಾಯ್‌ (Champat Rai), ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಜನ್ಮಭೂಮಿ ದೇವಾಲಯದಲ್ಲಿ ಜನವರಿ 22ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ಸರಿಸುಮಾರು 1.5 ಕೋಟಿ ಜನರು ರಾಮ್ ಲಲ್ಲಾನ ದರ್ಶನ ಪಡೆದಿದ್ದಾರೆ. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನರು ರಾಮಲಲ್ಲಾನ ದರ್ಶನ ಪಡೆಯಲು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಿದರು.

ಹೊಸದಾಗಿ ನಿರ್ಮಿಸಲಾದ ಭವ್ಯವಾದ ರಾಮಜನ್ಮಭೂಮಿ ದೇವಾಲಯದಲ್ಲಿ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಅವರು ರಚಿಸಿರುವ 51 ಇಂಚು ಎತ್ತರದ ಭಗವಾನ್ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾ ಜನವರಿ 22ರಂದು ಎಲ್ಲಾ ಪಂಗಡಗಳಿಗೆ ಸೇರಿದ ಸುಮಾರು 8,000 ಗಣ್ಯರ ಸಮ್ಮುಖದಲ್ಲಿ ನಡುವೆ ನಡೆಯಿತು. ಪ್ರಾಣ ಪ್ರತಿಷ್ಠಾ ಸಮಾರಂಭದ ವಿಧಿವಿಧಾನಗಳ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದರು.

ಇದನ್ನೂ ಓದಿ: Ram Mandir : ಇಲ್ಲಿದೆ ನೋಡಿ ಬಾಲ ರಾಮನ ಕಣ್ಣಿಗೆ ಜೀವಕಳೆ ನೀಡಿದ್ದ ಬಂಗಾರದ ಉಳಿ, ಬೆಳ್ಳಿ ಸುತ್ತಿಗೆಯ ಚಿತ್ರ


ಮುಂದಿನ ಕೆಲಸ?

ಜನ್ಮಭೂಮಿ ದೇವಾಲಯದ ಸುತ್ತಲೂ 14 ಅಡಿ ಅಗಲದ ಭದ್ರತಾ ಗೋಡೆಯನ್ನು ನಿರ್ಮಿಸುವುದಾಗಿ ದೇವಾಲಯದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಘೋಷಿಸಿದರು. ಇದನ್ನು ‘ಪರ್ಕೋಟಾ’ ಎಂದು ಕರೆಯಲಾಗುತ್ತದೆ. ರಾಮ್ ಲಲ್ಲಾನ ಪ್ರಾಣ ಪ್ರತಿಷ್ಠೆ ನಡೆದ ದೇಗುಲದ ನೆಲ ಮಹಡಿ ಮಾತ್ರ ಪೂರ್ಣಗೊಂಡಿದ್ದು, ಮೊದಲ ಅಂತಸ್ತಿನ ಕಾಮಗಾರಿ ನಡೆಯುತ್ತಿದೆ ಎಂದು ರಾಯ್‌ ಹೇಳಿದರು.

ಹಲವು ಸಣ್ಣ ದೇಗುಲಗಳು

ರಾಮ ಮಂದಿರದ ಆವರಣದಲ್ಲಿ ಶಿವನಿಂದ ಹಿಡಿದು ಹನುಮಾನ್ ಗಢಿವರೆಗೆ ಆರು ಸಣ್ಣಸಣ್ಣ ದೇವಾಲಯಗಳನ್ನು ನಿರ್ಮಿಸಬೇಕಿದೆ. ಒಮ್ಮೆ ಪೂರ್ಣಗೊಂಡ ಅನಂತರ, ರಾಮ ಮಂದಿರದ ಆವರಣವು ಏಕಕಾಲಕ್ಕೆ 25,000 ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತದೆ ಎಂದು ರಾಯ್‌ ತಿಳಿಸಿದರು.


ಪರ್ಕೋಟಾ ವಿಶೇಷತೆ ಏನು?

ದೇವಾಲಯದ ಸುತ್ತ ನಿರ್ಮಿಸಲಾಗುವ ಪರ್ಕೋಟಾ ಬಹುಪಯೋಗಿಯಾಗಿದ್ದು, ಅಲ್ಲಿ 6 ದೇವಾಲಯಗಳನ್ನು ನಿರ್ಮಿಸಲಾಗುವುದು. ಶಂಕರ, ಸೂರ್ಯ, ಹನುಮಾನ್, ಮಾ ಅನ್ನಪೂರ್ಣ, ಮಹರ್ಷಿ ವಾಲ್ಮೀಕಿ, ವಶಿಷ್ಠ, ವಿಶ್ವಾಮಿತ್ರ ಮತ್ತು ಅಗಸ್ತ್ಯ ರ ದೇವಾಲಯವನ್ನು ಆವರಣದಲ್ಲಿ ನಿರ್ಮಿಸಲಾಗುತ್ತದೆ. ನಿಶಾದ್ ರಾಜ್, ಮಾ ಶಬರಿ, ಮಾ ಅಹಲ್ಯಾ ಮತ್ತು ಜಟಾಯು ದೇವಾಲಯಗಳನ್ನು ನಿರ್ಮಿಸಲಾಗುವುದು ಎಂದರು.

ದೇವಾಲಯದ ಆವರಣದಲ್ಲಿರುವ 600 ಕ್ಕೂ ಹೆಚ್ಚು ಗಿಡಗಳನ್ನು ಸಂರಕ್ಷಿಸಲಾಗಿದೆ. ನೀರು ಸಂಸ್ಕರಣಾ ಘಟಕ, ಒಳಚರಂಡಿ ಸಂಸ್ಕರಣಾ ಘಟಕವೂ ದೇವಾಲಯ ಆವರಣದಲ್ಲಿ ಇದೆ. ಈ ದೇವಾಲಯವು ಸ್ವತಃ ಸ್ವತಂತ್ರವಾಗಿರುತ್ತದೆ ಮತ್ತು ಅಯೋಧ್ಯೆಯ ಜನರು ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ದೇವಾಲಯದ ಅಗತ್ಯವನ್ನು ಪೂರೈಸಲು ಯಾವುದೇ ಸಮಸ್ಯೆ, ಇಲ್ಲ ಎಂದು ತಿಳಿಸಿದರು.

ರಾಮ ನವಮಿ ಆಚರಣೆ

ರಾಮ ಮಂದಿರದಲ್ಲಿ ಏಪ್ರಿಲ್ 17ರಂದು ಅತ್ಯಂತ ವೈಭವದಿಂದ ರಾಮನ ಜನ್ಮ ದಿನವನ್ನು ಆಚರಿಸಲಾಯಿತು. ಭವ್ಯವಾದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಅನಂತರ ಮೊದಲ ಬಾರಿಗೆ ರಾಮನಿಗೆ ‘ಸೂರ್ಯ ತಿಲಕ’ ವನ್ನು ಇಡಲಾಯಿತು. ದೇವಾಲಯವು ಆಗ 19 ಗಂಟೆಗಳ ಕಾಲ ತೆರೆದಿತ್ತು. ಆಹಾರಕ್ರಮಕ್ಕೆ 56 ಖಾದ್ಯಗಳನ್ನು ನೀಡಲಾಯಿತು ಎಂದು ಮಾಹಿತಿ ನೀಡಿದರು.

ನಾಗರ ಶೈಲಿ

ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ಮೂರು ಅಂತಸ್ತಿನ ರಾಮ ಜನ್ಮಭೂಮಿ ಮಂದಿರವು ದೇವಾಲಯದ ಪಟ್ಟಣದಲ್ಲಿ 2.7 ಎಕರೆ ಭೂಮಿಯಲ್ಲಿ 380 ಅಡಿ ಉದ್ದ , 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ. ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ. ಐದು ಮಂಟಪಗಳಲ್ಲಿ ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮತ್ತು ಕೀರ್ತನ ಮಂಟಪಗಳು ಸೇರಿವೆ. ಕಂಬ ಮತ್ತು ಗೋಡೆಗಳ ಮೇಲೆ ಹಿಂದೂ ದೇವಾನುದೇವತೆಗಳ ಸಂಕೀರ್ಣವಾದ ಕೆತ್ತನೆಯ ಚಿತ್ರಣಗಳನ್ನು ಒಳಗೊಂಡಿದೆ.

Exit mobile version