Site icon Vistara News

Puneeth Rajkumar | ತಂದೆಯ ಮೀರಿ ಬೆಳೆದು ಉಳಿದ ದೇವಮಾನವ: ಪುನೀತ್‌ ನೆನಪು ಹಂಚಿಕೊಂಡ ನಟ ಜಗ್ಗೇಶ್‌!

Puneeth Rajkumar

ಬೆಂಗಳೂರು : ನಟ ಜಗೇಶ್‌ ಯಾವಾಗಲೂ ಪುನೀತ್‌ ರಾಜಕುಮಾರ್‌ (Puneeth Rajkumar) ನನ್ನ ಮೆಚ್ಚಿನ ನಟ ಎಂದು ಹೇಳಿಕೊಳ್ಳುತ್ತಿದ್ದರು. ರಾಯರ ದರ್ಶನಕ್ಕೆ ಹಲವು ಬಾರಿ ಪುನೀತ್‌ ಜತೆ ಹೋಗಿದ್ದೆ ಎಂದು ಶೇರ್‌ ಮಾಡಿಕೊಳ್ಳುತ್ತಿದ್ದರು. ಇದೀಗ ಪುನೀತ್‌ ನೆನೆದು ಭಾವುಕ ಮಾತುಗಳನ್ನು ಇನ್‌ಸ್ಟಾ ಮೂಲಕ ಹಂಚಿಕೊಂಡಿದ್ದಾರೆ.

ಕಂದ ಇದು ಯಾರು ಗೊತ್ತಾ, ನಮ್ಮ ರಜನಿಕಾಂತ ಎಂದು ಪರಿಚಯಿಸಿದ್ರು ಅಣ್ಣಾವ್ರು
“ರಾಘಣನ ಮದುವೆಗೆ ವಜ್ರೇಶ್ವರಿ ಮ್ಯಾನೇಜರ್ ಕಂಠೀರವ ಕುಮಾರ್ ಬರಬೇಕು ಎಂದು ತಿಳಿಸಿದ. ಅಣ್ಣನ ಮನೆಯ ಮದುವೆ ಸಡಗರದಲ್ಲಿ ಬಾಗಿಯಾಗುವ ಸೌಭಾಗ್ಯ ಇದು ಎಂದು ಪರಿಮಳಗೆ ತಯಾರಾಗಲು ಹೇಳಿದೆ. ಆಗ ನನ್ನ ಬಳಿ ಇದ್ದದ್ದು ಬುಲೆಟ್‌, ಅದನ್ನ ಏರಿ ಪುನೀತಫಾರ್ಮ್‌ಗೆ ಹೋದೆವು. ಅಣ್ಣನ ಪ್ರೀತಿಗೆ ಏನು ಹೇಳಬೇಕೋ ಬಾಯ್ಯ ಬಾ ಎಂದು ಕೂಗಿ, ಮೈಸವರಿ ಅವರೇ ಕುಡಿಯಲು ಪಾನೀಯ ನೀಡಿದರು. ಬಂದವರಿಗೆಲ್ಲ ನನ್ನ ಪರಿಚಯಿಸಿದರು. ಅದರಲ್ಲಿ ನನ್ನ ವಿಶೇಷ ಪುನೀತ್. ಕಂದ ಇದು ಯಾರು ಗೊತ್ತಾ, ನಮ್ಮ ರಜನಿಕಾಂತ ಎಂದರು. ಬಾಲಕ ಪುನೀತ ಆಶ್ಚರ್ಯದಿಂದ ನನ್ನ ನೋಡಿದ. ನನಗೂ ಆತನ ನೋಡಿ ಆನಂದವಾಯಿತು” ಎಂದಿದ್ದಾರೆ.

ವೆಂಕಟೇಶ ಎಂಬ ಜೂನಿಯರ್ ಆರ್ಟಿಸ್ಟ್ ಕೊಟ್ಟ ಫೋಟೊ
ಕೆಲದಿನದ ನಂತರ ರಣರಂಗ ಶಿವಣ್ಣನ ಚಿತ್ರದ ಕ್ಲೈಮ್ಯಾಕ್ಸ್ ಸಮಯದಲ್ಲಿ ವೆಂಕಟೇಶ ಎಂಬ ಜೂನಿಯರ್ ಆರ್ಟಿಸ್ಟ್ ಲೋ ತಗಳೋ ರಾಜಣ್ಣನ ಜತೆ ಫೋಟೊ ಎಂದು ನೀಡಿದ. ಆನಂದ ತಡೆಯಲಾಗಲಿಲ್ಲ. ಕಾರಣ ಆ ಕಾಲದಲ್ಲಿ ರಾಜಣ್ಣನ ಜತೆ ಫೋಟೊ ಅಸಾಧ್ಯ. ನೋಡಿದರೆ ಅದು ನನ್ನ ಹುಡುಕಿಬಂತು. ವೆಂಕಟೇಶ ಹೊಟ್ಟೆಪಾಡಿಗೆ ಸಣ್ಣ ಕ್ಯಾಮೆರಾ ಇಟ್ಟುಕೊಂಡಿದ್ದ. ಒಂದು ಫೋಟೊಗೆ 5ರೂ ಪಡೆಯುತ್ತಿದ್ದ. ಬಡವ ಎಂದು ಅಣ್ಣನೆ ಸಹಕರಿಸಿದ್ದರು ಎಂದು ಜಗ್ಗೇಶ್‌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Bigg Boss Kannada | ತಮ್ಮ ಗೆಲುವನ್ನು ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ಗೆ ಅರ್ಪಿಸಿದ ʻಧಮ್‌ ಪವರ್‌ʼ ಟೀಮ್‌!

ಪುನೀತನ ಜತೆ ಮಂತ್ರಾಲಯ ನೆನಪು
“ಕೆಲ ವರ್ಷ ನಂತರ ಪುನೀತ ಅಣ್ಣನ ಜತೆ ಕಲಾವಿದ ಸಂಘದ ಕಾರ್ಯಕ್ರಮದಲ್ಲಿ ನರ್ತಿಸಿದ ಆಗ ಅಮ್ಮ ಜಗ್ಗೇಶ ಅವನು ಪ್ರೀತಿಸುವ ಹುಡುಗಿ ಬಂದಿದ್ದಾಳೆ ಎಂದರು. ಜನರ ಮಧ್ಯೆ ನನ್ನ ಕಣ್ಣಿಗೆ ಅಶ್ವಿನಿ ಕಾಣಲಿಲ್ಲ. ನಂತರ ಮದುವೆ ಸೂಪರ್ ಸ್ಟಾರ್ ಎಲ್ಲ ಆದರು. ಅದೇನು ವಿಪರೀತ ಇಷ್ಟಪಡುತ್ತಿದ್ದ. ನಮ್ಮ ಸ್ನೇಹ ವರ್ಣಿಸಲಾಗದ ಸಂಕೋಲೆ. ಕಡೆ ದಿನಗಳು ಎಂದು ಭಾವಿಸಲಿಲ್ಲ. ನಿರ್ದೇಶಕ ಸಂತೋಷ ಪುನೀತನ ಜತೆ ಮಂತ್ರಾಲಯಕ್ಕೆ ಕಳೆದುಕೊಂಡು ಹೋದ. ಆ ದಿನ ಮನಬಿಚ್ಚಿ ಮಾತಾಡಿ ನಕ್ಕು ಸಮಯ ಕಳೆದೆವು. ಕಡೆ 3 ದಿನದ ಹಿಂದೆ ಯೋಗಿ ಪುನೀತ ಮಲ್ಲೇಶ್ವರಕ್ಕೆ ಬಂದ ವಿಷಯ ತಿಳಿಸಿದ. ಕರೆ ಮಾಡಿದೆ. ಆಗ ಅಣ್ಣ ಮಲ್ಲೇಶ್ವರದಲ್ಲಿ ಇರುವೆ ಎಂದ. ಹಾಗೆ ಎದ್ದು ಕಾರ್ ಡ್ರೈವ್ ಮಾಡಿ ಹೋದೆ. ಪೂಜೆಗೆ ಕುಳಿತು ತೊಡೆ ನೋವಾಗಿದೆ ಹಾಗಾಗಿ ಚಿಕಿತ್ಸೆಗೆ ಬಂದೆ ಎಂದ. ಚಿಕಿತ್ಸೆ ಮುಗಿದ ಮೇಲೆ ಸತೀಶ್ ನಾನು ಪುನೀತ ಕೆಲ ಸಮಯ ಮಾತಾಡಿ ನಿರ್ಗಮಿಸಿದೆವು” ಎಂದು ನೆನಪಿನ ಬುತ್ತಿಯನ್ನು ಬಿಚ್ಚಿದ್ದಾರೆ.

ತಂದೆಯ ಮೀರಿ ಬೆಳೆದು ಉಳಿದ ದೇವಮಾನವ
“ಇದಾದ 3 ದಿನಕ್ಕೆ ಪುನೀತ ಹೋಗಿಬಿಟ್ಟ ಅಂದರು. ಹೃದಯ ಒಡೆದು ಚೂರಾಯಿತು. ಜೀವನದ ಆಸಕ್ತಿ. ಬದುಕಿನ ಮೇಲೆ ನಂಬಿಕೆ. ನಾವು ಯಾರು ಈ ಭೂಮಿಗೆ ಏಕೆ ಬಂದೆವು. ಎಲ್ಲ ಇದೆ, ಮುಂದೆ ಇರದು. ಯಾವುದು ಸತ್ಯ ಯಾವುದು ಮಿಥ್ಯ! ನಾನು ಹೇಗೆ ಇರಬೇಕು ಏನು ಮಾಡಬೇಕು. ಬದುಕು ನಶ್ವರ! ಎಂಬ ಅನೇಕ ಪ್ರಶ್ನೆ ನನ್ನ ಕಾಡುತ್ತಿದೆ. ನನ್ನೊಳಗೆ ನಾನು ಬಚ್ಚಿಕೊಂಡು ಸುಮ್ಮನೆ ಇರುವಂತೆ ನಟಿಸಿ ಬದುಕುತ್ತಿರುವೆ. ನನ್ನವರು ಎಂದು ಸಿಕ್ಕಾಗ ಮನಬಿಚ್ಚಿ ಮಾತಾಡುವೆ. ಕೆಲಸ ಇದ್ದಾಗ ಮಾಡುವೆ. ಮಿಕ್ಕಂತೆ ಯಾರಿಗೂ ಸಿಗದೆ ಏಕಾಂತಕ್ಕೆ ಜಾರುವೆ. ಇದು ಪುನೀತ ಸಿಕ್ಕಾಗ ಇದ್ದಾಗ ಹೋದಮೇಲೆ ನನ್ನ ಹೃದಯದ ಅನಿಸಿಕೆ. ಕಡೆಯ ಮಾತು ಪುನೀತ ಅವರ ತಂದೆಯ ಮೀರಿ ಬೆಳೆದು ಉಳಿದ ದೇವಮಾನವ” ಎಂದು ಪೋಸ್ಟ್‌ನಲ್ಲಿ ಸ್ಮರಿಸಿದ್ದಾರೆ.

ಇದನ್ನೂ ಓದಿ | Appu Namana | ರೇಷ್ಮೆ ಸೀರೆಯಲ್ಲಿ ಮೂಡಿದ ಪುನೀತ್‌ ಭಾವಚಿತ್ರ; ಅಭಿಮಾನಿಗಳಿಂದ ಅಶ್ವಿನಿಗೆ ಉಡುಗೊರೆ

Exit mobile version