Site icon Vistara News

Actor Rajinikanth : ಜೈಸಲ್ಮೇರ್‌ನಲ್ಲಿ ರಜನಿಕಾಂತ್‌ ಕಾರಿಗೆ ಮುತ್ತಿಗೆ ಹಾಕಿದ ಅಭಿಮಾನಿಗಳು

#image_title

ಜೈಪುರ: ದಕ್ಷಿಣ ಭಾರತದ ಪ್ರಸಿದ್ಧ ನಟ, ಸೂಪರ್‌ ಸ್ಟಾರ್‌ ರಜನಿಕಾಂತ್‌ (Actor Rajinikanth) ಸದ್ಯ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ʼಜೈಲರ್‌ʼ ಸಿನಿಮಾದ ಚಿತ್ರೀಕರಣದಲ್ಲಿ ಬಿಜಿ ಇದ್ದಾರೆ. ಚಿತ್ರೀಕರಣದ ಸ್ಥಳದಲ್ಲಿ ತಲೈವಾ ಅಭಿಮಾನಿಗಳ ದಂಡೇ ಕಾಣಿಸಿಕೊಂಡಿದ್ದು, ನಟನ ಕಾರಿಗೂ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಇದನ್ನೂ ಓದಿ: BKS Varma Death: ಬಿಕೆಎಸ್ ವರ್ಮಾ ಅವರಿಂದಲೇ ರಾಘವೇಂದ್ರ ಸ್ವಾಮಿಗಳ ಚಿತ್ರ ಬರೆಸಿದ್ದರು ರಜನಿಕಾಂತ್‌
ರಜನಿಕಾಂತ್‌ ಬಿಳಿ ಬಣ್ಣದ ಕಾರಿನಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದರೆ, ಅಭಿಮಾನಿಗಳು ಅವರೊಂದಿಗೆ ಸೆಲ್ಫೀ ತೆಗೆದುಕೊಳ್ಳುವುದಕ್ಕೆಂದು ಮುಗಿಬೀಳುತ್ತಾರೆ. “ನಿಮ್ಮ ಜತೆಗೆ ಫೋಟೋ ತೆಗೆದುಕೊಳ್ಳಬೇಕು. ಸಾಧ್ಯವಾದರೆ ಹೊರಗೆ ಬನ್ನಿ” ಎಂದು ಕೇಳುತ್ತಾರೆ ಕೂಡ. ಈ ಎಲ್ಲ ಸಮಯದಲ್ಲಿ ರಜನಿಕಾಂತ್‌ ಕಾರಿನ ಒಳಗೇ ಕುಳಿತುಕೊಂಡು ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ಕಾರಿನ ಗ್ಲಾಸ್‌ ಅನ್ನು ಸ್ವಲ್ಪ ಇಳಿಸಿ ಕೂಡ ಅಭಿಮಾನಿಗಳಿಗೆ ಕೈ ತೋರಿಸಿದ್ದಾರೆ. ನಟನ ರಕ್ಷಣೆಗಾಗಿ ಪೊಲೀಸರನ್ನೂ ಕೂಡ ನಿಯೋಜಿಸಲಾಗಿದ್ದು, ಅವರು ಅಭಿಮಾನಿಗಳನ್ನು ಸರಿಸಿ, ಕಾರಿಗೆ ಜಾಗ ಮಾಡಿಕೊಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.


ʼಜೈಲರ್‌ʼ ಸಿನಿಮಾದಲ್ಲಿ ರಜನಿಕಾಂತ್‌ ಜೈಲಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರೊಂದಿಗೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌, ಮೋಹನ್‌ಲಾಲ್‌, ಜಾಕಿ ಶ್ರಾಫ್, ತಮನ್ನಾ ಭಾಟಿಯಾ, ರಮ್ಯ ಕೃಷ್ಣನ್‌ ಕೂಡ ನಟಿಸುತ್ತಿದ್ದಾರೆ. ʼಉತ್ತರ ದಕ್ಷಿಣ್‌ʼ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದ ರಜನಿ ಮತ್ತು ಜಾಕಿ ಶ್ರಾಫ್ ಜೋಡಿ ಇದೀಗ 36 ವರ್ಷಗಳ ನಂತರ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಇದೇ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.


ರಜನಿಕಾಂತ್‌ ಜೈಲರ್‌ ನಂತರ ಮಗಳು ಐಶ್ವರ್ಯ ರಜನಿಕಾಂತ್‌ ನಿರ್ದೇಶನದ ʼಲಾಲ್‌ ಸಲಾಮ್‌ʼ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾದ ಮೂಲಕ ಐಶ್ವರ್ಯ ಹಲವು ವರ್ಷಗಳ ನಂತರ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಇದರಲ್ಲಿ ವಿಷ್ಣು ವಿಶಾಲ್‌ ಮತ್ತು ವಿಕ್ರಾಂತ್‌ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Exit mobile version