Site icon Vistara News

Kannada New Movie: ʻಕೆಂಡʼ ವಿತರಣಾ ಹಕ್ಕು ಪಡೆದ ವಿಶ್ವ ಮಟ್ಟದ ನಿರ್ಮಾಣ ಸಂಸ್ಥೆ!

Kenda Films

ಬೆಂಗಳೂರು: `ಕೆಂಡ’ ಚಿತ್ರದಿಂದ (Kannada New Movie) ಹೊಸ ಅಪ್‌ಡೇಟ್‌ ಸಿಕ್ಕಿದೆ. ಕಿಲ್ಜಾಯ್ ಫಿಲ್ಮ್ಸ್‌ (Keizai Films) ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ, ಘನತೆ ಹೊಂದಿರುವ ನಿರ್ಮಾಣ ಸಂಸ್ಥೆ. ನ್ಯೂಯಾರ್ಕ್ ಹಾಗೂ ಬರ್ಲಿನ್ ಮೂಲದ ಈ ಸಂಸ್ಥೆ ಆಸ್ಕರ್ ನಂತಹ ಪ್ರಶಸ್ತಿ ಪಡೆದುಕೊಂಡ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಇಂತಹ ಸಂಸ್ಥೆ ಬಹಳಷ್ಟು ಇಷ್ಟಪಟ್ಟು ʻಕೆಂಡʼ ಚಿತ್ರದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಅದಲ್ಲದೇ ಬಹು ಹೆಮ್ಮೆಯಿಂದ ಆ ವಿಚಾರವನ್ನು ಅಧಿಕೃತವಾಗಿ ಘೋಷಿಸಿದೆ ಚಿತ್ರತಂಡ.

ಇದರ ಜತೆಗೆ ಸಹದೇವ್ ಕೆಲವಡಿ ನಿರ್ದೇಶಕರಾಗಿ ವಿಶ್ವಮಟ್ಟದಲ್ಲಿ ಗಮನ ಸೆಳೆಯುವ ಲಕ್ಷಣಗಳೂ ದಟ್ಟವಾಗಿವೆ. ಈ ಹಿಂದೆ ʻಗಂಟುಮೂಟೆ’ ಎಂಬ ವಿಶಿಷ್ಟ ಸಿನಿಮಾ ಕೊಟ್ಟಿದ್ದ ತಂಡವೀಗ `ಕೆಂಡ’ ಸಿನಿಮಾ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ಸೇಳೆಯುವಲ್ಲಿ ಬರುತ್ತಿದೆ. ʻಗಂಟುಮೂಟೆʼ ಚಿತ್ರದ ನಿರ್ಮಾಣದಲ್ಲಿ ಭಾಗಿಯಾಗಿ ಛಾಯಾಗ್ರಾಹಕರಾಗಿದ್ದ ಸಹದೇವ್ ಕೆಲವಡಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಬಿಡುಗಡೆಯಾಗಿರುವ ʻಕೆಂಡʼ ಚಿತ್ರದ ಮೋಷನ್ ಪೋಸ್ಟರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಸಿನಿರಸಿಕರು. ಆ ಮೂಲಕ ಪ್ರೇಕ್ಷಕರನ್ನು ಸೆಳೆಯುವುದರೊಂದಿಗೆ ಆರಂಭಿಕ ಗೆಲುವನ್ನೂ ಪಡೆದುಕೊಂಡಿದೆ. ಶೀರ್ಷಿಕೆಯಲ್ಲಿಯೇ ರಗಡ್ ಫೀಲ್ ಹೊಂದಿರುವ ಈ ಸಿನಿಮಾವನ್ನು ರೂಪಾ ರಾವ್ ಮತ್ತು ಸಹದೇವ್ ಜತೆಗೂಡಿ, ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ʻಗಂಟುಮೂಟೆʼ ಕೂಡ ಈ ನಿರ್ಮಾಣ ಸಂಸ್ಥೆಯಿಂದಲೇ ರೂಪುಗೊಂಡಿತ್ತು.

ಇದನ್ನೂ ಓದಿ: Viral Video: ಎಲ್ಲೇ ಇಲ್ಲದ ವಿಕೃತಿ; ಈ ಯುವಕರ ಕೃತ್ಯಕ್ಕೆ ನೆಟ್ಟಿಗರು ಛೀಮಾರಿ ಹಾಕುತ್ತಿರೋದ್ಯಾಕೆ?

ಬೆಂಗಳೂರು ಮಹಾ ನಗರಿಯಲ್ಲಿ ನಾನಾ ನಿರಾಸೆಗೊಳಗಾದ ಯುವ ಸಮೂಹ, ರಾಜಕೀಯ, ಅಪರಾಧ ಸೇರಿದಂತೆ ಒಂದಷ್ಟು ಸಾಮಾಜಿಕ ಅಂಶಗಳನ್ನಿಟ್ಟುಕೊಂಡು ಈ ಚಿತ್ರ ತಯಾರಾಗಿದೆ. ಫೌಂಡ್ರಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಹೇಗೆ ಈ ವ್ಯವಸ್ಥೆಯ ವಿಷವ್ಯೂಹಕ್ಕೆ ಸಿಲುಕುತ್ತಾನೆ, ಆತನನ್ನು ಪಟ್ಟಭದ್ರರು ಹೇಗೆಲ್ಲ ಬಳಸಿಕೊಳ್ಳುತ್ತಾರೆ, ಆ ಕ್ಷಣದೊಂದು ನಿರ್ಧಾರ ಆತನ ಬದುಕನ್ನು ಯಾವ ದಿಕ್ಕಿನತ್ತ ಮುನ್ನಡೆಸುತ್ತದೆ ಎಂಬಿತ್ಯಾದಿ ಕುತೂಹಲಕರ ತಿರುವುಗಳೊಂದಿಗೆ ಸಿನಿಮಾ ಮೂಡಿ ಬರುತ್ತಿದೆ.

ವಿದೇಶಗಳಲ್ಲಿ ಸಿನಿಮಾ ಬಗ್ಗೆ ಅಧ್ಯಯನ ನಡೆಸಿ ಬಂದು, ತನ್ನ ಮಾತೃ ಭಾಷೆಯಲ್ಲಿಯೇ ಸಿನಿಮಾ ಮಾಡಬೇಕೆಂಬ ಬಯಕೆ ಹೊಂದಿದ್ದವರು ಸಹದೇವ್ ಕೆಲವಡಿ. ಅದರ ಆರಂಭಿಕ ಹೆಜ್ಜೆಯಾಗಿ ರೂಪಾ ರಾವ್ ಅವರ ಜತೆಗೂಡಿ ನಿರ್ಮಾಣ ಸಂಸ್ಥೆಗೆ ಚಾಲನೆ ನೀಡಿದ್ದರು. ಇದೀಗ ಅವರೇ ಕೆಂಡದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲ್ ಕೃಷ್ಣ ದೇಶಪಾಂಡೆ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಎರಡು ಹಾಡುಗಳಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಲಿಫೆಂಟ್ ವಿಸ್ಪರ್ಸ್ ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ ಕೆಂಡ ಚಿತ್ರಕ್ಕೆ ಶಬ್ದ ಸಂಯೋಜನೆ ಮಾಡಿದ್ದಾರೆ.
ಪೋಸ್ಟ್ ಪ್ರೊಡಕ್ಷನ್ ಕಾರ್ಯವೂ ಅಂತಿಮ ಘಟ್ಟದಲ್ಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಕೆಲವೇ ದಿನಗಳಲ್ಲಿ ಬಿಡುಗಡೆಯ ದಿನಾಂಕ ಅನೌನ್ಸ್ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

Exit mobile version