Site icon Vistara News

Sushant Singh Rajput: ಸುಶಾಂತ್‌ ಸಿಂಗ್‌ ಸಾವಿಗೆ ನ್ಯಾಯಕ್ಕಾಗಿ ಆನ್‌ಲೈನ್ ಅಭಿಯಾನ ಶುರು ಮಾಡಿದ ಸಹೋದರಿ!

Sushant Singh Rajput

ಬೆಂಗಳೂರು: ನಟ ಸುಶಾಂತ್‌ ಸಿಂಗ್‌ (Sushant Singh Rajput) ಅವರು 2020ರ ಜೂನ್‌ 14ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಸುಶಾಂತ್ ಸಿಂಗ್ ರಜಪೂತ್ ಅವರ ಕುರಿತಾಗಿ ಅವರ ಸಹೋದರಿಯರು ಯಾವಾಗಲೂ ಮಾಧ್ಯಮಗಳ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸುಶಾಂತ್‌ ಸಿಂಗ್‌ ಅವರ ಪರವಾಗಿ ನಿಲ್ಲುತ್ತಾರೆ. ಇದೀಗ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ( Shweta Singh Kirti ) ಸಹೋದರನ ಸಾವಿಗೆ ನ್ಯಾಯಕ್ಕಾಗಿ ಆನ್‌ಲೈನ್ ಅಭಿಯಾನವನ್ನು (online campaig) ಪ್ರಾರಂಭಿಸಿದ್ದಾರೆ. ಇದಕ್ಕೂ ಮುಂಚೆ ಶ್ವೇತಾ ಸಿಂಗ್ ಕೀರ್ತಿ ಅವರು ಹಲವು ಅಧಿಕಾರಿಗಳಲ್ಲಿ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದರು.

ಇದೀಗ ಶ್ವೇತಾ ಸಿಂಗ್ ಕೀರ್ತಿ ಹೊಸ ಅಭಿಯಾನ ಶುರು ಮಾಡಿದ್ದಾರೆ. ಈ ಬಗ್ಗೆ ಇನ್‌ಸ್ಟಾದಲ್ಲಿ ‘ನ್ಯಾನಿ 4 ಎಸ್‌ಎಸ್‌ಆರ್ ಜಾನ್ ಆಂದೋಲನ್’ (Nany 4 SSR Jan Andolan) ಎಂದು ಘೋಷಿಸಿದರು. ಈ ಅಭಿಯಾನದ ಭಾಗವಾಗಿ, ಪ್ರತಿಯೊಬ್ಬರೂ ತಮ್ಮ ಮಣಿಕಟ್ಟಿಗೆ ಅಥವಾ ಹಣೆಯ ಮೇಲೆ ಕೆಂಪು ಬಟ್ಟೆಯನ್ನು ಕಟ್ಟಿಕೊಳ್ಳಬೇಕೆಂದು ಶ್ವೇತಾ ಒತ್ತಾಯಿಸಿದ್ದಾರೆ. ಜತೆಗೆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ನಟನಿಗೆ ನ್ಯಾಯ ನೀಡುವಂತೆ ವಿನಂತಿಸಿದ್ದಾರೆ, ಪೋಸ್ಟ್‌ನ ಶೀರ್ಷಿಕೆಯಲ್ಲಿ ʻʻಸಿಬಿಐ ತನಿಖೆಯನ್ನು ಇನ್ನಷ್ಟು ಕಠಿಣಗೊಳಿಸಬೇಕು. ಮತ್ತು ಸತ್ಯವನ್ನು ಬಯಲಿಗೆ ತರಬೇಕುʼʼʼಎಂದು ಆಗ್ರಹಿಸಿದ್ದಾರೆ.

ಏನಿದು ಅಭಿಯಾನ?

ಪೋಸ್ಟ್‌ ಜತೆಗೆ ಶ್ವೇತಾ ಸಿಂಗ್ ಕೀರ್ತಿ ಈ ರೀತಿ ಬರೆದುಕೊಂಡಿದ್ದಾರೆ. ʻಸುಶಾಂತ್‌ ಮರಣವಾಗಿ 4 ವರ್ಷಗಳು ಕಳೆದಿವೆ. ವಿಚಾರಣೆಯನ್ನು ತ್ವರಿತಗೊಳಿಸುವಂತೆ ಮತ್ತು ಸತ್ಯವನ್ನು ಬಯಲಿಗೆ ತರುವಂತೆ ನಾನು ಸಿಬಿಐಗೆ ಮನವಿ ಮಾಡುತ್ತೇನೆ. ನಾವು ಒಗ್ಗಟ್ಟಿನಿಂದ ಒಟ್ಟಿಗೆ ನಿಲ್ಲೋಣ. ನಿಮ್ಮ ಮಣಿಕಟ್ಟಿಗೆ ಅಥವಾ ಹಣೆಯ ಮೇಲೆ ಕೆಂಪು ಬಟ್ಟೆಯನ್ನು ಕಟ್ಟಿಕೊಳ್ಳಿ, ಆ ಕ್ಷಣಗಳನ್ನು ಸೆರೆಹಿಡಿಯಿರಿ ಮತ್ತು #Nyay4SSRJanAndolan ಹ್ಯಾಷ್‌ ಟ್ಯಾಗ್‌ ಬಳಿಸಿ ವಿಡಿಯೊ ಶೇರ್‌ ಮಾಡಿʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Sushant Singh Rajput: ಪುಸ್ತಕದ ಮೂಲಕ ಸುಶಾಂತ್‌ ನೆನಪುಗಳನ್ನು ತೆರೆದಿಟ್ಟ ಸಹೋದರಿ!

ಪೋಸ್ಟ್ ಹಂಚಿಕೊಂಡ ನಂತರ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. “ಸುಶಾಂತ್ ಸಿಂಗ್ ರಜಪೂತ್ ಅವರಿಗೆ ನ್ಯಾಯ ಸಿಗಬೇಕು. ನಾವು ನಿಮ್ಮೊಂದಿಗಿದ್ದೇವೆʼʼಎಂದು ಒಬ್ಬರು ಬರೆದಿದ್ದಾರೆ. “ಹಣಕ್ಕಿಂತ ಮಾನವೀಯತೆ ದೊಡ್ಡದುʼʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. “4 ವರ್ಷಗಳು ಕಳೆದೇ ಹೋಯ್ತು. ಈ ಪ್ರಕರಣ ನಿನ್ನೆ ಮೊನ್ನೆ ಆದಂತೆ ಭಾಸವಾಗುತ್ತಿದೆ” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಈ ಮಾರ್ಚ್‌ನಲ್ಲಿಯೂ ಶ್ವೇತಾ ಅವರು ವಿಡಿಯೊ ಮೂಲಕ ಹೇಳಿಕೆಯನ್ನು ನೀಡಿದ್ದರು. ಸಹೋದರನ ಸಾವಿನ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿಯೂ ವಿನಂತಿಸಿದ್ದರು. ʻʻಸಹೋದರ ನಿಧನರಾಗಿ 45 ತಿಂಗಳುಗಳು ಕಳೆದಿವೆ. ಆದರೆ ತನಿಖಾ ಸಂಸ್ಥೆಯಿಂದ ಇನ್ನೂ ಯಾವುದೇ ಅಪ್‌ಡೇಟ್‌ಗಳು ಬಂದಿಲ್ಲ. ಪ್ರಧಾನಿ ಮೋದಿಯವರ ಸಹಾಯ ಬೇಕಿದೆʼʼಎಂದು ಹೇಳಿದ್ದರು.

ಸುಶಾಂತ್ ಬಗ್ಗೆ ಪುಸ್ತಕ ಬರೆದ ಶ್ವೇತಾ ಸಿಂಗ್ ಕೀರ್ತಿ

ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ಹೊಸ ಪುಸ್ತಕ “ಪೇನ್: ಎ ಪೋರ್ಟಲ್ ಟು ಎನ್‌ಲೈಟ್‌ಮೆಂಟ್” (Pain: A Portal to Enlightenment) ನಲ್ಲಿ ಸುಶಾಂತ್ ಅವರ ಬಗ್ಗೆ ಬರೆದಿದ್ದಾರೆ. ಪುಸ್ತಕ ಬಿಡುಗಡೆ ಕೂಡ ಆಗಿದೆ.

ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ಪುಸ್ತಕಲ್ಲಿ ಸುಶಾಂತ್‌ ಅವರ ವೃತ್ತಿ ಜೀವನ, ವೈಯಕ್ತಿಕ ಜೀವನ ಬಗ್ಗೆ ಬರೆದುಕೊಂಡಿದ್ದಾರೆ. ʻಸುಶಾಂತ್ ಬಾಲಿವುಡ್‌ನಲ್ಲಿ ಬ್ಯುಸಿಯಾಗಿಬಿಟ್ಟಿದ್ದ. ನನಗೆ ಅವನನ್ನು ಭೇಟಿ ಮಾಡಲು ಸಾಧ್ಯವಾಗುತ್ತಿರಲ್ಲಿಲ್ಲ. 2014 ರಿಂದ 2017 ರವರೆಗೆ ನಾನು ಪ್ರತಿ ವರ್ಷ ಭಾರತಕ್ಕೆ ತೆರಳಿ ಅವನನ್ನು ಭೇಟಿಯಾಗುತ್ತಿದ್ದೆ. ದುರದೃಷ್ಟವಶಾತ್, 2018 ಮತ್ತು 2019ರಲ್ಲಿ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಜನವರಿ 2020ರಲ್ಲಿ ಪ್ಲ್ಯಾನ್‌ ಕೂಡ ಮಾಡಿಕೊಂಡಿದ್ದೆ. ಕೊನೆಗೂ ಅವನನ್ನು ಮೀಟ್‌ ಆಗಲು ಆಗಲೇ ಇಲ್ಲ. 2020 ರ ಜೂನ್‌ 14ರಂದು ಅವನು ಬಾರದ ಲೋಕಕ್ಕೆ ಹೋಗೆ ಬಿಟ್ಟಿದ್ದ. ಸಾವಿಗೂ ಮುಂಚೆ ನಾಲ್ಕು ದಿನಗಳ ಮೊದಲು ನಾನು ಕಾಲ್‌ ಮಾಡಿದ್ದೆ, ಅಮೆರಿಕಾಗೆ ಬರುವಂತೆ ಹೇಳಿದ್ದೆ. ಜೂನ್‌ 13ರ ರಾತ್ರಿ ನನಗೆ ಸುಶಾಂತ್‌ ಮೃತಪಟ್ಟ ಸುದ್ದಿ ತಿಳಿಯಿತು. ನಾನು ಕೂಗಾಡಲಿಲ್ಲ. ಅಳಲಿಲ್ಲ. ಅಲ್ಲಿಯೇ ಆಘಾತದಲ್ಲಿ ಕುಸಿದು ಬಿದ್ದೆʼʼಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Sushant Singh Rajput case: ನಟಿ ರಿಯಾ ಚಕ್ರವರ್ತಿಗೆ ಬಿಗ್ ರಿಲೀಫ್! ಬೇಲ್ ಪ್ರಶ್ನಿಸಲ್ಲ ಎಂದ ಕೇಂದ್ರ ಸರ್ಕಾರ

ದೇಶಾದ್ಯಂತ ಭಾರಿ ಆಘಾತ

ಸುಶಾಂತ್‌ ಸಿಂಗ್‌ ಅವರು ʻಕಾಯ್‌ ಪೋ ಚೆʼ, ʻಎಂಎಸ್ ಧೋನಿʼ, ʻದಿ ಅನ್‌ ಟೋಲ್ಡ್ ಟೇಲ್ʼ, ʻಕೇದಾರನಾಥ್ʼ ಮತ್ತು ʻಚಿಚೋರೆʼಯಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಸುಶಾಂತ್ ಅವರ ವೈವಿಧ್ಯಮಯ ಸಿನಿಮಾ ಜೀವನ 2020 ರಲ್ಲಿ ಕೊನೆಗೊಂಡಿತು. 2020ರ ಜೂನ್ 14ರಂದು ಬಾಂದ್ರಾದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ ಅವರ ವಯಸ್ಸು 34 ಅಷ್ಟೇ. ಈ ಸಾವು ದೇಶಾದ್ಯಂತ ಭಾರಿ ಆಘಾತವನ್ನುಂಟು ಮಾಡಿತ್ತು.

ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಬಗ್ಗೆ ಹಲವಾರು ಅನುಮಾನಗಳು ಇದ್ದವು. ಚಿತ್ರರಂಗದಲ್ಲಿ ನಡೆಯುತ್ತಿರುವ ಸ್ವಜನ ಪಕ್ಷಪಾತದಿಂದ ಅವರಿಗೆ ಅನ್ಯಾಯವಾಗುತ್ತಿದೆ. ಆ ಕಾರಣಕ್ಕೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎನ್ನುವುದು ಒಂದು ಅನುಮಾನವಾದರೆ, ಯಾರೋ ಆತ್ಮೀಯರೇ ಕೊಲೆ ಮಾಡಿದ್ದಾರೆ ಎಂಬ ವಾದವೂ ಇತ್ತು. ಸಾವಿನ ಸುತ್ತ ಮಾದಕ ವ್ಯಸನ, ಡ್ರಗ್ಸ್‌ ಜಾಲ ಮತ್ತು ಅಕ್ರಮ ಹಣ ವರ್ಗಾವಣೆ ಹೀಗೆ ಹಲವು ಸಂಶಯದ ಹುತ್ತಗಳು ಬೆಳೆದಿದ್ದವು. ಸಿಬಿಐ, ಇ.ಡಿ, ಎನ್‌ಸಿಬಿ ಸೇರಿದಂತೆ ಹಲವು ತನಿಖಾ ತಂಡಗಳು ನಾನಾ ಆಯಾಮಗಳಲ್ಲಿ ತನಿಖೆಯನ್ನು ನಡೆಸುತ್ತಿವೆ. ಪೋಸ್ಟ್‌ ಮಾರ್ಟಂ ವರದಿಗಳ ಪ್ರಕಾರ ಸುಶಾಂತ್‌ ಆತ್ಮಹತ್ಯೆಯೇ ಹೌದಾಗಿದ್ದರೂ ಅದರ ಹಿಂದಿನ ಶಕ್ತಿಗಳು, ಸಿನಿಮಾ ರಾಜಕಾರಣ ಹೊರಬರಬೇಕು ಎನ್ನುವುದು ಅಭಿಮಾನಿಗಳ ಆಗ್ರಹವಾಗಿತ್ತು.

Exit mobile version