Site icon Vistara News

Kantara Movie | ಶಿಕ್ಷಕರ ದಿನಾಚರಣೆಯಂದು ಬಿಡುಗಡೆಯಾಗಲಿದೆ ಕಾಂತಾರ ಟ್ರೈಲರ್!

Kantara Movie

ಬೆಂಗಳೂರು : ಹೊಂಬಾಳೆ ಫಿಲ್ಲ್ಮ್ಸ್‌ ನಿರ್ಮಿಸಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕರಾಗಿ ನಟಿಸಿರುವ ಕಾಂತಾರ ಚಿತ್ರದ (Kantara Movie) ಟ್ರೈಲರ್‌ ಸೆಪ್ಟೆಂಬರ್‌ 5ರಂದು ಬಿಡುಗಡೆಯಾಗಲಿದೆ. ಈಗಾಗಲೇ ಹಲವು ವಿಶೇಷಗಳಿಂದ ಕಾಂತಾರ ಮನೆಮಾತಾಗಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ, ವಿಜಯಪ್ರಕಾಶ್, ಅನನ್ಯ ಭಟ್ ಹಾಡಿರುವ ‘ಸಿಂಗಾರ ಸಿರಿಯೆ’ ಹಾಡು ಈ ಹಿಂದೆ ಬಿಡುಗಡೆಗೊಂಡಿದ್ದು ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

ಟ್ವೀಟ್ ಮಾಡಿರುವ ಹೊಂಬಾಳೆ ಫಿಲ್ಮ್ಸ್‌
ಟ್ರೈಲರ್ ಬಿಡುಗಡೆ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್‌ ಚಿತ್ರದ ಪೋಸ್ಟರ್‌ ಟ್ವೀಟ್ ಮಾಡಿ ಶೇರ್‌ ಮಾಡಿದ್ದು, ʻʻಧೈರ್ಯ, ಧೈರ್ಯ ಬರುವುದು ನಿನ್ನೊಳಗಿನ ಕಿಚ್ಚಿನಿಂದ. ಆದರೆ, ನಿನ್ನೊಳಗಿನ ಕಿಚ್ಚು ನಿನ್ನನ್ನೇ ಸುಡದಿರಲಿʼʼ ಎಂದು ಕ್ಯಾಪ್ಷನ್‌ ಬರೆದುಕೊಂಡಿದೆ.

ಇದನ್ನೂ ಓದಿ | Kantara Movie | ಸ್ವಾತಂತ್ರ್ಯ ದಿನಾಚರಣೆಗೆ ಸಿಹಿ ಸುದ್ದಿ ಹಂಚಿಕೊಂಡ ಕಾಂತಾರ

ಈ ಸಿನಿಮಾದಲ್ಲಿ ಕಂಬಳ ಕ್ರೀಡೆ ಹೈಲೈಟ್ ಆಗಿದೆ. ಬಹುತೇಕ ಕರಾವಳಿ ಭಾಗದಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಂತಾರ ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಮತ್ತು ಅರವಿಂದ್ ಎಸ್ ಕಶ್ಯಪ್ ಅವರ ಛಾಯಾಗ್ರಹಣವಿದೆ. ಈ ಸಿನಿಮಾ ಸೆಪ್ಟಂಬರ್ 30ಕ್ಕೆ ದೇಶದಾದ್ಯಂತ ತೆರೆ ಕಾಣುತ್ತಿದೆ.

ಕಾಂತಾರ ಒಂದು ದಂತ ಕಥೆ !
ಈ ಹಿಂದೆ ಕಾಂತಾರ ಸಿನಿಮಾದ ಪೋಸ್ಟರ್‌ ನೋಡುವಾಗಲೇ ʻಕಾಂತಾರʼ ಶೀರ್ಷಿಕೆಯೇ ಜನರನ್ನು ಕುತೂಹಲಕ್ಕೆ ಕೊಂಡೊಯ್ದಿತ್ತು. ಒಂದು ದಂತ ಕಥೆ ಎಂಬ ಟ್ಯಾಗ್‌ಲೈನ್‌ ಮೂಲಕ ಜನರನ್ನು ಸೆಳೆದಿತ್ತು. ಕಾಂತಾರ ಎಂಬುದು ಸಾಮಾನ್ಯವಾಗಿ ಇದರ ಅರ್ಥ ಸೂರ್ಯನ ಬಿಸಿಲೇ ಬೀಳದ ಕಾಡು ಎಂದರ್ಥ. ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಶ್ರೀದೇವಿ ದುಷ್ಟರನ್ನು ಸದೆಬಡಿಯಲು ಕದಂಬ ಕಾಂತಾರದಲ್ಲಿ ನೆಲೆಸಿರುತ್ತಾಳೆ ಎಂದು ತೋರಿಸಲಾಗುತ್ತದೆ. ಕಂಬಳ ಕ್ಷೇತ್ರದಲ್ಲಿ ಕಾಂತಾವರ ಎಂಬ ಹೆಸರು ಜನಪ್ರಿಯವಾಗಿದೆ. ಇದೆಲ್ಲವನ್ನೂ ಜೋಡಿಸಿಕೊಂಡು ಕಾಂತಾರದ ಕಥೆ ಹೆಣೆದಿರುವ ಸಾಧ್ಯತೆ ಇದೆ.

ಇನ್ನೊಂದು ಊಹೆಯಂತೆ ಇದು ಕಂಬಳದೊಂದಿಗೆ ಬೆಸೆದುಕೊಂಡು ರೂಪಿಸಲಾದ ಕಾಡುಗಳ್ಳರ ಕಥೆಯೂ ಇರಬಹುದು. ಕಾಡಿಗೆ ಬೆಂಕಿ ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುವ ದುಷ್ಟ ಕೂಟದ ಕಥೆಯೂ ಇರಬಹುದು ಎನ್ನಲಾಗುತ್ತಿದೆ. ಕರಾವಳಿಯಿಂದಲೇ ಬಂದಿರುವ ರಿಷಭ್‌ ಶೆಟ್ಟಿ ಅಲ್ಲಿನ ನೇಟಿವಿಟಿಯನ್ನೇ ಬಳಸಿಕೊಂಡು ಕಥೆ ಮಾಡಿದ್ದಾರೆ. 

ಇದನ್ನೂ ಓದಿ | Kantara Movie | ಇದೀಗ ಶೆಟ್ರು ಹರಿ ಅಲ್ಲ, ಶಿವ: ರಿಷಬ್‌ ಶೆಟ್ಟಿ ಅವರ ಫೈರಿ ಲುಕ್‌ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್‌

Exit mobile version