Site icon Vistara News

Actor Upendra: ಹೆಡೆ ಬಿಚ್ಚಿ ಬುಸುಗುಟ್ಟಿದ ದ್ವೇಷದ ಆಟಕ್ಕೆ ತಡೆ ಎಂದ ಉಪೇಂದ್ರ!

actor upendra

ಬೆಂಗಳೂರು: ದಲಿತ ಸಮುದಾಯವನ್ನು (Dalit community) ಅಪಮಾನಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಚಿತ್ರ ನಟ ಉಪೇಂದ್ರ (Actor Upendra) ಅವರಿಗೆ ರಾಜ್ಯ ಹೈಕೋರ್ಟ್‌ (Karnataka High court) ಬಿಗ್‌ ರಿಲೀಫ್‌ ನೀಡಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದು ಮಾಡಬೇಕು ಎಂದು ಕೋರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಚಂದನ್ ಗೌಡರ್ ಅವರ ನೇತೃತ್ವದ ನ್ಯಾಯಪೀಠದಿಂದ ಮಧ್ಯಂತರ ತಡೆಯಾಜ್ಞೆ (Stay against FIR) ನೀಡಿದೆ. ಇದರ ಬೆನ್ನಲ್ಲೇ ನಟ ಉಪೇಂದ್ರ ಟ್ವೀಟ್‌ ಮಾಡಿದ್ದಾರೆ. “ಅನ್ಯಾಯದ ಅನುಮಾನಕ್ಕೆ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ, ದ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆʼʼಎಂದು ಧನ್ಯವಾದ ಸೂಚಿಸಿದ್ದಾರೆ.

ಉಪೇಂದ್ರ ಟ್ವೀಟ್‌ನಲ್ಲಿ ʻಅನ್ಯಾಯದ ಅನುಮಾನಕ್ಕೆ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ. ದ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ. ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹೃದಯಗಳು ಹಿಡಿದ ಪ್ರೀತಿಯ ಕೊಡೆ. ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹೃದಯ ನನಗೆ ಕೊಡೆ, ತಾಯಿ ನನಗೆ ಕೊಡೆ. ಧನ್ಯವಾದಗಳುʼʼಎಂದು ಬರೆದುಕೊಂಡಿದ್ದಾರೆ.

ಆಗಸ್ಟ್‌ 12ರಂದು ಪ್ರಜಾಕೀಯ ಪಕ್ಷಕ್ಕೆ 6 ವರ್ಷವಾದ ಪ್ರಯುಕ್ತ ಉಪೇಂದ್ರ ಅವರು ತಮ್ಮ ಅಭಿಮಾನಿಗಳ ಜತೆ ಸಂವಾದ ನಡೆಸಿದ್ದರು. ಈ ವೇಳೆ ಮಾತಿನ ಭರದಲ್ಲಿ ಗಾದೆಯೊಂದನ್ನು ಬಳಸಿದ್ದರು. ಇದು ಸೋಷಿಯಲ್‌ ಮೀಡಿಯಾದಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಉಪೇಂದ್ರ ಈ ರೀತಿ ಹೇಳಿದ್ದು ಸರಿಯಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದರು. ಜತೆಗೆ ದಲಿತ ಸಂಘಟನೆಗಳು ಸಿಡಿದೆದ್ದವು. ಇದರಿಂದ ಎಚ್ಚೆತ್ತುಕೊಂಡ ಉಪೇಂದ್ರ ಅವರು ತಮ್ಮ ಲೈವ್‌ನ್ನು ಡಿಲೀಟ್‌ ಮಾಡಿದ್ದಲ್ಲದೆ, ಕ್ಷಮೆ ಯಾಚನೆ ಕೂಡಾ ಮಾಡಿದ್ದರು. ಆದರೆ ಸಾಮಾಜಿಕ ಆಕ್ರೋಶ ಕಡಿಮೆ ಆಗಿಲ್ಲ. ಅವರ ಭಾರತೀಯ ದಂಡ ಸಂಹಿತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ 1985ರ (Atrocity act) ಅಡಿಯಲ್ಲಿ ಈಗಾಗಲೇ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು. ಪೊಲೀಸರ ಅದರ ಬೆನ್ನಿಗೇ ಉಪೇಂದ್ರ ಅವರಿಗಾಗಿ ಹುಡುಕಾಟ ಶುರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಉಪೇಂದ್ರ ಅವರು ಎಫ್‌ಆರ್‌ಐಗಳಿಗೆ ತಡೆಯಾಜ್ಞೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಇದನ್ನೂ ಓದಿ: Actor Upendra : ನಟ ಉಪೇಂದ್ರಗೆ ಹೈಕೋರ್ಟ್‌ ಬಿಗ್‌ ರಿಲೀಫ್‌, FIRಗೆ ಮಧ್ಯಂತರ ತಡೆ

ಎಫ್‌ಐಆರ್‌ ರದ್ದತಿ ಕೋರಿ ಸಲ್ಲಿಸಿದ ಮನವಿಯಲ್ಲಿ ನೀಡಿದ ಕಾರಣಗಳು

  1. ಉಪೇಂದ್ರ ಅವರ ವಿರುದ್ಧದ ದೂರು ದುರುದ್ದೇಶವನ್ನು ಹೊಂದಿದೆ ಮತ್ತು ಅನಗತ್ಯ ಪ್ರಚಾರ ಪಡೆಯುವ ಉದ್ದೇಶವನ್ನು ಹೊಂದಿದೆ.
  2. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ ಉಲ್ಲೇಖಿತವಾದ ಯಾವುದೇ ಅಂಶಗಳನ್ನು ಉಪೇಂದ್ರ ಅವರು ಉಲ್ಲಂಘಿಸಿಲ್ಲ.
  3. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ವ್ಯಕ್ತಿಗಳನ್ನು ಅಪಮಾನ ಮಾಡುವುದಕ್ಕಾಗಿಯೇ ಕನ್ನಡದ ನುಡಿಗಟ್ಟನ್ನು ಬಳಸಿದ್ದಾರೆ ಎನ್ನುವುದು ದೂರು. ಆದರೆ, ಉಪೇಂದ್ರ ಅವರಿಗೆ ಈ ವರ್ಗಗಳ ಮೇಲೆ ತುಂಬು ಗೌರವವಿದೆ. ಅವರು ಸಮಾಜದಲ್ಲಿನ ತಾರತಮ್ಯದ ವಿರುದ್ಧ ಧ್ವನಿ ಎತ್ತುತ್ತಿರುವ ವ್ಯಕ್ತಿಯಾಗಿದ್ದಾರೆ.
  4. ಈ ಮಾತಿನಿಂದ ಯಾರಿಗೋ ನೋವಾಗಿದೆ ಎಂದು ತಿಳಿದ ಕೂಡಲೇ ಅವರು ಅದನ್ನು ಡಿಲೀಟ್‌ ಮಾಡಿದ್ದಾರೆ ಮತ್ತು ಕ್ಷಮೆಯನ್ನೂ ಯಾಚಿಸಿದ್ದಾರೆ. ಅದರ ಬಳಿಕವೂ ದೋಷಾರೋಪಣೆ ಮಾಡುತ್ತಿರುವುದು ದುರುದ್ದೇಶ ಮತ್ತು ಪ್ರಚಾರದ ಗೀಳಿನ ಕ್ರಮ.
Exit mobile version