ಚೆನ್ನೈ: ʼಸೈರನ್ʼ (Siren) ತಮಿಳು ಸಿನಿಮಾ ಸೂಪರ್ ಹಿಟ್ ಆದ ಬಳಿಕ ಕಾಲಿವುಡ್ ನಟ ಜಯಂ ರವಿ (Jayam Ravi) ʼಜೀನಿʼ (Genie) ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅರ್ಜುನನ್ ಜೂನಿಯರ್ (ಭುವನೇಶ್ ಅರ್ಜುನನ್) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದ್ದು, ಕೂತೂಹಲ ಮೂಡಿಸಿದೆ. ʼಜೀನಿʼಯಲ್ಲಿ ಜಯಂ ರವಿ ಹೊಸ ಅವತಾರ ತಾಳಿದ್ದಾರೆ.
ʼಜೀನಿʼ ಫ್ಯಾಂಟಸಿ ಸಿನಿಮಾ. ಇದೇ ಮೊದಲ ಬಾರಿಗೆ ಜಯಂ ರವಿ ಫ್ಯಾಂಟಸಿ ಕಥೆಯಲ್ಲಿ ಬಣ್ಣ ಹಚ್ಚಿದ್ದಾರೆ. ಹೀಗಾಗಿ ಫಸ್ಟ್ ಲುಕ್ ಕೂಡ ವಿಭಿನ್ನವಾಗಿದೆ. ಸರಪಣಿಯಲ್ಲಿ ಬಂಧಿಯಾಗಿರುವ ಜಯಂ ರವಿ, ಜುಟ್ಟು ಕಟ್ಟಿ ಸ್ಟೈಲೀಶ್ ಲುಕ್ನಲ್ಲಿ ಮಿಂಚಿದ್ದಾರೆ.
ಮೂವರು ನಾಯಕಿಯರು
ಜಯಂ ರವಿಗೆ ನಾಯಕಿಯರಾಗಿ ಕಲ್ಯಾಣಿ ಪ್ರಿಯದರ್ಶನ್, ಕನ್ನಡತಿ ಕೃತಿ ಶೆಟ್ಟಿ ಮತ್ತು ವಾಮಿಕಾ ಗಬ್ಬಿ ನಟಿಸಿದ್ದಾರೆ. ಆಸ್ಕರ್ ವಿಜೇತ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ʼಜೀನಿʼ ಚಿತ್ರದ ಶೇ. 75ರಷ್ಟು ಶೂಟಿಂಗ್ ಪೂರ್ತಿಯಾಗಿದ್ದು, ಕೇವಲ 3 ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ. ಇನ್ನು 10 ದಿನಗಳಲ್ಲಿ ಆ ಚಿತ್ರೀಕರಣ ಮುಗಿಸಿ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಲ್ಲಿ ತೊಡಗಿಸಿಕೊಳ್ಳಲಿದೆ.
ವೆಲ್ಸ್ ಫಿಲ್ಮ್ ಇಂಟರ್ನ್ಯಾಶನಲ್ನ ಡಾ. ಇಶಾರಿ ಕೆ.ಗಣೇಶ್ ʼಜೀನಿʼ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಮಹೇಶ್ ಮುತ್ತುಸ್ವಾಮಿ ಕ್ಯಾ,ಮೆರಾ ಹ್ಯಾಂಡಲ್ ಮಾಡಿದ್ದು, ಪ್ರದೀಪ್ ಇ. ರಾಗವ್ ಸಂಕಲನ, ಯಾನಿಕ್ ಬೆನ್ ಆ್ಯಕ್ಷನ್ ದೃಶ್ಯಗಳ ನಿರ್ದೇಶನ ಸಿನಿಮಾಕ್ಕಿದೆ.
ಅರ್ಜುನನ್ ನಿರ್ದೇಶನದ ಮೊದಲ ಮತ್ತು ಜಯಂ ರವಿ ನಾಯಕನಾಗಿ ನಟಿಸುತ್ತಿರುವ 32ನೇ ಸಿನಿಮಾ ಇದು ಎನ್ನುವುದು ವಿಶೇಷ. ‘ಜೀನಿ’ ಸುಮಾರು 100 ಕೋಟಿ ರೂ.ಗಳು ಭಾರೀ ಬಜೆಟ್ನಲ್ಲಿ ತಯಾರಾಗಲಿದೆ. ಎಲ್ಲವೂ ಅಂದುಕೊಂಡತೆ ನಡೆದರೆ ಈ ಬಹು ನಿರೀಕ್ಷಿತ ಸಿನಿಮಾ ಈ ವರ್ಷವೇ ತೆರೆಗೆ ಬರಲಿದೆ. ಇದರ ಜತೆಗೆ ಜಯಂ ರವಿ ‘ಬ್ರದರ್’, ‘ಥಗ್ ಲೈಫ್’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಮಾತ್ರವಲ್ಲ ಈ ಮೂವರು ನಾಯಕಿಯರೊಂದಿಗೆ ಜಯಂ ರವಿ ಅವರಿಗೆ ಇದು ಮೊದಲ ಸಿನಿಮಾ ಎನ್ನುವುದು ಕೂಡ ವಿಶೇಷ.
ಇದನ್ನೂ ಓದಿ: Article 370 Movie: ಚುನಾವಣೆ ಮಧ್ಯೆ ಒಟಿಟಿಗೆ ಲಗ್ಗೆ ಇಡಲಿದೆ ʼಆರ್ಟಿಕಲ್ 370ʼ ಚಿತ್ರ; ಎಲ್ಲಿ, ಯಾವಾಗ ಪ್ರಸಾರ?
ಮಲಯಾಳಂನ ಬಹು ನಿರೀಕ್ಷಿತ ʼವರ್ಷಂಗಳಕ್ಕು ಶೇಷಮ್ʼ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಕಲ್ಯಾಣಿ ಪ್ರಿಯದರ್ಶನ್ ಅನೇಕ ವರ್ಷಗಳ ಬಳಿಕ ʼಜೀನಿʼ ಮೂಲಕ ತಮಿಳು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದಿಯ ʼಸೂಪರ್ 30ʼ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕೃತಿ ಶೆಟ್ಟಿ ನಟಿಸುತ್ತಿರುವ 6ನೇ ತಮಿಳು ಚಿತ್ರ ʼಜೀನಿʼ. ಸತತ ಸೋಲು ಕಂಡಿರುವ ಅವರು ಈ ಸಿನಿಮಾ ಮೂಲಕ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಬಹು ಭಾಷಾ ನಟಿ ವಾಮಿಕಾ ಗಬ್ಬಿ ಹಲವು ವರ್ಷಗಳ ಬಳಿಕ ʼಜೀನಿʼ ಮೂಲಕ ಕಾಲಿವುಡ್ಗೆ ಮರಳಿದ್ದಾರೆ. ಈ ಎಲ್ಲ ಕಾರಣಗಳಿಂದ ʼಜೀನಿʼ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದ್ದು, ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಲಿದೆ ಎನ್ನುವ ಲೆಕ್ಕಾಚಾರ ಆರಂಭವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ