Site icon Vistara News

Kannada New Movie | ಸುನಾಮಿ ಕಿಟ್ಟಿ ಅಭಿನಯದ ‘ಕೋರ’ ಸಿನಿಮಾ ಟೀಸರ್‌ ಔಟ್‌ : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಹೇಳಿದ್ದೇನು?

Kannada New Movie

ಬೆಂಗಳೂರು : ‘ಒರಟ’ ಸಿನಿಮಾ ಖ್ಯಾತಿಯ ನಿರ್ದೇಶಕ ಶ್ರೀ ಮತ್ತೊಂದು ಹೊಸ ಪ್ರಾಜೆಕ್ಟ್ (Kannada New Movie ) ಜತೆಗೆ ನಿರ್ದೇಶನಕ್ಕೆ ಮರಳಿದ್ದಾರೆ. ಚಿತ್ರಕ್ಕೆ ‘ಕೋರ’ ಎಂದು ಟೈಟಲ್ ಇಡಲಾಗಿದ್ದು, ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

‘ಕೋರ’ ಸಿನಿಮಾದಲ್ಲಿ ಸುನಾಮಿ ಕಿಟ್ಟಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಚರೀಷ್ಮಾ ನಟಿಸುತ್ತಿದ್ದಾರೆ. ಚಿತ್ರದ ನಿರ್ಮಾಪಕ ಪಿ. ಮೂರ್ತಿ ಖಳನಟನಾಗಿ ನಟಿಸಿದ್ದು, ಎಂ. ಕೆ ಮಠ, ಮುನಿರಾಜು, ಸೌಜನ್ಯ ಒಳಗೊಂಡ ತಾರಾಗಣ ಚಿತ್ರದಲ್ಲಿದೆ. ಧ್ರುವ ಸರ್ಜಾ ಮಾತನಾಡಿ ʻʻಚಿತ್ರದ ಹಿನ್ನೆಲೆ ಸಂಗೀತ ಶಶಾಂಕ್ ಶೇಷಗಿರಿ ಅದ್ಭುತವಾಗಿ ಮಾಡಿದ್ದಾರೆ. ಸುನಾಮಿ ಕಿಟ್ಟಿ ಸಖತ್ ಆಗಿ ಸ್ಟಂಟ್ಸ್ ಮಾಡಿದ್ದಾರೆ. ಹಂಡ್ರೆಡ್ ಪರ್ಸೆಂಟ್ ಈ ಸಿನಿಮಾ ರಿಲೀಸ್ ಆದ ಮೇಲೆ ಜನಗಳು ಸುನಾಮಿ ತರ ಥಿಯೇಟರ್‌ಗೆ ಬರುತ್ತಾರೆ. ನಿರ್ಮಾಪಕರು ಕೂಡ ಖಳನಟನಾಗಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿʼʼಎಂದು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ | Kannada New Movie | `ಖಾಸಗಿ ಪುಟಗಳು’ ಸಿನಿಮಾ ನವೆಂಬರ್ 18ರಂದು ತೆರೆಗೆ!

ನಿರ್ಮಾಪಕ ಪಿ. ಮೂರ್ತಿ ಮಾತನಾಡಿ ʻʻನಮ್ಮ ಚಿತ್ರದ ಟೀಸರ್ ಧ್ರುವ ಸರ್ಜಾ ಬಿಡುಗಡೆ ಮಾಡಿದ್ದು ತುಂಬ ಖುಷಿ ಕೊಟ್ಟಿದೆ. ಎಲ್ಲ ಕಲಾವಿದರು ತುಂಬಾ ಕಷ್ಟಪಟ್ಟು ಸಿನಿಮಾ ಮಾಡಿದ್ದೀವಿ. ನಾನು ಚಿತ್ರದಲ್ಲಿ ಖಳನಟನಾಗಿ ನಟಿಸಿದ್ದೇನೆ. ಎಲ್ಲರ ಆಶೀರ್ವಾದ ಚಿತ್ರತಂಡದ ಮೇಲಿರಲಿʼʼಎಂದರು.

ನಿರ್ದೇಶಕ ಶ್ರೀ ಮಾತನಾಡಿ ʻʻಟೀಸರ್‌ನಲ್ಲಿ ಯಾವ ರೀತಿ ಮೇಕಿಂಗ್, ಕ್ವಾಲಿಟಿ ಇದೆಯೋ ಅದೇ ರೀತಿ ಇಡಿ ಸಿನಿಮಾ ಕೂಡ ಇರುತ್ತದೆ. ಕೋರದಲ್ಲಿ ಬುಡುಕಟ್ಟು ಜನಾಂಗದ ಕಥೆ ಹೇಳ ಹೊರಟಿದ್ದೇವೆ. ಅವರಿಂದಲೇ ಇಂದು ಕಾಡು ಉಳಿದಿದೆ. ನಾವೆಲ್ಲರೂ ಬುಡಕಟ್ಟು ಜನಾಂಗದವರನ್ನು ಉಳಿಸುವ ಕೆಲಸ ಮಾಡಬೇಕಾಗಿದೆ. ಅವರ ಭಾವನೆಗಳು, ಆಚಾರ, ವಿಚಾರ, ನೋವು ಇದೆಲ್ಲವೂ ಸಿನಿಮಾದಲ್ಲಿದೆ. ತುಂಬ ದೊಡ್ಡ ಸ್ಕೇಲ್‌ನಲ್ಲಿ ಆ್ಯಕ್ಷನ್‌ ಪ್ಯಾಕೇಜ್ ಜತೆಗೆ ಇದೆಲ್ಲವನ್ನು ಕಟ್ಟಿಕೊಡಲಾಗಿದೆ. ನಿರ್ಮಾಪಕರು ಇದಕ್ಕೆ ದೊಡ್ಡ ಮಟ್ಟದಲ್ಲಿ ಸಾಥ್ ನೀಡಿದ್ದು ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗುತ್ತಿದೆ. ಬಹುತೇಕ ಶೂಟಿಂಗ್ ಮುಗಿದಿದ್ದು, ಎರಡು ಫೈಟಿಂಗ್ ಸೀನ್ ಬಾಕಿ ಇದೆʼʼ ಎಂದು ತಿಳಿಸಿದ್ದಾರೆ.

ನಾಯಕ ನಟ ಸುನಾಮಿ ಕಿಟ್ಟಿ ಮಾತನಾಡಿ ʻʻಮೂರ್ತಿ ಅವರ ಬ್ಯಾನರ್‌ನಡಿ ಹೀರೊ ಆಗಿ ಲಾಂಚ್ ಆಗುತ್ತಿರುವುದಕ್ಕೆ ತುಂಬಾ ಖುಷಿ ಇದೆ. ಕೋರ ಮೂಲಕ ಹೀರೊ ಆಗಿ ಎಂಟ್ರಿ ಕೊಡ್ತಿದ್ದೇನೆ. ರಿಯಾಲಿಟಿ ಶೋಗಳಲ್ಲಿ ನನಗೆ ಹೇಗೆ ಸಾಥ್ ಕೊಟ್ಟು ಬೆಳೆಸಿದ್ದೀರೋ ಹಾಗೆ ಈ ಸಿನಿಮಾಗೂ ಸಪೋರ್ಟ್ ಮಾಡಿʼʼ ಎಂದು ತಿಳಿಸಿದರು.

ರತ್ನಮ್ಮ ಮೂವೀಸ್ ಬ್ಯಾನರ್ ನಡಿ ಪಿ. ಮೂರ್ತಿ ‘ಕೋರ’ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಶಶಾಂಕ್ ಶೇಷಗಿರಿ ಹಿನ್ನೆಲೆ ಸಂಗೀತ, ಹೇಮಂತ್ ಕುಮಾರ್ ಸಂಗೀತ ನಿರ್ದೆಶನ, ಸೆಲ್ವಂ ಛಾಯಾಗ್ರಹಣ, ಕೆ.ಗಿರೀಶ್ ಕುಮಾರ್ ಸಂಕಲನ, ರವಿವರ್ಮಾ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಸಕಲೇಶಪುರ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಬೆಂಗಳೂರಿನಲ್ಲಿ ‘ಕೋರ’ ಸಿನಿಮಾ ಚಿತ್ರೀಕರಣ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ | Kannada New Movie | ಪೃಥ್ವಿ ಅಂಬಾರ್‌-ಮಿಲನಾ ಅಭಿನಯದ `For Regn’ ರಿಲೀಸ್‌ ಡೇಟ್‌ ರಿವೀಲ್‌!

Exit mobile version