Site icon Vistara News

Kannada New Movie | ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ಮಿಂಚಲಿದ್ದಾರೆ ʻವಿಕ್ರಾಂತ್‌ ರೋಣʼ ಪಿಟಿ ಮೇಷ್ಟ್ರು ವಜ್ರಧೀರ್ ಜೈನ್

Kannada New Movie

ಬೆಂಗಳೂರು : ಕಿಚ್ಚ ಸುದೀಪ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ (Kannada New Movie) ಪಿಟಿ ಮೇಷ್ಟ್ರು ಪಾತ್ರದ ಮೂಲಕ ಗಮನ ಸೆಳೆದ ಕಲಾವಿದ ವಜ್ರಧೀರ್ ಜೈನ್ ‘ಬ್ಲಿಂಕ್’ ಸಿನಿಮಾದ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಲಾರೆನ್ಸ್ ಪಿಂಟೋ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.

ಕನ್ನಡ ‘ರಾಜರಥ’ ಸಿನಿಮಾದಲ್ಲಿ ನಟಿಸಿದ್ದ ವಜ್ರಧೀರ್ ಜೈನ್‌ ಮೂಲತಃ ರಂಗಭೂಮಿ ಕಲಾವಿದ. ʻಸಮಷ್ಟಿʼ ನಾಟಕ ತಂಡದಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ‘ರಾಜರಥ’ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟ ಇವರು ವಿಜಯ ರಾಘವೇಂದ್ರ ಅಭಿನಯದ ‘ಮಾಲ್ಗುಡಿ ಡೇಸ್’ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಇದೀಗ ವಿಶೇಷ ಶೀರ್ಷಿಕೆಯುಳ್ಳ ‘ಬ್ಲಿಂಕ್’ ಸಿನಿಮಾದಲ್ಲೂ ವಜ್ರಧೀರ್ ಜೈನ್ ನಟಿಸಿದ್ದಾರೆ.

ಇದನ್ನೂ ಓದಿ | Kannada New Movie | 25ನೇ ದಿನದತ್ತ ʻಧರಣಿ ಮಂಡಲ ಮಧ್ಯದೊಳಗೆʼ ಸಿನಿಮಾ: ರಾಜ್ಯದೆಲ್ಲೆಡೆ ಯಶಸ್ವಿ ಪ್ರದರ್ಶನ

ಶ್ರೀನಿಧಿ ಬೆಂಗಳೂರು ನಿರ್ದೇಶನದ ಈ ಚಿತ್ರದಲ್ಲಿ ವಜ್ರಧೀರ್ ಜೈನ್ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಈ ಬಗ್ಗೆ ಚಿತ್ರದ ನಿರ್ದೇಶಕ ಶ್ರೀನಿಧಿ ಬೆಂಗಳೂರು ಮಾಹಿತಿ ಹಂಚಿಕೊಂಡಿದ್ದಾರೆ. ಶ್ರೀನಿಧಿ ಮಾತನಾಡಿ ʻʻವಜ್ರಧೀರ್ ಜೈನ್‌ ಜತೆ ಕೆಲಸ ಮಾಡಿದ್ದು ಒಂದು ಹೊಸ ಅನುಭವ ನೀಡಿದೆ. ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ದೊಡ್ಡ ಪಾತ್ರ ನಿಭಾಯಿಸಿದ್ದಾರೆ ಎಂದು ನಮಗೆ ಗೊತ್ತಿರಲಿಲ್ಲ. ಅವರು ಕೂಡ ಈ ಬಗ್ಗೆ ಹೇಳಿಕೊಂಡಿರಲಿಲ್ಲ. ನಮಗೆ ನಾಟಕ ತಂಡದ ಮೂಲಕ ಅವರ ಪರಿಚಯವಾಗಿದ್ದು. ಬ್ಲಿಂಕ್‌ನಲ್ಲೂ ಬಹಳ ಪ್ರಾಮುಖ್ಯತೆ ಇರುವ ಪಾತ್ರವನ್ನು ನಿಭಾಯಿಸಿದ್ದಾರೆ. ಪಾತ್ರವನ್ನು ತುಂಬಾ ಸಟಲ್ ಆಗಿ ನಿರ್ವಹಿಸಿದ್ದಾರೆ. ನೋಡುಗರಿಗೆ ಬಹಳ ಬೇಗ ಅವರ ಪಾತ್ರ ಕನೆಕ್ಟ್ ಆಗುತ್ತದೆ. ಆದ್ದರಿಂದಲೇ ಅವರ ಪಾತ್ರಕ್ಕೆ ಅರಿವು ಎಂದು ಹೆಸರಿಟ್ಟಿದ್ದೇವೆʼʼ ಎಂದು ಸಂತಸ ಹಂಚಿಕೊಂಡಿದ್ದಾರೆ.

‘ಬ್ಲಿಂಕ್’ ಸೈನ್ಸ್ ಫಿಕ್ಷನ್ ಚಿತ್ರವಾಗಿದ್ದು ಶ್ರೀನಿಧಿ ಬೆಂಗಳೂರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು ಭರವಸೆ ಮೂಡಿಸಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಜನನಿ ಪಿಕ್ಚರ್ಸ್ ಬ್ಯಾನರ್ ನಡಿ ರವಿಚಂದ್ರ ಎ.ಜೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಚಿತ್ರದಲ್ಲಿ ಆರು ಪ್ರಮುಖ ಪಾತ್ರಗಳು ಟ್ರಾವೆಲ್ ಮಾಡಲಿದ್ದು, ದಿಯಾ ಖ್ಯಾತಿಯ ದೀಕ್ಷಿತ್, ಚೈತ್ರ ಜೆ. ಆಚಾರ್, ಮಂದಾರ ಬಟ್ಟಲಹಳ್ಳಿ, ಗೋಪಾಲ ಕೃಷ್ಣ ದೇಶಪಾಂಡೆ, ಯಶಸ್ವಿನಿ ರಾವ್, ಕಿರಣ್ ನಾಯ್ಕ್, ಸುರೇಶ್ ಅನಗಳ್ಳಿ ಮುಖ್ಯ ತಾರಾಗಣದಲ್ಲಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಪ್ರಸನ್ನ ಕುಮಾರ್ ಸಂಗೀತ, ಸಂಜೀವ್ ಜಹಗೀರ್ದಾರ್ ಸಂಕಲನ ಚಿತ್ರಕ್ಕಿದೆ.

ಇದನ್ನೂ ಓದಿ | Kannada New Movie | ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಸಜ್ಜಾಗುತ್ತಿದ್ದಾರೆ ʻತೂತು ಮಡಿಕೆʼ ಖ್ಯಾತಿಯ ಚಂದ್ರ ಕೀರ್ತಿ

Exit mobile version