Site icon Vistara News

Kantara Movie | ವರ್ಲ್ಡ್‌ ಆಫ್‌ ಕಾಂತಾರ ಮೇಕಿಂಗ್‌ ಪ್ರೋಮೊ ಔಟ್‌: ಪುನೀತ್‌ ಹೀರೋ ಆಗಿರಬೇಕಿತ್ತಂತೆ!

Kantara Movie

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್‌ನ ಏಳನೇ ಚಿತ್ರ ಹಾಗೂ ರಿಷಬ್‌ ಶೆಟ್ಟಿ ನಿರ್ದೇಶನದ ನಾಲ್ಕನೇ ಸಿನಿಮಾ ಕಾಂತಾರ (Kantara Movie) ಸೆ.30ಕ್ಕೆ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ಚಿತ್ರದ ಮೇಕಿಂಗ್‌ ವಿಡಿಯೊವನ್ನು ಚಿತ್ರತಂಡ ಬಿಡುಗಡೆಗೆ ನಿರ್ಧರಿಸಿದ್ದು, ಈಗಾಗಲೇ ವಿಡಿಯೊ ಪ್ರೋಮೊವನ್ನು ಹಂಚಿಕೊಂಡಿದೆ. ಹಾಗೇ ಪುನೀತ್‌ ರಾಜಕುಮಾರ್‌ ಈ ಸಿನಿಮಾಗೆ ನಟಿಸಬೇಕಿತ್ತು ಎಂಬ ಮಾತನ್ನು ಚಿತ್ರತಂಡ ಹೇಳಿಕೊಂಡಿದೆ. ‘ಕಾಂತಾರ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

ಪುನೀತ್​ ಅವರೇ ರಿಷಬ್​ ಶೆಟ್ಟಿಯ ಹೆಸರು ಸೂಚಿಸಿದರು!
“ಕಾಂತಾರ” ಚಿತ್ರಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಕಾರ್ತಿಕ್​ ಗೌಡ ಅಭಿಮಾನಿಗಳೊಂದಿಗೆ ಇನ್​ಸ್ಟಾಗ್ರಾಮ್​ನಲ್ಲಿ ಪ್ರಶ್ನೋತ್ತರ ನಡೆಸಿದ್ದಾರೆ. ಈ ವೇಳೆ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ‘ಅನೇಕರಿಗೆ ಗೊತ್ತಿರದ ಮಾಹಿತಿ ಏನೆಂದರೆ, ಕಾಂತಾರ ಸಿನಿಮಾದಲ್ಲಿ ಅಪ್ಪು ಸರ್​ ಅವರೇ ಹೀರೋ ಆಗಬೇಕಿತ್ತು. ನಾವು ನಿರ್ದಿಷ್ಟ ಕಾಲಮಾನದಲ್ಲಿ ಈ ಸಿನಿಮಾವನ್ನು ಚಿತ್ರಿಸಬೇಕಿತ್ತು. ಅದರಿಂದಾಗಿ ಅವರ ಡೇಟ್​ ಕ್ಲ್ಯಾಶ್​ ಆಯ್ತು. ಹಾಗಾಗಿ ಸ್ವತಃ ಪುನೀತ್​ ಅವರೇ ರಿಷಬ್​ ಶೆಟ್ಟಿಯ ಹೆಸರು ಸೂಚಿಸಿದರು’ ಎಂದು ಕಾರ್ತಿಕ್​ ಗೌಡ ಹೇಳಿದ್ದಾರೆ.

ಇದನ್ನೂ ಓದಿ | Kantara Movie | ಸಿನಿಪ್ರಿಯರನ್ನು ಸೆಳೆಯುತ್ತಿದೆ ಕಾಂತಾರ ಪ್ರಮೋಷನ್‌ ಪೋಸ್ಟರ್‌: ಇಲ್ಲಿವೆ ಫೋಟೊಗಳು!

ಇದೇ ಸೆ.22ಕ್ಕೆ ಮೇಕಿಂಗ್‌ ವಿಡಿಯೊ ರಿಲೀಸ್‌!
ಈಗಾಗಲೇ ಚಿತ್ರತಂಡ ಮೇಕಿಂಗ್‌ ವಿಡಿಯೊ ಪ್ರೋಮೊ ಹಂಚಿಕೊಂಡಿದ್ದು, ವರ್ಲ್ಡ್‌ ಆಫ್‌ ಕಾಂತಾರ ಎಂದು ಹೆಸರಿಟ್ಟಿದೆ. ಸೆ.22ಕ್ಕೆ ಹೊಂಬಾಳೆ ಫಿಲ್ಮ್ಸ್‌ ಯುಟ್ಯೂಬ್‌ ಚಾನಲ್‌ನಲ್ಲಿ ಬೆಳಗ್ಗೆ 10 ಗಂಟೆಗೆ ಮೇಕಿಂಗ್‌ ವಿಡಿಯೊ ಬಿಡುಗಡೆಗೊಳ್ಳಲಿದೆ. ಗರುಡ ಗಮನ ವೃಷಭ ವಾಹನ ಮೂಲಕ ಮಾಡಿ ಸೈ ಎನಿಸಿಕೊಂಡಿದ್ದ ರಾಜ್ ಬಿ ಶೆಟ್ಟಿ ಮೇಕಿಂಗ್ ವಿಡಿಯೊ ತುಣುಕನ್ನು ನೋಡುವಾಗ ಭೂತಾರಾಧನೆಯ ದೃಶ್ಯಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರಾ ಎಂಬ ಅನುಮಾನ ಮೂಡಿ ಬಂದಿದೆ.

‘ಕಾಂತಾರ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಆ್ಯಕ್ಷನ್ ಸನ್ನಿವೇಶಗಳಲ್ಲಿ ಕೊಂಚ ವೈಲೆನ್ಸ್ ಇದೆ ಎನ್ನುವ ಕಾರಣಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ ಎನ್ನಲಾಗಿದೆ. ಹಾಗೂ ಬೇರೆ ಯಾವ ಭಾಷೆಗಳಿಗೂ ಡಬ್‌ ಮಾಡದೇ ಕನ್ನಡದಲ್ಲಿಯೇ ಬೇರೆ ರಾಜ್ಯಗಳಿಗೆ ಹಾಗೂ ವಿದೇಶಗಳಲ್ಲಿ ಚಿತ್ರವನ್ನು ರಿಲೀಸ್‌ ಮಾಡಲಾಗುತ್ತಿದೆ.

ಕಾಂತಾರ ಟ್ರೈಲರ್‌ನಲ್ಲಿ ಕುಂದಾಪುರದ ಜಾನಪದ ಹಾಡು ಮತ್ತು ತುಳು ನಾಡಿನ ದೈವ ಕೋಲ ಮತ್ತು ಕಂಬಳ ಕ್ರೀಡೆ ಹೈಲೈಟ್ ಆಗಿತ್ತು. ಟ್ರೈಲರ್‌ ನೋಡಿ ಪ್ರೇಕ್ಷಕರಿಗೆ ಸಿನಿಮಾ ಬಗೆಗೆ ನಿರೀಕ್ಷೆ ಹೆಚ್ಚಾಗಿತ್ತು. ಈ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ.

ಅಜನೀಶ್ ಲೋಕನಾಥ್ ಸಂಗೀತ ನೀಡಿರುವ, ವಿಜಯಪ್ರಕಾಶ್, ಅನನ್ಯ ಭಟ್ ಹಾಡಿರುವ ‘ಸಿಂಗಾರ ಸಿರಿಯೆ’ ಹಾಡು ಈ ಹಿಂದೆ ಬಿಡುಗಡೆಗೊಂಡಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಬಹುತೇಕ ಕರಾವಳಿ ಭಾಗದಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಂತಾರ ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಮತ್ತು ಅರವಿಂದ್ ಎಸ್ ಕಶ್ಯಪ್ ಅವರ ಛಾಯಾಗ್ರಹಣವಿದೆ.

ಇದನ್ನೂ ಓದಿ | Kantara Movie | ರಿಷಭ್ ಶೆಟ್ಟಿಯ ಕಾಂತಾರ ಟ್ರೈಲರ್‌ ಔಟ್‌: ದಂತ ಕಥೆಯ ಚಿತ್ರಣ ಅನಾವರಣ!

Exit mobile version