Site icon Vistara News

Kannada New Movie: ’ಕ್ಲಾಂತ’ ಮೂಲಕ ಕನ್ನಡಕ್ಕೆ ಬಂದ ತುಳು ಹೀರೊ!

ಬೆಂಗಳೂರು: ಶೀರ್ಷಿಕೆಯೇ ಸಿನಿಮಾ ಪ್ರೇಕ್ಷಕರಿಗೆ (Kannada New Movie) ಮೊದಲ ಆಮಂತ್ರಣ. ಸಿನಿಮಾ ಮೇಕರ್‌ಗಳು ಅದನ್ನೇ ಗಮನದಲ್ಲಿಟ್ಟುಕೊಂಡು ಏನಾದರೊಂದು ಹೊಸದನ್ನು ನೀಡಬೇಕೆನ್ನುವ ಆಶಯ ಹೊಂದಿರುತ್ತಾರೆ. ಈ ನಡುವೆ ಬಗೆಬಗೆಯ ಶೀರ್ಷಿಕೆಗಳ ಮೂಲಕವೇ ಸಿನಿಮಾಗಳು ತೆರೆಗೆ ಬರುತ್ತಿವೆ. ಅಂತಹದ್ದೇ ವಿಭಿನ್ನ ಬಗೆಯ ಟೈಟಲ್ ಮೂಲಕ ಗಮನಸೆಳೆದಿರುವ ಚಿತ್ರ ʼಕ್ಲಾಂತʼ.

ವೈಭವ್ ಪ್ರಶಾಂತ್ ನಿರ್ದೇಶನದ ʼಕ್ಲಾಂತʼ ಸಿನಿಮಾದ ಟೀಸರ್ ಈಗಾಗಲೇ ಗಮನ ಸೆಳೆದಿದೆ. ನಾಯಕ ವಿಘ್ನೇಶ್ ಹಾಗೂ ಸಂಗೀತ ಭಟ್ ಅಭಿನಯ ಎಲ್ಲರಿಗೂ ಮೆಚ್ಚುಗೆಯಾಗಿದೆ. ಅದರಲ್ಲೂ ವಿಘ್ನೇಶ್ ಅವರಂತೂ ಆಕ್ಷನ್ ದೃಶ್ಯಗಳಲ್ಲಿ ಎಲ್ಲರನ್ನೂ ಮೀರಿಸುವಂತೆ ಪವರ್ ಫುಲ್ ಆಗಿ ಅಬ್ಬರಿಸಿದ್ದಾರೆ. ʼದಗಲ್ ಬಾಜಿಲುʼ ಎಂಬ ತುಳು ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿ ಮನಗೆದ್ದಿದ್ದ ವಿಘ್ನೇಶ್ ಕನ್ನಡದಲ್ಲೂ ಮೋಡಿ ಮಾಡುವ ಭರವಸೆ ಹುಟ್ಟಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಒಬ್ಬ ಪ್ರಾಮಿಸಿಂಗ್ ಹೀರೋ ಸಿಗುವುದರಲ್ಲಿ ಯಾವುದೇ ಸಂದೇಶವಿಲ್ಲ.

ತುಳು ಸಿನಿಮಾ ʼದಗಲ್ ಬಾಜಿಲುʼ ಮೂಲಕ ವಿಘ್ನೇಶ್ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದರು. ಮೊದಲ ಸಿನಿಮಾದಲ್ಲಿಯೇ ಗೆಲುವಿನ ನಗೆ ಬೀರಿದ್ದ ಅವರೀಗ ಕನ್ನಡ ಚಿತ್ರರಂಗಕ್ಕೆ ಹೀರೊ ಆಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಕ್ಲಾಂತಾ ಸಿನಿಮಾದ ಒಂದಷ್ಟು ಸ್ಯಾಂಪಲ್ಸ್ ನೋಡುತ್ತಿದ್ದರೆ ವಿಘ್ನೇಶ್ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಯಾಂಡಲ್ ವುಡ್ ಒಂದೊಳ್ಳೆ ಮಾಸ್ ಹೀರೋ ಸಿಗೋದು ಪಕ್ಕ ಅಂತಿದೆ ಗಾಂಧಿನಗರ.

ರಂಗನ್ ಸ್ಟೈಲ್, ದಗಲು ಬಾಜಿಲು ಸೇರಿದಂತೆ ಬೇರೆ ಬಗೆಯ ಜಾನರ್ ಚಿತ್ರ ನಿರ್ದೇಶಿರುವ ವೈಭವ್ ಪ್ರಶಾಂತ್ ಕ್ಲಾಂತ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಎಂ ವಿಘ್ನೇಶ್ ನಾಯಕನಾಗಿ, ಸಂಗೀತ ಭಟ್ ನಾಯಕಿಯಾಗಿ ನಟಿಸುತ್ತಿದ್ದು, ಉಳಿದಂತೆ ಶೋಭರಾಜ್ , ವೀಣಾ ಸುಂದರ್ , ಕಾಮಿಡಿ ಕಿಲಾಡಿ ದೀಪಿಕಾ , ಪ್ರವೀಣ್ ಜೈನ್ , ಯುವ , ತಿಮ್ಮಪ್ಪ ಕುಲಾಲ್ , ಸ್ವಪ್ನ , ರಾಘವೇಂದ್ರ ಕಾರಂತ್ , ಪಂಚಮಿ ವಾಮಂಜೂರ್ , ವಾಮದೇವ ಪುಣಿಂಚತ್ತಾಯ ಮುಂತಾದ ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: Kannada New Movie: ‘ರಾಮಾ ರಾಮಾ ರೇ’ ನಿರ್ದೇಶಕನ ಹೊಸ ಸಿನಿಮಾ ಅನೌನ್ಸ್‌!

ಕ್ಲಾಂತ ಸಿನಿಮಾದ ಚಿತ್ರೀಕರಣ ಕುಕ್ಕೆ ಸುಬ್ರಹ್ಮಣ್ಯ , ಗುಂಡ್ಯ , ಕಳಸ ಸುತ್ತ ಮುತ್ತ ಕಾಡಿನಲ್ಲಿ ಅದ್ಧೂರಿ ವೆಚ್ಚದಲ್ಲಿ ತಯಾರಾಗಿದೆ. ಪಕ್ಕಾ ಆಕ್ಷನ್ , ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ಎಸ್ ಪಿ ಚಂದ್ರಕಾಂತ್ ಸಂಗೀತ, ಪಿಆರ್ ಸೌಂದರ್ ರಾಜ್ ಸಂಕಲನ, ಮೋಹನ್ ಲೋಕನಾಥ್ ಛಾಯಾಗ್ರಹಣ ಚಿತ್ರಕ್ಕಿದೆ.

ಸಂತೋಷ್ ನಾಯ್ಕ್, ವರಾಹ ರೂಪಂ ಖ್ಯಾತಿಯ ಶಶಿರಾಜ್ ಕಾವೂರ್, ವೈಭವ್ ಪ್ರಶಾಂತ್ ಸಾಹಿತ್ಯ ಹಾಡುಗಳಿಗಿದ್ದು, ವಿನೋದ್ ಸ್ಟಂಟ್ ಮಾಸ್ಟರ್ ಆಗಿ , ಮಹೇಶ್ ದೇವ್ ಡಿ ಎನ್ ಪುರ ಸಂಭಾಷಣೆ ಸಿನಿಮಾಕ್ಕಿದೆ. ಎರಡು ಹಾಡುಗಳಿಗೆ ರಘು ಅವರ ನೃತ್ಯ ಸಂಯೋಜನೆ ಇದೆ . ಅನುಗ್ರಹ ಪವರ್ ಮೀಡಿಯಾ ಬ್ಯಾನರ್ ನಡಿ ಉದಯ್ ಅಮ್ಮಣ್ಣಾಯ ಬಂಡವಾಳ ಹೂಡಿದ್ದು, ಅರುಣ್ ಗೌಡ, ಪ್ರದೀಪ್ ಗೌಡ ಹೇಮಂತ್ ರೈ ಸಹ ನಿರ್ಮಾಪಕರಾಗಿ ಆಗಿ ಸಾಥ್ ಕೊಟ್ಟಿದ್ದಾರೆ. ಡಿಸೆಂಬರ್ 8ಕ್ಕೆ ʼಕ್ಲಾಂತʼ ಸಿನಿಮಾ ರಾಜ್ಯಾದ್ಯಂತ ಮೆರವಣಿಗೆ ಹೊರಡಲಿದೆ.

Exit mobile version