Site icon Vistara News

Meghana Raj : ಮೇಘನಾ ನಟನೆಯ ʼತತ್ಸಮ ತದ್ಭವʼ ಶೂಟಿಂಗ್‌ ಮುಕ್ತಾಯ; ಶೀಘ್ರವೇ ತೆರೆಗೆ

#image_title

ಬೆಂಗಳೂರು, ಕರ್ನಾಟಕ: ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದ ಚಿರಂಜೀವಿ ಸರ್ಜಾ ಅವರ ಪತ್ನಿ, ನಟಿ ಮೇಘನಾ ರಾಜ್‌ (Meghana Raj) ಅವರು ಸಿನಿರಂಗಕ್ಕೆ ವಾಪಸು ಬರುತ್ತಿದ್ದಾರೆ. ಅವರು ನಟಿಸಿರುವ ʼತತ್ಸಮ ತದ್ಭವʼ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಕುಂಬಳಕಾಯಿ ಒಡೆಯುವ ಮೂಲಕ ಚಿತ್ರತಂಡ ಚಿತ್ರೀಕರಣವನ್ನು ಮುಕ್ತಾಯ ಮಾಡಿದೆ.

ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಇದರಲ್ಲಿ ಮೇಘನಾ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅವರಿಗೆ ಜತೆಯಾಗಿ ನಟ ಪ್ರಜ್ವಲ್‌ ದೇವರಾಜ್‌ ನಟಿಸಿದ್ದಾರೆ. ಹಿರಿಯ ನಟಿ ಶೃತಿ ಕೂಡ ಮನೋವೈದ್ಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾಗೆ ಜೀವ ತುಂಬಿದ್ದಾರೆ. ಇದೊಂದು ಸಸ್ಪೆನ್ಸ್‌ ಕ್ರೈಂ ಜಾನರ್‌ನ ಸಿನಿಮಾ ಎಂದು ಸಿನಿತಂಡ ಮಾಹಿತಿ ಕೊಟ್ಟಿದೆ.

ಸದ್ಯ ಕರ್ನಾಟಕದಾದ್ಯಂತ ವಿಧಾನಸಭಾ ಚುನಾವಣೆಯ ಕಾವು ಏರಿರುವುದರಿಂದಾಗಿ ಚುನಾವಣೆಯ ನಂತರ ಈ ಸಿನಿಮಾವನ್ನು ತೆರೆ ಮೇಲೆ ತರುವುದಕ್ಕೆ ಸಿನಿ ತಂಡ ಸಿದ್ಧತೆ ನಡೆಸಿಕೊಳ್ಳುತ್ತಿದೆ.

ಇದನ್ನೂ ಓದಿ: Meghana Raj Sarja: ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಉತ್ತರ ಕೊಟ್ಟ ಮೇಘನಾ ರಾಜ್‌: ಫ್ಯಾನ್ಸ್‌ ಫುಲ್‌ ಖುಷ್‌!
ತತ್ಸಮ ತದ್ಭವ ಸಿನಿಮಾಕ್ಕೆ ಪನ್ನಗ ಭರಣ ಹಾಗೂ ಸ್ಫೂರ್ತಿ ಅನಿಲ್‌ ಅವರು ಬಂಡವಾಳ ಸುರಿದಿದ್ದಾರೆ. ವಿಶಾಲ್‌ ಆತ್ರೇಯ ಅವರು ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಿನಿಮಾಕ್ಕೆ ವಾಸುಕಿ ವೈಭವ್‌ ಅವರ ಸಂಗೀತ, ಶ್ರೀನಿವಾಸ್‌ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಅವರ ಸಂಕಲನವಿದೆ. ಸಿನಿಮಾ ಫಸ್ಟ್‌ ಲುಕ್‌ ಫೆಬ್ರವರಿಯಲ್ಲೇ ಬಿಡುಗಡೆಯಾಗಿದ್ದು, ಫಸ್ಟ್‌ ಲುಕ್‌ ನೋಡಿದ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ವಾಪಸು ಬರುವ ಮಾಹಿತಿಯನ್ನು ಹಂಚಿಕೊಂಡಿದ್ದ ಮೇಘನಾ ರಾಜ್‌, “ನನ್ನಲ್ಲಿರುವ ಉತ್ಸುಕತೆಯನ್ನು ಹೇಳಲಾಗದು. ಬೆಳ್ಳಿತೆರೆಗೆ ಯಾವಾಗ ಮರಳುತ್ತೀರಿ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಿರಿ. ಅದಕ್ಕೆ ಇಲ್ಲಿದೆ ಉತ್ತರ” ಎಂದು ಬರೆದುಕೊಂಡಿದ್ದರು.

Exit mobile version