Site icon Vistara News

Pavithra Naresh: ಒಟಿಟಿಯಲ್ಲಿ ನಾಪತ್ತೆಯಾದ ‘ಮದುವೆ’; ಗನ್ ಲೈಸೆನ್ಸ್ ಕೇಳಿದ ನರೇಶ್‌!

Pavithra Lokesh and Naresh Film Malli Pelli

ಬೆಂಗಳೂರು: ತೆಲುಗಿನ ನಟ ನರೇಶ್ ಕೃಷ್ಣ ಹಾಗೂ ಪವಿತ್ರಾ ಲೋಕೇಶ್ (Pavithra Naresh) ಅಭಿನಯದ `ಮತ್ತೆ ಮದುವೆ’ ಸಿನಿಮಾ ಒಟಿಟಿ ಎಂಟ್ರಿ ಕೊಟ್ಟ ಕೆಲವೇ ದಿನಗಳಲ್ಲಿ ದಿಢೀರ್ ನಾಪತ್ತೆಯಾಗಿದೆ. ಈ ಸಿನಿಮಾ ಪ್ರೈಮ್‌ ಮತ್ತು ಆಹಾ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಮೂಡಿಬಂದಿದ್ದ ಮತ್ತೆ ಮದುವೆಗೆ ಚಿತ್ರಮಂದಿರಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ತೆಲುಗಿನಲ್ಲಿ ʻಮಳ್ಳಿಪೆಳ್ಳಿʼ ಎಂಬ ಟೈಟಲ್‌ನಡಿ ಮೇ 26ರಂದು ಬಿಡುಗಡೆಯಾಗಿತ್ತು. ಇದರ ಬೆನ್ನಲ್ಲೇ ನರೇಶ್‌ ತಮ್ಮ ಆತ್ಮ ರಕ್ಷಣೆಗಾಗಿ ಗನ್ ಲೈಸೆನ್ಸ್ ನೀಡುವಂತೆ ಅರ್ಜಿ ಕೂಡ ಹಾಕಿಕೊಂಡಿದ್ದಾರೆ.

ಟಾಲಿವುಡ್‌ನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೆ ಕನ್ನಡದಲ್ಲಿ ಮತ್ತೆ ಮದುವೆ ಎಂಬ ಶೀರ್ಷಿಕೆಯಡಿ ಜೂನ್ 9ರಂದು ತೆರೆಕಂಡಿತ್ತು. ಬಳಿಕ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿತ್ತು. ತನ್ನನ್ನೇ ಗುರಿಯಾಗಿರಿಸಿಕೊಂಡು ಮತ್ತೆ ಮದುವೆ ಸಿನಿಮಾ ಮಾಡಿದ್ದಾರೆ ಎಂದು ನರೇಶ್ ಪತ್ನಿ ರಮ್ಯಾ ರಘುಪತಿ (Ramya Raghupathi) ಕೋರ್ಟ್ ಮೆಟ್ಟಿಲು ಏರಿದ್ದರು. ತನ್ನ ಸಂಸಾರದ ಬಗ್ಗೆ ಅವಹೇಳನ ಮಾಡುವಂತಹ ದೃಶ್ಯಗಳನ್ನು ಅದರಲ್ಲಿ ಹಾಕಿದ್ದಾರೆ ಎಂದು ರಮ್ಯಾ ಮಾತನಾಡಿದ್ದರು. ಈ ಸಿನಿಮಾ ಬಿಡುಗಡೆ ಆಗದಂತೆ ತಡೆಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ಮಾನ್ಯವಾಗಿರಲಿಲ್ಲ. ಅಮೆಜಾನ್ ಪ್ರೈಮ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದ್ದಂತೆಯೇ ಮತ್ತೆ ಕೋರ್ಟ್ ಮೆಟ್ಟಿಲು ಏರಿದ್ದ ರಮ್ಯಾ, ಒಟಿಟಿಯಿಂದ ಸಿನಿಮಾವನ್ನು ತೆಗೆದುಹಾಕುವಂತೆ ಮನವಿ ಮಾಡಿಕೊಂಡಿದ್ದರು. ಇದೀಗ ಒಟಿಟಿಯಲ್ಲಿ ಮತ್ತೆ ಮದುವೆ ಸಿನಿಮಾವನ್ನು ತೆಗೆದುಹಾಕಲಾಗಿದೆ. ಈ ಮೂಲಕ ನರೇಶ್ ಅವರಿಗೆ ಹಿನ್ನೆಡೆಯಾಗಿದೆ. ನರೇಶ್ ಅವರು ಈಗಾಗಲೇ ರಮ್ಯಾ ವಿರುದ್ಧ ಕಾನೂನು ಹೋರಾಟದಲ್ಲಿ ಸಿಲುಕಿಕೊಂಡಿದ್ದಾರೆ.

ಇದನ್ನೂ ಓದಿ: Pavithra Naresh: ಒಟಿಟಿಗೆ ಬರುತ್ತಿದೆ ನರೇಶ್-ಪವಿತ್ರಾ ಲೋಕೇಶ್ ‘ಮತ್ತೆ ಮದುವೆ’ ಸಿನಿಮಾ

ಮತ್ತೆ ಮದುವೆ ಇತ್ತ ಥಿಯೇಟರ್‌ನಬಲ್ಲಿಯೂ ಓಡಲಿಲ್ಲ. ಇತ್ತ ಒಟಿಟಿಯಲ್ಲಿಯೂ ತೆಗದು ಹಾಕಲಾಗಿದೆ. ಜತೆಗೆ ತಮಗೆ ಭಯದ ವಾತಾವರಣ ಕಾಡುತ್ತಿದೆ ಎನ್ನುವುದು ನರೇಶ್ ವಾದ. ತಮಗೆ ಜೀವ ಬೆದರಿಕೆಯಿದೆ ಎಂದೂ, ಆತ್ಮರಕ್ಷಣೆಗಾಗಿ ಗನ್ ಪರವಾನಿಗೆ ನೀಡುವಂತೆ ಶ್ರೀಸತ್ಯಸಾಯಿ ಜಿಲ್ಲಾ ಎಸ್ಪಿ ಮಾಧವರೆಡ್ಡಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್‌’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್‌ ಮೂಲಕ ಮತ್ತೆ ಮದುವೆ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡಿದ್ದರು. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದು, ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು. ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಮತ್ತೆ ಮದುವೆಯ ಭಾಗವಾಗಿದ್ದರು.


Exit mobile version