Site icon Vistara News

Kannada New Movie: ‘ಲವ್ ರೆಡ್ಡಿ’ ಸಿನಿಮಾಗೆ ಸಾಥ್ ಕೊಟ್ಟ ಪ್ರದೀಪ್ ಈಶ್ವರ್!

Pradeep Eshwar supported the movie Love Reddy

ಬೆಂಗಳೂರು: ʻಲವ್ ರೆಡ್ಡಿʼ ಸಿನಿಮಾ ಪ್ರೇಮಕಥೆ ಜತೆಗೆ ಫ್ಯಾಮಿಲಿ ಎಮೋಷನಲ್ ಡ್ರಾಮಾ. ಈ ಸಿನಿಮಾ ಮೂಲಕ ಗಡಿನಾಡ ಪ್ರತಿಭೆ ಅಂಜನ್ ರಾಮಚಂದ್ರ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದು, ನಾಯಕಿಯಾಗಿ ಶ್ರಾವಣಿ ನಟಿಸಿದ್ದಾರೆ. ಈ ಹಿಂದೆ ಲವ್ ರೆಡ್ಡಿ ಸಿನಿಮಾದ ಫಸ್ಟ್ ಲುಕ್‌ವನ್ನು ನಟಸಿಂಹ ಬಾಲಯ್ಯ ಬಿಡುಗಡೆ ಮಾಡಿದ್ದರು. ಇದೀಗ ಫಸ್ಟ್ ಝಲಕ್‌ಅನ್ನು ಶಾಸಕ ಪ್ರದೀಪ್ ಈಶ್ವರ್ ಅನಾವರಣ ಮಾಡಿ ತಮ್ಮೂರಿನ ಸಿನಿಮೋತ್ಸಾಹಿಗಳಿಗೆ ಸಾಥ್ ಕೊಟ್ಟಿದ್ದಾರೆ.

ಬಳಿಕ ಪ್ರದೀಪ್ ಈಶ್ವರ್ ಮಾತನಾಡಿ, ʻʻಅಂಜನ್ ರಾಮಚಂದ್ರ ನಮ್ಮ‌ ಜಿಲ್ಲೆಯ ಹುಡುಗ. ಇನ್ಫೋಸಿಸ್ ನಾರಾಯಣ ಮೂರ್ತಿಯವರಿಗೆ ಜನ್ಮ ಕೊಟ್ಟ ಜಿಲ್ಲೆ ನಮ್ಮದು. ಎರಡು ಭಾರತ ರತ್ನ, ಎರಡು ಪದ್ಮಶ್ರೀ, ಒಂದು ಪದ್ಮಭೂಷಣ ಪಡೆದ ಜಿಲ್ಲೆ ನಮ್ಮದು. ಆರ್ ಆರ್ ಆರ್ ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳಿಗೆ ಸಾಹಿತ್ಯ ಬರೆಯುವ ವರದರಾಜು ಚಿಕ್ಕಬಳ್ಳಾಪುರದಲ್ಲಿ ಇದ್ದಾರೆ. ಇಂತಹ ಜಿಲ್ಲೆಯಿಂದ ಅಂಜನ್ ರಾಮಚಂದ್ರನ್ ಹೀರೊ ಆಗಿ ಬರುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ನಡೆದ ನೈಜ ಘಟನೆ ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿದೆ. ಕನ್ನಡಿಗರು ಈ ಚಿತ್ರವನ್ನು ಆರಾಧಿಸಬೇಕು. ಹಾರೈಸಬೇಕುʼʼ ಎಂದರು.

ನಾಯಕ ಅಂಜನ್ ಮಾತನಾಡಿ, ʻʻಈ ಸಿನಿಮಾ ಶುರುವಾಗುವ ಮೊದಲು ನಾನು ನಮ್ಮ ಡೈರೆಕ್ಟರ್ ಸಾಕಷ್ಟು ಸ್ಟ್ರಗಲ್ ಮಾಡಿದ್ದೇವೆ. ‌ಒಂದಷ್ಟು ಸಿ‌ನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇವೆ. ಕಷ್ಟಪಟ್ಟು ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ತುಂಬಾ ಜನ ಈ ಚಿತ್ರಕ್ಕೆ ಬೆಂಬಲ ಕೊಟ್ಟಿದ್ದಾರೆ. ಈ ಸಿನಿಮಾದಿಂದ ತುಂಬ ಜನ ಇಂಡಸ್ಟ್ರೀಗೆ ಮೊದಲ ಹೆಜ್ಜೆ ಇಟ್ಟಿದ್ದಾರೆʼʼ ಎಂದರು.

ಇದನ್ನೂ ಓದಿ: Kannada New Movie: ಕರಾವಳಿ ಭಾಗದ ಕಥೆ; ʻಕುದ್ರುʼ ಚಿತ್ರ ಅಕ್ಟೋಬರ್ 13 ರಂದು ತೆರೆಗೆ!

ನಿರ್ದೇಶಕ ಸ್ಮರಣ್ ರೆಡ್ಡಿ ಮಾತನಾಡಿ, ʻʻಲವ್ ರೆಡ್ಡಿ ಸಿನಿಮಾ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿಬುರಿತ್ತಿದೆ. ಈ ಚಿತ್ರದ ಮೂಲಕ ನನ್ನ ಕನಸು ನನಸಾಗಿದೆ. ಕಳೆದ ಏಳು ವರ್ಷದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆʼʼ ಎಂದರು.

ಲವ್ ಅಟ್ ಫಸ್ಟ್ ಸೈಟ್ ಎನ್ನುವಾಗ ಹಾಗೇ ನಾಯಕಿ ನೋಡಿ ಪ್ರೀತಿಯಲ್ಲಿ ಬೀಳುವ ನಾಯಕ ಲವ್ ರೆಡ್ಡಿ ಝಲಕ್ ಹೈಲೈಟ್. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಸ್ಮರಣ್ ರೆಡ್ಡಿ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಚೊಚ್ಚಲ ಹೆಜ್ಜೆ.

ಅಂಜನ್ ರಾಮಚಂದ್ರ ಒಂದಷ್ಟು ಕಿರುಚಿತ್ರ ಹಾಗೂ ವೆಬ್ ಸೀರೀಸ್ ಗಳಲ್ಲಿ‌ ‌ನಟಿಸಿರುವ ಅನುಭವವಿದೆ.
ನಿರ್ದೇಶಕ ಸ್ಮರಣ್ ಜತೆಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದು, ಇದೀಗ ನಾಯಕನಾಗಿ ಚೊಚ್ಚಲ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಹೊಸ ಕನಸ್ಸಿನೊಂದಿಗೆ ಅಂಜನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಲವ್ ರೆಡ್ಡಿ ಸಿನಿಮಾ ಮೂಲಕ ಒಂದಷ್ಟು ಯುವ ಸಿನಿಮೋತ್ಸಾಹಿಗಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Kannada New Movie: ನಟನೆಗೂ ಸೈ ಎಂದ ರಾಮಾ ರಾಮಾ ರೇ ನಿರ್ದೇಶಕ ಡಿ ಸತ್ಯಪ್ರಕಾಶ್‌

ಚಿಕ್ಕಬಳ್ಳಾಪುರ ಸುತ್ತಮುತ್ತ ಲವ್ ರೆಡ್ಡಿ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಸೆಹೇರಿ ಸ್ಟುಡಿಯೋ, ಎಂಜಿಆರ್ ಫಿಲ್ಮ್ಸ್‌, ಗೀತಾಂಶ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಸುನಂದಾ ಬಿ ರೆಡ್ಡಿ, ಮದನ್ ಗೋಪಾಲ್ ರೆಡ್ಡಿ, ಪ್ರಭಂಜನ್ ರೆಡ್ಡಿ, ಹೇಮಲತಾ ರೆಡ್ಡಿ, ನಾಗರಾಜ್ ಬೀರಪ್ಪ ನಿರ್ಮಾಣ ಮಾಡಿದ್ದಾರೆ. ಪ್ರಿನ್ಸ್ ಹೆನ್ರಿ ಸಂಗೀತ ಸಂಯೋಜನೆ, ಅಷ್ಕರ್ ಅಲಿ ಛಾಯಾಗ್ರಹಣ, ಬಾಹುಬಲಿಯ ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನ ಲವ್ ರೆಡ್ಡಿ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ.

Exit mobile version