Site icon Vistara News

Raju Srivastava | ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ಪುತ್ರಿಯಿಂದ ಬಿಗ್‌ ಬಿಗೆ ಭಾವನಾತ್ಮಕ ಪತ್ರ!

Raju Srivastava

ಬೆಂಗಳೂರು : ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ (Raju Srivastava) ಸೆ. 21ರಂದು ನಿಧನರಾಗಿದ್ದರು. ಹೃದಯಾಘಾತಕ್ಕೆ ಒಳಗಾದ ಅವರನ್ನು ದೆಹಲಿಯ ಏಮ್ಸ್​​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಒಂದೂವರೆ ತಿಂಗಳು ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೀಗ ತಂದೆಯ ನಿಧನದ ಒಂದು ವಾರದ ನಂತರ ಶ್ರೀವಾಸ್ತವ್‌ ಮಗಳು ಬಿಗ್‌ ಬಿ ಕುರಿತಾಗಿ ಇನ್ಸ್ಟಾ ಪೋಸ್ಟ್‌ ಮೂಲಕ ಹಂಚಿಕೊಂಡಿದ್ದಾರೆ.

ಬಾಲಿವುಡ್‌ ಖ್ಯಾತ ನಟ ಅಮಿತಾಭ್‌ ಬಚ್ಚನ್‌ ಜತೆ ರಾಜು ಶ್ರೀವಾಸ್ತವ್ ಇರುವ ಪೋಟೋವನ್ನು ಇನ್ಸ್ಟಾದಲ್ಲಿ ಹಂಚಿಕೊಂಡು ಭಾವನಾತ್ಮಕ ಪತ್ರವನ್ನು ಬರೆದಿದ್ದಾರೆ. ʻʻನನ್ನ ತಂದೆ ತೀರಿ ಹೋದ ಬಳಿಕ ಈ ಕಷ್ಟದ ಸಮಯದಲ್ಲಿ ಪ್ರತಿದಿನ ನಮ್ಮೊಂದಿಗೆ ಇರುವುದಕ್ಕಾಗಿ ಅಮಿತಾಭ್‌ ಅವರಿಗೆ ನಾವು ಕೃತಜ್ಞರಾಗಿರುತ್ತೇವೆ. ನಿಮ್ಮ ಪ್ರಾರ್ಥನೆಗಳು ನಮಗೆ ಹೇರಳವಾದ ಶಕ್ತಿ ಮತ್ತು ಬೆಂಬಲವನ್ನು ನೀಡಿದೆ. ಇದನ್ನು ನಾವು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇವೆ. ನನ್ನ ತಂದೆಗೆ ನೀವು ಸ್ಫೂರ್ತಿಯಾಗಿದ್ದೀರಿ ಹಾಗೂ ಗುರುಗಳು ಆಗಿದ್ದೀರಿ. ಮೊದಲನೇ ಬಾರಿ ನಿಮ್ಮನ್ನು ದೊಡ್ಡ ಸ್ಕ್ರೀನ್‌ನಲ್ಲಿ ನನ್ನ ತಂದೆ ನೋಡಿದಾಗ ಅವರ ಮನಸ್ಸಿನಲ್ಲಿ ಹಾಗೇ ಉಳಿದುಕೊಂಡಿದ್ದೀರಿ. ಅವರು ನಿಮ್ಮನ್ನು ಆನ್-ಸ್ಕ್ರೀನ್‌ನಲ್ಲಿ ಮಾತ್ರವಲ್ಲದೇ ನಂತರ ತಮ್ಮ ಜೀವನದಲ್ಲಿಯೂ ನಿಮ್ಮನ್ನು ಗುರು ಎಂದು ಪೂಜನೀಯ ಭಾವನೆಯಲ್ಲಿ ಗೌರವಿಸ ತೊಡಗಿದರು. ಹಾಗೇ ತಮ್ಮ ಮೊಬೈಲ್‌ನಲ್ಲಿ ನಿಮ್ಮನ್ನು ಗುರೂಜಿ ಎಂತಲೇ ಸೇವ್‌ ಕೂಡ ಮಾಡಿಕೊಂಡಿದ್ದರುʼʼ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | Raju Srivastava | ಫಲಿಸಲಿಲ್ಲ ಒಂದೂವರೆ ತಿಂಗಳ ಚಿಕಿತ್ಸೆ; ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್​ ನಿಧನ

ಅಷ್ಟೇ ಅಲ್ಲದೇ ಶ್ರೀವಾಸ್ತವ ಪುತ್ರಿ ʻʻತಮ್ಮ ಇಡೀ ಕುಟುಂಬ ಅಮಿತಾಭ್‌ ಅವರಿಗೆ ಯಾವಾಗಲೂ ಕೃತಜ್ಞರಾಗಿರಲು ಬಯಸುತ್ತೇವೆ. ಮತ್ತು ತನ್ನ ತಂದೆ ಜಾಗತಿಕವಾಗಿ ಪ್ರೀತಿ, ವಿಶ್ವಾಸ ಹಾಗೂ ಮೆಚ್ಚುಗೆಯನ್ನು ಪಡೆದಿದ್ದರೆ ಅದು ತಮ್ಮಿಂದʼʼ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ರಾಜು ಶ್ರೀವಾಸ್ತವ್​ ಆಗಸ್ಟ್​ 10ರಂದು ಜಿಮ್​ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ಆಗ ತೀವ್ರ ಹೃದಯಾಘಾತದಿಂದ ಕುಸಿದುಬಿದ್ದಿದ್ದರು. ಜಿಮ್​ ತರಬೇತುದಾರ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ರಾಜುಗೆ ಎಚ್ಚರ ಇರಲಿಲ್ಲ. ಸುಮಾರು 15 ದಿನ ಅವರು ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದರು. ವೆಂಟಿಲೇಟರ್​​ನಲ್ಲೇ ಇಟ್ಟು ಆರೈಕೆ ಮಾಡಲಾಗುತ್ತಿತ್ತು. ಎರಡು ಸಲ ಸಿಪಿಆರ್ (Cardiopulmonary Resuscitation)​ ಚಿಕಿತ್ಸೆ ಕೂಡ ನೀಡಲಾಗಿತ್ತು. ಆಗಸ್ಟ್​ 25ರಂದು ಅವರು ಎಚ್ಚರಗೊಂಡಾಗ, ಆರೋಗ್ಯ ಸುಧಾರಿಸಬಹುದು ಎಂಬ ಭರವಸೆ ಹುಟ್ಟಿತ್ತು. ಆದರೆ ಮತ್ತೆ ಸೆಪ್ಟೆಂಬರ್​ 1ರಂದು ವಿಪರೀತ ಜ್ವರ ಕಾಡಿತ್ತು. ಮತ್ತೆ ಆರೋಗ್ಯ ಕ್ಷೀಣಿಸುತ್ತ ಬಂದಿತ್ತು. ಇದೀಗ ಒಂದೂವರೆ ತಿಂಗಳ ಚಿಕಿತ್ಸೆ, ಅನೇಕಾನೇಕ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ.

ಸೆ.21ರಂದು ಬೆಳಗ್ಗೆ ರಾಜು ಉಸಿರು ನಿಲ್ಲಿಸಿದ್ದಾರೆ. ರಾಜು ಶ್ರೀವಾಸ್ತವ್​​ರಿಗೆ ಹೃದಯಾಘಾತವಷ್ಟೇ ಅಲ್ಲ, ಮಿದುಳಿನಲ್ಲೂ ರಕ್ತ ಹೆಪ್ಪುಗಟ್ಟಿತ್ತು. ಇದೇ ಕಾರಣಕ್ಕೇ ಅವರ ಆರೋಗ್ಯ ಕ್ಷೀಣಿಸುತ್ತಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಇಬ್ಬರೂ ರಾಜು ಶ್ರೀವಾಸ್ತವ್​ ಪತ್ನಿ ಶಿಖಾ ಶ್ರೀವಾಸ್ತವ್​ಗೆ ಕರೆ ಮಾಡಿ, ಚಿಕಿತ್ಸೆಗೆ ಪೂರ್ತಿ ಸಹಾಯ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಏನೆಲ್ಲ ಪ್ರಯತ್ನ ಪಟ್ಟರೂ ಬದುಕುಳಿಯಲಿಲ್ಲ ಹಾಸ್ಯನಟ.

ಇದನ್ನೂ ಓದಿ | Raju Srivastava | ಹಾಸ್ಯನಟ ರಾಜು ಶ್ರೀವಾಸ್ತವ್​​ಗೆ ಮರಳಿದ ಪ್ರಜ್ಞೆ; ಮುಂದುವರಿದ ಚಿಕಿತ್ಸೆ

ರಾಜು ಶ್ರೀವಾಸ್ತವ ಅವರು 1980ರಲ್ಲಿಯೇ ಮನರಂಜನೆ ಕ್ಷೇತ್ರ ಪ್ರವೇಶಿಸಿ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದರು. “ಬಾಜಿಗರ್‌”, “ಮೈನೆ ಪ್ಯಾರ್‌ ಕಿಯಾ”, “ಬಾಂಬೆ ಟು ಗೋವಾ” ಸೇರಿ ಬಾಲಿವುಡ್‌ನ (Bollywood) ಹಲವು ಸಿನಿಮಾಗಳಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. 2005ರಲ್ಲಿ ಆರಂಭವಾದ “ದಿ ಗ್ರೇಟ್‌ ಇಂಡಿಯನ್‌ ಲಾಫ್ಟರ್‌ ಚಾಲೆಂಜ್‌” ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಖ್ಯಾತಿ ಗಳಿಸುವ ಜತೆಗೆ ಸ್ಟ್ಯಾಂಡಪ್‌ ಕಮಿಡಿಯನ್‌ ಆಗಿಯೂ ರೂಪುಗೊಂಡರು. ಇನ್ನು, “ಪೇಟ್‌ ಸಫಾ” ಜಾಹೀರಾತಂತೂ ರಾಜು ಶ್ರೀವಾಸ್ತವ ಅವರನ್ನು ಮನೆಮಾತಾಗಿಸಿದೆ.

Exit mobile version