Site icon Vistara News

Ram Charan: ದಕ್ಷಿಣ ಭಾರತದ ಸ್ಟಾರ್‌ ರಾಮ್‌ ಚರಣ್‌ಗೆ ಶಾರುಖ್‌ ಖಾನ್‌ನಿಂದ ಅವಮಾನ? ಫ್ಯಾನ್ಸ್‌ ಗರಂ ಆಗಿದ್ದೇಕೆ?

ram charan

ram charan

ಜಾಮ್‌ನಗರ: ಗುಜರಾತ್‌ನ ಜಾಮ್‌ನಗರದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ (Mukesh Ambani) ಪುತ್ರ ಅನಂತ್‌ ಅಂಬಾನಿ (Anant Ambani) ಹಾಗೂ ಉದ್ಯಮಿ ವಿರೇನ್‌ ಮರ್ಚಂಟ್‌ ಪುತ್ರಿ ರಾಧಿಕಾ ಮರ್ಚಂಟ್‌ (Radhika Merchant) ಅವರ ವಿವಾಹಪೂರ್ವ ಕಾರ್ಯಕ್ರಮವು ಅದ್ಧೂರಿಯಾಗಿ ನಡೆದಿದೆ. ದೇಶ-ವಿದೇಶಗಳ ಗಣ್ಯರು, ಕಲಾವಿದರು ಸೇರಿ ಸಾವಿರಾರು ಮಂದಿ ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಈ ಮಧ್ಯೆ ಬಾಲಿವುಡ್‌ ಬಾದ್‌ಷಾ ಅವರು ಟಾಲಿವುಡ್‌ ಸ್ಟಾರ್‌ ರಾಮ್‌ ಚರಣ್‌ (Ram Charan) ಅವರನ್ನು ʼʼಇಡ್ಲಿ ವಡಾ ಎಲ್ಲಿದ್ದೀಯಾ ನೀನು?ʼʼ ಎಂದು ಕರೆದಿರುವುದು ಚರ್ಚೆ ಹುಟ್ಟು ಹಾಕಿದೆ.

ಫ್ಯಾನ್ಸ್‌ ಗರಂ

ಕಾರ್ಯಕ್ರಮದ ಮೊದಲ ದಿನ ಬಾಲಿವುಡ್‌ ಸ್ಟಾರ್‌ಗಳಾದ ಸಲ್ಮಾನ್‌ ಖಾನ್‌, ಆಮೀರ್‌ ಖಾನ್‌ ಮತ್ತು ಶಾರುಖ್‌ ಖಾನ್‌ ವೇದಿಕೆ ಮೇಲೆ ದಕ್ಷಿಣ ಭಾರತದ ಸೂಪರ್‌ ಹಿಟ್‌ ಚಿತ್ರ ʼಆರ್‌.ಆರ್‌.ಆರ್‌.ʼನ ʼನಾಟು ನಾಟುʼ ಹಾಡಿಗೆ ಹೆಜ್ಜೆ ಹಾಕಿದ್ದರು. ʼಆರ್‌.ಆರ್‌.ಆರ್‌.ʼ ಚಿತ್ರದ ನಾಯಕ, ಟಾಲಿವುಡ್‌ ಸ್ಟಾರ್‌ ರಾಮ್‌ ಚರಣ್‌ ಕೂಡ ಅಲ್ಲಿ ಉಪಸ್ಥಿತರಿದ್ದರು. ಈ ವೇಳೆ ಶಾರುಖ್‌ ಖಾನ್‌, ʼʼಇಡ್ಲಿ ವಡಾ ಎಲ್ಲಿದ್ದೀಯಾ ನೀನು?ʼʼ ಎಂದು ವೇದಿಕೆಗೆ ಆಹ್ವಾನಿಸಿದ್ದರು. ಸದ್ಯ ಇದು ವಿವಾದಕ್ಕೆ ಕಾರಣವಾಗಿದೆ.

ʼಇಡ್ಲಿ ವಡಾʼ ಎಂದು ಸಂಬೋಧಿಸುವ ಮೂಲಕ ತಮ್ಮ ನೆಚ್ಚಿನ ನಟನಿಗೆ ಶಾರುಖ್‌ ಅವಮಾನ ಮಾಡಿದ್ದಾರೆ ಎಂದು ರಾಮ್‌ ಚರಣ್‌ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಮ್‌ ಚರಣ್‌ ಅವರ ಪತ್ನಿ ಉಪಾಸನಾ ಅವರ ಮೇಕಪ್‌ ಆರ್ಟಿಸ್ಟ್‌ ಜೆಬಾ ಹಾಸನ್‌ ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದು, ʼʼರಾಮ್‌ ಚರಣ್‌ ಅವರನ್ನು ಶಾರುಖ್‌ ಇಡ್ಲಿ ಎಂದು ಕರೆದ ಬಳಿಕ ನಾನು ಹೊರ ನಡೆದೆ. ಇದು ರಾಮ್‌ ಚರಣ್‌ ಅವರಿಗೆ ತೋರಿದ ಅಗೌರವʼʼ ಎಂದು ಅವರು ಬರೆದುಕೊಂಡಿದ್ದಾರೆ. ಜತೆಗೆ ಈ ಬಗ್ಗೆ ಉಪಾಸನಾ ಬೇಸರ ವ್ಯಕ್ತಪಡಿಸಿದ್ದಾಗಿಯೂ ತಿಳಿಸಿದ್ದಾರೆ. ಶಾರುಖ್‌ ಖಾನ್‌ ತಮಾಷೆಗಾಗಿಯಾದರೂ ಹೀಗೆ ಕರೆದಿರುವುದು ತಪ್ಪು ಎಂದು ಅನೇಕರು ಹೇಳಿದ್ದಾರೆ.

ಅವಮಾನಿಸುವ ಉದ್ದೇಶ ಇರಲಿಲ್ಲ

ಶಾರುಖ್‌ ಖಾನ್‌ ಅಗೌರವ ತೋರುವ ಉದ್ದೇಶದಿಂದ ಹೀಗೆ ಕರೆದಿಲ್ಲ ಎಂದು ಹಲವರು ವಾದಿಸಿದ್ದಾರೆ. ʼʼಶಾರುಖ್ ಖಾನ್ ಈ ಹಿಂದಿನ ತಮ್ಮ ಸಿನಿಮಾವೊಂದರ ಡೈಲಾಗ್‌ ಹೇಳಿದ್ದಾರಷ್ಟೆ. ಆ ಸಿನಿಮಾದ ದೃಶ್ಯವೊಂದರ ಸಂಭಾಷಣೆ ʼರೆಂಡು ಪ್ಲೇಟ್ ಇಡ್ಲಿ ರಜನೀಕಾಂತ್ʼ ಎಂದು ಕೊನೆಯಾಗುತ್ತದೆ. ಅದೇ ಡೈಲಾಗ್ ಅನ್ನು ವೇದಿಕೆಯ ಮೇಲೆ ಹೇಳಿದ್ದ ಶಾರುಖ್ ಖಾನ್ ಕೊನೆಯಲ್ಲಿ ರಜನೀಕಾಂತ್ ಬದಲಿಗೆ ರಾಮ್ ಚರಣ್ ಎಂದಿದ್ದರುʼʼ ಎನ್ನುವುದು ಅನೇಕರ ಅಭಿಪ್ರಾಯ. ಈ ಹಿಂದೆ ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ಶಾರುಖ್‌ ಖಾನ್‌ ಹೆಮ್ಮೆಯಿಂದ ಮಾತನಾಡಿದ್ದರು. ಆದ್ದರಿಂದ ಅವರು ಅವಮಾನಿಸುವ ಉದ್ದೇಶದಿಂದ ಹೀಗೆ ಹೇಳಿದ್ದಲ್ಲ ಎನ್ನುವುದು ಅವರ ವಾದ. ಸದ್ಯ ಶಾರುಖ್‌ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: Aaradhya Bachchan: ಅಬ್ಬಾ.. ಅಂತೂ ಐಶ್ವರ್ಯಾ ರೈ ಪುತ್ರಿ ಹಣೆ ನೋಡಿದ್ವಲ್ಲ! ನಿಟ್ಟುಸಿರು ಬಿಟ್ಟ ನೆಟ್ಟಿಗರು!

ಮತ್ತೊಂದು ವಿಶೇಷ ಎಂದರೆ ಸಿನಿಮಾಗಳಿಗೆ ಕೋಟಿಗಟ್ಟಲೆ ಸಂಭಾವನೆ ಪಡೆಯುವ ಶಾರುಖ್‌, ಸಲ್ಮಾನ್‌ ಮತ್ತು ಆಮೀರ್‌ ಖಾನ್‌ ‘ನಾಟು ನಾಟು’ ನೃತ್ಯ ಪ್ರದರ್ಶನಕ್ಕೆ ಯಾವುದೇ ಸಂಭಾವನೆ ಪಡೆದಿಲ್ಲ ಎನ್ನಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version