Site icon Vistara News

Ranbir Kapoor: ರಣಬೀರ್‌ ಕಪೂರ್‌ ನಟನೆಯಿಂದ 6 ತಿಂಗಳು ಬ್ರೇಕ್‌ ಪಡೆದಿದ್ದೇಕೆ?

ranabir

ranabir

ಮುಂಬೈ: ಬಾಲಿವುಡ್‌ನ ಬ್ಯುಸಿ ಹೀರೊಗಳಲ್ಲಿ ಒಬ್ಬರಾದ ರಣಬೀರ್‌ ಕಪೂರ್‌ (Ranbir Kapoor) ಅಭಿನಯದ ʼಅನಿಮಲ್‌ʼ (Animal) ಚಿತ್ರ ಡಿಸೆಂಬರ್‌ನಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಹಾಡು, ಟೀಸರ್‌ನಿಂದಲೇ ಅಭಿಮಾನಿಗಳಲ್ಲಿ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಮಧ್ಯೆ ರಣಬೀರ್‌ ಕಪೂರ್‌ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ. ಅವರು ಅಭಿನಯದಿಂದ ಸುಮಾರು 6 ತಿಂಗಳು ವಿರಾಮ ತೆಗೆದುಕೊಳ್ಳಲಿದ್ದಾರಂತೆ. ಇತ್ತೀಚೆಗೆ ಅಭಿಮಾನಿಗಳ ಜತೆಗೆ ಝೂಮ್‌ ಮೂಲಕ ಮಾತನಾಡಿದ ಅವರು ಈ ನಿರ್ಧಾರ ತಿಳಿಸಿದ್ದಾರೆ.

ಕಾರಣವೇನು?

ತಮ್ಮ ಮಗಳು ರಾಹಾ ಜತೆಗೆ ಸಮಯ ಕಳೆಯಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ನಟ ತಿಳಿಸಿದರು. ʼʼಪತ್ನಿ ಆಲಿಯಾ ಭಟ್ ʼಜಿಗ್ರಾʼ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಲಿದ್ದಾರೆ. ಹೀಗಾಗಿ ನಾನು ರಾಹಾ ಜತೆಗೆ ಮನೆಯಲ್ಲಿರುತ್ತೇನೆʼʼ ಎಂದು ರಣಬೀರ್‌ ಹೇಳಿದರು.

ʼʼಅನಿಮಲ್‌ʼ ಬಳಿಕ ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲʼʼ ಎಂದು ಅವರು ತಿಳಿಸಿದರು. ʼʼಸುಮಾರು 5-6 ತಿಂಗಳ ಸುದೀರ್ಘ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ರಾಹಾ ಜನಿಸಿದಾಗ ʼಅನಿಮಲ್‌ʼ ಚಿತ್ರದ ಶೂಟಿಂಗ್‌ನಲ್ಲಿ ನಿರತನಾಗಿದ್ದರಿಂದ ಆಕೆಯೊಂದಿಗೆ ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇನ್ನು ಕೆಲವು ದಿನ ಅವಳೊಂದಿಗೆ ಇರುತ್ತೇನೆʼʼ ಎಂದು ತಮ್ಮ ಯೋಜನೆಯನ್ನು ವಿವರಿಸಿದರು.

“ರಾಹಾ ಈಗ ತೆವಳುತ್ತಿದ್ದಾಳೆ. ಅವಳು ನಮ್ಮನ್ನು ಗುರುತಿಸುತ್ತಿದ್ದಾಳೆ. ಅವಳು ʼಪಾʼ ಮತ್ತು ʼಮಾʼದಂತಹ ಪದಗಳನ್ನು ಮಾತನಾಡಲು ಪ್ರಯತ್ನಿಸುತ್ತಿದ್ದಾಳೆ. ಹೀಗಾಗಿ ಇದು ಅವಳೊಂದಿಗೆ ಸಮಯ ಕಳೆಯಲು ಉತ್ತಮ ಸಂದರ್ಭ. ಅದಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇನೆʼʼ ಎಂದು ರಣಬೀರ್ ಹೇಳಿದರು. ʼʼರಾಹಾ ಶೀಘ್ರದಲ್ಲೇ ಒಂದು ವರ್ಷಕ್ಕೆ ಕಾಲಿಡಲಿದ್ದು, ಕುಟುಂಬದೊಂದಿಗೆ ಸಣ್ಣ ಹುಟ್ಟುಹಬ್ಬ ಪಾರ್ಟಿಯನ್ನು ಆಯೋಜಿಸಲಿದ್ದೇವೆʼʼ ಎಂದು ತಿಳಿಸಿದರು.

ʼಬ್ರಹ್ಮಾಸ್ತ್ರ 2ʼ ಬಗ್ಗೆ ಏನಂದ್ರು?

ಬಹು ನಿರೀಕ್ಷಿತ ʼಬ್ರಹ್ಮಾಸ್ತ್ರ 2ʼ ಚಿತ್ರದ ಬಗ್ಗೆಯೂ ರಣಬೀರ್‌ ಮಾತನಾಡಿದ್ದಾರೆ. ʼʼಕಳೆದ ವಾರ ನಿರ್ದೇಶಕ ಅಯಾನ್‌ ಮುಖರ್ಜಿ ಕಥೆ ಹೇಳಿದ್ದಾರೆ. ಮತ್ತು ಇದು ಮೊದಲ ಭಾಗಕ್ಕಿಂತ 10 ಪಟ್ಟು ದೊಡ್ಡದಾಗಿರಲಿದೆ. ಸದ್ಯ ಅವರು ʼವಾರ್‌ 2ʼ ಚಿತ್ರದ ಕೆಲಸದಲ್ಲಿ ನಿರತರಾಗಿದ್ದಾರೆ. ಮುಂದಿನ ವರ್ಷದ ಮಧ್ಯ ಭಾಗದಲ್ಲಿ ʼವಾರ್‌ 2ʼ ಸಿನಿಮಾ ಮುಗಿಸುವ ಯೋಜನೆಯಲ್ಲಿದ್ದಾರೆ. ಬಳಿಕ ʼಬ್ರಹ್ಮಾಸ್ತ್ರ 2ʼ ಕೈಗೆತ್ತಿಕೊಳ್ಳುತ್ತೇವೆ. 2024ರ ಕೊನೆಗೆ ಅಥವಾ 2025ರ ಆರಂಭದಲ್ಲಿ ಚಿತ್ರೀಕರಣ ಆರಂಭಿಸಲಿದ್ದೇವೆʼʼ ಎಂದು ರಣಬೀರ್‌ ಮಾಹಿತಿ ನೀಡಿದರು.

ಇದನ್ನೂ ಓದಿ: Shraddha Kapoor: ಲ್ಯಾಂಬೊರ್ಗೀನಿ ಕಾರು ಖರೀದಿಸಿದ ಶ್ರದ್ಧಾ ಕಪೂರ್; ರೇಂಜ್ ರೋವರ್ ಜತೆ ಪೂಜಾ ಹೆಗ್ಡೆ ಪೋಸ್‌!

ʼಬ್ರಹ್ಮಾಸ್ತ್ರ ʼ ಚಿತ್ರದ ಮೊದಲ ಭಾಗದಲ್ಲಿ ಶಿವ ಮತ್ತು ಇಶಾ (ರಣಬೀರ್‌ ಮತ್ತು ಆಲಿಯಾ ಭಟ್‌ ಪಾತ್ರದ ಹೆಸರು) ಪಾತ್ರದ ನಡುವೆ ಕೆಮಿಸ್ಟ್ರಿ ಸರಿಯಾಗಿ ಕೆಲಸ ಮಾಡದ ಬಗ್ಗೆ ಕೇಳಿ ಬಂದ ಟೀಕೆಯ ಬಗ್ಗೆಯೂ ಅವರು ಮೊದಲ ಬಾರಿ ತುಟಿ ಬಿಚ್ಚಿದ್ದಾರೆ. ʼʼಈ ವಿಚಾರ ಖಂಡಿತವಾಗಿಯೂ ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಈ ಬಗ್ಗೆಯೂ ಗಮನ ಹರಿಸಲಿದ್ದೇವೆ. ಶಿವ ಮತ್ತು ಇಶಾ ಪಾತ್ರದ ಕೆಮಿಸ್ಟ್ರಿ ಬಗ್ಗೆ ಬಂದ ಬಹಳಷ್ಟು ಟೀಕೆಗಳು ಧನಾತ್ಮಕವಾಗಿದ್ದವು. ಇವೆನ್ನೆಲ್ಲ ಗಣನೆಗೆ ತೆಗೆದುಕೊಂಡು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆʼʼ ಎಂದು ಹೇಳಿದರು.

ಈ ಮಧ್ಯೆ ನಿರ್ದೇಶಕ ನಿತೇಶ್‌ ತಿವಾರಿ ಆ್ಯಕ್ಷನ್‌ ಕಟ್‌ ಹೇಳಲಿರುವ ʼರಾಮಾಯಣʼ ಚಿತ್ರದಲ್ಲಿ ರಣಬೀರ್‌ ಕಪೂರ್‌ ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸ್ಯಾಂಡಲ್‌ವುಡ್‌ ನಟ ಯಶ್‌ ರಾವಣನಾಗಿ ಅಬ್ಬರಿಸಲಿದ್ದಾರೆ ಎನ್ನುವ ಸುದ್ದಿಯೂ ಹಬ್ಬಿದೆ. ಈ ಚಿತ್ರ ಸೆಟ್ಟೇರುವುದು ಇನ್ನು 6 ತಿಂಗಳ ಬಳಿಕವಷ್ಟೇ ಎನ್ನುತ್ತಿದ್ದಾರೆ ಅಭಿಮಾನಿಗಳು. ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನೂ ಹೊರ ಬಿದ್ದಿಲ್ಲ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ʼಅನಿಮಲ್‌ʼ ಪ್ಯಾನ್‌ ಇಂಡಿಯಾ ಚಿತ್ರವಾಗಿ ಡಿಸೆಂಬರ್‌ 1ರಂದು ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version