Site icon Vistara News

Salman Khan: ಸಲ್ಮಾನ್‌ ಖಾನ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ದಕ್ಷಿಣ ಭಾರತದ ಈ ಖ್ಯಾತ ನಿರ್ದೇಶಕ

salman khan

salman khan

ಮುಂಬೈ: ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ (Salman Khan) ತನ್ನ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಇತ್ತೀಚೆಗೆ ನಿರ್ಮಾಪಕ ಸಾಜಿದ್‌ ನಾಡಿಯಾವಾಲ ನಿರ್ಮಾಣದಲ್ಲಿ ಸಲ್ಮಾನ್‌ ಖಾನ್‌ ನಟಿಸುತ್ತಾರೆ, ಇದಕ್ಕೆ ತಮಿಳಿನ ಖ್ಯಾತ ನಿರ್ದೇಶಕರೊಬ್ಬರು ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಅಧಿಕೃತವಾಗಿ ಇದು ಘೋಷಣೆಯಾಗಿರಲಿಲ್ಲ. ಇದೀಗ ಈ ವಿಚಾರವನ್ನು ಸಲ್ಮಾನ್‌ ಖಾನ್‌ ಬಹಿರಂಗಪಡಿಸಿದ್ದಾರೆ. ಸುಮಾರು 10 ವರ್ಷಗಳ ಬಳಿಕ ಸಾಜಿದ್ ನಾಡಿಯಾವಾಲಾ ಮತ್ತು ಸಲ್ಮಾನ್‌ ಖಾನ್‌ ಒಂದಾಗುತ್ತಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿದೆ. ಜತೆಗೆ ತಮಿಳಿನ ಈ ಜನಪ್ರಿಯ ನಿರ್ದೇಶಕರು ಆ್ಯಕ್ಷನ್‌ ಕಟ್‌ ಹೇಳಲಿರುವುದರಿಂದ ಕುತೂಹಲ ಇನ್ನಷ್ಟು ಹೆಚ್ಚಿದೆ. ಅಷ್ಟಕ್ಕೂ ಯಾರು ಈ ನಿರ್ದೇಶಕ? ಇಲ್ಲಿದೆ ಉತ್ತರ.

ತಮಿಳು ಮತ್ತು ಹಿಂದಿಯ ʼಘಜನಿʼ, ತಮಿಳಿನ ʼ7 ಆಮ್ ಅರಿವುʼ, ʼತುಪಾಕಿʼ, ʼಕತ್ತಿʼ, ʼದರ್ಬಾರ್‌ʼ, ಹಿಂದಿಯ ʼಹಾಲಿ ಡೇʼ, ತೆಲುಗಿನ ʼಸ್ಪೈಡರ್‌ʼ ಮುಂತಾದ ಹಿಟ್‌ ಚಿತ್ರಗಳಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದ ಎ.ಆರ್‌.ಮುರುಗದಾಸ್‌ ಸುಮಾರು 8 ವರ್ಷಗಳ ಬಳಿಕ ಸಲ್ಮಾನ್‌ ಚಿತ್ರದ ಮೂಲಕ ಬಾಲಿವುಡ್‌ಗೆ ಮತ್ತೆ ಕಾಲಿಡುತ್ತಿದ್ದಾರೆ. ಮೊದಲ ಬಾರಿ ಮುರುಗದಾಸ್‌ ಅವರು ಸಲ್ಮಾನ್‌ ಖಾನ್‌ ಚಿತ್ರವನ್ನು ನಿರ್ದೇಶಿಸುತ್ತಿರುವುದು ಕೂಡ ವಿಶೇಷವೆನಿಸಿದೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡಿದ ಸಲ್ಮಾನ್‌ ಖಾನ್‌, ʼʼಈ ಪ್ರತಿಭಾವಂತ ತಂಡವನ್ನು ಸೇರಿಕೊಳ್ಳುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ. ಎ.ಆರ್.ಮುರುಗದಾಸ್ ಮತ್ತು ನನ್ನ ಗೆಳೆಯ ಸಾಜಿದ್ ನಾಡಿಯಾವಾಲ ಜತೆಗೆ ಸಿನಿಮಾ ಮಾಡುತ್ತಿರುವುದಕ್ಕೆ ಬಹಳ ಉತ್ಸುಕನಾಗಿದ್ದೇನೆ. ಈ ಸಿನಿಮಾ ಬಹಳ ವಿಶೇಷವಾಗಿರಲಿದೆ. ಈ ಸಿನಿಮಾಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ ಮತ್ತು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದೇನೆ. 2025ರ ಈದ್​ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗಲಿದೆʼʼ ಎಂದು ಬರೆದುಕೊಂಡಿದ್ದಾರೆ. ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣವಾಗಲಿದೆ ಎಂದು ಮೂಲಗಳು ತಿಳಿಸಿವೆ.

ʼʼಶೀರ್ಷಿಕೆ ಅಂತಿಮವಾಗದ ಈ ಥ್ರಿಲ್ಲರ್‌ ಚಿತ್ರದ ಶೂಟಿಂಗ್‌ ಭಾರತದ ಜತೆಗೆ ಪೋರ್ಚುಗಲ್‌ ಮತ್ತು ಯುರೋಪಿಯನ್‌ ದೇಶಗಳಲ್ಲಿ ನಡೆಯಲಿದೆ. ಸಾಜಿದ್‌ ಅವರ ಕನಸಿನ ಪ್ರಾಜೆಕ್ಟ್‌ ಆಗಿರುವ ಇದು ಸುಮಾರು 400 ಕೋಟಿ ರೂ.ಗಳಲ್ಲಿ ನಿರ್ಮಾಣವಾಗಲಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆʼʼ ಎಂದು ವರದಿಯೊಂದು ತಿಳಿಸಿದೆ. ನಾಯಕಿ, ಉಳಿದ ಪಾತ್ರ ವರ್ಗ, ತಂತ್ರಜ್ಞರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.

ಇದನ್ನೂ ಓದಿ: Rashmika Mandanna: ಮತ್ತೊಮ್ಮೆ ಡೀಪ್‌ಫೇಕ್‌ ಜಾಲದಲ್ಲಿ ಸಿಲುಕಿದ ರಶ್ಮಿಕಾ; ವೈರಲ್‌ ವಿಡಿಯೊ ಇಲ್ಲಿದೆ

ಸದ್ಯ ಮುರುಗದಾಸ್‌ ಕಾಲಿವುಡ್‌ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಶಿವ ಕಾರ್ತಿಕೇಯನ್‌ ಅಭಿನಯದ ಮುಂದಿನ ಚಿತ್ರವನ್ನು ಮುರುಗದಾಸ್‌ ನಿರ್ದೇಶಿಸಲಿದ್ದು, ತಾತ್ಕಾಲಿಕವಾಗಿ ʼಎಸ್‌ಕೆ 23ʼ ಎನ್ನುವ ಶೀರ್ಷಿಕೆ ಇಡಲಾಗಿದೆ. ಆ್ಯಕ್ಷನ್‌ ಎಂಟರ್‌ಟೈನರ್‌ ಆಗಿರುವ ಇದರಲ್ಲಿ ಶಿವ ಕಾರ್ತಿಕೇಯನ್‌ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಕನ್ನಡತಿ ರುಕ್ಮಿಣಿ ವಸಂತ್‌ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಮಲಯಾಳಂ ಸೂಪರ್‌ ಸ್ಟಾರ್‌ ಮೋಹನ್‌ಲಾಲ್‌ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ. ಜತೆಗೆ ಬಾಲಿವುಡ್‌ನ ವಿದ್ಯುತ್ ಜಮ್ವಾಲ್ ಕೂಡ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. 

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version