Site icon Vistara News

Kannada New Movie: ಅರ್ಥಪೂರ್ಣವಾಗಿ ಜನುಮದಿನ ಆಚರಿಸಿಕೊಂಡ ಸಮರ್ಜಿತ್ ಲಂಕೇಶ್!

samarjit lankesh

ಬೆಂಗಳೂರು: ಖ್ಯಾತ ಸಾಹಿತಿ ಪಿ.ಲಂಕೇಶ್ (Kannada New Movie) ಅವರ ಮೊಮ್ಮಗ ಹಾಗೂ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ “ಗೌರಿ” ಚಿತ್ರದ (Kannada New Movie) ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಇತ್ತೀಚೆಗೆ ನಾಯಕ ಸಮರ್ಜಿತ್ ಲಂಕೇಶ್ ಹುಟ್ಟುಹಬ್ಬವನ್ನು ಚಿತ್ರತಂಡದ ಸದಸ್ಯರು ಆಚರಿಸಿದರು. ಸಮರ್ಜಿತ್ ಅವರ ಅಜ್ಜಿ, ಪಿ.ಲಂಕೇಶ್ ಪತ್ನಿ ಇಂದಿರಾ ಲಂಕೇಶ್, ತಾಯಿ ಅರ್ಪಿತಾ ಲಂಕೇಶ್, ಇಂದ್ರಜಿತ್ ಲಂಕೇಶ್, ನಾಯಕಿ ಸಾನ್ಯಾ ಅಯ್ಯರ್, ನಟಿಯರಾದ ಮಾನಸಿ ಸುಧೀರ್, ಎಸ್ತರ ನರೋನ, ಹಿರಿಯ ಛಾಯಾಗ್ರಾಹಕ ಕೆ.ಕೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

“ಗೌರಿ” ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಈಗಾಗಲೇ ಚಿಕ್ಕಮಗಳೂರಿನ ರಮಣೀಯ ಸ್ಥಳಗಳಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ರವಿವರ್ಮ ಅವರ ಸಾಹಸ ನಿರ್ದೇಶನದಲ್ಲಿ ಸಾಹಸ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದೆ. ಸಮರ್ಜಿತ್ ನಾನು ಅಂದುಕೊಂಡದ್ದಕ್ಕಿಂತ ಚೆನ್ನಾಗಿ ಅಭಿನಯಿಸುತ್ತಿದ್ದಾರೆ. ಸಾನ್ಯ ಅವರು ಕೂಡ. ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು, ಮಾನಸಿ ಸುಧೀರ್, ಎಸ್ತರ್ ನರೋನ ಮುಂತಾದವರು ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ‌. ಹಿರಿಯ ಛಾಯಾಗ್ರಾಹಕ ಕೆ.ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಇದು ಅವರ ನೂರನೇ ಚಿತ್ರ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದರು.

ಇದನ್ನೂ ಓದಿ: Kannada New Movie: ʻಸೈಕಿಕ್ʼ ಸಿನಿಮಾ ಟೀಸರ್‌ ಔಟ್‌; ಕ್ರೈಂ ಥ್ರಿಲ್ಲರ್ ಸುತ್ತ ಕಥೆ!

ನಾನು ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುವುದಿಲ್ಲ ಎಂದು ಮಾತನಾಡಿದ ಸಮರ್ಜಿತ್ ಲಂಕೇಶ್, ʻʻಇಂದು ಚಿತ್ರತಂಡದವರು ನನ್ನ ಹುಟ್ಟುಹಬ್ಬ ಆಚರಿಸಿದ್ದು ಖುಷಿಯಾಗಿದೆ. ಎಲ್ಲರಿಗೂ ಧನ್ಯವಾದ. ಸಾಕಷ್ಟು ತಯಾರಿ ಮಾಡಿಕೊಂಡು ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಚಿತ್ರ ಚೆನ್ನಾಗಿ ಮೂಡಿಬರುವ ಭರವಸೆ ಇದೆʼʼ ಎಂದರು. ನಾಯಕಿ ಸಾನ್ಯಾ ಅಯ್ಯರ್ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡರು. ಮಾನಸಿ ಸುಧೀರ್ ಹಾಗೂ ಎಸ್ತರ್ ನರೋನ ಸಹ ಚಿತ್ರದ ಕುರಿತು ಮಾತನಾಡಿದರು.

ʻಇದು ನನ್ನ ನೂರನೇ ಚಿತ್ರ. ನನ್ನ ಮಗ ನಾಣಿ ಕೂಡ ಈ ಚಿತ್ರದಲ್ಲಿ ನನ್ನ ಜತೆ ಕೆಲಸ ಮಾಡುತ್ತಿದ್ದಾರೆ. ಸಮರ್ಜಿತ್ ನಟನೆ ನೋಡಿದಾಗ ಮೊದಲ ಚಿತ್ರ ಅನಿಸುವುದಿಲ್ಲ. ಅಷ್ಟು ಚೆನ್ನಾಗಿ ನಟಿಸುತ್ತಿದ್ದಾರೆʼʼ ಎಂದರು ಛಾಯಾಗ್ರಾಹಕ ಕೆ.ಕೆ. ಸಮರ್ಜಿತ್ .

ಇಂದಿರಾ ಲಂಕೇಶ್ ಅವರು ಮೊಮ್ಮಗನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಸಮರ್ಜಿತ್ ತಮ್ಮ ಹುಟ್ಟುಹಬ್ಬವನ್ನು ಅನೇಕ ಸಾಮಾಜಿಕ ಕಾರ್ಯಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಬೆಳಗ್ಗೆ ಸಿದ್ದಗಂಗಾ ಮಠಕ್ಕೆ ತೆರಳಿ ಶಿವಕುಮಾರ ಸ್ವಾಮಿಗಳ ಗದ್ದುಗೆ ದರ್ಶನ ಮಾಡಿ ಆಶೀರ್ವಾದ ಪಡೆದುಕೊಂಡರು. ಆನಂತರ ಕಂಠೀರವ ಸ್ಟುಡಿಯೋಗೆ ಆಗಮಿಸಿ ಪುನೀತ್ ರಾಜಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದರು.

Exit mobile version