Site icon Vistara News

Harshika Poonacha: ಮದುವೆ ಆದ್ರೂ ಮಕ್ಕಳು ಬೇಡ ಅನ್ನೋರಿಗೆ ಮುಟ್ಟಿ ನೋಡ್ಕೊಳ್ಳೋ ಹಾಗೆ ಉತ್ತರ ಕೊಟ್ಟ ಹರ್ಷಿಕಾ ಪೂಣಚ್ಚ ದಂಪತಿ!

Harshika Poonacha Bhuvann Ponnannaa shares opinion about marriage

ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಹರ್ಷಿಕಾ ಪೂಣಚ್ಚ (Harshika Poonacha) ತಾಯಿಯಾಗುತ್ತಿದ್ದಾರೆ‌. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಹರ್ಷಿಕಾ ಈ ಸಂಭ್ರಮವನ್ನು ವಿಭಿನ್ನವಾಗಿ ಫೋಟೋಶೂಟ್ ಮಾಡಿಸುವ ಮೂಲಕ ಹಂಚಿಕೊಂಡಿದ್ದರು. 2023, ಆಗಸ್ಟ್ 24ರಂದು ನಟ ಭುವನ್ ಪೊನ್ನಣ್ಣ (Bhuvann Ponnannaa) ಜತೆ ಹರ್ಷಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ವರ್ಷದೊಳಗೆ ಗುಡ್‌ನ್ಯೂಸ್‌ ನೀಡಿದ್ದಾರೆ. ಇದೀಗ ಜೋಡಿ ಇಷ್ಟು ಬೇಗ ಮಗುನಾ? ಸಿನಿಮಾರಂಗ ಬಿಟ್ಟು ಬಿಡುತ್ತೀರಾ? ಎಂದೆಲ್ಲಾ ಪ್ರಶ್ನೆ ಮಾಡುವವರಿಗೆ ಮಾಧ್ಯಮಗಳ ಮುಂದೆ ಉತ್ತರ ಕೊಟ್ಟಿದ್ದಾರೆ. 

ಭುವನ್ ಪೊನ್ನಣ್ಣ ಮಾತನಾಡಿ ʻʻತುಂಬ ಖುಷಿ ಇದೆ. ಈಗಿನ ಸನ್ನಿವೇಶದಲ್ಲಿ ಹೇಳೋದು ಏನೆಂದರೆ, ಈಗಿನ ಸಮಯದಲ್ಲಿ ಹಲವಾರು ಜನ ಫ್ಯಾಮಿಲಿ ಪ್ಲ್ಯಾನಿಂಗ್‌ ಎಂದುಕೊಂಡು ಮದುವೆಯಾಗಿ 5-10 ವರ್ಷ ಮಕ್ಕಳು ಮಾಡಿಕೊಳ್ಳದೇ ಹಾಗೇ ಇರ್ತಾರೆ. ನನ್ನ ಪ್ರಕಾರ ತಪ್ಪು. ಮದುವೆಯಾದ ಕೂಡಲೇ ಮಕ್ಕಳು ಮಾಡಿಕೊಳ್ಳಿ. ಈಗಿನ ಪೊಲಿಟಿಕಲ್‌ ಸಂದರ್ಭಗಳನ್ನು ನೋಡಿದರೆ, ಜಗತ್ತು ಎಷ್ಟು ದಿವಸ ಇರುತ್ತೋ ಇಲ್ಲವೋ ಗೊತ್ತಿಲ್ಲ. ಇದಷ್ಟು ದಿನ ಖುಷಿಯಾಗಿರಿ.ʼʼಎಂದರು.

ಇದನ್ನೂ ಓದಿ: Harshika Poonacha: ಮದುವೆಯಾಗಿ ವರ್ಷದೊಳಗೆ ಸಿಹಿ ಸುದ್ದಿ ಹಂಚಿಕೊಂಡ ಹರ್ಷಿಕಾ ಪೂಣಚ್ಚ–ಭುವನ್

ಇನ್ನು ನಟಿ ಹರ್ಷಿಕಾ ಮಾತನಾಡಿ ʻʻಭುವನ್‌ ಅವರ ನಿರ್ಧಾರವೇ ನನ್ನದೂ ಆಗಿತ್ತು. ಸಾಕಷ್ಟು ವರ್ಷ ನಾವು ಸ್ನೇಹಿತರಾಗಿ ಆಮೇಲೆ ಮದುವೆ ಆದ್ವಿ. ನಮ್ಮ ನಿರ್ಧಾರ ಅದೇ ಇತ್ತು. ದೇವರು ಮಕ್ಕಳು ಕೊಟ್ಟರೆ ಮಾಡಿಕೊಳ್ಳಬೇಕು ಎಂದೇ ಇತ್ತು. ದೇವರ ಆಶೀರ್ವಾದಿಂದ ಒಳ್ಳೆಯದು ಆಗಿದೆ. ಮುಂದೆ ಸಿನಿಮಾ ಮಾಡುತ್ತೇನೆ. ತಾಯಿಯಾಗಿ ಮಗುವಿಗೆ ಎಷ್ಟು ಸಮಯ ಕೊಡಬೇಕು ಅಷ್ಟು ಕೊಡುತ್ತೇನೆ. ಅದರ ನಂತರ ಸಿನಿಮಾ ಮಾಡೋದು ಇದ್ದೇ ಇದೆʼಎಂದರು.

ಹರ್ಷಿಕಾ‌ ಮತ್ತು ಭುವನ್ ಪೊನ್ನಣ್ಣ ಅನೇಕ ವರ್ಷಗಳ ಸ್ನೇಹಿತರು. ಈ ಸ್ನೇಹ ಪ್ರೀತಿಗೆ ತಿರುಗಿ ಕಳೆದ ವರ್ಷ ಹಸೆಮಣೆ ಏರಿದ್ದರು. ವಿರಾಜಪೇಟೆಯ ಅಮ್ಮತ್ತಿಯಲ್ಲಿ ಹರ್ಷಿಕಾ ಮತ್ತು ಭುವನ್ ಕೊಡವ ಶೈಲಿಯಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರ ಮದುವೆಗೆ ಸ್ಯಾಂಡಲ್‌ವುಡ್‌, ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಹಾರೈಸಿದ್ದರು.

ತಾವು ಪೋಷಕರಾಗುತ್ತಿರುವ ವಿಚಾರವನ್ನು ಭುವನ್ ಮತ್ತು ಹರ್ಷಿಕಾ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು.

2008ರಲ್ಲಿ ʼಪಿಯುಸಿʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಹರ್ಷಿಕಾ ಬಳಿಕ ಕೊಡವ, ಕೊಂಕಣಿ, ತೆಲುಗು, ಮಲಯಾಳಂ, ಬೋಜಪುರಿ, ತಮಿಳು ಮುಂತಾದ ಚಿತ್ರಗಳಲ್ಲಿ ನಟಿಸಿ ಬಹುಭಾಷಾ ತಾರೆ ಎನಿಸಿಕೊಂಡಿದ್ದಾರೆ. 2010ರಲ್ಲಿ ತೆರೆಕಂಡದ ಕನ್ನಡದ ʼತಮಸ್ಸುʼ ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡ ಅವರು ಸದ್ಯ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಇನ್ನು ಸ್ಯಾಂಡಲ್‌ವುಡ್‌ ನಟ ಭುವನ್‌ ಪೊನ್ನಣ್ಣ 2010ರಲ್ಲಿ ತೆರೆಕಂಡ, ಸುದೀಪ್‌ ಅಭಿನಯದ ʼಜಸ್ಟ್‌ ಮಾತ್‌ ಮಾತಲ್ಲಿʼ ಚಿತ್ರದ ಮೂಲಕ ಬಣ್ಣ ಲೋಕ ಪ್ರವೇಶಿಸಿದ್ದರು. ಗಣೇಶ್‌ ಜತೆಗೆ ಕೂಲ್‌ ಚಿತ್ರದಲ್ಲಿಯೂ ನಟಿಸಿರುವ ಅವರು 2019ರಲ್ಲಿ ತೆರೆಕಂಡ ರಾಂಧವ ಸಿನಿಮಾದ ಮೂಲಕ ಜನಪ್ರಿಯರಾಗಿದ್ದಾರೆ. ಕೊಡಗು ಮೂಲದ ಭುವನ್‌ ಮತ್ತು ಹರ್ಷಿಕಾ ಈ ಹಿಂದೆ ನೆರೆ ಪೀಡಿತರಿಗೆ ನೆರವಾಗುವ ಮೂಲಕ ಅನೇಕ ಮಂದಿಯ ಕಷ್ಟಗಳಿಗೆ ಸಹಾಯ ಹಸ್ತ ಚಾಚಿದ್ದರು.

Exit mobile version