Site icon Vistara News

Kannada New Movie: ʻರಾಮರಸ’ಸಿನಿಮಾಗೆ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಹೀರೊ ; ಬೆಂಬಲಿಸಿದ ಸುದೀಪ್!

Kannada New Movie RAMARASA Hero Introduction By Kiccha Sudeepa

ಬೆಂಗಳೂರು: ಗುರುದೇಶಪಾಂಡೆ ಅವರು ನಿರ್ಮಿಸುತ್ತಿರುವ, ‘ಜಟ್ಟ’ ಗಿರಿರಾಜ್‍ ನಿರ್ದೇಶನದ ‘ರಾಮರಸ’ ಚಿತ್ರದಲ್ಲಿ “ಜಿ ಅಕಾಡೆಮಿ”ಯಲ್ಲಿ ನಟನೆ ಕಲಿತಿರುವ ಹದಿನಾರು ಪ್ರತಿಭೆಗಳು ನಟಿಸುತ್ತಿರುವುದು ಗೊತ್ತಿರುವ ವಿಷಯ. ಈ ಹದಿನಾರು ಜನ ಯುವಪ್ರತಿಭೆಗಳೊಂದಿಗೆ ಖ್ಯಾತ ನಟರೊಬ್ಬರು ನಾಯಕನಾಗಿ ನಟಿಸಲಿದ್ದಾರೆ ಎಂದು ತಿಳಿಸಲಾಗಿತ್ತು. ಈಗ “ರಾಮರಸ” ಚಿತ್ರಕ್ಕೆ ನಾಯಕನ‌ ಆಯ್ಕೆಯಾಗಿದೆ. ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ “ರಾಮರಸ” ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಇತ್ತೀಚಿಗೆ ನಡೆದ ಸಮಾರಂಭದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕನಟನನ್ನು ಪರಿಚಯಿಸುವ ವಿಶೇಷ ವಿಡಿಯೋ ಬಿಡುಗಡೆ ಮಾಡುವ ಮೂಲಕ “ರಾಮರಸ” ಚಿತ್ರದ ನಾಯಕ ಕಾರ್ತಿಕ್ ಮಹೇಶ್ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್‍, ‘ನಾನು ‘ಬಿಗ್‍ ಬಾಸ್‍’ ಕಾರ್ಯಕ್ರಮವನ್ನು ಎಷ್ಟು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇನೆ. ಆದರೆ, ಪ್ರತಿ ಸೀಸನ್‍ನಲ್ಲೂ ಒಬ್ಬ ಹೊಸ ಹೀರೋ ಹುಟ್ಟಿಕೊಳ್ಳುತ್ತಿದ್ದಾನೆ. ‘ಬಿಗ್‍ ಬಾಸ್‍’ ಗೆಲ್ಲುವುದು ಅಷ್ಟು ಸುಲಭವಲ್ಲ. ಕಾರ್ತಿಕ್‍ ಅವರಿಗಂತೂ ಬಹಳಷ್ಟು ಸ್ಪರ್ಧಿಗಳಿದ್ದರು. ಅದು ಅವರಿಗೆ ಗೊತ್ತು. “ಬಿಗ್ ಬಾಸ್” ಗೆದ್ದ ಮೇಲೆ ಕಾರ್ತಿಕ್ ಅವರಿಗೆ ಒಳ್ಳೆಯ ಅವಕಾಶಗಳು ಬರುತ್ತಿದೆ‌. ಕಾರ್ತಿಕ್ ಸರಿಯಾದ ಹಾದಿಯಲ್ಲಿದ್ದಾರೆ. ಪ್ಯಾಷನೇಟ್‍ ಜನರು ಅವರ ಜೊತೆಯಾಗಿದ್ದಾರೆ. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿ’ ಎಂದು ಹಾರೈಸಿದರು. ನಿರ್ಮಾಪಕ ಗುರು ದೇಶಪಾಂಡೆ ನಿರ್ಮಾಣದ ಶೈಲಿ ಹಾಗೂ ನಿರ್ದೇಶಕ ಗಿರಿರಾಜ್ ಅವರ ಕಾರ್ಯವೈಖರಿಯನ್ನು ಸುದೀಪ್ ಶ್ಲಾಘಿಸಿದರು.

ಇದನ್ನೂ ಓದಿ: Actress Nayanathara: ‘ಬಾಹುಬಲಿ’ ಸಿನಿಮಾ ದೃಶ್ಯದ ಮರುಸೃಷ್ಟಿಯಲ್ಲಿ ವಿಘ್ನೇಶ್ ಶಿವನ್ ಪುತ್ರರು!

ನಾಯಕ ಕಾರ್ತಿಕ್‍ ಮಹೇಶ್‍ ಮಾತನಾಡಿ, ʻʻಮೊದಲಿನಿಂದಲೂ ನನಗೆ ಸುದೀಪ್ ಸರ್ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಅವರಿಗೆ ಹಾಗೂ ಈ ಚಿತ್ರದಲ್ಲಿ ಅವಕಾಶ ಕೊಟ್ಟ ನಿರ್ಮಾಪಕರಿಗೆ, ನಿರ್ದೇಶಕರಿಗೆ ಧನ್ಯವಾದಗಳು. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುತ್ತಿರುವ ಖುಷಿಯಿದೆ. ಸುದೀಪ್ ಅವರ ಮೇಲೆ ನನಗೆ ವಿಶೇಷ ಪ್ರೀತಿ ಹಾಗೂ ಗೌರವ. ಹಾಗಾಗಿ “ಬಿಗ್ ಬಾಸ್” ಫಿನಾಲೆಯಲ್ಲಿ ಅವರು ಕೊಟ್ಟಿದ್ದ ಡ್ರೆಸ್ ಅನ್ನು ಇಂದು ಹಾಕಿಕೊಂಡು ಬಂದಿದ್ದೇನೆʼʼ ಎಂದರು.

ʻʻಪ್ರತಿಯೊಬ್ಬ ನಿರ್ದೇಶಕನಿಗೂ ಗುರು ದೇಶಪಾಂಡೆ ಅವರಂತಹ‌ ನಿರ್ಮಾಪಕರು ಸಿಗಬೇಕು.‌ ಅವರಿಗೆ ಸಿನಿಮಾ ಮೇಲೆ ತುಂಬಾ ಪ್ರೀತಿ. ಅದ್ದೂರಿಯಾಗಿ ಮೂಡಿಬಂದಿರುವ ನಾಯಕನ ಪರಿಚಯದ ವಿಶೇಷ ವಿಡಿಯೋ ಅದಕ್ಕೆ ಸಾಕ್ಷಿ. ಕಾರ್ತಿಕ್ ಮಹೇಶ್ ಅವರು ಈ ಚಿತ್ರದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಸುದೀಪ್ ಅವರು ನಾಯಕನನ್ನು ಪರಿಚಯಿಸಿದ್ದಾರೆ. ಈ ಸಂದರ್ಭದಲ್ಲಿ ಸುದೀಪ್ ಅವರಿಗೆ ವಿಶೇಷ ಧನ್ಯವಾದ ತಿಳಿಸುತ್ತೇನೆʼʼ ಎಂದರು ನಿರ್ದೇಶಕ ಗಿರಿರಾಜ್.

ಜಿ ಅಕಾಡೆಮಿಯ 16 ಜನ ಹೊಸ ಪ್ರತಿಭೆಗಳಿಗೆ ತರಬೇತಿ ನೀಡಿ ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಲಾಗಿದೆ. ಅವರೊಂದಿಗೆ ಜನಪ್ರಿಯ ನಟರೊಬ್ಬರು ನಾಯಕನಾಗಿ ನಟಿಸಲಿದ್ದಾರೆ ಎಂದು ನಾನು ಮೊದಲು ತಿಳಿಸಿದೆ. “ರಾಮರಸ” ಚಿತ್ರಕ್ಕೆ ಕಾರ್ತಿಕ್ ಮಹೇಶ್ ನಾಯಕನಾಗಿದ್ದಾರೆ. ನಮ್ಮ ಚಿತ್ರದ ನಾಯಕನನ್ನು ಪರಿಚಯಿಸುವ ಟೀಸರ್ ಬಿಡುಗಡೆ ಮಾಡಿಕೊಟ್ಟ ಕಿಚ್ಚ ಸುದೀಪ್ ಅವರಿಗೆ ಅನಂತ ಧನ್ಯವಾದಗಳು ಎಂದರು ನಿರ್ಮಾಪಕ ಗುರು ದೇಶಪಾಂಡೆ.

‘ರಾಮರಸ’ ಚಿತ್ರಕ್ಕೆ ಬಿ.ಜೆ. ಭರತ್ ಸಂಗೀತ, ಎ.ವಿ. ಕೃಷ್ಣಕುಮಾರ್, ಅರ್ಜುನ್‍ ಕಿಟ್ಟು ಸಂಕಲನವಿದೆ. ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಹಾಗೂ ಪುನೀತ್ ಆರ್ಯ ಅವರ ಗೀತರಚನೆಯಿರುವ ಈ‌ ಚಿತ್ರದ ಕಾರ್ಯಕಾರಿ ನಿರ್ಮಾಪಕರು‌ ಸುನೀಲ್ ಹೆಚ್ ಸಿ ಗೌಡ.

Exit mobile version