Site icon Vistara News

Shiva Rajkumar: ‘ಭೈರವನ ಕೊನೆ ಪಾಠ’ದಲ್ಲಿ ಶಿವರಾಜ್‌ಕುಮಾರ್‌; ಹ್ಯಾಟ್ರಿಕ್ ಹೀರೊಗೆ ಹೇಮಂತ್‌ ರಾವ್‌ ಆ್ಯಕ್ಷನ್‌ ಕಟ್‌!

Shiva Rajkumar Bhairavana Kone PaaTa Title announce

ಬೆಂಗಳೂರು: ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ (Shiva Rajkumar) ಹಾಗೂ ಆರ್ ಚಂದ್ರು ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಘೋಷಣೆ ಆಗಿರುವುದು ಗೊತ್ತೇ ಇದೆ. ಹಾಗೇ ಮಫ್ತಿ’ ಸಿನಿಮಾದಲ್ಲಿ ʻಭೈರತಿ ರಣಗಲ್ʼ (Bhairathi Ranagal) ಆಗಿ ಸಾಕಷ್ಟು ಗಮನ ಸೆಳೆದಿದ್ದರು ಶಿವಣ್ಣ (Shiva Rajkumar). ‘ಭೈರತಿ ರಣಗಲ್ʼ ಪಾರ್ಟ್‌ 1 ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಹೀಗೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ಶಿವಣ್ಣ ಹೊಸ ಸಿನಿಮಾವೊಂದನ್ನು ಅನೌನ್ಸ್‌ ಮಾಡಿದ್ದಾರೆ. ಅದುವೇ ʻಭೈರವನ ಕೊನೆ ಪಾಠʼ.

ಜುಲೈ 12ಕ್ಕೆ ನಟ ಶಿವರಾಜ್‌ಕುಮಾರ್ 62ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಬಾರಿ ಶಿವಣ್ಣ ಹುಟ್ಟುಹಬ್ಬಕ್ಕೆ ಸಾಕಷ್ಟು ಸರ್‌ಪ್ರೈಸ್‌ಗಳು ಕಾದಿವೆ. ಅದಕ್ಕೂ ಮುಂಚೆಯೇ ಶಿವಣ್ಣ ಇದೀಗ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’, ‘ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಬಿ’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಹೇಮಂತ್‌ ಎಂ ರಾವ್‌ ʻಭೈರವನ ಕೊನೆ ಪಾಠʼ ಸಿನಿಮಾಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಡಾ. ವೈಶಾಕ್ ಜೆ ಗೌಡ ಅವರು ತಮ್ಮ ನಿರ್ಮಾಣ ಸಂಸ್ಥೆಯಾದ ವಿಜೆಎಫ್ – ವೈಶಾಕ್ ಜೆ ಫಿಲ್ಮ್ಸ್ ಅಡಿಯಲ್ಲಿ ‘ಭೈರವನ ಕೊನೆ ಪಾಠ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇನ್ನು ಸಿನಿಮಾ ಟೈಟಲ್‌ ಕೂಡ ಕ್ಯಾಚಿ ಆಗಿದ್ದು, ಶಿವಣ್ಣ ಫ್ಯಾನ್ಸ್‌ ಸಖತ್‌ ಥ್ರಿಲ್‌ ಆಗೋದು ಗ್ಯಾರಂಟಿ ಎನ್ನಲಾಗುತ್ತಿದೆ. ಇನ್ನು ಸಿನಿಮಾ ಶೀರ್ಷಿಕೆ ಕುರಿತು ಹೇಮಂತ್‌ ರಾವ್‌ ಮಾತನಾಡಿ ʻʻನಮ್ಮ ಭಾಷೆಗೆ ಹತ್ತಿರವಿರುವ ಶೀರ್ಷಿಕೆಗಳನ್ನು ನಾನು ಇಷ್ಟಪಡುತ್ತೇನೆ. ಈ ಮುಂಚೆ ನಾನು ಮಾಡಿದ ಸಿನಿಮಾಗಳಾದ ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಸಪ್ತ ಸಾಗರದಾಚೆ ಎಲ್ಲೋ ಹೀಗೆ ಎಲ್ಲ ಟೈಟಲ್‌ಗಳು ನಮ್ಮ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಇದೀಗ ʻಭೈರವನ ಕೊನೆ ಪಾಠʼ ಕೂಡ ವಿಭಿನ್ನ ಹಾಗೂ ಕ್ಯಾಚಿ ಟೈಟಲ್‌ ಆಗಿದೆ. ಶಿವಣ್ಣನ ಫ್ಯಾನ್ಸ್‌ಗೂ ಈ ಶೀರ್ಷಿಕೆ ಇಷ್ಟವಾಗಲಿದೆ. ಭೈರವ ಪಾತ್ರ ತುಂಬ ಪ್ರಮುಖವಾದದ್ದು. ಆದ್ದರಿಂದ ಕಥೆಗೆ ಸೂಕ್ತ ಎಂದೆನಿಸಿ ಈ ಶೀರ್ಷಿಕೆ ಇಟ್ಟಿದ್ದೇವೆ. ಆದರೆ ಯಾರು ಈ ಭೈರವ? ಭೈರವ ಪಾಠ ಎಂದರೆ ಏನು? ಎಂಬುದು ಕಥೆಯ ಮುಖ್ಯ ತಿರುಳಾಗಿದೆʼʼಎಂದರು.

ಇದನ್ನೂ ಓದಿ: OTT Releases: ಒಟಿಟಿಯಲ್ಲಿ ಈ ವಾರ ಮಿರ್ಜಾಪುರ ಸೀಸನ್ 3 ಸೇರಿದಂತೆ ಹಲವು ಸಿನಿಮಾ, ಸಿರೀಸ್‌ಗಳು!

ನಿರ್ಮಾಪಕ ವೈಶಾಕ್ ಜೆ ಗೌಡ ಸಿನಿಮಾ ಟೈಟಲ್‌ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಮೊದಲ ಬಾರಿ ಶೀರ್ಷಿಕೆ ಕೇಳಿದಾಗ ತುಂಬ ಕುತೂಹಲ ಆಯ್ತು. ಹಾಗೇ ಖುಷಿ ಕೂಡ ಆಯ್ತು. ಪ್ರೇಕ್ಷಕರಿಗೂ ಅದೇ ಅನುಭವ ಆಗಲಿದೆ. ಇದು ಬಹಳ ವಿಶೇಷವಾದ ಚಿತ್ರವಾಗಿದ್ದು, ಯುಗಯುಗಕ್ಕೂ ನೆನಪಿನಲ್ಲಿ ಉಳಿಯುವ ಸಿನಿಮಾ ಆಗಲಿದೆ. ಪ್ರೇಕ್ಷಕರು ಫಸ್ಟ್ ಲುಕ್ ಕೂಡ ಇಷ್ಟಪಡುತ್ತಾರೆʼʼಎಂದರು.

ಇನ್ನು ಚಿತ್ರದ ತಾಂತ್ರಿಕ ವರ್ಗ ಹಾಗೂ ತಾರಾಗಣ ಹೀಗೆ ಅನೇಕ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಅಪ್‌ಡೇಟ್‌ ಮಾಡಲಾಗುವುದು ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಭೈರವನ ಕೊನೆ ಪಾಠ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಶಿವರಾಜ್‌ಕುಮಾರ್‌ ಬರ್ತ್‌ಡೇ ದಿನ ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಸದ್ಯಕ್ಕೆ ಶಿವರಾಜ್‌ಕುಮಾರ್‌ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಒಂದೆಡೆ ನರ್ತನ್‌ ನಿರ್ದೇಶನದ ‘ಭೈರತಿ ರಣಗಲ್‌’ ಚಿತ್ರೀಕರಣ ನಡೆಯುತ್ತಿದ್ದು, ಇದರ ಜತೆಗೆ ರೋಹಿತ್‌ ಪದಕಿ ನಿರ್ದೇಶನದ ‘ಉತ್ತರಕಾಂಡ’ ಸಿನಿಮಾ ಮಾಡುತ್ತಿದ್ದಾರೆ ಶಿವಣ್ಣ. ಈ ನಡುವೆ ‘45’ ಸಿನಿಮಾ ಸೇರಿ ತಮಿಳು, ತೆಲುಗು ಚಿತ್ರರಂಗದಲ್ಲೂ ಶಿವಣ್ಣ ನಟಿಸುತ್ತಿದ್ದಾರೆ ಎನ್ನಲಾಗಿದೆ. ‘ಘೋಸ್ಟ್‌ 2’, ‘ದಳವಾಯಿ ಮುದ್ದಣ್ಣ’ ಚಿತ್ರಗಳೂ ಅವರ ಕೈಯಲ್ಲಿವೆ.

Exit mobile version