Site icon Vistara News

Sukesh Chandrashekar: ತಿಹಾರ್‌ ಜೈಲಿನಲ್ಲೇ ನಟಿಗೆ ಮಂಡಿಯೂರಿ ಪ್ರಪೋಸ್‌ ಮಾಡಿದ್ದ ವಂಚಕ ಸುಕೇಶ್‌

#image_title

ಮುಂಬೈ: 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ವಂಚಕ ಸುಕೇಶ್‌ ಚಂದ್ರಶೇಖರ್‌ (Sukesh Chandrashekar) ಅವರ ಬಗ್ಗೆ ಕಿರುತೆರೆ ನಟಿ ಚಾಹತ್‌ ಖನ್ನಾ ಹಲವು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಆತ ತಿಹಾರ್‌ ಜೈಲಿನಲ್ಲಿಯೇ ಮಂಡಿಯೂರಿ ತನಗೆ ಮದುವೆ ಪ್ರಪೋಸ್‌ ಮಾಡಿದ್ದಾಗಿ ನಟಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

“2018ರ ಮೇ ತಿಂಗಳಲ್ಲಿ ನನಗೆ ಫೋನ್‌ ಕರೆಯೊಂದು ಬಂದಿತು. ದೆಹಲಿಯ ಶಾಲೆಯೊಂದರಲ್ಲಿ ಕಾರ್ಯಕ್ರಮವಿದ್ದು, ಅದರಲ್ಲಿ ತೀರ್ಪುಗಾರ್ತಿಯಾಗಿ ಭಾಗವಹಿಸಲು ಕೇಳಿಕೊಂಡರು. ಅದಕ್ಕೆ ನಾನು ಒಪ್ಪಿ, ಮೇ 18ರಂದು ದೆಹಲಿಗೆ ತೆರಳಿದೆ. ಮುಂಬೈನ ವಿಮಾನ ನಿಲ್ದಾಣದಲ್ಲಿ ಏಂಜೆಲ್‌ ಖಾನ್‌ ಹೆಸರಿನವರು ದೆಹಲಿಯ ಕಾರ್ಯಕ್ರಮಕ್ಕೆ ಬರುವವರಾಗಿ ಹೇಳಿ ನನ್ನೊಂದಿಗೆ ಸೇರಿಕೊಂಡು ದೆಹಲಿಗೆ ಬಂದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ನಾವಿಬ್ಬರು ಶಾಲೆಗೆ ತೆರಳಲೆಂದು ಕಾರು ಹತ್ತಿದೆವು. ಆದರೆ ಸ್ವಲ್ಪ ಸಮಯದಲ್ಲೇ ಏಂಜೆಲ್‌ ಅವರು ಕಾರು ನಿಲ್ಲಿಸಿ, ಈ ಕಾರನ್ನು ಶಾಲೆಯೊಳಗೆ ಬಿಡುವುದಿಲ್ಲವಾದ್ದರಿಂದ ನಾವು ಕಾರು ಬದಲಿಸಬೇಕೆಂದು ಹೇಳಿ ಬೇರೊಂದು ಕಾರಿನಲ್ಲಿ ನನ್ನನ್ನು ಕರೆದುಕೊಂಡು ಹೋದರು. ಆ ಕಾರು ಶಾಲೆಗೆ ಹೋಗದೆ ತಿಹಾರ್‌ ಜೈಲಿಗೆ ಹೋಯಿತು” ಎಂದು ನಟಿ ಹೇಳಿದ್ದಾರೆ.

ಇದನ್ನೂ ಓದಿ: Sukesh Chandrashekar : ಜಾಕ್ವೆಲಿನ್‌ ಜತೆ ನಾನು ಕ್ಲೋಸ್‌ ಆಗಿದ್ದಕ್ಕೆ ನೋರಾ ಹೊಟ್ಟೆಕಿಚ್ಚು ಪಟ್ಟಿದ್ದಳು ಎಂದ ಸುಕೇಶ್‌
ಘಟನೆಯ ಬಗ್ಗೆ ವಿವರಣೆ ಮುಂದುವರಿಸಿರುವ ನಟಿ, “ಜೈಲಿಗೆ ಏಕಾಗಿ ಬಂದೆವು ಎಂದು ಕೇಳಿದಾಗ ಅವರು ಶಾಲೆಗೆ ಜೈಲಿನ ಮೂಲಕವೇ ಹೋಗಬೇಕು ಎಂದು ಹೇಳಿದರು. ನನಗೆ ನಾನು ಯಾವುದೋ ಬಲೆಯಲ್ಲಿ ಸಿಲುಕಿದ್ದೇನೆ ಎನ್ನುವ ವಿಚಾರ ಗೊತ್ತಾಯಿತು. ಕಾರಿಂದ ಇಳಿದ ತಕ್ಷಣ ನಮ್ಮನ್ನು ಯಾವುದೋ ಕೋಣೆಯೊಳಗೆ ಕರೆದೊಯ್ಯಲಾಯಿತು. ಆ ಕೋಣೆಯಲ್ಲಿ ಹಲವು ಲ್ಯಾಪ್‌ಟಾಪ್‌ಗಳು, ವಾಚ್‌, ಫ್ರಿಡ್ಜ್‌, ಸೋಫಾ, ಬ್ರಾಂಡೆಡ್‌ ಬ್ಯಾಗ್‌ಗಳು ಸೇರಿ ಐಷಾರಾಮಿ ವಸ್ತುಗಳೆಲ್ಲವೂ ಇದ್ದವು” ಎಂದು ಅವರು ವಿವರಿಸಿದ್ದಾರೆ.

“ಅಲ್ಲಿದ್ದ ಒಬ್ಬ ವ್ಯಕ್ತಿ ತಮ್ಮನ್ನು ತಾವು ಶೇಖರ್‌ ರೆಡ್ಡಿ ಎಂದು ಪರಿಚಯ ಮಾಡಿಕೊಂಡರು. ಫ್ಯಾನ್ಸಿ ಡ್ರೆಸ್‌, ಪರ್ಫ್ಯೂಮ್‌, ಬಂಗಾರದ ಸರ ಎಲ್ಲವನ್ನೂ ತೊಟ್ಟಿದ್ದ ಅವರು ತಮ್ಮನ್ನು ತಾವು ಜಯಲಲಿತಾ ಅಳಿಯ ಹಾಗೂ ದಕ್ಷಿಣ ಭಾರತದ ಟಿವಿ ವಾಹಿನಿಯೊಂದರ ಮಾಲೀಕ ಎಂದು ಪರಚಯಿಸಿಕೊಂಡರು. ನನ್ನ ದೊಡ್ಡ ಅಭಿಮಾನಿಯಾಗಿದ್ದು, ಹಲವು ವರ್ಷಗಳಿಂದ ನನ್ನನ್ನು ಭೇಟಿಯಾಗಲು ಕಾಯುತ್ತಿದ್ದಾಗಿ ತಿಳಿಸಿದರು. ನಂತರ ಮೊಣಕಾಲೂರಿ ʼನನ್ನನ್ನು ಮದುವೆಯಾಗಿʼ ಎಂದು ಕೇಳಿಕೊಂಡರು. ನನಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಿದಾಗ, ʼನಿಮಗೆ ನಿಮ್ಮ ಪತಿ ಸರಿಯಾಗುವುದಿಲ್ಲ, ನಾನೇ ನಿಮಗೆ ಸರಿ. ನಿಮ್ಮಿಬ್ಬರ ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆʼ ಎಂದು ಹೇಳಿದರು. ನಾನು ಜೋರಾಗಿ ಅಳಲಾರಂಭಿಸಿದೆ” ಎಂದು ಅವರು ಘಟನೆಯನ್ನು ವಿವರಿಸಿದ್ದಾರೆ.

ಇದನ್ನೂ ಓದಿ: Nora Fatehi: ನಾನು ಜಾಕ್ವೆಲಿನ್‌ ಜತೆ ಇದ್ದಾಗ ನೋರಾ ಫತೇಹಿ ದಿನಕ್ಕೆ 10 ಸಲ ಕಾಲ್‌ ಮಾಡುತ್ತಿದ್ದಳು, ವಂಚಕ ಸುಕೇಶ್‌ ಹೇಳಿಕೆ
“ಜೈಲಿನಿಂದ ವಿಮಾನ ನಿಲ್ದಾಣಕ್ಕೆ ಬರುವಾಗ ಏಂಜೆಲ್‌ ನನಗೆ ಗಿಫ್ಟ್‌ ಎಂದು ಎರಡು ಲಕ್ಷ ರೂ. ಕೊಟ್ಟರು. ಹಾಗೆಯೇ ಅವರ ಕೈನಲ್ಲಿ ಇದ್ದ ವರ್ಸೇಸ್ ವಾಚ್ ಅನ್ನೂ ಕೊಟ್ಟರು” ಎಂದು ನಟಿ ಹೇಳಿದ್ದಾರೆ. ಒಂದೂವರೆ ವರ್ಷದ ಹಿಂದೆ ಸುಕೇಶ್‌ ಪ್ರಕರಣದಲ್ಲಿ ತನ್ನ ಹೆಸರು ಕೇಳಿಬಂದ ನಂತರವೇ ನಟಿಗೆ ತಾನು ಜೈಲಿನಲ್ಲಿ ಸುಕೇಶ್‌ನನ್ನು ಭೇಟಿ ಮಾಡಿದ್ದು ಎಂದು ಗೊತ್ತಾಗಿದ್ದಾಗಿ ತಿಳಿಸಿದ್ದಾರೆ. ಹಾಗೂ ಆ ಏಂಜೆಲ್‌ ಖಾನ್‌ ಮತ್ತಿನ್ಯಾರೂ ಅಲ್ಲ ಪಿಂಕಿ ಇರಾನಿಯೇ ಎನ್ನುವ ವಿಚಾರ ಆಗ ತಿಳಿಯಿತು ಎಂದು ನಟಿ ಮಾಹಿತಿ ಕೊಟ್ಟಿದ್ದಾರೆ. ಸುಕೇಶ್‌ ಪ್ರಕರಣದಲ್ಲಿ ಬಾಲಿವುಡ್‌ ನಟಿಯರಾದ ಜಾಕ್ವೆಲಿನ್‌ ಫರ್ನಾಂಡಿಸ್‌, ನೋರಾ ಫತೇಹಿ, ಚಾಹತ್‌ ಖನ್ನಾ ಸೇರಿ ಅನೇಕರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿದೆ.

Exit mobile version