Site icon Vistara News

Anirudh Jatkar: ನನ್ನ ಮೇಲೆ ಆಪಾದನೆ ಹೊರಿಸಿದ್ದೆಲ್ಲ ಚೀಪ್: ಕಿಡಿಕಾರಿದ ವಿಷ್ಣುವರ್ಧನ್ ಅಳಿಯ!

All the accusations against me are cheap Aniruddha Jatkar

ಬೆಂಗಳೂರು: ನಟ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ʻಜೊತೆ ಜೊತೆಯಲಿʼ ಧಾರಾವಾಹಿಯ ಕಾರಣಗಳಿಂದಾಗಿ ವಿವಾದಕ್ಕೆ ಸಿಲುಕಿದ್ದರು. ಈ ಧಾರಾವಾಹಿ ತಂಡ ನಟನ ಕುರಿತು ಅನೇಕ ಆರೋಪಗಳನ್ನು ಮಾಡಿ, ಬಳಿಕ ಅನಿರುದ್ಧ (Anirudh Jatkar) ಅವರನ್ನು ನಿರ್ಮಾಪಕರ ಸಂಘ ಬ್ಯಾನ್‌ ಮಾಡುವ ಹಂತಕ್ಕೂ ಹೋಗಿತ್ತು. ಎರಡು ವರ್ಷಗಳ ಕಾಲ ಅವರಿಗೆ ಯಾರೂ ಕೆಲಸ ಕೊಡಬಾರದು ಎಂದು ಹೇಳಿತ್ತು. ಆ ಬಳಿಕ ಕಿರುತೆರೆಯಿಂದ ದೂರವಾಗಿದ್ದ ಅನಿರುದ್ಧ ಮತ್ತೆ ಹೊಸ ಧಾರಾವಾಹಿ ‘ಸೂರ್ಯವಂಶʼದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಮನರಂಜನಾ ಚಾನೆಲ್‌ವೊಂದರ ಬಗ್ಗೆ ಬೇಸರ ಹೊರಹಾಕಿದ್ದಾರೆ. ಜತೆಗೆ ಹಲವು ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ.

ಪ್ರೀತಿಸಿದ ಪಾತ್ರವದು

‘ಜೊತೆ ಜೊತೆಯಲಿ’ ಧಾರಾವಾಹಿ ತಂಡ ಅನಿರುದ್ಧ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿತ್ತು. ಇದಾದ ಬಳಿಕ 2023ರ ಡಿಸೆಂಬರ್‌ 8ರಂದು ಸೋಷಿಯಲ್‌ ಮೀಡಿಯಾದಲ್ಲಿ ಅನಿರುದ್ಧ ಅವರು ಹೊಸ ಧಾರಾವಾಹಿ ಅನೌನ್ಸ್‌ ಮಾಡಿದರು. ಇದೀಗ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ʻʻʻಜೊತೆ ಜೊತೆಯಲಿʼ ವಿವಾದದಿಂದ ಹೊರಬರುವುದಕ್ಕೆ ತುಂಬಾ ಸಮಯ ತೆಗೆದುಕೊಂಡೆ. ಈಗಲೂ ಆ ವಿಚಾರಗಳು ನನ್ನನ್ನು ಕಾಡುತ್ತಿವೆ. ʻಜೊತೆ ಜೊತೆಯಲಿʼ ಧಾರಾವಾಹಿಯಲ್ಲಿ ಮಾಡಿದ ಪಾತ್ರ ತುಂಬಾನೇ ಹೆಸರು ತಂದು ಕೊಟ್ಟಿದೆ. ಪ್ರೀತಿಸಿದ ಪಾತ್ರವದು. ಎರಡು ತಿಂಗಳಲ್ಲೇ ಆ ಧಾರಾವಾಹಿ ಮುಗಿದೇ ಹೋಗುತ್ತಿತ್ತು. ನಮ್ಮದು ಕ್ಲೈಮ್ಯಾಕ್ಸ್ ಚಿತ್ರೀಕರಣ ಕೂಡ ಆಗಿ ಹೋಗಿತ್ತು. ಇದೆಲ್ಲ ಆರೋಪಗಳು ಬೇಕಿರಲಿಲ್ಲ. ಅವರು ಆಪಾದನೆ ಹೊರಿಸಿದ್ದೆಲ್ಲ ಚೀಪ್ ಆಪಾದನೆಗಳು. ಅರ್ಥವೇ ಇಲ್ಲದ ಅಪಾದನೆಗಳುʼʼ ಎಂದು ಅನಿರುದ್ಧ ಹೇಳಿದ್ದಾರೆ.

ಇದನ್ನೂ ಓದಿ: Anirudh Jatkar : chef ಚಿದಂಬರ ಚಿತ್ರದ ಡಬ್ಬಿಂಗ್‌ ಶುರು; ಊಟ ಬಡಿಸಲು ರೆಡಿ ಆದ ಬಾಣಸಿಗ ಅನಿರುದ್ಧ!

ನಮ್ಮ ಮಾತಿಗೆ ಬೆಲೆ ಕೊಡಲೇ ಇಲ್ಲ

ʻʻಅಪಾದನೆ ಬಂದಾಗ ಒಂದೊಂದಕ್ಕೆ ಉತ್ತರ ಕೊಡುತ್ತೇನೆ ಎಂದು ಹೇಳಿದ್ದೆ. ಯಾರೊಬ್ಬರೂ ಬರಲೇ ಇಲ್ಲ. ನಿರ್ಮಾಪಕರ ಸಂಘದ್ದೊಂದು ದುರಂತ ಏನು ಅಂದರೆ ಮೂರು ತಿಂಗಳ ಹಿಂದಷ್ಟೇ ನನ್ನನ್ನು ಬ್ಯಾನ್‌ ಮಾಡಬೇಕು ಎಂದು ಹೇಳಿತ್ತು. ಆದರೆ ಈ ಬಗ್ಗೆ ನನ್ನ ಅನಿಸಿಕೆ ಕೇಳಲೇ ಇಲ್ಲ. ಬ್ಯಾನ್‌ ಅಂದೆಷ್ಟೇ ಹೇಳಿದರು. ನಮ್ಮ ಮಾತಿಗೆ ಬೆಲೆ ಕೊಡಲೇ ಇಲ್ಲ. ಕೇಳಿಸಿಕೊಂಡೂ ಇಲ್ಲ. ಇದೆಂಥ ಅನ್ಯಾಯ? ಇನ್ನು ನನಗೆ ಮನೋರಂಜನಾ ಚಾನೆಲ್‌ವೊಂದರ ಬಗ್ಗೆ ತುಂಬ ಬೇಸರವಿದೆ. ಅವರ ಜತೆ ಕೆಲಸ ಮಾಡಬೇಕು ಅಂದರೆ ತುಂಬ ಹುಷಾರಾಗಿ ಮಾಡಬೇಕುʼʼ ಎಂದು ಚಾನೆಲ್‌ ಬಗ್ಗೆ ಪರೋಕ್ಷವಾಗಿ ಕಿಡಿಕಾರಿದ್ದಾರೆ.

ಸೂರ್ಯವಂಶದಲ್ಲಿ ಪ್ರಮುಖ ಪಾತ್ರ

ಅನಿರುದ್ಧ ಅವರು ಡಿಸೆಂಬರ್‌ 8ರಂದು ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದರು. ʻʻಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತ ಇದ್ದೇನೆ.…ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಸರ್‌ರವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತದೆ ಎನ್ನುವ ಭರವಸೆ ನನಗಿದೆʼʼ ಎಂದು ಬರೆದುಕೊಂಡಿದ್ದರು.

Exit mobile version