Site icon Vistara News

Anchor Aparna: ಹೇಗಿದೆ ನನ್ನ ಹೊಸ ಹೇರ್​ಸ್ಟೈಲ್? ಗೆಳತಿಯರ ಜತೆ ಅಪರ್ಣಾ ಮಾಡಿದ ಕೊನೆಯ ವಿಡಿಯೊ ಇದು!

Anchor Aparna‌ Last Days Here with BR chaya

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ (Anchor Aparna) ನಿನ್ನೆ (ಜುಲೈ 11) ಇಹಲೋಕ ತ್ಯಜಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಅವರು ಕಿಮೋ ಥೆರಪಿಗಾಗಿ ಕೂದಲು ಕತ್ತರಿಸಿಕೊಂಡಿದ್ದರು. ಆಗಲೂ ಅವರು ನಗು ನಗುತ್ತಲೇ ಇದ್ದರು. ಗಾಯಕಿಯರಾದ ಸುನೀತಾ ಹಾಗೂ ಬಿಆರ್​ ಛಾಯಾ ಅಪರ್ಣಾಗೆ ಆಪ್ತರಾಗಿದ್ದರು. ಅವರ ಜತೆ ಕುಳಿತು ನಗು ನಗುತ್ತಾ ಮಾತನಾಡಿರುವ ವಿಡಿಯೊ ಇದೀಗ ವೈರಲ್‌ ಆಗಿದೆ.

‘ಹೇಗಿದೆ ನನ್ನ ಹೊಸ ಹೇರ್​ಸ್ಟೈಲ್’ ಎಂದು ಅಪರ್ಣಾ ಕೇಳಿದ್ದರು. ಆ ಬಳಿಕ ಸುನೀತಾ ಹಾಗೂ ಛಾಯಾ ಅವರು ಅಪರ್ಣಾಗೆ ಹಾಡುಗಳನ್ನು ಹಾಡಿದ್ದರು. ಈಗಾಗಲೇ ನಿಧನದ ಬಗ್ಗೆ ಪತಿ ನಾಗರಾಜ್ ವಸ್ತಾರೆ ಈ ಹಿಂದೆ ಫೇಸ್‌ಬುಕ್‌ನಲ್ಲಿ ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿದ್ದರು.

ʻʻಅವಳು ನನಗೆ ಸಲ್ಲುವುದಕ್ಕೆ ಮೊದಲೇನೆ ಇಡೀ ಕರ್ನಾಟಕಕ್ಕೆ ಸೇರಿದವಳು. ಅವಳ ಒಂದೇ ಒಂದು ಆಸೆ ಇತ್ತು. ಮಾಧ್ಯಮದವರ ಮುಂದೆ ನಿಂತು. ಏನಾಯ್ತು ಅಂತ ಹೇಳು ಅಂತ. ಅಷ್ಟನ್ನು ನಾನು ಎರಡು ಗಂಟೆಗಳ ಹಿಂದೆ ಫೇಸ್ ಬುಕ್ ಪೋಸ್ಟ್‌ನಲ್ಲಿ ಹೇಳಿದ್ದೇನೆ. ಎರಡು ವರ್ಷದ ಹಿಂದೆ ಇದೇ ಜುಲೈನಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅಂತ ತಪಾಸಣೆಯಲ್ಲಿ ಗೊತ್ತಾಯ್ತು. ಅದಾಗಲೇ ನಾಲ್ಕನೇಯ ಹಂತದಲ್ಲಿ ಇತ್ತು. ಅದನ್ನು ನೋಡಿದ ವೈದ್ಯರು ಇನ್ನು ಆರು ತಿಂಗಳು ಇದ್ದರೆ ಹೆಚ್ಚು ಅಂತ ಹೇಳಿದ್ರು. ಆದರೆ, ಅವಳು ಛಲಗಾತಿ. ಏನಾದರೂ ಮಾಡಿ ಗೆಲ್ತೀನಿ ಅನ್ನುವಂತಹ ಛಲವಿತ್ತು. ಅದಾದ ಮೇಲೂ ಒಂದೂವರೆ ವರ್ಷ ಅಂತ ಇಟ್ಟುಕೊಳ್ಳೋಣ ಜನವರಿಯವರೆಗೂ ಹೋರಾಡಿದಳುʼʼಎಂದು ಭಾವುಕರಾಗಿದ್ದಾರೆ.

ಇದನ್ನೂ ಓದಿ: Anchor Aparna: 6 ತಿಂಗಳು ಎಂದರೂ 2 ವರ್ಷ ಲವಲವಿಕೆಯಿಂದ ಬದುಕಿದ ಜೀವ! ಅಪರ್ಣಾ ಕೊನೆ ದಿನಗಳು ಹೀಗಿದ್ದವು

ಈ ಕ್ಯಾನ್ಸರ್‌ ನಡುವೆಯೂ ಅವರು ಹಲವು ʼಮಜಾ ವಿದ್‌ ಸೃಜಾʼ ಸೇರಿದಂತೆ ಹಲವು ಟಿವಿ ಶೋಗಳಲ್ಲಿ ಹಾಗೂ ʼಎಡೆಯೂರು ಶ್ರೀ ಸಿದ್ದಲಿಂಗೇಶ್ವರʼ ಮುಂತಾದ ಸೀರಿಯಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಲವಲವಿಕೆಯಿಂದ ನಟಿಸಿ ಎಲ್ಲರನ್ನೂ ನಗಿಸಿದ್ದರು. ʼನಾವು ಅಪರ್ಣಾ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದೆವುʼ ಎಂದು ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಹೇಳಿದ್ದಾರೆ. ಬೃಹತ್‌ ಸಾರ್ವಜನಿಕ ಕಾರ್ಯಕ್ರಮಗಳ ನಿರೂಪಣೆಗೆ ಅಪರ್ಣಾ ಅವರೇ ಮೊದಲ ಆಯ್ಕೆಯಾಗಿದ್ದರು.

ಮೂರು ದಿನದ ಹಿಂದೆ ಕ್ಯಾನ್ಸರ್‌ ಉಲ್ಬಣಿಸಿ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅಪರ್ಣಾ ನಿನ್ನೆ ಸಂಜೆ 9:45 ಕ್ಕೆ ನಿಧನರಾಗಿದ್ದರು. ಇಂದು ಬನಶಂಕರಿ ಬೆಳಗ್ಗೆ 11:30ರವರೆಗೆ ಬನಶಂಕರಿಯ ಸುಚಿತ್ರಾ ಫಿಲಂ ಸೊಸೈಟಿ ಬಳಿ ಇರುವ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆ ಬಳಿಕ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ವಸ್ತಾರೆ ತಿಳಿಸಿದ್ದಾರೆ.

ಅಂತಿಮ ದರ್ಶನಕ್ಕೆ ಬರುವವರು ಖಾಲಿ ಕೈಯಲ್ಲಿ ಬರಬೇಕು. ಪ್ಲಾಸ್ಟಿಕ್‌ ಹಾಗೂ ಬೊಕೆಗಳನ್ನು ದಯವಿಟ್ಟು ತರಬೇಡಿ. ಅವುಗಳು ಕೆಲವು ಗಂಟೆಗಳ ಬಳಿಕ ಕಸವಾಗುವುದರಿಂದ, ಆ ಮೂಲಕ ಪರಿಸರ ಮಾಲಿನ್ಯ ಮಾಡಲು ನಮಗಿಷ್ಟವಿಲ್ಲ ಎಂದೂ ವಸ್ತಾರೆ ಸೂಚನೆ ನೀಡಿದ್ದಾರೆ.

Exit mobile version