Site icon Vistara News

Jote Joteyali | ಧಾರಾವಾಹಿ ಖ್ಯಾತಿಯ ಅನಿರುದ್ಧ್‌ ಕಿರುತೆರೆಯಿಂದ ಬ್ಯಾನ್‌ ಆಗುತ್ತಿದ್ದಾರಾ? ಹೇಳಿದ್ದೇನು?

Jote Joteyali

ಬೆಂಗಳೂರು : ಕನ್ನಡ ಕಿರುತೆರೆಯಲ್ಲಿ ನಂಬರ್‌ ವನ್‌ ಧಾರಾವಾಹಿಯಾಗಿ ಮಿಂಚಿದ ಜೊತೆ ಜೊತೆಯಲಿ (Jote Joteyali) ಧಾರಾವಾಹಿ ಕುರಿತು ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಈ ಧಾರಾವಾಹಿಯಲ್ಲಿ ಖ್ಯಾತ ನಟ ಸಾಹಸ ಸಿಂಹ ವಿಷ್ಣುವರ್ಧನ್‌ ಅವರ ಅಳಿಯ ಅನಿರುದ್ಧ್‌ ನಾಯಕನಾಗಿ ನಟಿಸಿದ್ದಾರೆ. ಇದೀಗ ಅವರನ್ನು ಈ ಧಾರಾವಾಹಿಯಿಂದ ಬಹಿಷ್ಕಾರ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಪ್ರೇಕ್ಷಕರನ್ನು ಸೆಳೆದಿತ್ತು. ಧಾರಾವಾಹಿಯಲ್ಲಿ ಆರ್ಯವರ್ಧನ್‌ ಪಾತ್ರದಾರಿ ನಟ ಅನಿರುದ್ಧ್‌ ಹೊರ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್‌ ಅವರನ್ನು ತೆಗೆದು ಹಾಕಲು ನಿರ್ದೇಶಕ ಆರೂರ್‌ ಜಗದೀಶ್‌ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಅನಿರುದ್ಧ್‌ ಅವರ ಮೇಲೆ ಸತತ ಆರೋಪಗಳು ಈ ಹಿಂದೆ ಕೂಡ ಕೇಳಿ ಬಂದಿತ್ತು. ಹಲವಾರು ಚಿತ್ರಗಳಲ್ಲಿ ನಟನೆ ಮಾಡಿರುವ ಇವರು ಸೀರಿಯಲ್ ಸೆಟ್‌ನಲ್ಲಿ ಡೈಲಾಗ್ ಬದಲಾಯಿಸಿ ಎಂದು ಹೇಳುತ್ತಿದ್ದರು ಎನ್ನಲಾಗುತ್ತಿದೆ. ಶೂಟಿಂಗ್‌ ಸೆಟ್‌ನಲ್ಲಿ ಕಿರಿಕಿರಿ, ನಿರ್ದೇಶಕರು ಹೇಳಿದಂತೆ ಕೇಳದಿರುವುದು, ಈ ರೀತಿ ನಟನೆ ಮಾಡುವುದಿಲ್ಲ ಎನ್ನುವುದು ಇತ್ಯಾದಿ ದೂರುಗಳಿವೆ. ಇವರ ವಿರುದ್ಧ ಕಿರುತೆರೆ ಸಂಘಕ್ಕೂ ದೂರು ಹೋಗಿದೆ ಎನ್ನಲಾಗುತ್ತಿದೆ. ಕೇವಲ ಧಾರಾವಾಹಿಯಿಂದ ಮಾತ್ರವಲ್ಲದೇ ಕಿರುತೆರೆಯಿಂದಲೇ ಬ್ಯಾನ್‌ ಮಾಡುವ ಸಾಧ್ಯತೆ ಇದೆ ಎಂತಲೂ ಹೇಳಲಾಗುತ್ತಿದೆ.
ಇದನ್ನೂ ಓದಿ | Buddies : ಕಿರುತೆರೆ ನಟ ಕಿರಣ್‌ರಾಜ್ ಈಗ ಸ್ಯಾಂಡಲ್‌ವುಡ್‌ಗೆ

ಈ ವದಂತಿ ಬಗ್ಗೆ ಮಾತನಾಡಿದ ನಟ ಅನಿರುದ್ಧ್‌ ʻʻನನ್ನನ್ನು ಬ್ಯಾನ್‌ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಅಧಿಕೃತವಾಗಿ ನನಗೆ ಯಾವುದೇ ಮಾಹಿತಿ ನಮ್ಮ ತಂಡದಿಂದ ಬಂದಿಲ್ಲ. ಒಂದು ವೇಳೆ ಬ್ಯಾನ್‌ ಮಾಡಿದ್ದೇ ಹೌದಾದರೆ ಅದರ ಬಗ್ಗೆ ಸುದ್ದಿಗೋಷ್ಠಿ ನಡೆಸುತ್ತೇನೆ. ಸದ್ಯಕ್ಕೆ ಇದರ ಬಗ್ಗೆ ನನಗೆ ಏನೂ ಗೊತ್ತಿಲ್ಲʼʼ ಎಂದು ಹೇಳಿಕೆ ನೀಡಿದ್ದಾರೆ. ಜತೆಗೆ ಅನು ಸಿರಿಮನೆ ಪಾತ್ರಧಾರಿ ಮೇಘ ಶೆಟ್ಟಿ ಕೂಡ ಧಾರಾವಾಹಿಯಿಂದ ಹೊರ ಬರುತ್ತಾರೆ ಎಂಬ ವದಂತಿ ಈ ಹಿಂದೆ ಇತ್ತು.

ಇದನ್ನೂ ಓದಿ | TPL | ಟೆಲಿವಿಷನ್ ಪ್ರೀಮಿಯರ್ ಲೀಗ್ : ನಡೆಯಲಿದೆ ಮೂರು ದಿನಗಳ ಕಾಲ ಕಿರುತೆರೆ ಕಲಾವಿದರ ಕ್ರಿಕೆಟ್

Exit mobile version