Site icon Vistara News

Amruthadhare Kannada Serial: ಕಿರುತೆರೆಗೆ ರಾಜೇಶ್ ನಟರಂಗ ಗ್ರ್ಯಾಂಡ್‌ ಎಂಟ್ರಿ; ಒಲವಿನ ಅಮೃತಧಾರೆಯ ಹರಿವು ಆರಂಭ!

Rajesh Nataranga Amruthadhare Kannada Serial

ಬೆಂಗಳೂರು: ರಾಜೇಶ್ ನಟರಂಗ (Rajesh nataranga) ಹಾಗೂ ಛಾಯಾ ಸಿಂಗ್ (Chaya Singh) ನಟನೆಯ ‘ಅಮೃತಧಾರೆ’ ಧಾರಾವಾಹಿ (Amruthadhare Kannada Serial) ಮೇ 29ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯಲ್ಲಿ ನಾಯಕ ಗೌತಮ್ ದಿವಾನ್ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸಲು ಸಜ್ಜಾಗಿ ಬಂದಿದ್ದಾರೆ ನಟ ರಾಜೇಶ್ ನಟರಂಗ. ಇವರಿಗೆ ಕಿರುತೆರೆ ಇವರಿಗೆ ಹೊಸದೇನಲ್ಲ. ʻತ್ರಿವೇಣಿ ಸಂಗಮʼ ʻಮುಕ್ತ’, ‘ಬದುಕು’, ‘ಶಕ್ತಿ’, ‘ಗುಪ್ತಗಾಮಿನಿʼ ಹೀಗೆ ಹಲವು ಧಾರಾವಾಹಿಗಳಲ್ಲಿ ಛಾಪು ಮೂಡಿಸಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿರುವ ಹೊಚ್ಚ ಹೊಸ ಧಾರಾವಾಹಿ ‘ಅಮೃತಧಾರೆ’ಯಲ್ಲಿ ನಾಯಕ ಗೌತಮ್ ದಿವಾನ್ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸಲು ಮತ್ತೆ ಬಂದಿದ್ದಾರೆ ರಾಜೇಶ್ ನಟರಂಗ. ಅವರು ಮುಖ್ಯ ಪಾತ್ರಧಾರಿಯಾಗಿ ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ‘ತ್ರಿವೇಣಿ ಸಂಗಮ’ ಧಾರಾವಾಹಿಯಲ್ಲಿಯೂ ನಾಯಕ ತ್ರಿವಿಕ್ರಮ್ ಆಗಿ ರಾಜೇಶ್ ನಟರಂಗ ನಟಿಸಿದ್ದರು. ಅವರಿಗೆ ಜೋಡಿಯಾಗಿ ಸ್ಯಾಂಡಲ್‌ವುಡ್ ನಟಿ ಅನುಪ್ರಭಾಕರ್ ಕಾಣಿಸಿಕೊಂಡಿದ್ದರು. ಈ ಧಾರಾವಾಹಿಗೆ ಜನಮೆಚ್ಚುಗೆ ಲಭಿಸಿತ್ತು.

ರಾಜೇಶ್ ನಟರಂಗ ಅವರು ‘ಸ್ಮಶಾನ’ ಮತ್ತು ‘ಕುರುಕ್ಷೇತ್ರ’ ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟವರು. ‘ಮಾಯಾಮೃಗ’ ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ ಅವರು, ಮುಂದೆ ‘ಮುಕ್ತ’, ‘ಬದುಕು’, ‘ಶಕ್ತಿ’, ‘ಗುಪ್ತಗಾಮಿನಿ’, ‘ನಾನೂ ನನ್ನ ಕನಸು’ ಧಾರಾವಾಹಿಗಳಲ್ಲಿ ನಟಿಸಿದ್ದರು. ‘ಗುಪ್ತಗಾಮಿನಿ’ ಧಾರಾವಾಹಿಯ ಪಾತ್ರ ರಾಜೇಶ್ ನಟರಂಗ ಅವರಿಗೆ ಆ ಸಮಯದಲ್ಲಿ ಸಾಕಷ್ಟು ಖ್ಯಾತಿಯನ್ನು ತಂದುಕೊಟ್ಟಿತ್ತು.

ಇದನ್ನೂ ಓದಿ: Amruthadhare Serial : ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಸಮಯದಲ್ಲಿ‘ಅಮೃತಧಾರೆ’; ಬೇರೆ ಧಾರಾವಾಹಿಗಳ ಸಮಯವೇನು?

ಭೂಮಿಕಾ-ಗೌತಮ್‌ ಪ್ರಪಂಚ ಬೇರೆ ಬೇರೆ ಇದ್ದರೂ ಭಾವ ಒಂದೇ!

ಅಮೃತಧಾರೆ ಧಾರಾವಾಹಿ ʻಬಢೇ ಅಚ್ಚೇ ಲಗತೇ ಹೈʼ(Bade Acche Lagte Hain) ಹಿಂದಿ ಧಾರಾವಾಹಿಯ ರಿಮೇಕ್‌ ಆಗಿದೆ. ಈಗಾಗಲೇ ಪ್ರೇಕ್ಷಕರು ಮೊದಲ ಎಪಿಸೋಡ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ನಟಿ ಛಾಯಾ ಸಿಂಗ್‌ ಜತೆ ನಟ ರಾಜೇಶ್‌ ಕಾಣಿಸಿಕೊಂಡಿದ್ದಾರೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೌತಮ್ ಹಾಗೂ ಭೂಮಿಕಾ ಬದುಕು ಬೇರೆಬೇರೆ. ಗೌತಮ್​ನದ್ದು ಐಷಾರಾಮಿ ಜೀವನ. ಭೂಮಿಕಾ ಮಧ್ಯಮ ವರ್ಗದ ಹುಡುಗಿ .ಗೌತಮ್ ದೊಡ್ಡ ಉದ್ಯಮಿ. ಭೂಮಿಕಾ ಟ್ಯೂಷನ್​ನಲ್ಲಿ ಪಾಠ ಹೇಳಿಕೊಡುವವಳು. ಇಬ್ಬರ ಮಧ್ಯೆ ಅನೇಕ ಸಾಮ್ಯತೆ ಇದೆ. ಇವರು ಕುಟುಂಬದಲ್ಲಿ ಹಿರಿ ಮಕ್ಕಳು. ಇಬ್ಬರಿಗೂ ಮದುವೆ ಆಗಿಲ್ಲ. ಎಲ್ಲಕಿಂತ ಮುಖ್ಯವಾಗಿ ಇವರು ಕುಟುಂಬಕ್ಕೆ ಎಷ್ಟೇ ಪ್ರೀತಿ ತೋರಿಸಿದರೂ ಕುಟುಂಬ ಇವರಿಗೆ ಪ್ರೀತಿ ತೋರಿಸುತ್ತಿಲ್ಲ. ಇದೀಗ ಇವರಿಬ್ಬರು ಒಂದಾಗುತ್ತಾರಾ ಎಂಬುದೇ ಪ್ರೇಕ್ಷಕರಿಗೆ ಕುತೂಹಲವಾಗಿದೆ.

Exit mobile version