Site icon Vistara News

Sampath Jayaram: ನಟ ಸಂಪತ್‌ ಜಯರಾಮ್‌ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? ಸತ್ಯ ಬಹಿರಂಗಪಡಿಸಿದ ನಟ ರಾಜೇಶ್ ಧ್ರುವ

Why did actor Sampath Jayaram commit suicide Actor Rajesh Dhruva revealed the truth

ಬೆಂಗಳೂರು: ಸ್ಯಾಂಡಲ್‌ವುಡ್ ಯುವ ನಟ ಸಂಪತ್‌ ಜಯರಾಮ್‌ (Sampath Jayaram) ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಸಾಕಷ್ಟು ನೆಗೆಟಿವ್‌ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆದವು. ಖಿನ್ನತೆ, ಕುಟುಂಬ ಕಲಹ, ಅವಕಾಶಗಳಿಂದ ವಂಚಿತನಾಗಿ ಆತ್ಮಹತ್ಯೆ ಮಾಡಿಕೊಂಡರು ಎಂಬ ಸುದ್ದಿಗಳು ಹರಿದಾಡುತ್ತಿದ್ದಂತೆ ನಟ ರಾಜೇಶ್ ಧ್ರುವ ಆಪ್ತ ಸ್ನೇಹಿತನ ಬಗ್ಗೆ ಈ ರೀತಿ ಮಾತನಾಡಬೇಡಿ ಎಂದು ವಿಡಿಯೊ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಕಾರಣವನ್ನು ತಿಳಿಸಿದ್ದಾರೆ.

ರಾಜೇಶ್ ಧ್ರುವ ಹೇಳಿದ್ದೇನು?

ʼ’ಸಂಪತ್‌ ಜಯರಾಮ್‌ ನನ್ನ ಪ್ರಾಣ ಸ್ನೇಹಿತ. ನಮ್ಮನ್ನು ಬಿಟ್ಟು ಅಗಲಿದ್ದಾರೆ. ಬಾಲಾಜಿ ಫೋಟೊ ಸ್ಟುಡಿಯೊ ಸಿನಿಮಾ ಅವರ ನಟನೆಗೆ ತುಂಬ ಒಳ್ಳೆಯ ಹೆಸರು ತಂದು ಕೊಟ್ಟಿತ್ತು. ಸಿನಿಮಾ ನೋಡಿರುವ ಪ್ರತಿಯೊಬ್ಬರೂ ಒಂದೊಳ್ಳೆ ನಟ ಸಿಕ್ಕಿದ್ದಾನೆ ನಮ್ಮ ಇಂಡಸ್ಟ್ರಿಗೆ ಎಂದು ತುಂಬಾ ಖುಷಿ ಪಟ್ಟಿದ್ದಾರೆ. ʻಅಗ್ನಿಸಾಕ್ಷಿʼ ಧಾರಾವಾಹಿಯಿಂದ ತುಂಬಾ ಒಳ್ಳೆ ಹೆಸರು ಪಡೆದುಕೊಂಡಿದ್ದರು. ಚಿಕ್ಕಮಗಳೂರು ಮತ್ತು ಕೊಪ್ಪ ಅವರ ಊರು, ಅವರಿಂದ ನನಗೆ ಆ ಊರು ತಂಬಾ ಹತ್ತಿರವಾಗಿದೆ. ಸಂಪತ್ ಮತ್ತು ನಾನು ಒಟ್ಟಿಗೆ ಇಂಡಸ್ಟ್ರಿಗೆ ಬಂದವರು. 2013ರಿಂದ ಜತೆ ಜತೆಗೆ ಅಗ್ನಿಸಾಕ್ಷಿ ಸೀರಿಯಲ್ ಮಾಡಿದ್ದೀವಿ. ಪ್ರತಿಭೆನೇ ಸಂಪತ್‌ಗೆ ತುಂಬಾ ದೊಡ್ಡ ಆಸ್ತಿ’ʼ ಎಂದು ರಾಜೇಶ್ ಮಾತನಾಡಿದ್ದಾರೆ.

ನೆಗೆಟಿವ್ ಕಾಮೆಂಟ್ ಮಾಡಬೇಡಿ

ʻʻಸಂಪತ್ ಸಾವಿನ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ, ನನ್ನ ಕಣ್ಣಿಗೂ ಒಂದೆರಡು ವಿಡಿಯೊಗಳು ಬಿತ್ತು. ನಿಮ್ಮ ನಿಮ್ಮ ದೃಷ್ಟಿಯಿಂದ ಹೇಳಿಕೆ ಕೊಟ್ಟರೆ ಅದು ಸತ್ಯ ಆಗುವುದಿಲ್ಲ. ಯಾಕೆ ಈ ರೀತಿ ಮನವಿ ಮಾಡುತ್ತಿರುವೆ ಅಂದರೆ ಸಂಪತ್‌ ಅವರಿಗೆ ಅವರದ್ದೇ ಆದ ಕುಟುಂಬ ಇದೆ. ನಮ್ಮಂತೆ ತುಂಬಾ ಜನ ಸ್ನೇಹಿತರಿದ್ದಾರೆ. ನೆಗೆಟಿವ್ ಕಾಮೆಂಟ್ ಮಾಡಿ ನಮ್ಮ ಎಮೋಷನ್‌ನ ತುಂಬಾ ಹರ್ಟ್‌ ಮಾಡುತ್ತಿದ್ದೀರಿ. ಸುಳ್ಳು ಸುದ್ದಿ ಬೇಡ. ನಿಜಾಂಶ ಏನಿದೆ ಅದನ್ನು ಜನರಿಗೆ ತಿಳಿಸುವ ಕೆಲಸ ನಿಮ್ಮಂದ ಆಗಲಿ ಅಷ್ಟೆ. ತುಂಬಾ ಭಾರವಾದ ಮನಸ್ಸಿನಿಂದ ಈ ವಿಡಿಯೊ ಮಾಡುತ್ತಿರುವೆ’ʼ ಎಂದು ರಾಜೇಶ್‌ ಹೇಳಿದ್ದಾರೆ.

ಇತ್ತೀಚೆಗೆ ಮದುವೆ ಮಾಡಿಕೊಂಡಿದ್ದ

‘ಏಪ್ರಿಲ್‌ 21ರ ರಾತ್ರಿ 2 ಗಂಟೆಗೆ ರವಿ ಅವರಿಂದ ಕರೆ ಬರುತ್ತೆ. ನಾನು ಕೂಡ ನಿದ್ರೆಯಲ್ಲಿದ್ದೆ. ಫೋನ್‌ ಸೈಲೆಂಟ್‌ನಲ್ಲಿ ಇರಲಿಲ್ಲ. ರಿಂಗ್ ಆಗಿದ್ದಕ್ಕೆ ಪಿಕ್ ಮಾಡಿ ಮಾತನಾಡಿದೆ. ಸಂಪತ್‌ಗೆ ತುಂಬಾ ಸೀರಿಯಸ್‌ ಎಂದು ಹೇಳಿದರು. ನೋಡಿದಾಗ ಸಂಪತ್ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಯಾಕೆ ಸಂಪತ್ ಈ ರೀತಿ ಮಾಡಿಕೊಂಡರು ಎಂದು ವಿಚಾರಿಸಿದಾಗ ಅಲ್ಲಿ ಬಂದ ಕಾಮನ್ ಉತ್ತರ, ಇತ್ತೀಚೆಗೆ ಮದುವೆ ಮಾಡಿಕೊಂಡಿದ್ದ. ಒಂದು ವರ್ಷ ಕೂಡ ಆಗಿರಲಿಲ್ಲ. ಪತ್ನಿ ಚೈತನ್ಯ 5 ತಿಂಗಳ ಗರ್ಭಿಣಿ. 11 ಅಥವಾ 12 ವರ್ಷಗಳ ಕಾಲ ಪ್ರೀತಿಸಿ ಇಬ್ಬರೂ ಮನೆಯಲ್ಲಿ ಒಪ್ಪಿಸಿ ಇಂಟರ್‌ ಕಾಸ್ಟ್‌ ಮದುವೆ ಮಾಡಿಕೊಂಡಿದ್ದರು. ತುಂಬಾ ಚೆನ್ನಾಗಿ ಜೀವನ ಲೀಡ್ ಮಾಡುತ್ತಿದ್ದರು. ಅವರಿಬ್ಬರ ಜೀವನದಲ್ಲಿ ಒಂದು ಹುಳುಕೂ ಇರಲಿಲ್ಲ. ಅವರ ಮದುವೆ ಪ್ರೀ-ವೆಡ್ಡಿಂಗ್ ಶೂಟ್‌ನ ನಾನೇ ಮಾಡಿಕೊಟ್ಟಿದ್ದು. ಮದುವೆಯಲ್ಲಿ ಭಾಗಿಯಾಗಿರುವೆ. ಅವರ ಲವ್‌ ಸ್ಟೋರಿ ಪ್ರತಿಯೊಂದೂ ನಮಗೆ ಗೊತ್ತು’ʼ ಎಂದಿದ್ದಾರೆ ರಾಜೇಶ್.

ಇದನ್ನೂ ಓದಿ: Sampath Jayaram : ಸ್ಯಾಂಡಲ್‌ವುಡ್‌ ನಟ ಸಂಪತ್‌ ಜಯರಾಮ್‌ ಆತ್ಮಹತ್ಯೆ

ರಾಜೇಶ್ ಧ್ರುವ ಹೇಳಿಕೆ ನೀಡಿರುವ ವಿಡಿಯೊ

ಆತ್ಮಹತ್ಯೆ ಮಾಡಿಕೊಳ್ಳುವ ವೀಕ್ ಮೈಂಡ್ ಹುಡುಗ ಅಲ್ಲ

‘ಸಂಪತ್ ಹೇಗೆ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತು. ಅಷ್ಟು ಸಿಂಪಲ್ ವ್ಯಕ್ತಿ. ಆತ್ಮಹತ್ಯೆ ಮಾಡಿಕೊಳ್ಳುವ ವೀಕ್ ಮೈಂಡ್ ಹುಡುಗ ಅಲ್ಲ. ಏಕೆಂದರೆ ಅನೇಕರಿಗೆ ತಿದ್ದಿ ಬುದ್ಧಿ ಹೇಳಿದ್ದಾರೆ. ಮಾನಸಿಕ ನೆಮ್ಮದಿ ಇರಲಿಲ್ಲ, ಆರ್ಥಿಕ ಸಮಸ್ಯೆ ಇತ್ತು, ಗಂಡ-ಹೆಂಡತಿ ನೆಮ್ಮದಿಯಾಗಿ ಇರಲಿಲ್ಲ, ಅವಕಾಶ ಸಿಗಲಿಲ್ಲ ಎಂದು ಡಿಪ್ರೆಶನ್‌ನಲ್ಲಿದ್ದ, ಹಾಗೆ ಹೀಗೆ ಅಂತ ವಿಡಿಯೊ ಹರಿದಾಡುತ್ತಿದೆ. ನೀವು ತಪ್ಪಾಗಿ ಮಾತನಾಡುತ್ತಿದ್ದೀರಾ. ಹೌದು, ಚಾನ್ಸ್‌ ಇರಲಿಲ್ಲ ನಮ್ಮ ತಂಡದಲ್ಲಿ ನಮಗೆ ನಾವೇ ಚಾನ್ಸ್‌ ಸೃಷ್ಟಿ ಮಾಡಿಕೊಳ್ಳುತ್ತಿದ್ವಿ. ಸ್ವಲ್ಪ ವರ್ಷದಲ್ಲಿ ಒಂದೊಳ್ಳೆ ನಟ ಅಂತ ಹೆಸರು ಮಾಡುವ ಸಾಮರ್ಥ್ಯ ಇತ್ತು. ಅಗ್ನಿಸಾಕ್ಷಿ ಧಾರಾವಾಹಿ ನೋಡಿ ಅನೇಕರು ಆತನ ನಟನೆ ಮೆಚ್ಚಿಕೊಂಡಿದ್ದರು. ಸಂಸಾರದಲ್ಲಿ ಸಣ್ಣ ಪುಟ್ಟ ಮಾತುಕತೆ ಅಂತ ಬಂದಾಗ ಹುಡುಗಾಟ ಮಾಡಿಕೊಳ್ಳಲು ಹೋಗಿ ಈ ರೀತಿ ಪರಿಣಾಮ ಬೀರಿದೆ. ದಯವಿಟ್ಟು ಕೆಟ್ಟ ಗಾಸಿಪ್‌ ಮಾಡಬೇಡಿ. ಗಂಡ ಹೆಂಡತಿ ನಡುವೆ ಆದ ಚಿಕ್ಕ ಜಗಳಕ್ಕೆ ನಾನು ಸತ್ತು ಹೋಗುತ್ತೀನಿ, ಹಾಗೆ ಹೀಗೆ ಎಂದು ಹೆದರಿಸಿದ್ದಾನೆ, ಆಗ ಕುತ್ತಿಗೆ ಲಾಕ್ ಅಗಿದೆʼʼ ಎಂದು ರಾಜೇಶ್ ಹೇಳಿದ್ದಾರೆ.

ನಟ ಸಂಪತ್‌ ಜಯರಾಮ್‌ ಅವರು ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಕೆಲವು ಸಿನಿಮಾಗಳಲ್ಲಿ ಕೂಡ ನಟಿಸಿದ್ದರು.

Exit mobile version