ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು (sslc supplementary result 2023) ಪ್ರಕಟಿಸಿದ್ದು, ಈ ಬಾರಿ ಶೇ. 41.39 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇ. 39.59 ರಷ್ಟು ಫಲಿತಾಂಶ ಬಂದಿತ್ತು.
ಈ ಬಾರಿ ಒಟ್ಟು 1,11,781 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 46,270 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯನ್ನು (SSLC Exam 2023) ಒಟ್ಟು 8,35,102ವಿದ್ಯಾರ್ಥಿಗಳು ಬರೆದಿದ್ದರು. ಈ ಪೈಕಿ 7,00,619 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು (ಶೇ. 83.89 ರಷ್ಟು ಫಲಿತಾಂಶ). ಇದರಲ್ಲಿ 3,59,511 ಬಾಲಕಿಯರು ಉತ್ತೀರ್ಣರಾದರೆ, 3,41,108 ಬಾಲಕರು ಉತ್ತೀರ್ಣರಾಗಿದ್ದರು. ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಈ ಪೂರಕ ಪರೀಕ್ಷೆ ನಡೆಸಲಾಗಿತ್ತು.
ಫಲಿತಾಂಶವನ್ನು ನೋಡಲು ಇಲ್ಲಿ ಕ್ಲಿಕ್ (Click Here) ಮಾಡಿ.
ಕಳೆದ ಜೂನ್ 12 ರಿಂದ ಜೂನ್ 19 ರ ವರೆಗೆ ಈ ಪೂರಕ ಪರೀಕ್ಷೆಯನ್ನು ನಡೆಸಲಾಗಿತ್ತು. ನಂತರ ಮೌಲ್ಯಮಾಪನ ನಡೆಸಿದ್ದು, ಈಗ ಫಲಿತಾಂಶ ಪ್ರಕಟವಾಗಿದೆ. ರಾಜ್ಯದ 458 ಕೇಂದ್ರಗಳಲ್ಲಿ ಈ ಪೂರಕ ಪರೀಕ್ಷೆ ನಡೆದಿದ್ದು, 11,810 ಪ್ರೌಢಶಾಲೆಗಳ 1,11,781 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು.
51 ಮೌಲ್ಯಮಾಪನ ಕೇಂದ್ರಗಳಲ್ಲಿ 9,256 ಮೌಲ್ಯಮಾಪಕರು ಮೌಲ್ಯಮಾಪನ ನಡೆಸಿದ್ದರು. ಪರೀಕ್ಷೆಗೆ ಹಾಜರಾಗಿದ್ದ 71,134 ಬಾಲಕರ ಪೈಕಿ 27,705 ಬಾಲಕರು (ಶೇ.38.95) ಉತ್ತೀರ್ಣರಾಗಿದ್ದಾರೆ. 40,647 ಬಾಲಕಿಯರು ಪರೀಕ್ಷೆ ಬರೆದಿದ್ದು, ಇವರಲ್ಲಿ 18,565 ಬಾಲಕಿಯರು (ಶೇ.45.67) ಉತ್ತೀರ್ಣರಾಗಿದ್ದಾರೆ.
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಶೇ.39.78 ರಷ್ಟು ಫಲಿತಾಂಶ ಪಡೆದಿದ್ದರೆ, ಅನುದಾನಿತ ಶಾಲೆಗಳ ಶೇ.43.16 ವಿದ್ಯಾರ್ಥಿಗಳು ಹಾಗೂ ಅನುದಾನರಹಿತ ಶಾಲೆಗಳ ಶೇ. 42.34 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಮುಂದಿದ್ದು, ಪರೀಕ್ಷೆಗೆ ಹಾಜರಾದ 51,755 ವಿದ್ಯಾರ್ಥಿಗಳ ಪೈಕಿ 22,078 ವಿದ್ಯಾರ್ಥಿಗಳು (ಶೇ.42.66) ಉತ್ತೀರ್ಣರಾಗಿದ್ದಾರೆ. ನಗರದ ಪ್ರದೇಶದ 60,026 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 24,192 ವಿದ್ಯಾರ್ಥಿಗಳು (ಶೇ.40.3) ಉತ್ತೀರ್ಣರಾಗಿದ್ದಾರೆ.
ಇದನ್ನೂ ಓದಿ : SSLC Result 2023 : ಎಸ್ಎಸ್ಎಲ್ಸಿ ನಂತರ ಮುಂದೇನು?; ಇಲ್ಲಿದೆ ಉಪಯುಕ್ತ ಟಿಪ್ಸ್
ಪರೀಕ್ಷೆ ಬರೆದ ಕನ್ನಡ ಮಾಧ್ಯಮದ 42,969 ವಿದ್ಯಾರ್ಥಿಗಳ ಪೈಕಿ 24,931 ವಿದ್ಯಾರ್ಥಿಗಳು (ಶೇ.58.02) ಉತ್ತೀರ್ಣರಾಗಿದ್ದರೆ, ಪರೀಕ್ಷೆ ಬರೆದ ಇಂಗ್ಲಿಷ್ ಮಾಧ್ಯಮದ 6,622 ವಿದ್ಯಾರ್ಥಿಗಳ ಪೈಕಿ 2,744 ವಿದ್ಯಾರ್ಥಿಗಳು ಮಾತ್ರ (ಶೇ.41.44) ಉತ್ತೀರ್ಣರಾಗಿದ್ದಾರೆ. ಫಲಿತಾಂಶವನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿದ್ದು ಮಾತ್ರವಲ್ಲದೆ, ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ತಲುಪಿಸಲಾಗಿದೆ. ಶಾಲೆಗಳಲ್ಲಿಯೂ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಪ್ರಕಟಣೆ ತಿಳಿಸಿದೆ.
ಮೌರು ಮೌಲ್ಯಮಾಪನಕ್ಕೆ ಅವಕಾಶ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ಪ್ರತಿ, ಮರು ಎಣಿಕೆ ಹಾಗೂ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಇದರ ವೇಳಾ ಪಟ್ಟಿ ಇಂತಿದೆ. ಅರ್ಜಿ ಶುಲ್ಕದೊಂದಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಿರುತ್ತದೆ.
ವಿದ್ಯಾರ್ಥಿಗಳು ಮರು ಎಣಿಕೆಗಾಗಿ ನೇರವಾಗಿ ಅರ್ಜಿ ಸಲ್ಲಿಸುವಂತಿಲ್ಲ. ಮರು ಎಣಿಕೆ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂಬಂಧಪಟ್ಟ ವಿಷಯದ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಯನ್ನು ಪಡೆಯಬೇಕಾಗುತ್ತದೆ. ಇದರಲ್ಲಿ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಿದ್ದಲ್ಲಿ ಖಚಿತಪಡಿಸಿಕೊಂಡು ನಂತರವೇ ಮರು ಎಣಿಕೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಮಂಡಳಿ ತಿಳಿಸಿದೆ.