Site icon Vistara News

ಸೇನಾ ನೇಮಕಾತಿ ಲಿಖಿತ ಪರೀಕ್ಷೆ ನಡೆಸಲು ಒತ್ತಾಯ; ಧಾರವಾಡದಲ್ಲಿ ಅಭ್ಯರ್ಥಿಗಳ ಪಟ್ಟು

ಪರೀಕ್ಷೆ

ಧಾರವಾಡ: ಉಡುಪಿಯಲ್ಲಿ 2021ರಲ್ಲಿ ನಡೆದಿದ್ದ ಸೇನಾ ಭರ್ತಿ ರ‍್ಯಾಲಿಯಲ್ಲಿ ದೈಹಿಕ ಪರೀಕ್ಷೆ ಪಾಸಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸುವಂತೆ ಒತ್ತಾಯಿಸಿ ನೂರಾರು ಅಭ್ಯರ್ಥಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

2021ರಲ್ಲಿ ಉಡುಪಿಯಲ್ಲಿ ಸೇನಾ ಭರ್ತಿ ರ‍್ಯಾಲಿ ನಡೆದಿತ್ತು. ಇದರಲ್ಲಿ ಸಾವಿರಾರು ಜನ ಅಭ್ಯರ್ಥಿಗಳು ದೈಹಿಕ ಪರೀಕ್ಷೆ ಪಾಸಾಗಿ, ಲಿಖಿತ ಪರೀಕ್ಷೆಗೆ ತಯಾರಿ ನಡೆಸಿದ್ದರು. ಆದರೆ, ಕಳೆದ ಒಂದೂವರೆ ವರ್ಷದಿಂದ ಕೇಂದ್ರ ಸರ್ಕಾರ ಲಿಖಿತ ಪರೀಕ್ಷೆಯನ್ನೇ ನಡೆಸಿಲ್ಲ. ಕೋವಿಡ್, ನೆರೆ ಪ್ರವಾಹದ ನೆಪ ಹೇಳಿ ಪರೀಕ್ಷೆಯನ್ನು ಮುಂದೂಡುತ್ತಲೇ ಬಂದಿದೆ. 2021ರಲ್ಲೇ ನಾವು ದೈಹಿಕ ಪರೀಕ್ಷೆ ಪಾಸು ಮಾಡಿದ್ದೇವೆ. ಇದುವರೆಗೂ ಲಿಖಿತ ಪರೀಕ್ಷೆ ನಡೆಸದೇ ಇರುವುದರಿಂದ ನಮ್ಮ ವಯಸ್ಸಿನಲ್ಲಿ ವ್ಯತ್ಯಾಸವಾಗಿ ನಮಗೆ ಭರ್ತಿಯನ್ನೇ ನೀಡದೇ ಇದ್ದರೆ ಹೇಗೆ ಎಂದು ಅಭ್ಯರ್ಥಿಗಳು ಆಕೋಶ ವ್ಯಕ್ತಪಡಿಸಿದರು.

2021ರಲ್ಲೇ ದೈಹಿಕ ಪರೀಕ್ಷೆ ಪಾಸಾಗಿರುವ ನಾವು ಸಾಕಷ್ಟು ಹಣ ಖರ್ಚು ಮಾಡಿ ಲಿಖಿತ ಪರೀಕ್ಷೆಗಾಗಿ ಕೋಚಿಂಗ್ ಪಡೆಯುತ್ತಿದ್ದೇವೆ. ಆದರೆ, ಇದುವರೆಗೂ ಲಿಖಿತ ಪರೀಕ್ಷೆಯ ಸುಳಿವನ್ನೇ ನೀಡುತ್ತಿಲ್ಲ. ನಮಗೆ ಅಗ್ನಿಪಥ ಯೋಜನೆಯಲ್ಲಿ ಬನ್ನಿ ಎಂದು ಹೇಳಲಾಗುತ್ತಿದೆ. ನಾವು ನೇರವಾಗಿ ದೈಹಿಕ ಪರೀಕ್ಷೆಯಲ್ಲಿ ಪಾಸಾಗಿದ್ದು, ಅಗ್ನಿಪಥ ಯೋಜನೆಗೆ ನಮ್ಮನ್ನು ಒಳಪಡಿಸದೇ ನೇರವಾಗಿ ಲಿಖಿತ ಪರೀಕ್ಷೆ ನಡೆಸಬೇಕು ಎಂದು ಅಭ್ಯರ್ಥಿಗಳು ಒತ್ತಾಯಿಸಿದರು.

ಅಭ್ಯರ್ಥಿ ಆಕಾಶ ಹಂಪಣ್ಣವರ ಮಾತನಾಡಿ ʼʼ2019ರಲ್ಲಿ ನಾವು ಅರ್ಜಿ ಸಲ್ಲಿಸಿದ್ದೆವು. ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲಾಯಿತು. ನಂತರ ದೈಹಿಕ ಪರೀಕ್ಷೆ ಪಾಸ್‌ ಮಾಡಿ ವರ್ಷ ಕಳೆದರೂ ನಮಗೆ ಪರೀಕ್ಷೆ ನಡೆಸಿಲ್ಲ. ಅಗ್ನಿಪಥ್‌ ಸೇನಾ ನೇಮಕಾತಿ ಯೋಜನೆಗೆ ಅರ್ಜಿ ಸಲ್ಲಿಸಿ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ನಮ್ಮ ವಯೋಮಿತಿ ಮೀರಿದೆ. ಸಾಲ ಮಾಡಿ ಬಾಡಿಗೆ ಮನೆಗಳಲ್ಲಿ ಓದುತ್ತಿದ್ದೇವೆ. ಹೀಗಾಗಿ ನಮ್ಮನ್ನು ಪರೀಕ್ಷೆಯ ಮೂಲಕ ನೇಮಕಾತಿ ಮಾಡಬೇಕುʼʼ ಎಂದು ಒತ್ತಾಯಿಸಿದರು.

ಅಭ್ಯರ್ಥಿ ರಮೇಶ್‌ ರಮೇಶ್ ಮಾತನಾಡಿ ʼʼ2021ರಲ್ಲಿ ದೈಹಿಕ ಪರೀಕ್ಷೆ ಪಾಸಾಗಿದ್ದೆವು. ಧಾರವಾಡದಲ್ಲಿ ಬಾಡಿಗೆ ಮನೆ ಮಾಡಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇವೆ. ಪರೀಕ್ಷೆಯಲ್ಲಿ ಪಾಸಾಗುತ್ತೇವೋ, ಫೇಲ್‌ ಆಗುತ್ತೇವೂ ಅದು ಮುಖ್ಯವಲ್ಲ, ನಮಗೆ ಪರೀಕ್ಷೆ ನಡೆಸಬೇಕು. ಅಗ್ನಿಪಥ್‌ ಯೋಜನೆಯಲ್ಲಿ ನೇಮಕಾತಿಗೆ ನಾವು ಒಪ್ಪುವುದಿಲ್ಲʼʼ ಎಂದರು.
ಬಳಿಕ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ | Agnipath | ಅಗ್ನಿಪಥ್ ಯೋಜನೆಯಲ್ಲಿ ಉದ್ಯೋಗ ಭದ್ರತೆಯಿಲ್ಲವೆಂದು ಹಲವೆಡೆ ಪ್ರತಿಭಟನೆ, ರೈಲಿಗೆ ಬೆಂಕಿ

Exit mobile version