Site icon Vistara News

ರಾಯಚೂರಲ್ಲಿ ಲವ್​ ಜಿಹಾದ್​; ನಿಶ್ಚಿತಾರ್ಥ ಆಗಿದ್ದ ಹುಡುಗಿಯನ್ನು ಮದುವೆಯಾದ ಮುಸ್ಲಿಂ ಯುವಕ, ಬುರ್ಖಾ ಧರಿಸಿ ಬಂದ ಯುವತಿ!

Love Jihad Raichuru

ರಾಯಚೂರು: ಇತ್ತೀಚೆಗೆ ಲವ್​ ಜಿಹಾದ್​ ಪ್ರಕರಣಗಳು ಒಂದರ ಮೇಲೊಂದರಂತೆ ಬೆಳಕಿಗೆ ಬರುತ್ತಿವೆ. ರಾಯಚೂರಿನಲ್ಲಿ ಕೆಲವೇ ದಿನಗಳ ಹಿಂದೆ ಹಿಂದು ಶಿಕ್ಷಕಿಯೊಬ್ಬಳು ತಮ್ಮ 7 ವರ್ಷದ ಮಗುವನ್ನೂ ಬಿಟ್ಟು ಸಲೀಂ ಮುಸ್ಲಿಂ ವ್ಯಕ್ತಿಯೊಬ್ಬನೊಂದಿಗೆ ಪರಾರಿಯಾಗಿದ್ದಳು. ಇದು ಲವ್​ ಜಿಹಾದ್​ ಎಂಬ ಆರೋಪವನ್ನು ಆ ಶಿಕ್ಷಕಿಯ ಮನೆಯವರೇ ಮಾಡಿದ್ದರು. ಅದರ ಬೆನ್ನಲ್ಲೇ ರಾಯಚೂರಿನಿಂದ ಮತ್ತೊಂದು ಲವ್​ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಹಿಂದು ಯುವತಿ ಭಾರತಿ ಎಂಬಾಕೆಯನ್ನು ಮುಸ್ಲಿಂ ಯುವಕ ರೆಹಾನ್​ ಎಂಬಾತ ಲವ್​ ಜಿಹಾದ್ ಬಲೆಗೆ ಬೀಳಿಸಿದ್ದಾನೆ ಎಂಬ ಆರೋಪವನ್ನು ಭಾರತಿ ಪಾಲಕರು ಮಾಡಿದ್ದಾರೆ.

ಈ ರೆಹಾನ್​ ನಗರದಲ್ಲಿ ಫ್ಲವರ್ ಶೋ ವ್ಯಾಪಾರಿಯಾಗಿದ್ದ. ಆತ ಕೆಲಸ ಮಾಡುವ ಸ್ಥಳಕ್ಕೆ ಕೆಲಸಕ್ಕೆ ಬರುತ್ತಿದ್ದ ಯುವತಿ ಭಾರತಿಯನ್ನು ಪುಸಲಾಯಿಸಿ ಪ್ರೀತಿ ಬಲೆಯಲ್ಲಿ ಕೆಡವಿದ್ದ. ಭಾರತಿಗೆ ಅದಾಗಲೇ ಹೂವಿನಹಡಗಲಿ ಹುಡುಗನೊಬ್ಬನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆದರೂ ಈತ ಆಕೆಯ ತಲೆಕೆಡಿಸಿ, ರಾಯಚೂರಿನಿಂದ ಕರೆದುಕೊಂಡು ಹೋಗಿದ್ದ. ಇವರಿಬ್ಬರೂ ತಾವೀಗ ರಿಜಿಸ್ಟರ್ ಮದುವೆ ಆಗಿದ್ದಾಗಿ ಹೇಳಿಕೊಂಡಿದ್ದಾರೆ. ರಾಯಚೂರಿನಿಂದ ಇವರು ಹೈದರಾಬಾದ್​ಗೆ ತೆರಳಿ, ಅಲ್ಲಿಯೇ ಮದುವೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಬುರ್ಖಾ ಧರಿಸಿ ಬಂದ ಭಾರತಿ
ಭಾರತಿ ಮದುವೆಗೂ ಮುನ್ನ ರೆಹಾನ್​ ಆಕೆಯನ್ನು ಇಸ್ಲಾಂಗೆ ಮತಾಂತರ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಆಕೆಗೆ ಬುರ್ಖಾ ಹಾಕಿಸಿ, ಬಲವಂತದಿಂದ ಕುರಾನ್​ ಕೂಡ ಪಠಣ ಮಾಡಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಭಾರತಿ ನಾಪತ್ತೆಯಾದ ಬಗ್ಗೆ ಆಕೆಯ ಪಾಲಕರು ನೇತಾಜಿ ನಗರದ ಠಾಣೆಗೆ ದೂರು ಕೊಟ್ಟಿದ್ದರು. ಹೀಗಾಗಿ ಅವರಿಬ್ಬರನ್ನೂ ಪೊಲೀಸರು ಠಾಣೆಗೆ ಕರೆಸಿದ್ದರು. ಪೊಲೀಸ್ ಠಾಣೆಗೆ ಬರುವಾಗ ಈ ಭಾರತಿ ಬುರ್ಖಾ ಹಾಕಿಕೊಂಡಿಯೇ ಬಂದಿದ್ದಳು ಮತ್ತು ತಾವಿಬ್ಬರೂ ಮದುವೆಯಾಗಿದ್ದಾಗಿ ಅವರು ಅಲ್ಲಿಯೇ ಹೇಳಿಕೊಂಡಿದ್ದಾರೆ.

ನಮಗೆ ನಮ್ಮ ಮಗಳು ಬೇಕು
ಭಾರತಿಯ ಈ ಸ್ಥಿತಿಗೆ ಮುಸ್ಲಿಂ ಯುವಕ ರೆಹಾನ್​ ಕಾರಣ. ಆತ ನಮ್ಮ ಮಗಳ ಮನಸನ್ನು ಸಂಪೂರ್ಣವಾಗಿ ಕೆಡಿಸಿದ್ದಾನೆ ಎಂದು ಆಕೆಯ ತಾಯಿ ನಾಗಮ್ಮ ಅಳಲು ತೋಡಿಕೊಂಡಿದ್ದಾರೆ. ‘ನನ್ನ ಮಗಳ ಮೇಲೆ ನಂಬಿಕೆಯಿಟ್ಟು ಕೆಲಸಕ್ಕೆ ಕಳಿಸಿದೆ. ಆಕೆಗೆ ಮತ್ತೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥವೂ ಆಗಿತ್ತು. ಇನ್ನೊಂದು ತಿಂಗಳಲ್ಲಿ ಮದುವೆ ನಡೆಯುವುದಿತ್ತು. ಅದಕ್ಕಾಗಿ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೆವು. ಮದುವೆಗೆ ಬೇಕಾದ ವಸ್ತುಗಳನ್ನೆಲ್ಲ ತಂದಿಟ್ಟುಕೊಂಡಿದ್ದೆವು. ಈಗ ನೋಡಿದರೆ ಆ ಮುಸ್ಲಿಂ ಹುಡುಗ ಹೀಗೆ ಮಾಡಿದ್ದಾನೆ. ನನ್ನ ಪುತ್ರಿಗೆ ಬುರ್ಖಾ ಹಾಕಿಸಲಾಗಿದೆ. ನಮಗೆ ಬುರ್ಖಾ ಬೇಕಿಲ್ಲ, ಆ ಯುವಕ ರೆಹಾನ್​ ಕೂಡ ಬೇಕಾಗಿಲ್ಲ. ನಮಗೆ ನನ್ನ ಮಗಳು ಬೇಕು’ ಎಂದು ಗೋಳಾಡಿದ್ದಾರೆ.

‘ಅಂದು ಒಂದು ದಿನ ನಮ್ಮ ಮಗಳನ್ನು ಠಾಣೆಗೆ ಕರೆಸಿದರು. ಅಲ್ಲಿ ಹೋದರೆ ಪೊಲೀಸರೂ ನಮ್ಮ ಬಳಿ ಮಾತನಾಡಲಿಲ್ಲ. ಭಾರತಿ ಮಾತನಾಡಿದರೂ ಆಕೆ ನಮ್ಮ ಭಾಷೆ ಮಾತನಾಡುತ್ತಿಲ್ಲ. ಅದ್ಯಾವುದೋ ಬೇರೆ ಭಾಷೆ ಮಾತಾಡುತ್ತಾಳೆ. ನಮ್ಮನ್ನು ತಂದೆ-ತಾಯಿಯೇ ಅಲ್ಲ ಎನ್ನುತ್ತಿದ್ದಳು. ಆ ರೆಹಾನ್​ ನನ್ನ ಮಗಳಿಗೆ ಸಂಪೂರ್ಣ ಮೈಂಡ್​ ವಾಷ್​ ಮಾಡಿದ್ದಾನೆ’ ಎಂದು ನಾಗಮ್ಮ ಆರೋಪಿಸಿದ್ದಾರೆ.

ಇದನ್ನೂ ಓದಿ: ಮಗುವನ್ನೂ ಬಿಟ್ಟು ಪ್ರಿಯತಮನ ಜತೆ ಶಿಕ್ಷಕಿ ಪರಾರಿ, ಲವ್‌ ಜಿಹಾದ್‌ ಆರೋಪ

Exit mobile version