ಬಾಗಲಕೋಟೆ: ಅಭ್ಯರ್ಥಿಗಳ ಗಮನಕ್ಕೆ ತರದೆ ಪರೀಕ್ಷೆಯನ್ನು ಮುಂದೂಡಿದ್ದಕ್ಕೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ (University of Horticultural Sciences) ವಿರುದ್ಧ ಪರೀಕ್ಷಾರ್ಥಿಗಳು ಕಿಡಿಕಾರಿದ್ದಾರೆ. ಬಾಗಲಕೋಟೆಯ ತೋಟಗಾರಿಕಾ ವಿವಿಯು ಕಂಪ್ಯೂಟರ್ ಆಪರೇಟರ್ ಹುದ್ದೆಗಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಭಾನುವಾರ (ಮಾ.12) ಆಯೋಜಿಸಲಾಗಿತ್ತು. ಹೀಗಾಗಿ ಪರೀಕ್ಷೆ ಬರೆಯಲು ದೂರದೂರುಗಳಿಂದ ನೂರಾರು ಅಭ್ಯರ್ಥಿಗಳು ಬಂದಿದ್ದರು.
ಆದರೆ ಹೀಗೆ ಬಂದಿದ್ದ ಅಭ್ಯರ್ಥಿಗಳಿಗೆ ಆಘಾತ ಕಾದಿತ್ತು. ಯಾಕೆಂದರೆ ಭಾನುವಾರ ನಡೆಯಬೇಕಿದ್ದ ಪರೀಕ್ಷೆಯನ್ನು ತೋಟಗಾರಿಕೆ ವಿವಿಯ ಆಡಳಿತ ಮಂಡಳಿ ಯಾವುದೇ ಪೂರ್ವ ಸೂಚನೆ ನೀಡದೆ ಮುಂದೂಡಿತ್ತು. ಇದರಿಂದ ಅಸಮಾಧಾನಗೊಂಡ ಅಭ್ಯರ್ಥಿಗಳು ವಿವಿಯ ನಡೆಗೆ ಕಿಡಿಕಾರಿದರು. ವಿವಿಯಲ್ಲಿ ಖಾಲಿ ಇದ್ದ 21 ಹುದ್ದೆಗೆ ರಾಜ್ಯಾದ್ಯಂತ ಸುಮಾರು 800ಕ್ಕೂ ಜನರು ಅರ್ಜಿ ಹಾಕಿದ್ದರು.
ಇದನ್ನೂ ಓದಿ: JDS Pancharatna: ಆನೇಕಲ್ನಲ್ಲಿ ಪಂಚರತ್ನ ಯಾತ್ರೆ ಯಶಸ್ಸಿಗಾಗಿ ಕುರಿ ಬಲಿ ಕೊಟ್ಟ ಅಭಿಮಾನಿಗಳು
ಆದರೆ, ಪರೀಕ್ಷೆ ಮುಂದೂಡಿರುವ ಬಗ್ಗೆ ಪರೀಕ್ಷಾ ಅಭ್ಯರ್ಥಿಗಳಿಗೆ ಮಾಹಿತಿ ನೀಡದೆ ಇರುವುದು ಆಕ್ರೋಶಕ್ಕೆ ಕಾರಣವಾಗಿತ್ತು. ಈ ಮಧ್ಯೆ ವಿಶ್ವವಿದ್ಯಾಲಯ ಕುಲಸಚಿವರ ಜತೆ ಪರೀಕ್ಷಾರ್ಥಿಗಳು ವಾಗ್ವಾದ ನಡೆಸಿದರು. ಇದೆ ವೇಳೆ ಆಡಳಿತ ಮಂಡಳಿ ಎಡವಟ್ಟಿಗೆ ವಿವಿ ಕುಲಪತಿ ವಿಷಾದ ವ್ಯಕ್ತಪಡಿಸಿದ್ದಾರೆ. ಪರೀಕ್ಷೆ ಮುಂದೂಡಿದ ಬಗ್ಗೆ ವಿವಿಯ ವೆಬ್ಸೈಟ್ ಹಾಗೂ ಪತ್ರಿಕೆಗಳಲ್ಲಿ ಪ್ರಕಟಣೆಯನ್ನು ಹೊರಡಿಸಲಾಗಿತ್ತು ಎಂದೂ ಸಮಜಾಯಿಷಿ ನೀಡಿದ್ದಾರೆ.
ಜತೆಗೆ ಅಭ್ಯರ್ಥಿಗಳ ಇ-ಮೇಲ್ಗೂ ಮಾಹಿತಿ ರವಾನಿಸಲಾಗಿತ್ತು. ಸುಮಾರು 40 ಅಭ್ಯರ್ಥಿಗಳದ್ದು ಮಾತ್ರ ಇಮೇಲ್ ಇಲ್ಲದ ಕಾರಣಕ್ಕೆ ಅವರಿಗೆ ಮಾಹಿತಿಯನ್ನು ಕಳುಹಿಸಲಾಗಿಲ್ಲ ಎಂದು ಕಾರಣ ನೀಡಿದರು. ಆದರೆ ಯಾವುದೇ ಇ-ಮೇಲ್ ಬಂದಿಲ್ಲ ಎಂದು ಅಭ್ಯರ್ಥಿಗಳು ತಿಳಿಸಿದರು. ಮಾರ್ಚ್ 26ರ ಒಳಗಾಗಿ ಪರೀಕ್ಷೆ ನಡೆಸಲಾಗುವುದು, ಈ ಸಂಬಂಧ ಮುಂಚಿತವಾಗಿ ಮಾಹಿತಿ ನೀಡಲಾಗುವುದು ಎಂದು ಕುಲಸಚಿವರು ಭರವಸೆ ನೀಡಿದರು.
ಬೆಂಗಳೂರಿನ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ