ಬೆಂಗಳೂರು: ಬಿಬಿಎಂಪಿ ವಾರ್ಡ್ ಮರುವಿಂಡಗಣೆ ಪಟ್ಟಿಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಲಭಿಸಿದೆ. 2011ರಲ್ಲಿ ಕೊನೆಯ ಬಾರಿ ಜನಗಣತಿ ನಡೆಸಲಾಗಿತ್ತು, ಆಗಿನ ಜನಸಂಖ್ಯೆ ಆಧಾರವಾಗಿ ಈಗ ವಾರ್ಡ್ ಮರುವಿಂಡಗಣೆ ಮಾಡಲಾಗಿದ್ದು, ವಾರ್ಡ್ಗ ಸಂಖ್ಯೆ 198ರಿಂದ 243ಕ್ಕೆ ಏರಿಕೆಯಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ರಾಜ್ಯಪತ್ರದಲ್ಲಿ ಸದ್ಯ ಕೇವಲ ವಾರ್ಡ್ಗಳ ನಕ್ಷೆ ಹಾಗೂ ಗಡಿಗಳ ಮಾಹಿತಿ ತಿಳಿಸಲಾಗಿದೆ, ಪೂರ್ಣ ಮಾಹಿತಿ ಜಂಟಿ ಆಯುಕ್ತರ ಕಚೇರಿಯಲ್ಲಿ ಲಭಿಸಲಿದೆ. ವೆಬ್ಸೈಟ್ ಸದ್ಯಕ್ಕೆ ಓಪನ್ ಆಗುತ್ತಿಲ್ಲ, ಸಂಜೆ ನಂತರ ಮಾಹಿತಿ ಲಭಿಸಲಿದೆ. ಶನಿವಾರ ಈ ಕುರಿತು ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಹೊರಡಿಸುತ್ತೇವೆ. ಯಾವುದೇ ಆಕ್ಷೇಪಣೆಗಳಿದ್ದಲ್ಲಿ ವಿಕಾಸಸೌಧದ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಸಲ್ಲಿಸಬೇಕು. ಬಿಬಿಎಂಪಿಯಲ್ಲಿ ಆಕ್ಷೇಪಣೆ ಸಲ್ಲಿಸಲು ಸದ್ಯ ಅವಕಾಶ ಇಲ್ಲ. ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ಇದೆ ಎಂದು ತಿಳಿಸಿದರು.
ವಾರ್ಡ್ಗಳಿಗೆ ಇತಿಹಾಸ ಪುರುಷರ ಹೆಸರು ಯಾವ ಆಧಾರದಲ್ಲಿ ಇಡಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು
ಜನರ ಭಾವನೆ ಆಧರಿಸಿ ಹೆಸರಿಡಲಾಗಿದೆ, ಹೆಸರು ಬದಲಾಗಬೇಕಾದರೆ ಜನರು ಆಕ್ಷೇಪಣೆ ಸಲ್ಲಿಸಲಿ ಎಂದರು. ಜಕ್ಕಸಂದ್ರ ವಾರ್ಡ್ನಲ್ಲಿ ವೈಟ್ ಟಾಪಿಂಗ್ ರಸ್ತೆ ಅಗೆದು ಡಾಂಬರು ಹಾಕುವ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಪ್ರತಿಕ್ರಿಯೆ ನೀಡಲಾಗುವುದು ಎಂದು ತಿಳಿಸಿದರು.
ಇನ್ನು ಪ್ರಧಾನಿ ಸಂಚರಿಸಿದ ರಸ್ತೆ ಕುಸಿತದ ಬಗ್ಗೆ ಪ್ರತಿಕ್ರಿಯಿಸಿದ ಅವರು, 6 ಕೋಟಿ ರೂಪಾಯಿ ರಸ್ತೆ ಮಾಡಿದ್ದಕ್ಕೂ ಈ ಪ್ಯಾಚ್ ವರ್ಕ್ಗೂ ಸಂಬಂಧವಿಲ್ಲ, ಗುಂಡಿ ಮುಚ್ಚುವಾಗ ಇದ್ದ ಒಳಚರಂಡಿ ಕಾಮಗಾರಿಯನ್ನು ಮಾಡಿಲ್ಲ, ಕಳಪೆ ಕಾಮಗಾರಿ ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ವರದಿ ಬಂದ ನಂತರ ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಲಾಗುವುದು ಎಂದರು.
ಇದನ್ನೂ ಓದಿ | ಬಿಬಿಎಂಪಿ 243 ವಾರ್ಡ್ ರಚನೆಯಾಗಿದ್ದು ಸಂಖ್ಯಾಶಾಸ್ತ್ರದ ಆಧಾರದಲ್ಲಿ!