Site icon Vistara News

Bengaluru Bandh : ಫೀಲ್ಡಿಗಿಳಿದ ರ‍್ಯಾಪಿಡೋ ಚಾಲಕರು; ಪ್ರತಿಭಟನಾಕಾರರಿಂದ ಹೊಡಿಬಡಿ

Bengaluru bandh Rapido Assaulted by drivers

ಬೆಂಗಳೂರು: ರಾಜ್ಯ ಖಾಸಗಿ ಸಾರಿಗೆ ಒಕ್ಕೂಟದ ವತಿಯಿಂದ ಸೋಮವಾರ (ಸೆಪ್ಟೆಂಬರ್‌ 11) ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಲಾಗಿದೆ. ಖಾಸಗಿ ಬಸ್‌, ಆಟೋ, ಓಲಾ, ಉಬರ್‌ನಂತಹ ಕ್ಯಾಬ್‌ಗಳ ಓಡಾಟ ಸ್ಥಗಿತಗೊಂಡಿವೆ. ಇದನ್ನೇ ಬಂಡವಾಳ ಮಾಡಿಕೊಂಡ ರ‍್ಯಾಪಿಡೋ ಚಾಲಕರು ರಸ್ತೆಗಿಳಿದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪ್ರತಿಭಟನಾಕಾರರು ರ‍್ಯಾಪಿಡೋ ಚಾಲಕರನ್ನು ಅಡ್ಡಗಟ್ಟಿ ಮನಬಂದಂತೆ ಥಳಿಸುತ್ತಿದ್ದಾರೆ.

ಚಾಲುಕ್ಯ ಸರ್ಕಲ್‌ ಫ್ಲೈಓವರ್‌ ಮೇಲೆ ಬರುತ್ತಿದ್ದ ರ‍್ಯಾಪಿಡೋ ಚಾಲಕನನ್ನು ತಡೆದ ಆಟೋ ಚಾಲಕರು ಹಲ್ಲೆ ನಡೆಸಿದ್ದಾರೆ. ಇದನ್ನೂ ಪ್ರಶ್ನಿಸಲು ಮುಂದಾದ ಪ್ರಯಾಣಿಕನಿಗೂ ಚಾಲಕರು ಹೊಡೆದಿದ್ದಾರೆ. ಇತ್ತ ಗಲಾಟೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರನ್ನು ಚದುರಿಸಿದ್ದಾರೆ. ಹಲ್ಲೆಗೊಳಗಾದವರನ್ನು ಅಲ್ಲಿಂದ ಕಳಿಸಿದ್ದಾರೆ.

ರ‍್ಯಾಪಿಡೋ ಸ್ಕೂಟರ್‌ ಅಡ್ಡಗಟ್ಟಿ ಚಾಲಕ-ಪ್ರಯಾಣಿಕನಿಗೆ ಹಲ್ಲೆ

ಇತ್ತ ಮೌರ್ಯ ಸರ್ಕಲ್‌ನಲ್ಲಿ ಮಾರಾಮಾರಿಯೇ ನಡೆದಿದೆ. ಟ್ಯಾಕ್ಸಿ ಚಾಲಕನಿಗೆ ಕೆಲವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮತ್ತೊಬ್ಬ ರ‍್ಯಾಪಿಡೋ ಚಾಲಕನನ್ನು ಸ್ಕೂಟರ್‌ನಿಂದ ಕೆಳಗಿಳಿಸಿ ಹಲ್ಲೆ ನಡೆಸಿದ್ದಲ್ಲದೇ, ಸ್ಕೂಟರ್‌ ಎಳೆದಾಡಿ ಪುಡಿ ಪುಡಿ ಮಾಡಿದ್ದಾರೆ.

ಚಾಲಕನೊಬ್ಬ ವೈಟ್ ಬೋರ್ಡ್ ಕಾರಲ್ಲಿ ಪ್ರಯಾಣಿಕನನ್ನು ಕರೆದೊಯ್ತಿದ್ದಾಗ ಅಡ್ಡಗಟ್ಟಿದ ಪ್ರತಿಭಟನಾಕಾರರು ಕಾರು ಕೀ ಕಸಿದು, ಕಾರಿನ ವ್ಹೀಲ್ ಗಾಳಿ ತೆಗೆದು ಕಿರಿಕ್‌ ಮಾಡಿದ್ದಾರೆ. ಮಾತ್ರವಲ್ಲದೆ ಚಾಲಕ
ಕಾಲು ಮುಗಿದು ಬೇಡಿಕೊಂಡರೂ ಬಿಡದೆ ದರ್ಪ ತೋರಿದ್ದಾರೆ.

ಬೆಂಗಳೂರು: ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ವತಿಯಿಂದ ಸೋಮವಾರ (ಸೆಪ್ಟೆಂಬರ್‌ 11) ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿರುವುದರಿಂದ ರಾಜಧಾನಿಯ ಜನರಿಗೆ ಬಂದ್‌ ಬಿಸಿ ತಟ್ಟಿದೆ. ಭಾನುವಾರ ತಡರಾತ್ರಿಯಿಂದಲೇ ಖಾಸಗಿ ಬಸ್‌, ಆಟೋ, ಓಲಾ, ಉಬರ್‌ನಂತಹ ಕ್ಯಾಬ್‌ಗಳ ಓಡಾಟ ಸ್ಥಗಿತಗೊಂಡಿದೆ. ಇದರ ಬೆನ್ನಲ್ಲೇ ಏರ್‌ಪೋರ್ಟ್‌ ಟ್ಯಾಕ್ಸಿಯೊಂದರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಏರ್‌ಪೋರ್ಟ್‌ನಿಂದ ಆಗಮಿಸುವ ವೇಳೆ ಏರ್‌ಪೋರ್ಟ್‌ ಟ್ಯಾಕ್ಸಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಪ್ರದ್ಯುಮ್ನ ಎಂಬುವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. “ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಗೆ ಏನಾಗಿದೆ? ಏರ್‌ಪೋರ್ಟ್‌ನಿಂದ ಆಗಮಿಸುವಾಗ ನಾನು ಸಂಚರಿಸುತ್ತಿದ್ದ ಟ್ಯಾಕ್ಸಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ನಾನು, ನನ್ನ ಹೆಂಡತಿ ಹಾಗೂ 6 ವರ್ಷದ ಮಗನು ದಾಳಿಯಿಂದ ಭೀತಿಗೊಳಗಾದೆವು. ಟ್ಯಾಕ್ಸಿಯ ಗಾಜುಗಳು ಪುಡಿಪುಡಿಯಾಗಿವೆ. ಭಾನುವಾರ ರಾತ್ರಿಯಿಂದಲೇ ಬಂದ್‌ ಇರುವುದಾದರೆ, ಸೂಕ್ಷ್ಮ ಪ್ರದೇಶಗಳಲ್ಲಿ ಏಕೆ ಪೊಲೀಸರನ್ನು ನಿಯೋಜಿಸಿಲ್ಲ” ಎಂದು ಅವರು ಪ್ರಶ್ನಿಸಿದ್ದಾರೆ.

ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಿ ಬಂದ್‌ಗೆ ಕರೆ ನೀಡಿರುವುದರಿಂದ ಏರ್‌ಪೋರ್ಟ್‌ ಟ್ಯಾಕ್ಸಿಯ ಓಡಾಟ ಕಂಡು ಪ್ರತಿಭಟನಾಕಾರರು ಆಕ್ರೋಶಗೊಂಡು ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ಟ್ಯಾಗ್‌ ಮಾಡಿ ಪ್ರದ್ಯುಮ್ನ ಅವರು ದೂರು ನೀಡಿದ್ದಾರೆ. ಭಾನುವಾರ ಮಧ್ಯರಾತ್ರಿಯಿಂದಲೇ ಬಸ್‌, ಶಾಲಾ ವಾಹನ, ಆಟೋ, ಕ್ಯಾಬ್‌ಗಳ ಸೇವೆ ಸ್ಥಗಿತವಾಗಿದ್ದು, ಜನ ಪರದಾಡುತ್ತಿದ್ದಾರೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್‌ ನಿಲ್ದಾಣಗಳಿಂದ ಜನ ಬೇರೆ ತೆರಳಲು ಪರದಾಟ ಅನುಭವಿಸುತ್ತಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ಶಕ್ತಿ ಯೋಜನೆಯಿಂದ ನಷ್ಟವಾದ ಪರಿಣಾಮ ಬೆಂಗಳೂರು ಬಂದ್‌ಗೆ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟ ಕರೆ ನೀಡಿದೆ. ಆದಾಗ್ಯೂ ಹೆಚ್ಚುವರಿ ಸಾರಿಗೆ ಬಸ್‌ಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಆದರೂ, ಜನರಿಗೆ ತೊಂದರೆಯಾಗುತ್ತಿದೆ.

ಬಾಡಿಗೆ ಮಾಡುತ್ತಿದ್ದ ಚಾಲಕನ ತಡೆದು ಸನ್ಮಾನಿಸಿ ಬೇಕಾಬಿಟ್ಟಿ ಹಲ್ಲೆ, ಕಾರಿಗೆ ಮೊಟ್ಟೆ ಎಸೆತ

ಖಾಸಗಿ ವಾಹನಗಳ ಚಾಲಕರು ಮತ್ತು ಮಾಲೀಕರು ಕರೆ ನೀಡಿರುವ ಬೆಂಗಳೂರು ಬಂದ್‌ (Bengaluru bandh) ಕೆಲವೊಂದು ಕಡೆಗಳಲ್ಲಿ ಹಿಂಸಾತ್ಮಕ ರೂಪ (Bandh Turns Violent) ಪಡೆದಿದೆ. ಬಂದ್‌ ಕರೆ ಮೀರಿ ವಾಹನ ಬಾಡಿಗೆಗೆ ಇಳಿಸಿದವರ ಮೇಲೆ ಕಲ್ಲು, ಮೊಟ್ಟೆ ತೂರಾಟ (Stones and egss pelted) ಮಾತ್ರವಲ್ಲದೆ ಕೆಲವು ಕಡೆ ಹಲ್ಲೆಯೂ ನಡೆದಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ (Bangalore Airport) ಪ್ರಯಾಣಿಕರೊಬ್ಬರು ಬಿಟ್ಟು ಬರಲು ಬಂದಿದ್ದ ಚಾಲಕನಿಗೆ ಪ್ರತಿಭಟನಾಕಾರರು ಮೊದಲು ಸನ್ಮಾನಿಸಿ ಬಳಿಕ ಚೆನ್ನಾಗಿ ಥಳಿಸಿ ತಮ್ಮ ಆಕ್ರೋಶ ಹೊರಗೆಡಹಿದ್ದಾರೆ. ಏರ್‌ಪೋರ್ಟ್‌ನಲ್ಲಿ ಸೋಮವಾರ ಬಾಡಿಗೆ ವಾಹನಗಳ ಓಡಾಟ ವಿರಳವಾಗಿತ್ತು. ಬೆಳಗಿನಿಂದಲೇ ಪ್ರತಿಭಟನಾಕಾರರು ಅಲ್ಲಿ ಕಾಯುತ್ತಿದ್ದರು.

ಈ ನಡುವೆ, ಒಬ್ಬ ಚಾಲಕರು ವ್ಯಕ್ತಿಯೊಬ್ಬರನ್ನು ವಿಮಾನ ನಿಲ್ದಾಣಕ್ಕೆ ಕರೆತಂದು ಮರಳುತ್ತಿದ್ದಾಗ ಪ್ರತಿಭಟನಾಕಾರರು ಅವರನ್ನು ತಡೆದರು. ಬಾ ಚಿನ್ನ, ಬಾ ಕಂದ ಎಂದು ಕರೆದು ಕಾರಿನಿಂದ ಇಳಿಸಿದ ಅವರು ಮೊದಲು ಮೈಸೂರು ಪೇಟ ಶಾಲು ತೊಡಿಸಿದರು. ಬಂದ್‌ ಇದ್ದರೂ ಜನರ ಸೇವೆ ಮಾಡ್ತಾ ಇದ್ದೀಯಲ್ಲಾ.. ಸನ್ಮಾನ ಮಾಡುತ್ತಿದ್ದೇವೆ ಎಂದು ಹೇಳಿದರು.

ಆ ಚಾಲಕ ನಾನು ಇವರನ್ನು ಬಿಟ್ಟು ಹೋಗಲು ಬಂದಿದ್ದೇನೆ. ಇನ್ನು ಬಾಡಿಗೆ ಮಾಡುವುದಿಲ್ಲ, ಕಾಲಿಗೆ ಬೀಳುತ್ತೇನೆ ಎಂದೆಲ್ಲ ಅಂಗಲಾಚಿದರೂ ಬಿಡದೆ, ಇಲ್ಲ ಕಣಾ.. ಸನ್ಮಾನ ಮಾಡ್ತಾ ಇದೀವಿ ನಿಂಗೆ ಎಂದು ಹೇಳಿ ಮಾಲೆ ತೊಡಿಸಿ, ಪೇಟ ಇಟ್ಟು ಸನ್ಮಾನಿಸಿದರು. ಆದರೆ, ಬಳಿಕ ಬೇಕಾಬಿಟ್ಟಿ ಹಲ್ಲೆ ನಡೆಸಿದರು.

ಹಲ್ಲೆ ಜೊತೆಗೆ ಅವಾಚ್ಯವಾಗಿ, ನಿಂದಿಸಿ, ಮುಖಕ್ಕೆ ಎಂಜಲಿನಿಂದ ಉಗಿದಿದ್ದಾರೆ. ಚಾಲಕನಿಗೆ ಅವಮಾನ ಮಾಡಿ ನಿಂದಿಸಿರುವ ವೀಡಿಯೋ ವೈರಲ್ ಆಗಿದೆ. ಬೆಂಗಳೂರಿನ ಹಲವು ಭಾಗಗಳಲಿ ಈ ರೀತಿಯ ಕೃತ್ಯಗಳು ಹೆಚ್ಚಾಗಿವೆ.

ಬೆಂಗಳೂರಿನಲ್ಲಿ ಪ್ರತಿಭಟನೆಗೆ ಸಜ್ಜಾಗಿರುವ ಆಟೊ ಚಾಲಕರು

ಟೌನ್‌ ಹಾಲ್‌ ಬಳಿ ಆಟೋ ಚಾಲಕರ ಮೇಲೆ ಹಲ್ಲೆ

ಈ ನಡುವೆ ಬೆಂಗಳೂರಿನ ಹಲವು ಭಾಗಗಲ್ಲಿ ಬಾಡಿಗೆ ಮಾಡುವ ಖಾಸಗಿ ವಾಹನಗಳನ್ನು ತಡೆದು ಚಾಲಕರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಸಂಘಟನೆಗಳ ಪದಾಧಿಕಾರಿಗಳೆಂದು ಹೇಳಿಕೊಂಡ ಕೆಲವು ವ್ಯಕ್ತಿಗಳು ಗೂಂಡಾಗಿರಿಯ ವರ್ತನೆ ತೋರುತ್ತಿದ್ದಾರೆ. ಟೌನ್ ಹಾಲ್ ಬಳಿ ಓಡಾಡ್ತಿದ್ದ ಆಟೋ ಡ್ರೈವರ್ ಗಳ ಮೇಲೆ ಹಲ್ಲೆ ಮಾಡಲಾಗಿದೆ. ಪೊಲೀಸ್ ಭದ್ರತೆಯ ನಡುವೆಯೂ ಅಟೋಗಳಿಗೆ ಅಡ್ಡ ಹಾಕಿ ಧಮ್ಕಿ ಹಾಕಲಾಗುತ್ತಿದೆ. ಆಟೋ ಗಾಜುಗಳನ್ನು ಒಡೆದು ವಾಹನ ಚಾಲಕರಿಗೆ ಹಲ್ಲೆ ಮಾಡಲಾಗಿದೆ. ಎಸ್.ಜೆ. ಪಾರ್ಕ್ ಪೊಲೀಸರು ಕೂಡಲೇ ಮೂವರು ಆರೋಪಿಗಳನ್ನ ವಶಕ್ಕೆ ಪಡೆದು ಹೊಯ್ಸಳ ವಾಹನದಲ್ಲಿ ಕರೆದೊಯ್ದರು.

ಇದನ್ನೂ ಓದಿ: Bengaluru Bandh : ಖಾಸಗಿ ವಾಹನ ಬಂದ್‌ ನಡುವೆ ಮೆಟ್ರೊಗೆ ಜನರ ದೌಡು; ಪ್ರತಿ 5 ನಿಮಿಷಕ್ಕೊಂದು ರೈಲು

ಹೆಬ್ಬಾಳದಲ್ಲಿ ಕಾರಿನ ಒಳಗೆ ಮೊಟ್ಟೆ ಎಸೆತ, ಟಯರ್‌ ಗಾಳಿ ತೆಗೆದು ಕಿರಿಕಿರಿ

ಬಂದ್ ಗೆ ಬೆಂಬಲ ನೀಡದೇ ರಸ್ತೆಗಿಳಿದ ಚಾಲಕರಿಗೆ ಮೊಟ್ಟೆ ಎಸೆದಿರುವ ಘಟನೆ ಹೆಬ್ಬಾಳದಲ್ಲಿ ನಡೆದಿದೆ. ಇತ್ತ ರೇಸ್ ಕೋರ್ಸ್ ಬಳಿ ಕಾರಿನ ಗಾಜು ಹೊಡೆದು ವಿಕೃತಿ ಮೆರೆಯಲಾಗಿದೆ. ರಸ್ತೆಗಿಳಿದ ಕ್ಯಾಬ್ ಗ್ಲಾಸ್ ಪುಡಿ ಮಾಡಲಾಗಿದೆ. ಇನ್ನು ಕೆಲವು ಕಡೆ ವಾಹನಗಳನ್ನು ತಡೆ ಟಯರ್‌ಗಳ ಗಾಳಿ ತೆಗೆದು ಕಿರಿಕಿರಿ ಮಾಡಲಾಗಿದೆ. ಈ ನಡುವೆ, ಖಾಸಗಿ ವಾಹನಗಳಿಲ್ಲದೆ ಮಕ್ಕಳನ್ನು ಶಾಲೆಗೆ ಕರೆದೊಯ್ಯವುದು ಹೆತ್ತವರಿಗೆ ಕಷ್ಟವಾಗಿದೆ. ಹೆಚ್ಚಿನ ಕಡೆ ಹೆತ್ತವರೇ ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದು ಕಾಣಿಸುತ್ತಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version