Site icon Vistara News

Women Journalists: ಅನಕ್ಷರಸ್ಥ ಹೆಣ್ಣು ಮಕ್ಕಳಲ್ಲಿ ಇರುವ ಧೈರ್ಯ ವಿದ್ಯಾವಂತ ಹೆಣ್ಣುಮಕ್ಕಳಲ್ಲಿ ಏಕಿಲ್ಲ?

Womens Day Programme in

ಬೆಂಗಳೂರು: ಅನಕ್ಷರಸ್ಥ ಹೆಣ್ಣು ಮಕ್ಕಳಲ್ಲಿ ಇರುವ ಧೈರ್ಯ ವಿದ್ಯಾವಂತ ಹೆಣ್ಣುಮಕ್ಕಳಲ್ಲಿ ಕಾಣುತ್ತಿಲ್ಲ. ವಿದ್ಯೆಯ ಜತೆಗೆ ಸಶಕ್ತರಾಗುವುದನ್ನೂ ಮಹಿಳೆಯರು ಕಲಿಯಬೇಕು ಎಂದು ನಿವೃತ್ತ ಐಎಎಸ್‌ ಅಧಿಕಾರಿ ನಾಗಾಂಬಿಕಾ ದೇವಿ ಸಲಹೆ (Women Journalists) ನೀಡಿದರು.

ಕರ್ನಾಟಕ ಪತ್ರಕರ್ತೆಯರ ಸಂಘ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಬುಧವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ, ಪತ್ರಕರ್ತೆಯರು, ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಣ್ಣುಮಕ್ಕಳನ್ನು ಓದಿಸುವುದು, ಅವರನ್ನು ಕೆಲಸಕ್ಕೆ ಕಳುಹಿಸುವುದೇ ಬಹಳ ದೊಡ್ಡ ಉಪಕಾರ ಎಂದು ಹೆಚ್ಚಿನ ಮನೆಗಳಲ್ಲಿ ಹಿರಿಯರು ತಿಳಿದುಕೊಂಡಿದ್ದಾರೆ. ಇಂಥ ಮನಃಸ್ಥಿತಿಯಿಂದ ಹೊರಬರಬೇಕು. ಐಎಎಸ್‌ ಅಧಿಕಾರಿಯಾಗಲಿ, ಪತ್ರಕರ್ತರಾಗಲಿ ಕೆಲಸದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಎಂಬುದಿಲ್ಲ. ಕೆಲಸ ಮಾಡುವ ಸ್ಥಳಗಳಲ್ಲಿ ಈ ತಾರತಮ್ಯ ಮತ್ಯಾಕೆ ಇರಬೇಕು ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: Borewell Tragedy: ವಿಜಯಪುರದ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದ 2 ವರ್ಷದ ಬಾಲಕ, ರಕ್ಷಿಸಲು ಹರಸಾಹಸ

ದಾಸ್ಯ ಮನೋಭಾವದಿಂದ ಮಹಿಳೆಯರು ಹೊರಬರಬೇಕು. ಅವಕಾಶವನ್ನು ಬೇರೆಯವರು ನೀಡುವುದಲ್ಲ. ಅವಕಾಶ ಪಡೆಯುವುದು ನಿಮ್ಮ ಹಕ್ಕು ಎಂದು ಅವರು ತಿಳಿಸಿದರು.

ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಬೃಂದಾ ಅಡಿಗ ಮಾತನಾಡಿ, ಎಲ್ಲ ಧರ್ಮಗಳ ಅಡಿಪಾಯ, ಮನೋಧರ್ಮ, ಚಿಂತನೆ ಪುರುಷ ಪ್ರಧಾನವಾಗಿದೆ. ಇದುವೇ ಜನರ ಯೋಚನೆ, ವರ್ತನೆ ಮತ್ತು ಭಾಷೆಯಲ್ಲಿ ವ್ಯಕ್ತವಾಗುತ್ತಿದೆ. ಬೈಗುಳದ ಭಾಷೆ ನೋಡಿದರೂ ಸ್ತ್ರೀ ನಿಂದನೆಯ ಭಾಷೆಯನ್ನೇ ಬಳಸಲಾಗುತ್ತದೆ. ಭಾಷೆಯ ಬಳಕೆಯ ರೀತಿ ಬದಲಾಗಬೇಕು. ಜಾತಿ ತಾರತಮ್ಯ ನಿಲ್ಲಬೇಕು. ತಿನ್ನುವ ಆಹಾರ, ಉಡುವ ಬಟ್ಟೆಯ ಕಾರಣಕ್ಕೆ ಮಾಡುವ ತಾರತಮ್ಯ ನಿಲ್ಲಬೇಕು ಎಂದು ತಿಳಿಸಿದರು.

ಕೆಲಸ ಮಾಡುವ ಮಹಿಳೆಯರು ಮಧ್ಯೆ ವಿಶ್ರಾಂತಿ ಪಡೆಯುವುದನ್ನು ಕಲಿಯಬೇಕು. ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಜತೆಗೆ ಮಾನಸಿಕ ಆರೋಗ್ಯ ಕೂಡಾ ಬಹಳ ಮುಖ್ಯ ಎಂದವರು ಕಿವಿಮಾತು ಹೇಳಿದರು.

ಇದನ್ನೂ ಓದಿ: Blast In Factory: ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟಕ್ಕೆ ಐವರು ಬಲಿ

ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಲಿಂಗರಾಜ ಗಾಂಧಿ ಮಾತನಾಡಿ, ಮಾನಸಿಕ ಸಂಕೋಲೆಯಲ್ಲಿ ಎಲ್ಲರೂ ಸಿಲುಕಿದ್ದೇವೆ. ಈ ಸಂಕೋಲೆಯಿಂದ ಬಿಡುಗಡೆಯಾಗದೇ ಸಶಕ್ತರಾಗಲು ಸಾಧ್ಯವಿಲ್ಲ. ಇದು ಪುರುಷ ಮತ್ತು ಮಹಿಳೆ ಎರಡೂ ಕಡೆಯಿಂದ ಆಗಬೇಕು. ವೈಚಾರಿಕತೆ ಮತ್ತು ಪ್ರಜಾಸತ್ತಾತ್ಮಕ ಚಿಂತನೆಯಿಂದ ಸಮಾನತೆ ಸಾಧ್ಯ ಎಂದು ತಿಳಿಸಿದರು.

ಹಿರಿಯ ಪತ್ರಕರ್ತೆಯರಾದ ಗಾಯತ್ರಿ ಚಂದ್ರಶೇಖರ್‌, ಅನಿತಾ ಎಚ್‌. ಹಾಗೂ ಚಂದ್ರಯಾನ–3 ಇಸ್ರೋ ಡೆಪ್ಯುಟಿ ಪ್ರಾಜೆಕ್ಟ್‌ ಡೈರೆಕ್ಟರ್ ರೂಪಾ ಎಂ.ವಿ., ನಾಗರಿಕ ಹಕ್ಕುಗಳ ಹೋರಾಟಗಾರ್ತಿ ಕಾತ್ಯಾಯಿನಿ ಚಾಮರಾಜ್‌ ಅವರನ್ನು ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಇದನ್ನೂ ಓದಿ: HP Laptop: ಎಐ ತಂತ್ರಜ್ಞಾನದೊಂದಿಗೆ ಹೆಚ್‌ಪಿಯ ಹೊಸ ಲ್ಯಾಪ್ ಟಾಪ್! ಎಷ್ಟು ಇದರ ಬೆಲೆ?

ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವ ಟಿ. ಜವರೇಗೌಡ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಎನ್‌. ನರಸಿಂಹಮೂರ್ತಿ, ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಪ್ರಧಾನ ಕಾರ್ಯದರ್ಶಿ ಮಂಜುಶ್ರೀ ಕಡಕೋಳ, ಉಪಾಧ್ಯಕ್ಷೆ ವಾಣಿಶ್ರೀ ಜೆ.ಎನ್‌., ಸಹಕಾರ್ಯದರ್ಶಿ ಗೊರೂರು ಪಂಕಜ, ಖಜಾಂಚಿ ಹಲೀಮತ್‌ ಸಾದಿಯಾ, ಪದಾಧಿಕಾರಿಗಳಾದ ಚೇತನಾ ಬೆಳಗೆರೆ, ಶೀಲಾ ಸಿ. ಶೆಟ್ಟಿ, ಶಾಂತಾ ತಮ್ಮಯ್ಯ, ಮಾಜಿ ಅಧ್ಯಕ್ಷೆ ಶಾಂತಲಾ ಧರ್ಮರಾಜ್‌, ಮಾಜಿ ಪ್ರಧಾನ ಕಾರ್ಯದರ್ಶಿ ಮಾಲತಿ ಭಟ್‌ ಉಪಸ್ಥಿತರಿದ್ದರು.

Exit mobile version