Site icon Vistara News

ICC World Cup 2023: ಕ್ರಿಕೆಟ್​ ಅಭಿಮಾನಿಗಳಿಗೆ ಬಿಗ್​ ಆಫರ್ ನೀಡಿದ ನಮ್ಮ ಮೆಟ್ರೋ

namma metro

ಬೆಂಗಳೂರು: ಕ್ರಿಕೆಟ್​ ಪ್ರೇಮಿಗಳಿಗೆ ನಮ್ಮ ಮೆಟ್ರೋ(Namma Metro) ರೈಲು ನಿಗಮ ನಿಯಮಿತ (BMRCL) ಬಿಗ್​ ಆಫರ್​ ನೀಡಿದೆ. ಬೆಂಗಳೂರಿನಲ್ಲಿ ವಿಶ್ವಕಪ್ ಪಂದ್ಯಾವಳಿ (World Cup Cricket 2023) ಇರುವ ದಿನ ಮೆಟ್ರೋ ರೈಲು (Metro Train) ಸೇವೆ ಅವಧಿ ವಿಸ್ತರಣೆ ಮತ್ತು ವಿಶೇಷ ದರದ ರಿಯಾಯಿತಿಯನ್ನೂ ಘೋಷಿಸಲಾಗಿದೆ. ಕ್ರಿಕೆಟ್​ ಪ್ರೇಮಿಗಳು ಪಂದ್ಯವನ್ನು ವೀಕ್ಷಿಸಿದ ಬಳಿಕ ತಮ್ಮ ನಿವಾಸಕ್ಕೆ ತೆರಳಲು ಕಷ್ಟಕರ ಆಗಬಾರದೆಂದು ಮೆಟ್ರೋ ಸೇವೆ ಅವಧಿ ವಿಸ್ತರಣೆ ಮಾಡಿದೆ.

ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ವಿಶ್ವಕಪ್​ ಪಂದ್ಯಗಳು ಅಕ್ಟೋಬರ್ 20, 26, ನವೆಂಬರ್ 4, 9, 12ರಂದು ನಡೆಯಲಿವೆ. ವಿಶ್ವಕಪ್​ನ ಕೊನೆಯ ಲೀಗ್​ ಪಂದ್ಯ ಇಲ್ಲೇ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಮತ್ತು ನೆದರ್ಲೆಂಡ್ಸ್​ ಸೆಣಸಾಡಲಿವೆ. ಪಂದ್ಯಾವಳಿ ನಡೆಯುವ ಎಲ್ಲ ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ವಿಶೇಷ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು, ಬರುವ ಮತ್ತು ಹೋಗುವ ಪ್ರಯಾಣಕ್ಕೆ 50 ರೂ. ಟಿಕೆಟ್ ನಿಗದಿಪಡಿಸಿ ಬಿಎಂಆರ್​ಸಿಎಲ್ ಪ್ರಕಟಣೆ ಹೊರಡಿಸಿದೆ. ಕ್ರಿಕೆಟ್ ಪಂದ್ಯದ ದಿನದಂದು ಬೆಳಗ್ಗೆ 7 ಗಂಟೆಗೆ ಪೇಪರ್ ಟಿಕೆಟ್​ ಲಭ್ಯವಿರಲಿದೆ.

ಬೆಂಗಳೂರಿನ ಎಲ್ಲ ಮೆಟ್ರೋ ನಿಲ್ದಾಣಗಳಲ್ಲೂ ಪೇಪರ್ ಟಿಕೆಟ್​ ಲಭ್ಯವಿರಲಿದೆ. ಪೇಪರ್ ಕಾರ್ಡ್​ಗಳ ಜತೆಗೆ ಸ್ಮಾರ್ಟ್ ಕಾರ್ಡ್ ಹಾಗೂ ಎನ್​ಸಿಎಂಸಿ ವ್ಯವಸ್ಥೆಯನ್ನು ಕೂಡ ಪ್ರಯಾಣಿಕರು ಪಡೆದುಕೊಳ್ಳಬಹುದೆಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

ಸ್ಟೇಡಿಯಂ ಸುತ್ತ ಭಾರಿ ಬಿಗಿ ಬಂದೋಬಸ್ತ್

ಪಂದ್ಯಗಳಿಗೆ ಭಾರಿ ಬಿಗಿ ಬಂದೋಬಸ್ತ್​ ಮಾಡಲಾಗಿದೆ. ಶುಕ್ರವಾರ ನಡೆಯುವ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ(PAK vs AUS) ವಿರುದ್ಧದ ಪಂದ್ಯ ಇಲ್ಲಿ ನಡೆಯುವ ಮೊದಲ ಪಂದ್ಯವಾಗಲಿದೆ. ಆದರೆ ಇಸ್ರೇಲ್ ಹಾಗೂ ಪ್ಯಾಲೆಸ್ತೀನಿಯರ(israel vs palestine) ನಡುವೆ ನಡೆಯುತ್ತಿರುವ ಭಾರಿ ಘರ್ಷಣೆಗೆ ಬೆಂಬಲ ಸೂಚಿಸಿ ನಗರದ ಕೆಲವೆಡೆ ಪ್ರತಿಭಟನೆಗಳು ನಡೆದಿವೆ. ಹೀಗಾಗಿ ಬೆಂಗಳೂರು ಪೊಲೀಸರು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಹೈಅಲರ್ಟ್ ಘೋಷಿಸಿದ್ದಾರೆ.

ಇದನ್ನೂ ಓದಿ IND vs BAN: ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿ ಭಾರತ; ಬಾಂಗ್ಲಾ ಎದುರಾಳಿ

ಮೂಲಗಳ ಪ್ರಕಾರ ಪಂದ್ಯ ನಡೆಯುವ ವೇಳೆ ಕೆಲ ಸಂಘಟನೆಯ ವ್ಯಕ್ತಿಗಳು ಇಸ್ರೇಲ್ ಹಾಗೂ ಪ್ಯಾಲೆಸ್ತೀನಿಯಕ್ಕೆ ಬೆಂಬಲ ಸೂಚಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಸಿಗುವಂತೆ ಮಾಡಲು ಯೋಜನೆ ರೂಪಿಸಿದ್ದಾರೆ ಎಂದು ಸುಳಿವು ಸಿಕ್ಕಿದೆ. ಇದೇ ಕಾರಣ ಸ್ಟೇಡಿಯಂಗೆ ಪ್ರವೇಶ ಪಡೆಯುವ ವ್ಯಕ್ತಿಗಳಿಗೆ ಯಾವುದೇ ಬಿತ್ತಿ ಪತ್ರಗಳನ್ನು ತೆಗೆದುಕೊಂಡು ಬರದಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಮ್ಯಾಚ್ ವಿಕ್ಷಣೆಗೆ ಬರುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಡಲು ನಿರ್ಧರಿಸಿದ್ದಾರೆ.

ಅಕ್ಟೋಬರ್​ 16ರ ಸಂಜೆ ಬೆಂಗಳೂರಿನ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದ ಬಳಿ ನೂರಾರು ಜನರು ಜಮಾಯಿಸಿ ಗಾಜಾ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಯನ್ನು ಭಾರತ ಖಂಡಿಸಬೇಕು ಎಂದು ಒತ್ತಾಯಿಸಿ ಜಾಥ ಮಾಡಿದ್ದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಲು ಪಂದ್ಯದ ನಡುವೆಯೂ ಈ ರೀತಿಯ ಘಟನೆ ನಡೆಯುವ ಸಾಧ್ಯತೆಯನ್ನು ಅರಿತ ನಗರದ ಪೊಲೀಸರು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಭದ್ರತೆ ಕಲ್ಪಿಸಿದ್ದಾರೆ.

Exit mobile version