Site icon Vistara News

National Press Day: ಹಿರಿಯ ಪತ್ರಕರ್ತ ಭಾಸ್ಕರ್‌ ರಾವ್‌ಗೆ KUWJ ಗೌರವ

Tributes to Baskar Rao

ಬೆಂಗಳೂರು: ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಹಿರಿಯ ಪತ್ರಕರ್ತರಾದ ಎಂ.ಕೆ. ಭಾಸ್ಕರ್‌ ರಾವ್‌ ಅವರನ್ನು ಜೆಪಿ ನಗರದಲ್ಲಿರುವ ಅವರ ಮನೆಯಂಗಳಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ (KUWJ) ಗೌರವಿಸಲಾಯಿತು.

ಕೆಯುಡಬ್ಲ್ಯೂಜೆ ಗೌರವ ಸ್ವೀಕರಿಸಿ ಮಾತನಾಡಿದ ಎಂ.ಕೆ. ಭಾಸ್ಕರ್‌ ರಾವ್‌ ಅವರು, ರಾಷ್ಟ್ರೀಯ ಪತ್ರಿಕಾ ದಿನಾಚರಣೆ ದಿನವೇ ತಮಗೆ ಈ ಗೌರವ ದೊರೆತಿರುವುದು ತವರಿನಿಂದ ಬಂದ ಅಭಿಮಾನದ ಸನ್ಮಾನ ಎಂದು ಭಾವುಕರಾದರು.
ನಾನು ಕೆಯುಡಬ್ಲ್ಯೂಜೆ ಕಾರ್ಯದರ್ಶಿಯಾಗಿ, ಭಾರತೀಯ ಕಾರ್ಯನಿರತ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯನಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಹಾಗಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜತೆಗೆ ಅವಿನಾಭಾವ ಸಂಬಂಧವಿದೆ. ಆ ಕಾರಣಕ್ಕೆ ಈ ಸನ್ಮಾನವು ತನಗೆ ತವರಿನಿಂದ ದೊರೆತ ಸನ್ಮಾನ ಎಂದೇ ತಿಳಿಯುತ್ತೇನೆ ಎಂದರು.

ಪತ್ರಕರ್ತರಿಗೆ ಬದ್ಧತೆ ಬೇಕು

ಪತ್ರಕರ್ತರು ತಮ್ಮ ವೃತ್ತಿಜೀವನದಲ್ಲಿ ಛಾಪನ್ನು ಒತ್ತ ಬೇಕಾದರೆ ವೃತ್ತಿಜೀವನದಲ್ಲಿ ಶ್ರಮ ಮತ್ತು ಬದ್ಧತೆಗಳನ್ನು ದಿನವೂ ಪ್ರದರ್ಶಿಸಬೇಕಾಗುತ್ತದೆ. ಎಲ್ಲಾ ಪತ್ರಕರ್ತರು ಧರ್ಮ, ಜಾತಿ, ಪಕ್ಷ ಸೇರಿದಂತೆ ಸಮಾಜದ ವ್ಯವಸ್ಥೆಯಿಂದ ಹೊರಗುಳಿದು, ಸಾಮಾಜಿಕ ಅಭಿವೃದ್ಶಿಗೆ ಕಂಕಣಬದ್ಧರಾಗಬೇಕು ಎಂದು ಎಂದು ಭಾಸ್ಕರ್‌ ರಾವ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ | Raja Marga Column: ಚುಟುಕು ಕ್ರಿಕೆಟಿನ ‘ಕಪ್ಪು ವಜ್ರ’ ನಿಕೋಲಸ್ ಪೂರನ್

ಹಿರಿಯರ ಪತ್ರಕರ್ತರ ಆದರ್ಶ

ಕನ್ನಡ ಪತ್ರಿಕೋದ್ಯಮಕ್ಕೆ ಡಿವಿಜಿ, ತೀ.ತ.ಶರ್ಮ, ಖಾದ್ರಿ ಶಾಮಣ್ಣ, ಟಿಎಸ್‌ಆರ್, ಹಿರಿಯ ಸಾಹಿತಿ ತರಾಸು ಸೇರಿದಂತೆ ವಿವಿಧ ಗಣ್ಯರ ಕೊಡುಗೆ ಅಪಾರ. ಇಂಥ ಮಹನೀಯರ ಮಾರ್ಗದರ್ಶನದಲ್ಲಿ ಕನ್ನಡದ ಪತ್ರಿಕೋದ್ಯಮ ಉಜ್ವಲವಾಗಿ ಬೆಳೆದು ಬಂದಿದೆ. ಅದನ್ನು ಮುಂದುವರಿಸಿಕೊಂಡು ಹೋಗುವ ಜವಬ್ದಾರಿ ನಮ್ಮಗಳ ಮೇಲಿದೆ ಎಂದರು.

ಪತ್ರಕರ್ತರು ಸಂಘಟಿತರಾಗಬೇಕು

ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷರಾದ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಪ್ರೆಸ್ ಕೌನ್ಸಿಲ್ ರಚನೆಯಾದ ದಿನವನ್ನು ರಾಷ್ಟ್ರೀಯ ಪತ್ರಕರ್ತರ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದೆ. ಇದೇ ದಿನ ಕೆಯುಡಬ್ಲ್ಯೂಜೆ ಹಿರಿಯ ಪತ್ರಕರ್ತರನ್ನು ಗೌರವಿಸುತ್ತಿರುವುದು ಶ್ಲಾಘನೀಯ. ಪತ್ರಕರ್ತರು ಸಂಘಟಿತರಾಗಿ ರಚನಾತ್ಮಕ ಕಾರ್ಯಗಳಲ್ಲಿ ಸದಾ ತೊಡಗಿಕೊಳ್ಳಬೇಕು, ಭಾಸ್ಕರರಾವ್ ಅವರು ಗ್ರಾಮಾಂತರ ಪತ್ರಕರ್ತರ ಒಡನಾಡಿಯೂ ಆಗಿದ್ದರು ಎಂದು ಹೇಳಿದರು.

ಬದ್ಧತೆ ಕಾಪಿಟ್ಟುಕೊಂಡಿದ್ದರು

ಪ್ರಾಸ್ತಾವಿಕ ಮಾತನಾಡಿದ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸುದ್ದಿಮನೆಯ ಬದ್ಧತೆಯನ್ನು ಕಾಪಿಟ್ಟುಕೊಂಡ ಎಂ.ಕೆ. ಭಾಸ್ಕರ ರಾವ್ ಅವರು ಯುವ ಪತ್ರಕರ್ತರ ವೃತ್ತಿಜೀವನಕ್ಕೆ ಮಾದರಿಯಾಗಿದ್ದಾರೆ ಎಂದರು.

ಹಿರಿಯ ಅನುಭವದ ಬೆಳಕು

ಹಿರಿಯ ಪತ್ರಕರ್ತರಾದ ಕಂ.ಕ.ಮೂರ್ತಿ ಮಾತನಾಡಿ, ಹಿರಿಯ ಪತ್ರಕರ್ತರ ಅನುಭವಗಳು ಸಮಾಜಕ್ಕೆ ಬೆಳಕಾಗುತ್ತವೆ. ಅವರ ಹಾದಿಯಲ್ಲಿ ನಡೆಯುವ ಮೂಲಕ ಪತ್ರಿಕೋದ್ಯಮದ ಘನತೆಗೆ ಜೀವ ತುಂಬುವ ಕೆಲಸವನ್ನು ಮಾಡಬೇಕು ಎಂದರು.

ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಸ್ವಾಗತಿಸಿದರು. ಖಜಾಂಚಿ ವಾಸುದೇವ ಹೊಳ್ಳ ವಂದಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ದೇವರಾಜ್, ಬೆಂಗಳೂರು ನಗರ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಹಿರಿಯ ಸದಸ್ಯ ಶರಣ ಬಸಪ್ಪ ಅವರು ಹಾಜರಿದ್ದರು.

ಇದನ್ನೂ ಓದಿ | Book Release: ನ.19ರಂದು ಸಾವಣ್ಣ ಪ್ರಕಾಶನದ 14ನೇ ವಾರ್ಷಿಕೋತ್ಸವ, ಪುಸ್ತಕ ಬಿಡುಗಡೆ

ಇದೇ ಸಂದರ್ಭದಲ್ಲಿ ಎಂ.ಕೆ. ಭಾಸ್ಕರ ರಾವ್ ಅವರ ಪತ್ನಿ ಜಯಾ ಅವರನ್ನು ಸನ್ಮಾನಿಸಲಾಯಿತು. ಅವರ ಪುತ್ರಿ ಅನುಷಾರಾವ್ ಹಾಜರಿದ್ದರು.

Exit mobile version