Site icon Vistara News

Road Accident: ನೈಸ್‌ ರಸ್ತೆಯಲ್ಲಿ ಭೀಕರ ಅಪಘಾತ, ತಾಯಿ- ಮಗು ಸಜೀವ ದಹನ

nice road accident

ಬೆಂಗಳೂರು: ರಾಜಧಾನಿಯಲ್ಲಿ ಬೆಳಗಿನ ಜಾವ ಭೀಕರ ಅಪಘಾತ (Road Accident) ಸಂಭವಿಸಿದೆ. ಸೋಮಪುರ ಬಳಿಯ ನೈಸ್ ರಸ್ತೆಯಲ್ಲಿ ನಡೆದ (Nice road Accident) ದಾರುಣ ಅಪಘಾತದಲ್ಲಿ, ತಾಯಿ- ಮಗು ಸಜೀವ (burnt alive) ದಹನಗೊಂಡಿದ್ದಾರೆ.

ಕಾರಿನಲ್ಲಿ ಒಂದೇ ಕುಟುಂಬದ ನಾಲ್ವರು ಪ್ರಯಾಣ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮೈಸೂರು ರಸ್ತೆ ಕಡೆಯಿಂದ ಕನಕಪುರ ರಸ್ತೆ ಕಡೆಗೆ ತೆರಳುತ್ತಿದ್ದ ಕಾರಿನಲ್ಲಿ ದಂಪತಿ ಹಾಗೂ ಇಬ್ಬರು ಮಕ್ಕಳಿದ್ದರು. ದಂಪತಿಯನ್ನು ಮಹೇಂದ್ರನ್ ಮತ್ತು ಸಿಂಧು ಎಂದು ಗುರುತಿಸಲಾಗಿದೆ.

ಅಪಘಾತಕ್ಕೊಳಗಾದ ಕಾರಿನಲ್ಲಿದ್ದ ಕುಟುಂಬ

ಬೆಳಗಿನ ಜಾವ ನಾಲ್ಕು ಘಂಟೆ ಸಮಯದಲ್ಲಿ ನಿದ್ರೆ ಮಂಪರಿನಲ್ಲಿ ಅಪಘಾತ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕಾರು ರಸ್ತೆಯಿಂದ ಹೊರಬಂದು ಲಾರಿ ಮತ್ತು ಮೋರಿಯ ಗೋಡೆಗೆ ಡಿಕ್ಕಿಯಾಗಿದೆ. ಲಾರಿಯೂ ಸಹ ಪಲ್ಟಿಯಾಗಿದೆ. ಈ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ಸಿಂಧು ಮತ್ತು ಎರಡು ವರ್ಷದ ಪುಟ್ಟ ಮಗು ಅದರೊಳಗೇ ಸುಟ್ಟುಹೋಗಿದ್ದಾರೆ.

ಅಪಘಾತಕ್ಕೆ ಒಳಗಾಗಿದ್ದ ಟಾಟಾ ನೆಕ್ಸಾನ್ ಕಾರನ್ನು ಅನ್ಲೈನ್‌ನಲ್ಲಿ ಬಾಡಿಗೆ ಪಡೆದಿದ್ದ ಕುಟುಂಬ ಸೆಲ್ಫ್ ಡ್ರೈವ್ ಮಾಡಿಕೊಂಡು ರಾತ್ರಿ ನಾಗಸಂದ್ರಕ್ಕೆ ಹೋಗಿದ್ದರು. ಬೆಳಗಿನ ಜಾವ ಕುಟುಂಬ ಸಹಿತ ನೈಸ್ ರಸ್ತೆಗೆ ಬಂದಿದ್ದರು. ಮೂಲತಃ ತಮಿಳುನಾಡಿನ ಸೇಲಂ ಮೂಲದ ಮಹೇಂದ್ರನ್ ಕುಟುಂಬ ರಾಮಮೂರ್ತಿ ನಗರದ ವಿಜಿನಾಪುರ ನಿವಾಸಿಗಳಾಗಿದ್ದರು ಎಂದು ತಿಳಿದುಬಂದಿದೆ.

ಮೃತ ದೇಹಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಮಹೇಂದ್ರನ್ ಮತ್ತು ಇನ್ನೊಂದು ಮಗು ತೀವ್ರವಾಗಿ ಗಾಯಗೊಂಡಿದ್ದು, ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸ್ಥಳಕ್ಕೆ ತಲಘಟ್ಟಪುರ ಸಂಚಾರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಬೊಲೆರೊ ಹರಿದು 7 ಕುರಿಗಳ ಸಾವು

ಕೋಲಾರ: ಬೊಲೆರೋ ವಾಹನ ಹರಿದು ಏಳು ಕುರಿಗಳು ಸಾವಿಗೀಡಾದ ಘಟನೆ ಕೋಲಾರ (kolar news) ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಚಾಂಪಲ್ಲಿ ಗ್ರಾಮದಲ್ಲಿ ನಡೆದಿದೆ. ಮೃತ ಪಟ್ಟಿರುವ ಕುರಿಗಳು ಚಾಂಪಲ್ಲಿ ಗ್ರಾಮದ ರೈತ ನಾಗರಾಜ್ ಹಾಗೂ ಸುಬ್ಬಮ್ಮನವರಿಗೆ ಸೇರಿವೆ.

ಕುರಿಗಳನ್ನು ಮೇಯಿಸಿಕೊಂಡು ಸಂಜೆ ಮನೆಗೆ ಹಿಂತಿರುಗುವ ವೇಳೆ ಘಟನೆ ನಡೆದಿದೆ. ಬೊಲೆರೋ ವಾಹನ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಅಪಘಾತಕ್ಕೆ ಚಾಲಕನ ಅತಿ ವೇಗವೇ ಕಾರಣವೆಂದು ರೈತರು ಆರೋಪಿಸಿದ್ದಾರೆ. ಅಪಘಾತದಲ್ಲಿ 2 ಲಕ್ಷ ರೂ. ಮೌಲ್ಯದ ಕುರಿಗಳು ಸಾವಿಗೀಡಾಗಿವೆ. ಶ್ರೀನಿವಾಸಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Sexual Abuse: ವಿವಾಹಿತೆಯ ಮೇಲೆ ಸಾಮೂಹಿಕ ಅತ್ಯಾಚಾರ, ಬ್ಯ್ಲಾಕ್‌ಮೇಲ್‌ ಮಾಡಿದ ಡಕಾಯಿತಿ ಗ್ಯಾಂಗ್

Exit mobile version