Site icon Vistara News

ಶಿಕ್ಷಕರ ಸಂಘಟನೆ ಆರಂಭಿಸಿದ್ದು ಅಧಿಕಾರಕ್ಕಾಗಿ ಅಲ್ಲ: ಬಸವರಾಜ ಗುರಿಕಾರ

basavaraj gurikar

ದೇವಗಢ: ಸಂಘಟನೆಯಲ್ಲಿ ಭಾಗೀದಾರರಾಗಬೇಕೇ ವಿನಃ ಪಾಲುದಾರರಾಗಬಾರದು. ಶಿಕ್ಷಕರ ಸಂಘಟನೆಗಳನ್ನು ಹುಟ್ಟು ಹಾಕಿದ್ದು ಬೇಡಿಕೆ ಈಡೇರಿಸಿಕೊಳ್ಳಲು ಮಾತ್ರವೇ ಹೊರತು, ಅಧಿಕಾರ ಪಡೆಯುವುದಕ್ಕಲ್ಲ ಎಂದು ಅಖಿಲ ಭಾರತ ಶಿಕ್ಷಕರ ಫೆಡರೇಷನ್‌ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.

ಜಾರ್ಖಂಡ್‌ನ ದೇವಗಢದಲ್ಲಿ ಅಖಿಲ ಭಾರತ ಶಿಕ್ಷಕರ ಫೆಡರೇಷನ್‌ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಮಹಿಳಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮುಖಾಂತರ ಸಂಘಟನೆಗಳನ್ನು ಗಟ್ಟಿಗೊಳಿಸಿ, ಇದ್ದ ಸಂಘಟನೆಯಲ್ಲಿಯೇ ಅವಕಾಶ ಪಡೆಯಬೇಕು. ಈ ದಿಸೆಯಲ್ಲಿ AIPTF ಮಹಿಳಾ ವಿಭಾಗವನ್ನು ಸಂಘಟನೆಯ ಆರಂಭದಲ್ಲಿಯೇ ಹುಟ್ಟು ಹಾಕಲಾಗಿದೆ ಎಂದರು.

ಪುರುಷ ಮತ್ತು ಮಹಿಳೆ ಎಂಬ ಭೇದಭಾವವಿಲ್ಲದೆ ಎಲ್ಲರಿಗೂ ಅವಕಾಶ ಕಲ್ಪಿಸಲಾಗಿದೆ. ಸಂಘದಲ್ಲಿ ಇನ್ನು ಮುಂದೆಯೂ ಶಿಕ್ಷಕಿಯರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುವುದು. ಏಕೀಕೃತ ಸಂಘಟನೆಗಳಿಂದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ AIPTF ರಾಷ್ಟ್ರ ಮಟ್ಟದಲ್ಲಿ ಬಲಾಢ್ಯವಾಗಿದೆ. ಹಳೆ ಪಿಂಚಣಿ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದರು.

ಸಮಾರಂಭದಲ್ಲಿ ಏಷ್ಯಾ ಪೆಸಿಫಿಕ್ ರೀಜಿನಲ್ ಡೈರಕ್ಟರ್ ಆನಂದ್‌ ಸಿಂಗ್, ಶಶಿ ಬಾಲಸಿಂಗ್, ಎಐಪಿಟಿಎಫ್‌ ಮಹಾ ಪ್ರಧಾನ ಕಾರ್ಯದರ್ಶಿ ಕಮಲ ಕಾಂತ ತ್ರಿಪಾಠಿ, ಹರಿಗೋವಿಂದನ್‌, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಸೀಮಾ ಮಾತುರ, ಗೀತಾ ಪಾಂಡೆ, ಪ್ರಭಾಕಿರಣ ಸೋನಿಯಾ, ವಂದನಾ, ಭಾರತಿ, ಮೀನಾ ವರ್ಮಾ ಇತರರು ಭಾಗವಹಿಸಿದ್ದರು.

ಇದನ್ನೂ ಓದಿ | 7th Pay Commission: 7ನೇ ರಾಜ್ಯ ವೇತನ ಆಯೋಗದ ಅವಧಿ ಮತ್ತೆ ವಿಸ್ತರಣೆ

ದೇವಗಢದಲ್ಲಿ ಎರಡು ದಿನಗಳ ಮಹಿಳಾ ಸಮ್ಮೇಳನ ಬಹಳ ಅದ್ಧೂರಿಯಾಗಿ ಜರುಗಿತು. ದೇಶದ ವಿವಿಧೆಡೆಯಿಂದ ಸಾವಿರಾರು ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದರು.

Exit mobile version