Site icon Vistara News

Boar Attack: ಹಾಸನದಲ್ಲಿ ಕಾಡುಹಂದಿ ದಾಳಿಗೆ ರೈತ ಸಾವು; ಮಹಿಳೆಯರು ಗಂಭೀರ ಗಾಯ

Farmer killed in wild boar attack in Hassan Womens seriously injured

ಹಾಸನ: ಜಮೀನಿನಲ್ಲಿ ಕೆಲಸ ಮಾಡಲು ಹೋಗುತ್ತಿದ್ದಾಗ ಕಾಡು ಹಂದಿ ದಾಳಿ (Wild Boar Attack) ನಡೆಸಿದ್ದರಿಂದ ರೈತರೊಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಾರಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ರಾಜೇಗೌಡ (63) ಮೃತ ದುರ್ದೈವಿ.

ರಾಜೇಗೌಡ, ಕಾಂತಮ್ಮ ಹಾಗೂ ನಂಜಮ್ಮ ಎಂಬುವವರು ಜಮೀನಿಗೆ ನೀರು ಹಾಯಿಸುತ್ತಿದ್ದಾಗ, ಕಾಡುಹಂದಿ ದಾಳಿ ಮಾಡಿದೆ. ಹಂದಿ ತಪ್ಪಿಸಿಕೊಳ್ಳಲು ಕಿರುಚಾಡಿದ್ದಾರೆ. ಆದರೆ ಕಾಡುಹಂದಿ ರಾಜೇಗೌಡರ ಮೇಲೆ ಎರಗಿ ಸಾಯಿಸಿದೆ. ಕಾಡುಹಂದಿ ದಾಳಿಯಿಂದ ಸ್ಥಳದಲ್ಲೇ ರಾಜೇಗೌಡ ಸಾವನ್ನಪ್ಪಿದ್ದಾರೆ.

ಇತ್ತ ರಾಜೇಗೌಡನನ್ನು ಬಚಾವ್ ಮಾಡಲು ಹೋದ ಶಾಂತಮ್ಮ, ನಂಜಮ್ಮನಿಗೆ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳನ್ನು ಹೊಳೆನರಸೀಪುರ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್‌ಗೆ ರವಾನೆ ಮಾಡಲಾಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಾಡುಪ್ರಾಣಿಗಳಿಂದ ರಕ್ಷಿಸಿ ಎಂದು ಅರಣ್ಯ ಇಲಾಖೆ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: Road Accident : ವಿದ್ಯಾರ್ಥಿಯ ಉಸಿರು ನಿಲ್ಲಿಸಿದ ಬೊಲೆರೋ; ಮತ್ತೊಬ್ಬ ಗಂಭೀರ

ಮಹಿಳೆ ಮೇಲೆ ಐದಾರು ಕಾಡು ಹಂದಿಗಳು ಅಟ್ಯಾಕ್‌!

ಹಾಸನದ ಬೇಲೂರು ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಘಟನೆ ಮಹಿಳೆ ಮೇಲೆ ಐದಾರು ಕಾಡು ಹಂದಿಗಳು ದಾಳಿ ಮಾಡಿವೆ. ಚಂದ್ರಕಲಾ (55) ಎಂಬುವವರು ಕಾಡು ಹಂದಿ ದಾಳಿಯಿಂದ ಗಾಯಗೊಂಡಿದ್ದಾರೆ.

ಚಂದ್ರಕಲಾ ಜಮೀನಿನ ಕೆಲಸಕ್ಕೆ ತೆರಳಿದಾಗ ಏಕಾಏಕಿ ಐದಾರು ಕಾಡು ಹಂದಿಗಳು ದಾಳಿ ಮಾಡಿವೆ. ಈ ವೇಳೆ ಚಂದ್ರಕಲಾ ಚಿರಾಟ ಕೇಳಿ, ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಕಾಡುಹಂದಿಗಳನ್ನು ಓಡಿಸಿ, ರಕ್ಷಿಸಿದ್ದಾರೆ. ಕೈ ಮತ್ತು ಕಾಲು ಭಾಗಗಳಲ್ಲಿ ಗಂಭೀರವಾದ ಗಾಯವಾಗಿದ್ದು, ಬೇಲೂರಿನ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹಾಸನದ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಲಿಂಕ್‌ ಕ್ಲಿಕ್‌ ಮಾಡಿ

Exit mobile version