Site icon Vistara News

ಕರೆಂಟ್​ ಬಿಲ್​ ಕೇಳಿದ್ದಕ್ಕೆ ಸೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ; ತಲೆನೋವು ತಂದಿಟ್ಟ ಕಾಂಗ್ರೆಸ್ ಗ್ಯಾರಂಟಿ

Cescom bill Collector

#image_title

ಹಾಸನ: ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳು (Congress Guarantee) ದಿನೇದಿನೆ ಸಮಸ್ಯೆಯನ್ನೇ ತಂದೊಡ್ಡುತ್ತಿವೆ. ಅದರಲ್ಲೂ 200 ಯೂನಿಟ್​ ವಿದ್ಯುತ್​ ಉಚಿತ, ಬಿಲ್ (Electricity Bill) ಕಟ್ಟಬೇಕಿಲ್ಲ ಎಂಬ ಗ್ಯಾರಂಟಿಯಂತೂ ಪ್ರತಿದಿನ ಗ್ರಾಹಕರು ಮತ್ತು ಕೆಇಬಿ ಸಿಬ್ಬಂದಿ ನಡುವಿನ ಗಲಾಟೆ/ಸಂಘರ್ಷಕ್ಕೆ ಕಾರಣವಾಗುತ್ತಿದೆ. ಆಯಾ ನಗರದ ವಿದ್ಯುತ್​ ಪೂರೈಕೆ ಸರಬರಾಜು ಕಂಪನಿಯಿಂದ ಬಿಲ್​ ಸಂಗ್ರಹಕ್ಕೆ ಹೋಗುವ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸುತ್ತಿದೆ.

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಹಳೇ ಕೋರ್ಟ್​ ರಸ್ತೆಯಲ್ಲಿರುವ ಮನೆಯೊಂದಕ್ಕೆ ಸೆಸ್ಕಾಂ ಸಿಬ್ಬಂದಿ ಸಂತೋಷ್​ ಎಂಬುವರು ವಿದ್ಯುತ್ ಮೀಟರ್ ರೀಡಿಂಗ್​ಗೆ ಹೋದಾಗ ಆ ಮನೆಯ ಯಜಮಾನ ಮತ್ತು ಅವನ ಅಪ್ರಾಪ್ತ ಮಗ ಸೇರಿಕೊಂಡು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಆ ಮನೆ ಮಾಲೀಕ ಕೋಳಿ ಅಂಗಡಿ ನಡೆಸುತ್ತಿದ್ದ. ಸೆಸ್ಕಾಂ ಸಿಬ್ಬಂದಿ ನಿನ್ನೆ ಅವರ ಮನೆಗೆ ಹೋಗಿ, ಮೀಟರ್​ ರೀಡ್​ ಮಾಡಿ, 1150 ರೂಪಾಯಿ ಬಿಲ್​ ಕೊಟ್ಟಿದ್ದಾನೆ. ಆದರೆ ಸುರೇಶ್​ ಆತನಿಗೆ ಬೈದಿದ್ದಾನೆ. ಅಲ್ಲೇ ಇದ್ದ ತನ್ನ ಮಗನೊಂದಿಗೆ ಸೇರಿ ಸಂತೋಷ್​ ಮೇಲೆ ಹಲ್ಲೆ ನಡೆಸಿದ್ದಾನೆ. ಸಂತೋಷ್​ಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅರಕಲುಗೂಡು ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: Congress Guarantee: ಕರೆಂಟ್‌ ಬಿಲ್‌ ಕೇಳಿದ್ರೆ ಕಟ್ಟಿ ಹಾಕ್ತೇವೆ; ಸಿದ್ದರಾಮಯ್ಯ ಸ್ಟೈಲಲ್ಲೇ ಡೈಲಾಗ್‌!

ರಾಜ್ಯದ ಹಲವು ಭಾಗಗಳಲ್ಲಿ ಜನ ಗ್ಯಾರಂಟಿ ಅಸ್ತ್ರವನ್ನು ವಾಪಸ್​ ಪ್ರಯೋಗ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಾಗಿಗೆ ನಾವು ಇನ್ಮುಂದೆ ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿಯುತ್ತಿದ್ದಾರೆ. ಇತ್ತೀಚೆಗೆ ಚಿತ್ರದುರ್ಗದ ಸಿದ್ದಾಪುರ ಗ್ರಾಮಕ್ಕೆ ಮೀಟರ್​ ರೀಡರ್​ ಹೋಗಿ ವಿದ್ಯುತ್​ ಬಿಲ್​ ವಿತರಿಸಲು ಮುಂದಾಗಿದ್ದಾನೆ. ಆಗ ಅಲ್ಲಿನ ಗ್ರಾಮಸ್ಥರು, ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ವಿದ್ಯುತ್ ಫ್ರೀ ಎಂದು ಆ ಪಕ್ಷ ಹೇಳಿದೆ. ಹಾಗಾಗಿ ನಾವು ಬಿಲ್​ ಕಟ್ಟಲ್ಲ’ ಎಂದು ಹೇಳಿದ್ದಾರೆ. ಉಡುಪಿಯಲ್ಲಿ ವಾಸುದೇವ್​ ಭಟ್ ಎನ್ನುವವರು ತಾವು ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಮನೆ ಬಳಿ ಬೋರ್ಡ್ ಹಾಕಿಕೊಂಡು ಕುಳಿತಿದ್ದಾರೆ. ಒಟ್ನಲ್ಲಿ ಕಾಂಗ್ರೆಸ್​​ನ ಈ ಗ್ಯಾರಂಟಿ ದಿನೇದಿನೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ತಲೆನೋವು ತಂದಿಡುತ್ತಿದೆ.

Exit mobile version