Site icon Vistara News

Road Accident: ಚಿತ್ರದುರ್ಗ ಬಳಿ ಭೀಕರ ಅಪಘಾತ, ನಿಂತ ಲಾರಿಗೆ ಕಾರು ಡಿಕ್ಕಿ, ಒಂದೇ ಕುಟುಂಬದ ನಾಲ್ವರ ಸಾವು

chitradurga road accident

ಚಿತ್ರದುರ್ಗ: ಚಿತ್ರದುರ್ಗದ (Chitradurga news) ಮಲ್ಲಾಪುರ ಬಳಿ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಕಾರು- ಲಾರಿ ಅಪಘಾತದಲ್ಲಿ (Road Accident) ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಕಾರು ಬಂದು ಬಂದು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಮೂವರು ಮಕ್ಕಳ ಸ್ಥಿತಿ ಗಂಭೀರವಾಗಿದೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರಿನಲ್ಲಿದ್ದ ಕುಟುಂಬ ಹೊಸಪೇಟೆ ಕಡೆಯಿಂದ ತುಮಕೂರು ಕಡೆಗೆ ಹೊರಟಿತ್ತು ಎಂದು ತಿಳಿದುಬಂದಿದೆ. ಮೃತಪಟ್ಟವರನ್ನು ಶಂಸುದ್ದಿನ್ (40) ಮಲ್ಲಿಕಾ (37) ಖಲೀಲ್(42), ತಬ್ರೇಜ್ (13) ಎಂದು ಗುರುತಿಸಲಾಗಿದೆ. ಮಕ್ಕಳಾದ ನರ್ಗೀಸ್, ರೆಹನ್, ರೆಹಮಾನ್‌ಗೆ ಗಂಭೀರ ಗಾಯಗಳಾಗಿವೆ.

ಹೆದ್ದಾರಿಯಲ್ಲಿ ಕಾರು ನಿಂತಿದ್ದುದು ಗಮನಿಸದೆ ಅತಿ ವೇಗವಾಗಿ ಬಂದ ಪರಿಣಾಮ ಕಾರು ನಿಯಂತ್ರಿಸಲಾಗದೆ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಭೇಟಿ ನೀಡಿದ್ದಾರೆ. ನಾಲ್ವರ ಮೃತದೇಹ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಈ ಹೆದ್ದಾರಿಯಲ್ಲಿ ಪ್ರತಿವಾರ ಇಂಥ ಭೀಕರ ಅಪಘಾತಗಳು ಸಂಭವಿಸುತ್ತಿವೆ. ಹೆಚ್ಚಾಗಿ ಹೆದ್ದಾರಿಯಲ್ಲೇ ಲಾರಿ ಸೇರಿದಂತೆ ದೊಡ್ಡ ವಾಹನಗಳು ಕೆಟ್ಟು ನಿಲ್ಲುತ್ತಿವೆ. ಇವು ನಿಂತಿರುವುದು ತಿಳಿಯದೆ ವೇಗವಾಗಿ ಬರುವ ಕಾರುಗಳು ಡಿಕ್ಕಿಯಾಗಿ ಹಲವು ಜೀವಹಾನಿಯಾಗಿವೆ. ಇಂಥ ವಾಹನಗಳನ್ನು ಹೆದ್ದಾರಿಯಿಂದ ತೆರವು ಮಾಡಬೇಕು ಹಾಗೂ ನಿಲ್ಲಿಸುವವರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಓಮ್ನಿಗೆ ‌ಲಾರಿ ಡಿಕ್ಕಿ, ಚಾಲಕ ಸಾವು

ಚಿತ್ರದುರ್ಗ: ಗ್ಯಾಸ್ ಲಾರಿ ಮತ್ತು ಓಮ್ನಿ ವಾಹನ ನಡುವೆ ಅಪಘಾತ ಸಂಭವಿಸಿ ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹೊಳಲ್ಕೆರೆ ತಾಲೂಕಿನ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಓಮ್ನಿ ಚಾಲಕ ಸ್ಥಳದಲ್ಲೇ ಮೃತಪಟ್ಟವರು. ಮೃತ ವ್ಯಕ್ತಿ ಚಿತ್ರದುರ್ಗದ ತಮಟುಕಲ್ಲಿನ ನಿವಾಸಿ ಎಂದು ತಿಳಿದುಬಂದಿದೆ. ರಾಮಗಿರಿಗೆ ಕಾರ್ಯಕ್ರಮಕ್ಕೆ ಹೋಗಿ ಬರುವಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಹೊಳಲ್ಕೆರೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಸೀಲಿಸುತ್ತಿದ್ದಾರೆ.

ಇದನ್ನೂ ಓದಿ: Bike Accident: ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿಯಾಗಿ ಅಕ್ಕ-ತಮ್ಮ ಸಾವು

Exit mobile version