Site icon Vistara News

Wild Animals Attack: ಹೊಲದಲ್ಲಿ ಅವಿತಿದ್ದ ಚಿರತೆಗೆ ಕಲ್ಲಿಂದ ಹೊಡೆದು ಹಿಡಿದರು!

Wild animals Attack

ದಾವಣಗೆರೆ: ಆಹಾರಕ್ಕಾಗಿ ಕಾಡುಪ್ರಾಣಿಗಳು ನಾಡಿಗೆ ಬರುತ್ತಿದ್ದು, ಜನರಲ್ಲಿ ಆತಂಕ (Wild Animals Attack) ಹೆಚ್ಚಿಸಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೋಟೆ ಮಲ್ಲೂರು ಗ್ರಾಮದಲ್ಲಿ ಭಯ ಹುಟ್ಟಿಸಿದ ಚಿರತೆಯನ್ನು (leopard Attack) ಗ್ರಾಮಸ್ಥರೇ ಸೆರೆಹಿಡಿದಿದ್ದಾರೆ.

ಕೋಟೆ ಮಲ್ಲೂರು ಗ್ರಾಮದಲ್ಲಿ ಮೂರ್ನಾಲ್ಕು ದಿನಗಳಿಂದ ಚಿರತೆಯೊಂದು ಭಯ ಹುಟ್ಟಿಸಿತ್ತು. ಮಾತ್ರವಲ್ಲ ನಾಲ್ವರ ಮೇಲೆ ದಾಳಿ ಮಾಡಿತ್ತು. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದರು. ಅರಣ್ಯಾಧಿಕಾರಿಗಳನ್ನು ನಂಬಿಕೊಂಡರೆ ಚಿರತೆ ಸೆರೆಹಿಡಿಯುವುದಿಲ್ಲ ಎಂದುಕೊಂಡು, ತಾವೇ ಕೈಯಲ್ಲಿ ದೊಣ್ಣೆ ಹಿಡಿದು ಚಿರತೆ ಸೆರೆ ಹಿಡಿದಿದ್ದಾರೆ.

ಮೆಕ್ಕೆಜೋಳ ಹೊಲದಲ್ಲಿ ಚಿರತೆಯು ಅವಿತು ಕುಳಿತಿದೆ ಎಂದು ವಿಚಾರ ತಿಳಿಯುತ್ತಿದ್ದಂತೆ, ದೊಣ್ಣೆ ಹಿಡಿದು ನುಗ್ಗಿದ್ದರು. ಇವರಿಂದ ತಪ್ಪಿಸಿಕೊಂಡು ಓಡಲು ಶುರು ಮಾಡಿದ ಚಿರತೆಗೆ ಕಲ್ಲುಗಳಿಂದ ಹೊಡೆದಿದ್ದಾರೆ. ನಂತರ ಚಿರತೆಯನ್ನು ಹಿಡಿದು ಕಾಲು ಕಟ್ಟಿ, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರ ತಂಡ ಚಿರತೆಯನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: Begging Case : ಕುಡುಕ ಗಂಡನ ಮಾತು ಕೇಳಿ ಮಗು ಜತೆಗೆ ಭಿಕ್ಷಾಟನೆಗಿಳಿದ ತಾಯಿ

ಚಿಕ್ಕಮಗಳೂರಲ್ಲಿ ಒಂಟಿ ಸಲಗ ಓಡಾಟ

ಚಿಕ್ಕಮಗಳೂರಿನ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಒಂಟಿ ಸಲಗವು ಕೆಲಕಾಲ ಆತಂಕವನ್ನು ಸೃಷ್ಟಿಸಿತ್ತು. ಕಾಡಿನಿಂದ ಏಕಾಏಕಿ ನಾಡಿಗೆ ಬಂದ ಒಂಟಿ ಸಲಗವು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲೇ ನಿಂತಿತ್ತು. ರಸ್ತೆ ಬದಿಯ ಮರಗಳ ಎಲೆಗಳನ್ನು ಕಿತ್ತು, ಅತ್ತಿಂದಿತ್ತ ಓಡಾಡಿಕೊಂಡು ರಸ್ತೆ ಪೂರ್ತಿ ಆವರಿಸಿತ್ತು.

ಕಳಸದಿಂದ ಮಂಗಳೂರಿಗೆ ಸಂಪರ್ಕಿಸುವ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಘಟನೆ ನಡೆದಿದೆ. ಹೆದ್ದಾರಿಯಲ್ಲಿ ಸಂಚಾರ ಮಾಡಲು‌ ಆತಂಕಗೊಂಡ ವಾಹನ ಸವಾರರು ನಿಂತಲ್ಲೇ ನಿಲ್ಲುವಂತಾಯಿತು.

ಕೊಡಗಿನಲ್ಲೂ ಆನೆಗಳ ವಾಕಿಂಗ್‌

ಕೊಡಗಿನಲ್ಲಿ ಕಾಡಾನೆಗಳ ಮಾರ್ನಿಂಗ್ ವಾಕ್ ಮುಂದುವರಿದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾ. ಐಗೂರು ಬಳಿ ಆನೆಗಳು ಪ್ರತ್ಯಕ್ಷವಾಗಿದ್ದವು. ಬೆಳ್ಳಂಬೆಳಗ್ಗೆ ಹೆದ್ದಾರಿಗೆ ಬಂದ ಎರಡು ಕಾಡಾನೆಗಳು, ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದವು. ಆಹಾರಕ್ಕಾಗಿ ಕಾಡು ಬಿಟ್ಟು ಜನವಸತಿ ಪ್ರದೇಶದಲ್ಲೇ ಕಾಡಾನೆಗಳು ಓಡಾಡುತ್ತಿವೆ. ಕಾಡಾನೆಗಳ ಮಾರ್ನಿಂಗ್ ವಾಕಿಂಗ್‌ ಅನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version