Site icon Vistara News

ಬಫರ್​/ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿದಾಕ್ಷಣ ಸ್ಥಳೀಯರನ್ನು ಒಕ್ಕಲೆಬ್ಬಿಸುವುದಿಲ್ಲ; ರಾಜ್ಯಗಳಿಗೆ ಕೇಂದ್ರ ಸರ್ಕಾರದ ಭರವಸೆ

displacement of locals from eco sensitive zone

ಬೆಂಗಳೂರು: ಸಂರಕ್ಷಿತ ಅರಣ್ಯಗಳು ಮತ್ತು ಅಭಯಾರಣ್ಯಗಳ ಸುತ್ತಲೂ ಬಫರ್​ ವಲಯ ಅಥವಾ ಪರಿಸರ ಸೂಕ್ಷ್ಮ ವಲಯ (ESZ)ಎಂದು ಗುರುತಿಸಿದಾಕ್ಷಣ, ಆ ಪ್ರದೇಶಗಳ ನಿವಾಸಿಗಳನ್ನು ಸ್ಥಳಾಂತರ ಮಾಡುವುದಿಲ್ಲ. ಸ್ಥಳೀಯರ ಜೀವನಕ್ಕೆ ಯಾವುದೇ ತೊಂದರೆ ಕೊಡುವುದಿಲ್ಲ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ. ಅಷ್ಟೇ ಅಲ್ಲ ‘ಆ ಭಾಗದಲ್ಲಿ ಕೃಷಿ-ತೋಟಗಾರಿಕಾ ಚಟುವಟಿಕೆ ನಡೆಸಲೂ ಯಾವುದೇ ತೊಂದರೆ ಕೊಡುವುದಿಲ್ಲ’ ಎಂದೂ ಕೇಂದ್ರ ಪರಿಸರ ಇಲಾಖೆ ಮಾಹಿತಿ ನೀಡಿದೆ.

ಪಶ್ಚಿಮ ಘಟ್ಟ ಭಾಗದ ಶೇ.37ರಷ್ಟು ಭಾಗವನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಬೇಕು. ಮತ್ತು ಆ ಪ್ರದೇಶಗಳಲ್ಲಿ ಗಣಿಗಾರಿಕೆ, ಕಲ್ಲುಗಣಿಗಾರಿಕೆ ಮತ್ತು ಇತರ ಎಲ್ಲ ಮಾದರಿಯ ಕೈಗಾರಿಕೆಗಳನ್ನೂ ಸಂಪೂರ್ಣ ನಿಷೇಧಿಸಬೇಕು ಎಂದು ಡಾ. ಕಸ್ತೂರಿರಂಗನ್​ ನೇತೃತ್ವದ ಸಮಿತಿ ಶಿಫಾರಸ್ಸು ಮಾಡಿದೆ. ಅದೇನೂ ಸಂಪೂರ್ಣವಾಗಿ ಅನುಷ್ಠಾನವಾಗಿಲ್ಲ. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ, ಕೇರಳ, ತಮಿಳುನಾಡು ಸೇರಿ ಯಾವುದೇ ರಾಜ್ಯಗಳೂ ಕಸ್ತೂರಿ ರಂಗನ್​ ವರದಿಯನ್ನು ಒಪ್ಪುತ್ತಲೂ ಇಲ್ಲ.

ಇಷ್ಟರ ಮಧ್ಯೆ ಜೂನ್​​ ತಿಂಗಳಲ್ಲಿ ಸುಪ್ರೀಂಕೋರ್ಟ್​ ಕೇಂದ್ರಕ್ಕೆ ಒಂದು ಸೂಚನೆ ನೀಡಿತ್ತು. ‘ಪ್ರತಿ ಸಂರಕ್ಷಿತ ಅರಣ್ಯ ಪ್ರದೇಶಗಳು, ವನ್ಯಜೀವಿ ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳ ಗಡಿಯಿಂದ ಒಂದು ಕಿಮೀ ದೂರದವರೆಗೆ ಬಫರ್​ ಅಥವಾ ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಬೇಕು. ಹೀಗೆ ಮಾಡುವಂತೆ ಎಲ್ಲ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೂ ಸೂಚನೆ ನೀಡಬೇಕು ಮತ್ತು ಹೀಗೆ ಸೂಕ್ಷ್ಮ ವಲಯ ಎಂದು ಗುರುತಿಸಲ್ಪಟ್ಟ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕಗಳನ್ನೂ ನಡೆಸಲು ಅವಕಾಶ ಕೊಡಬಾರದು ಎಂದು ಹೇಳಿತ್ತು. ಆದರೆ ಸುಪ್ರೀಂಕೋರ್ಟ್​ನ ಈ ಸೂಚನೆಗೇ ಕೇಂದ್ರ ಸರ್ಕಾರ ಪ್ರತಿ ಸವಾಲು ಹಾಕಿತ್ತು. ಆದರೂ ಸುಪ್ರೀಂಕೋರ್ಟ್​ ಸೂಚನೆ ಪಾಲನೆ ಮಾಡಬೇಕಾದ ಅಗತ್ಯವೂ ಕೇಂದ್ರಕ್ಕೆ ಇದೆ.

ಸುಪ್ರೀಂಕೋರ್ಟ್​​ನ ಈ ಸೂಚನೆ ಬಗ್ಗೆ ಪಶ್ಚಿಮ ಘಟ್ಟ ವಲಯದ ವ್ಯಾಪ್ತಿಯಲ್ಲಿರುವ ರಾಜ್ಯ ಸರ್ಕಾರಗಳು ಕಳವಳ ವ್ಯಕ್ತಪಡಿಸಿದ್ದವು. ಈ ಬಾರಿ ಸಂಸತ್​​​ನಲ್ಲೂ ಕೂಡ ಕರ್ನಾಟಕ, ಕೇರಳ ಮತ್ತು ಈ ವಲಯದ ವ್ಯಾಪ್ತಿಯ ರಾಜ್ಯಗಳ ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗೆ ಸೂಕ್ಷ್ಮ ವಲಯ ಎಂದು ಗುರುತಿಸಿಬಿಟ್ಟರೆ, ಅಲ್ಲಿನ ಸ್ಥಳೀಯರನ್ನೂ ಒಕ್ಕಲೆಬ್ಬಿಸಬೇಕಾಗುತ್ತದೆ ಎಂದು ಕೇರಳದ ಸಂಸದ ಮುರಳೀಧರನ್​ ಆತಂಕ ವ್ಯಕ್ತಪಡಿಸಿದ್ದರು ಹಾಗೂ ಕೇಂದ್ರ ಸರ್ಕಾರದಿಂದ ಉತ್ತರ ಬಯಸಿದ್ದರು.

ಇದೀಗ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ರಾಜ್ಯ ಸಚಿವ ಅಶ್ವಿನಿ ಕುಮಾರ್​ ಚೌಬೆ ಅವರು ಮುರಳೀಧರನ್​ ಅವರಿಗೆ ಪತ್ರ ಬರೆದು, ‘ಸಂರಕ್ಷಿತ ಅರಣ್ಯ ಪ್ರದೇಶಗಳ ಸುತ್ತಲಿನ ಪರಿಸರವನ್ನು ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಿದರೆ, ಅಲ್ಲಿರುವ ಸ್ಥಳೀಯರ ಸ್ಥಳಾಂತರ ಮಾಡುವುದಿಲ್ಲ. ಜನರ ಮೇಲಾಗಲೀ, ಅವರ ವೃತ್ತಿಯ ಮೇಲಾಗಲೀ ಪರಿಣಾ ಬೀರುವುದಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ: ಒಂದು ವರ್ಷ ಕಸ್ತೂರಿ ರಂಗನ್‌ ವರದಿಗೆ ಬ್ರೇಕ್‌: ಬೀಸೋ ದೊಣ್ಣೆಯಿಂದ ಮಲೆನಾಡಿಗರು ಪಾರು

Exit mobile version